tag:blogger.com,1999:blog-36080581284021701692024-03-05T23:16:58.505-08:00ಮಂದಾರ-ಮಲ್ಲಿಗೆಬಯಲ ಬೇಲಿಯ ದಾಟಿ ಮಲ್ಲಿಗೆಯ ಕಂಪು
ಮನದ ಬೇಲಿಯ ದಾಟಿತು ಮಂದಾರದ ನುಣುಪು,
ಬದುಕ ಹಾಡು ಮಲ್ಲಿಗೆ,ಬಯಕೆ ಹಾಡು ಮಂದಾರ!!!ಮಹಿಮಾhttp://www.blogger.com/profile/08011639151501072102noreply@blogger.comBlogger94125tag:blogger.com,1999:blog-3608058128402170169.post-6746372325075902892019-10-09T10:09:00.001-07:002019-10-09T10:09:15.082-07:00ಈ ದಿನ<p dir="ltr">1</p>
<p dir="ltr">ಹದಾ ತೊಳೆದ ಅಕ್ಕಿ ಒಣಗಿಸಿ<br>
ಮಿಲ್ಲಿನ ಹಲ್ಲಿಗಿತ್ತು ಬೆಳ್ಳನೆಯ ಹಿಟ್ಟು<br>
ಬೆರೆಸಿ ಅಳತೆ ತಪ್ಪದಂತೆ ನೀರು ಕುದಿಸಿ<br>
ಮತ್ತೊಂದಿಷ್ಟು ಹಿಟ್ಟುದುರಿಸಿ<br>
ಕಾಯಬೇಕು<br>
ಒಳಗೆಲ್ಲ ಬಿಸಿ ತಗುಲಿ<br>
ನೀರೊಳಗೆ ಬೆಂದು ನುಣ್ಣಗೆ ಕಲಸಿ<br>
ತುಸುವು ಒಡೆಯದಂತೆ <br>
ಉಂಡೆಕಟ್ಟಿ ನಾದಿ ನಾದಿ...<br>
ಕೊನೆಗೊಮ್ಮೆ ರಾತ್ರಿಯ ಚಂದ್ರನ್ನ<br>
ಹಾಡು ಹಗಲಲ್ಲೇ ಲಟ್ಟಿಸಿ<br>
ಬಿಸಿ ಬೇಯಿಸಿ<br>
ಸೀದಾ ಬಾಣಲೆಯಿಂದ ಬೆಂಕಿಗೆ...<br>
ಉಬ್ಬಿದ ರೊಟ್ಟಿಯೊಳಗೆ ಉಸಿರ ತಿದಿ<br>
ಬಡಿಸಿದವರೆಲ್ಲ ಹೊಟ್ಟೆತುಂಬ ತಿಂದು <br>
ಎದ್ದು ಹೋದ ನಂತರ<br>
ಹರಡಿದ ಹಿಟ್ಟು<br>
ಅಂಟಾದ ತಳಹಿಡಿದ<br>
ಪಾತ್ರೆಗಳು<br>
ಆ ಸನ್ನಾಟ<br>
....<br>
...<br>
ಇದಷ್ಟೇ ಜೀವನ <br>
ಇದೇ ಜೀವನ!</p>
<p dir="ltr">2</p>
<p dir="ltr">ಉದ್ದುದ್ದ ಹರಡಿಕೊಂಡ ರಸ್ತೆಗಳ<br>
ನಡುವೆ ಅಡ್ಡಾಡುತ್ತೇನೆ<br>
ಎಲ್ಲಾದರೂ ಕೊನೆಗೊಮ್ಮೆ<br>
ಡೆಡ್ ಎಂಡ್ ಬಂದು ನಿನ್ನ ಮುಖವಾದರು<br>
ನೋಡ ಸಿಕ್ಕೀತು ಎಂದು</p>
<p dir="ltr">ಕೊನೆ ಇಲ್ಲದಿದ್ದರೆ ಸರಿ<br>
ಕಡೆಗೊಂದು ತಿರುವು<br>
ಅಲ್ಲಾದರೂ ನೀ ಹೋದ ಪರಿಮಳ<br>
ಹೊತ್ತ ಗಾಳಿ ಸುದ್ದಿ ಹೇಳೀತು ಎಂದು</p>
<p dir="ltr">ಆಗಷ್ಟೇ ಬೆಳಕಿಗೆ<br>
ಒಡ್ಡಿದ ಮೊಳಕೆಯ ಮುಖದಲ್ಲಿ<br>
ಹೂ ಮಂದಹಾಸ<br>
ಅಲ್ಲಾದರೂ ಸಿಕ್ಕಿಯೇ ಬಿಡಬಹುದಿತ್ತು<br>
ನೀನು ನನ್ನ ಕದಪಿಗೆ ಚಿಗುರೆಲೆಯ ಕೆಂಪೇರಿಸಿ</p>
<p dir="ltr">ಗುರುತಿಡದೆ ನಡೆದು ಹೋದವನೆ<br>
ನಾನಾಗಲಾರೆ ನಿನ್ನಂತೆ<br>
ಬಯಲು ಬಚ್ಚಿಟ್ಟ ರಹಸ್ಯ<br>
ನಡೆಯಲಾಗದು ತಿರುವುಗಳೇ<br>
ತುಂಬಿದ ಹಾದಿ<br>
ಕೊನೆಗೊಮ್ಮೆ ಬಾನಿಗೆ ಕೈಚಾಚಿ<br>
ನಿನ್ನೊಮ್ಮೆ ಬಿಗಿಯಾಗಿ ತಡೆದು<br>
ತಬ್ಬಿ ಮಳೆಯಾಗಿ <br>
ಸುರಿದೇನು</p>
<p dir="ltr">ಹೇಳು ಎಷ್ಟಂತ ಕಟ್ಟಲಿ ಬೇಲಿ<br>
ಅಣೆಕಟ್ಟುಗಳ<br>
ಪ್ರೇಮ ಪ್ರವಾಹಕ್ಕೆ!</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-72837679069202784602019-10-07T10:24:00.001-07:002019-10-07T10:24:01.515-07:00ಇವತ್ತು<p dir="ltr">ನಿಜವಾದ ಪ್ರೇಮ <br>
ಸಂಶಯದ ಗೋರಿಯ <br>
ಮೇಲರಳಿದ ಒಂಟಿ <br>
ಸುವಾಸಿತ ಹೂ</p>
<p dir="ltr">2</p>
<p dir="ltr">ಹೂವುಗಳೆಲ್ಲ ಕೇಳಿ ಅರಳುವುದಿಲ್ಲ<br>
ಗಾಳಿಯ ಚಾಡಿ <br>
ಸ್ನೇಹಕ್ಕೆ ನಂಬಿಕೆ ಬುನಾದಿ ಪ್ರೇಮಕ್ಕೆ<br>
ತೆರೆದಿಡು ಮನದ ಕಿಟಕಿ<br>
ನುಗ್ಗಲಿ ಎಲ್ಲ ಬೆಳಕು ದಾಟಿ ಚಾವಡಿ!</p>
<p dir="ltr">3<br>
ನೀನು ಪ್ರೇಮಕ್ಕೆ ಗಡಿ ರೇಖೆಗಳ ಅಂಟಿಸಿದ್ದೀಯ<br>
ಗಾಳಿಪಟದಾ ಸೂತ್ರ ನಿನ್ನ ಕೈಲೇ ಇದೆ ಅನ್ನುವುದ ಮರೆತಿದ್ದೀಯ<br>
ನೀನು ಪರಿಪೂರ್ಣ ಎಂಬುವುದ ನಿನಗೆ ನೀನು ನಂಬಿಸಿ<br>
ಅಪರಿಪೂರ್ಣತೆಯೇ ಜಗದ ಸೌಂದರ್ಯ ಮರೆತಿದ್ದೀಯ<br>
4</p>
<p dir="ltr">ಕತ್ತಲ ಬಗ್ಗೆ ಮೊದಲು ತಿಳಿ<br>
ಬೆಳಕು ತನ್ನಿಂತಾನೇ ಅರ್ಥವಾಗುತ್ತದೆ!<br>
5</p>
<p dir="ltr">ಅದೇನು ಅಂಥ ಗುಟ್ಟು ಅವ<br>
ಕಿವಿಯೊಳಗೆ ಉಸುರಿ<br>
ಅವಳ ಕೆನ್ನೆ ಕೆಂಪೇರಿಸಿದ್ದು?<br>
ಅವರನ್ನ ನೋಡಿ<br>
ನೀನು ನನ್ನತ್ತ<br>
ಕಣ್ಣು ಮಿಟುಕಿಸಿದ್ದು??</p>
<p dir="ltr">6</p>
<p dir="ltr">ಗಟ್ಟಿಯಾಗಿ ಹಿಡಿದು<br>
ಬರಸೆಳೆದು ಹೆಗಲ ಸುತ್ತ ಕೈ ಹಾಕಿ<br>
ನೀನು ನನ್ನೇ ನೋಡುತ್ತಾ ರಸ್ತೆ ಕ್ರಾಸ್<br>
ಮಾಡುವೆ<br>
ಅದಕ್ಕೆ ನಾನು ನೀನಿದ್ದಾಗಲೆಲ್ಲ<br>
ಭಯದ ನೆಪ ಹೂಡುವೆ...</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-10313098732296406122019-09-27T11:13:00.001-07:002019-09-27T11:13:38.679-07:00ಇಂದು ೨೭/೯<p dir="ltr">ಪ್ರೇಮದ ಆಳ <br>
ತುಟಿಗೆ ಬೆರಳುಗಳಿಗೆ <br>
ನಿಲುಕುವುದಿಲ್ಲ, <br>
ಬರೀ ವಿರಹದ <br>
ನಿಟ್ಟುಸಿರಿಗಷ್ಟೆ <br>
ಅದು ಗೊತ್ತು!</p>
<p dir="ltr">೨</p>
<p dir="ltr">ನೋವೆಂದರೆ ಏನೆಂದು<br>
ನಾನು ಹೇಗೆ ಹೇಳಬಹುದಿತ್ತು<br>
ಹೇಗೆ ತೋರಬಹುದಿತ್ತು <br>
ಅದೃಶ್ಯ ಗಾಯಗಳ<br>
ಕಣ್ಣ ಮುಚ್ಚಿ ನಿಟ್ಟುಸಿರು <br>
ಇಟ್ಟು ಸಂತೈಸಿದ ಘಳಿಗೆಗಳ<br>
ಹೇಳು, ಎದೆಯ ಕೋಡಿ <br>
ಒಡೆದು ಕೊಚ್ಚಿ ಹೋದ <br>
ಪ್ರವಾಹದ ಗುರುತು<br>
ಕಂಡೀತೇನು?<br>
ಎಲ್ಲ  ಮುಗಿದ ಹೋದ ನಂತರ  <br>
ಇಳೆಯ ತುಂಬಾ ಉಳಿದ<br>
ನೆನಪುಗಳ ಒದ್ದೆ ಒದ್ದೆ<br>
ಕೆನ್ನೆಗಳಲ್ಲೂ ಇಳಿದದ್ದು<br>
ಅದೇ</p>
<p dir="ltr">೩</p>
<p dir="ltr">೧<br>
ಕೆಂಪು ಸೇಬು, ಒಳಗೆ ಬಿಳಿ<br>
ಈಡನ್ನಲ್ಲಿ ಬದಲಾದ ಬಣ್ಣ<br>
ತೊಗಲೊಂದು ವ್ಯಕ್ತ ಭಾವ<br>
ಜಾರಿಯಲ್ಲಿದೆ ಬಣ್ಣವಿಲ್ಲದಎಡೆಗೆ ದಾರಿ!!</p>
<p dir="ltr">೨<br>
ಹೆಮ್ಮೆಯ ಮಿಂಚು ಕಣ್ಣಿಗೆ<br>
ಅಹಂಕಾರದ ಬಟ್ಟೆ<br>
ತಲೆಯಲ್ಲಿ ಅವಸಾನ ಹೊಂದಿದ ಶ್ರದ್ಧೆ<br>
ಕರುಣೆಯೊಂದು ಮಾತ್ರ ಸದಾ ಖಾಲಿ ಚಿತ್ತ!!</p>
<p dir="ltr">೩</p>
<p dir="ltr">ಅರೆ ಎಷ್ಟೊಂದು ಗೊಂದಲ, ದ್ವಂದ್ವ<br>
ಕೋಶದೊಳಗೆ ಕವಲೊಡೆವ ರೆಕ್ಕೆ<br>
ಕೈ ಕಾಲು ಪರಿಪೂರ್ಣತೆಯ ತವಕ ಚಿಟ್ಟೆ<br>
ಜಿಜ್ಞಾಸು ನಿಜದಿ ವಿಜ್ಞಾನಿ!!</p>
<p dir="ltr">೪</p>
<p dir="ltr">ಎಲ್ಲ ದಾರಿಗಳ ತುಂಬಾ ಕೆಂಪು ಗುರುತುಗಳು<br>
ಹಡೆದ ಹಿಂಸೆಯ ತಂದೆ, ಭಿತ್ತಿಯೊಳಗೆ ಮಸುಕು ಭವಿಷ್ಯ<br>
ಧರ್ಮ ತಾಯಾದರೆ<br>
ಕ್ಷಮೆಯೊಂದೇ ನಿರ್ವಾಣ!!</p>
<p dir="ltr">೫<br>
ಕಣ್ವನ ಉಪವನದ ಶಕುಂತಲೆ,ಬಿಟ್ಟೆದ್ದು <br>
ಹೋದವನ ನೆನೆದು ಅಳುವ ದಮಯಂತಿ<br>
ಉರಿವ ಚಿತೆಗೆ ಬಿದ್ದ ಮಾಸತಿಯರು<br>
ಗೆದ್ದು ಸೋತ ನೂರು ಹೆಣ್ಣುಗಳು,ಹೆಸರೊಂದು ನೆಪಮಾತ್ರ<br>
ಇನ್ನೂ ಕಲ್ಲರಳಿ ಹೂವಾಗೋ ಕಾಲ ದೂರವಿದೆ!!<br>
(ಮುಂದುವರೆಯಲಿದೆ...)</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-78778635724039616042019-09-26T10:38:00.001-07:002019-09-26T10:38:23.028-07:00ಇಂದು 26/9<p dir="ltr">ಚಂದ್ರ ಚುಕ್ಕಿ<br>
ಕಡಲು ಅಲೆ<br>
ಎಲ್ಲ  ಉಪಮೆಗಳು ಹಳತಾದವು <br>
ಹಳತಾದವು ಕಣ್ಣ ಮಿಂಚು<br>
ಶುದ್ಧ ಪರಿಶುದ್ಧ ಸ್ಪಟಿಕ ಪ್ರೇಮ<br>
ಪುರಾಣಗಳು<br>
ಲೈಲಾ ಮಜನು<br>
ಹಿರ್ ರಾಂಜಾ<br>
ಹಳತಾದವು<br>
ಸ್ನೇಹದ ಅಪರಿಮಿತ<br>
ಉಪಯೋಗದ ವ್ಯಾಖ್ಯಾನಗಳು<br>
ಉಪಕಥೆಗಳು<br>
ಹಳತಾದವು ಬೊಡ್ಡು ಹಿಡಿದ ಬೆನ್ನಲಿರಿದ<br>
ಚೂರಿ ಬಾಕುಗಳು<br>
ಇವತ್ತಿಗೆ ಸಧ್ಯ ಹೊಸದಾಗಿದೆ<br>
ಗೆದ್ದೆತ್ತಿನ ಬಾಲ ಹಿಡಿದು ತೂಗುವವರ<br>
ವಿಮರ್ಶಿಸುವವರ ಅಲೆ<br>
ಇಲ್ಲಿಯೂ ಅಲ್ಲಿಯೂ ಸಮನಾಗಿ ಸುದ್ದಿಗಳ ಹಂಚಿಕೊಳ್ಳುತ್ತಾ<br>
ಲಾಭ ಪಡೆದು ಮೆಟ್ಟಿಲೇರಿ ತಳ್ಳುವವರ ಪಡೆ<br>
ಇಲ್ಲೆಲ್ಲೂ ನಾವಿಲ್ಲವೋ<br>
ತಗೋ...ಕಸಕ್ಕಿಂತ ಕಡೆ!</p>
<p dir="ltr">2</p>
<p dir="ltr">ಸರಿ ಹುಡುಗಾ,ಒಪ್ಪಿದೆ..<br>
ನಾವೆಲ್ಲರೂ ಒಂಟಿ ಪಯಣಿಗರು<br>
ಆದರೂ, ಇಲ್ಲೇನೋ ತುಸು ತಪ್ಪಿದೆ!<br>
ಹೇಳು ಮತ್ತೆ<br>
ಆ ಮರವ ಬಳ್ಳಿಯೇಕೆ ತಬ್ಬಿದೆ?</p>
<p dir="ltr">3</p>
<p dir="ltr">ನಿತ್ಯ ದೇವರನ್ನ ಭಜಿಸಿ ಧ್ಯಾನಿಸಿ ಪುಣ್ಯದ ಮೂಟೆ <br>
ಮುಂದಿನ ಜನುಮಕ್ಕು ತಯಾರು ಮಾಡುವವರ ನಡುವೆ<br>
ತೀರಾ ಮನುಷ್ಯನಂತ ದೇವರಿರುವುದಿಲ್ಲ</p>
<p dir="ltr">ನಿಮ್ಮ ಆಜಾನು ಪ್ರಾರ್ಥನೆಗಳಲ್ಲು ಅವನು ಕಾಣದ <br>
ಕಾರಣ ನಾನು ಆ ಸ್ಥಳಗಳಿಗೆ ಕಾಲಿಡುವುದಿಲ್ಲ</p>
<p dir="ltr">ನಾನಂತೂ ನನ್ನ ದೇವರನ್ನು ಪ್ರೇಮಿಯಲ್ಲಿ ಹುಡುಕುತ್ತೇನೆ....</p>
<p dir="ltr">ಅವನ ನಗು, ಮಾತು ಮತ್ತು ಅನಂತ ವಿರಹದ <br>
ನಡುವಿನ ಜಾಗದಲ್ಲೆಲ್ಲೊ <br>
ನಿಮ್ಮ ದೇವರಿದ್ದಾನೆ ಅಂತನಿಸುತ್ತದೆ!</p>
<p dir="ltr">4</p>
<p dir="ltr">೧<br>
ಶೂನ್ಯ ತೊಟ್ಟಿಲು, ಭವದ ಚಂದಿರ<br>
ತೂಗು ಕೈಗಳಿಗೆ ಹಗ್ಗ<br>
ಮತ್ತೆ ಕಾಲ ಬುಡದಲ್ಲೇ ಅರಳಿದಮೊಳಕೆ ಕೊಳೆತಿದ್ದು ತಪ್ಪೇನಿಲ್ಲ!!</p>
<p dir="ltr">೨<br>
ಕಾಡು ಹೂಗಳು, ಕೆಸರಿನ ಕಮಲ<br>
ಕಪ್ಪು ಮುಗಿಲಲ್ಲೂ ಇಣುಕುವ ಚಂದಿರ<br>
ಕಣ್ಣೀರ ಹನಿಯಲ್ಲೂ ಸುಮ್ಮಾನ ಬುದ್ಧ!!</p>
<p dir="ltr">೩</p>
<p dir="ltr">ವಿರಹದ ಸಲಾಕೆ, ಪಾಚಿ ಕಟ್ಟಿದ ನಂಬಿಕೆ<br>
ತೊಳೆಯಲು ಬಂದಾಕೆ ಬದುವಿನ ನೆನಪಿನ<br>
ಬಳ್ಳಿಯನ್ನೂ ಕತ್ತರಿಸಿದ್ದು ಉನ್ಮಾದಕ್ಕೆ ಗಮನವಿಲ್ಲ!!</p>
<p dir="ltr">೪<br>
ಹಿಂಡಿದರೂ ಇಂಗದ ಕಣ್ಣೀರ ತೇವ<br>
ಹೀರಿ ಹೀರಿದರೂ ಸಮಾಧಾನಿ ದಿಂಬು<br>
ಮಧ್ಯೆ ಕಳೆದು ಹೋಗಿದ್ದಾರೆ ಮಕಾಡೆ ಮಲಗಿದ್ದಾರೆ ಭಾರತದ ದೇವತೆಯರು!!</p>
<p dir="ltr">೫<br>
ಧರ್ಮ ಗ್ರಂಥಗಳು, ಕಟ್ಟು ಕಥೆಗಳು<br>
ನದಿಗಳು ಉಕ್ಕಿವೆ,ಅಣೆಕಟ್ಟುಗಳು ತುಂಬಿವೆ<br>
ಆದರೂ ಇತಿಹಾಸ ಕೊಳಚೆಯಲ್ಲೇ ಕೊಳೆಯುತ್ತಿದೆ<br>
ಯಾರಿಗೆ ಬೇಕು? ಪ್ರಾರ್ಥನೆಯ ಮದಿರೆ ಕುಡಿಯೋಣ ಬನ್ನಿ!!<br>
(ಮುಂದುವರೆಯಲಿದೆ...)</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-32190588996288390472019-09-19T09:42:00.001-07:002019-09-19T09:42:43.435-07:00ಸಾವಿ ನೊಂದಿಗೆ ಮುಖಾಮುಖಿ<p dir="ltr"><u>ಸಾವಿನ</u> ಮನೆಯಲ್ಲಿ ಸೂತಕ, ನನಗೆ ಈ ಲೋಕವನ್ನ ಬಿಟ್ಟು ಹೋದವರ ಬಗ್ಗೆ ದುಃಖವಾಗುವುದಿಲ್ಲ, ಅವರು ಪ್ರಯಾಣ ಮುಂದುವರೆಸುವರು ಅನ್ನುವ ದಿವ್ಯ ನಂಬಿಕೆ ಇರುತ್ತದೆ, ಆದರೆ ಇಲ್ಲಿ ಅವರ ಅನುಪಸ್ಥಿತಿಯಲ್ಲಿ ನಿತ್ಯವೂ ಹಲವಾರು ಬಾರಿ ಸಾವನ್ನಪ್ಪುವ ಜೀವಗಳಿಗೆ ನನ್ನ ದುಃಖ ಸಾಂತ್ವನ ಸಲ್ಲುತ್ತದೆ...ಅವರ ಕಣ್ಣೀರಿಗೆ ನನ್ನ ಕಣ್ಣ ಹನಿ ಸೇರುತ್ತದೆ..ಆದರೂ ಬದುಕೇ...ನೀನು ನಾಳೆ ಮತ್ತು ಇವತ್ತುಗಳ ನಡುವೆ ಮರೆವಿನ ಕೊಂಡಿಯೊಂದನ್ನು ಇಟ್ಟು ಕಳಚುವ ಜಾಣ ಕಾಲನ ವಶವರ್ತಿ....ಮತ್ತೆ ವಸಂತ ಬಂದೆ ಬರುವ...ಯಾವ ರೂಪದಲ್ಲಾದರೂ...ಸಮಸ್ಥಿತಿಯನ್ನು ಕಾಯ್ದುಕೊಳ್ಳುವ ತಾಳ್ಮೆಯೊಂದಿರಬೇಕು ಅಷ್ಟೇ</p>
<p dir="ltr">ಕೊಂಡಿ ಎರಡು</p>
<p dir="ltr">ಜೀವನದಲ್ಲಿ ಒಮ್ಮೆಯಾದರೂ ಶವಸಂಸ್ಕಾರ ನೋಡಬೇಕು,ನಾವು ಅಷ್ಟೆಲ್ಲ ಪ್ರೀತಿಸಿದ ಜೀವವೊಂದು ಹಿಡಿ ಬೂದಿಯಾಗಿ ಹೋಗುವಾಗ <br>
ನಮ್ಮ ದೇವರು ದೆವ್ವ ಇತ್ಯಾದಿ ನಂಬಿಕೆಗಳೆಲ್ಲ ಹುಡಿ ಹುಡಿಯಾಗಿ ಬೆಂಕಿಯ ಕಿಡಿಯಲ್ಲಿ ಕರಗಿ ಸುಟ್ಟು ಹೋಗುತ್ತದೆ. ತಪ್ಪು ಸರಿಗಳಿಗೆಲ್ಲ ಅರ್ಥವೇ ಇಲ್ಲದೆ ಜೀವನ ಬರಿದೆ ಖಾಲಿ ಪಾತ್ರೆಯಂತೆ ತೋಚುತ್ತದೆ. ನಮ್ಮ ಅಹಂಕಾರ ಅಭಿಮಾನಗಳೆಲ್ಲ, ಗಾಳಿಯಲ್ಲಿ ಬೆರೆತು, ಈ ದೇಹ ಕಡ ತಂದದ್ದು ಎನ್ನುವ ಅರಿವಿನ ಕಿಚ್ಚು ನಮ್ಮೊಳಗೆ ಜ್ವಲಿಸುತ್ತದೆ. ಇದೆಲ್ಲಾ ನಿಮಗಾಗಲಿಲ್ಲ ಅಂದರೆ ನೀವು ಸ್ಮಶಾನಕ್ಕೂ ಸಂಭ್ರಮಕ್ಕೂ ಅನರ್ಹರು.</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-49024878118230782712019-09-19T09:39:00.001-07:002019-09-19T09:39:15.962-07:00ಪುಟ್ಟ ದೇವರು ಮತ್ತು ನಾನು<p dir="ltr">ಮಗ್ಗುಲಲ್ಲಿ ಮಲಗಿದ ಮುದ್ದಾದ ಹೂ, ಅಮ್ಮನ ಕೈ ಬೆರಳನ್ನ ಗಟ್ಟಿಯಾಗಿ ಹಿಡಿದು ಅವುಚಿಕೊಂಡಿದೆ ತನ್ನೆದೆಗೆ<br>
ಹೊರಮನೆಯಲ್ಲಿ ಕ್ರಿಕೆಟ್ಟು ಹಾಕಿದ ಅಪ್ಪ ಉದ್ವೇಗದಲ್ಲಿ ಗೊತ್ತಿಲ್ಲದೆ ಟಿವಿ ಶಬ್ದ ಜಾಸ್ತಿ ಮಾಡಿದ್ದಾನೆ, ಅಮ್ಮನಿಗೆ ಅಡಿಗೆ ಮನೆಯ ಸಿಂಕಿನಲ್ಲಿ ಬಿದ್ದ ಪಾತ್ರೆ, ಸ್ಟವ್ ಮೇಲೆ ಹರಡಿಕೊಂಡ ಕಸ, ಜೋಡಿಸಲು ಬಿದ್ದಿರುವ ಬಟ್ಟೆಗಳ ಧ್ಯಾನ<br>
ನಿಧಾನಕ್ಕೆ ಉಪಾಯದಲ್ಲಿ ಕೈ ಬಿಡಿಸಿ ಹೊದಿಕೆ ಹೊಚ್ಚಿ ಮುದ್ದು ಮುಖ ನೋಡಿ ಅದರೊಡನೆ ಅವುಚಿಕೊಂಡು ಮಲಗುವ ಸುಖ ಅಲ್ಪಕಾಲಕ್ಕಾದರು ತಪ್ಪಿ ಹೋದ ಸಂಕಟಕ್ಕೆ ಮರುಗುತ್ತಾ ಎದ್ದು ಬಂದು ಸಿಂಕಿನಲ್ಲಿ ಬಿದ್ದ ಪಾತ್ರೆಗೆ ಕೈ ಹಾಕುತ್ತಾಳೆ<br>
ಒಂದೈದು ನಿಮಿಷವಾಗಲಿಕ್ಕಿಲ್ಲ ಹಿಂದಿನಿಂದ ಪುಟ್ಟ ತೋಳು ಅಮ್ಮನ ಸೊಂಟದ ಸುತ್ತಲೂ ಬಾಚಿ ತಬ್ಬುತ್ತದೆ. "ಅಮ್ಮಾ, ನೀನ್ಯಾಕಮ್ಮಾ ಎದ್ದು ಹೋಗ್ತೀಯಾ, ಒಂದು ದಿನ ಪಾತ್ರೆ ಅಪ್ಪ ತೊಳಿಲಿ, ನಂಜೊತೆ ಮಲಗು ಪ್ಲೀಸ್" ಅಂತ ಗೋಗರೆವ ನಿದ್ದೆಗಣ್ಣುಗಳ ಮೋಡಿಗೆ ಒಳಗಾಗಿ ಆ ಮಾಯಕ್ಕಾರನ ಹಿಂದೆ ಕೀಲಿ ಕೊಟ್ಟ ಗೊಂಬೆಯ ತೆರದಿ ಅಮ್ಮ ಇದ್ದ ಬದ್ದ ಕೆಲಸವೆಲ್ಲ ಬಿಟ್ಟು ಹೋಗಿ ಮಲಗುತ್ತಾಳೆ...<br>
ಸುಖವೊಂದು ಮುದ್ದು ನಗುವಿನ ರೂಪದಲ್ಲೀಗ ಮಂಚದ ಮೇಲೆ ಬೆಳದಿಂಗಳ ಹಾಗೆ ಹೊದ್ದಿದೆ....<br>
ಕೆಲಸ ಬೊಗಸೆ ಹಾಳುಬಿದ್ದುಹೋಗಲಿ... ಇದರ ಮುಂದೆ ಬೇರೇನಿಲ್ಲ<br>
#ಅಮ್ಮತನವೆಂಬಖಾಸಗಿಸುಖ</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-29307424929867156232019-09-19T09:37:00.001-07:002019-09-19T09:37:24.781-07:00ಈ ದಿನ ೧೯/೯/೧೯<p dir="ltr">೧<br>
"ಪುಟ್ಟ ಎಳೆ ಮಕ್ಕಳು ಮುದ್ದು ಮಾಡ್ತಾವಲ್ಲ, ಅವಾಗ ಕಣ್ಣು ತನ್ನಿಂತಾನೆ ಮುಚ್ಕೊಳುತ್ತೆ, ಹೊರಜಗತ್ತಿನ ಎಲ್ಲ ಸ್ಪರ್ಶಗಳು ಕಳಚಿಕೊಳ್ಳುತ್ತೆ, ಆ ಎಳೇ ಬೆರಳುಗಳು ಮುಖ ಸವರಿ ತೋಳುಗಳು ಕತ್ತಿನ ಸುತ್ತ ಬಿಗಿದ ಕ್ಷಣ, ಅದು ಬಂಧನವಲ್ಲ ಬಿಡುಗಡೆ ಅನ್ನಿಸ್ತಿರುತ್ತೆ, ಮುತ್ತಿಟ್ಟರಂತು ಆ ಎಳೇ ತುಟಿಗಳಿಂದ ಮಾಧುರ್ಯವೊಂದು ಹರಿದು ದೇಹವಿಡಿ ಹರಿದಾಡಿ, ಕ್ಷಣಕ್ಕಾದರು ಸರಿ ನಾವು ಲೋಕಾತೀತರು ಅನ್ನಸಿಬಿಡುತ್ತೆ, ದೇವರಿದ್ದಾನೆ ಅಂತ ನಂಬದಿದ್ದರು ಪರವಾಗಿಲ್ಲ, ಮಕ್ಕಳ ಸ್ಪರ್ಶ ಮಾತ್ರ ಸಪ್ತಲೋಕಗಳ ಮೀರಿಸೋದು ಸತ್ಯ,"<br>
ಅಂತ ಮಾತಾಡ್ತಿದ್ದರೆ ಮಡಿಲ ಮಗುವಾಗಿ ಅವನು ತಾರೆಗಳತ್ತ ಬೆರಳು ತೋರುತ್ತಾ ಅಣಕಿಸಿದ, "ಸರೀ, ಇವತ್ತು ರಾತ್ರಿ ಅಲ್ಲಿಂದ ಅದನ್ನ ಕಿತ್ತು ನಿನ್ನ ಹೊಕ್ಕಳ ಹೂವಾಗಿಸುತ್ತೇನೆ" <br>
ಸಣ್ಣಗೆ ಮುಗುಳ್ನಕ್ಕ ಸಂಜೆ ಸೆರಗನಡಿಯಲ್ಲಿ ಮರೆಯಾಯ್ತು!</p>
<p dir="ltr">೨</p>
<p dir="ltr">ಸೀರಿಯಸ್ಸಾಗಿ ಚಂದರ ತಾರೆ ಚುಕ್ಕಿ ಅವನು ಅಂತೆಲ್ಲ ಬರಕೊಂಡು, ನನ್ನದೇ ಭಾವಲೋಕದಲ್ಲಿ ತೇಲಿಕೊಂಡು ಅವನನ್ನ ಮನಸ್ಸಿನ ತುಂಬಾ ತುಂಬಿಕೊಂಡು ಹುಚ್ಚಿ ತರಹ ಇರೋ ನನಗೆ, "ನಾರ್ಮಾಲಾಗಿರೋದು ಯಾವಾಗ?" ಅಂತ ಅವನು ಅಣಕಿಸ್ತಾ ಇರ್ತಾನೆ, ಹೌದಲ್ಲಾ? ನಾನು ಅಷ್ಟೊಂದು ಖಾಲಿ ಜೀವನ ಯಾವತ್ತು ಜೀವಿಸಿದ್ದೆ, ನನಗೆ ಮರೆತೇ ಹೋಗಿದೆ, ಸಾಲು ಸಾಲು ಆಘಾತಗಳು, ನೋವುಗಳು ಉದ್ವೇಗಗಳು ವಿಪರೀತ ಚಟುವಟಿಕೆ ಇದೆಲ್ಲಾ ಇವತ್ತಿಗೂ ನನ್ನ ಬದುಕು, <br>
ಬಹುಶಃ ಅದನ್ನ ಮೀರಿದ ಏನೋ ಆತ್ಮಸಂತೋಷವೊಂದು ಇವುಗಳ ನಡುವೆಯೇ ನನ್ನ ಸಮತೋಲನದಲ್ಲಿಟ್ಟಿದೆ,ಅದನ್ನ ವಿವರಿಸಲಾರೆ. ಆದರೂ ಅವ ಅತಿಯಾದ ನೈಜತೆಯನ್ನು ಬದುಕುವವ. ಅವನಿಗೆ ಹೌದು ಎಂದರೆ ಹೌದು ಅಂತ ಹೇಳಲಿಕ್ಕೆ ಗೊತ್ತಷ್ಟೆ, ಬಣ್ಣ ಹಚ್ಚಲು ಬರುವುದಿಲ್ಲ, ಪ್ರೀತಿಸಲು ಅಷ್ಟೇ ಬಹುಶಃ ಪಾಮಾಣಿಕವಾಗಿ ಪ್ರೀತಿಸಬಹುದು, ಸುಳ್ಳು ಹೇಳಲು ಬರುವುದಿಲ್ಲ. ಮತ್ತು ಅವನು ನನ್ನ ನಾನಾಗಲಾರದ ಕನ್ನಡಿಯೊಂದನ್ನು ನನಗೆ ತೋರುತ್ತಾನೆ, ಹಾಗಾಗಿಯೇ ಎಲ್ಲ ಸಣ್ಣ ಪುಟ್ಟ ಮುನಿಸು ಜಗಳಗಳ ನಡುವೆ ಅವನು ನನ್ನಲ್ಲಿ ಜೀವಂತವಿದ್ದಾನೆ ನನ್ನ ಪ್ರತಿಬಿಂಬವಾಗಿ...ದೂರವಿದ್ದಷ್ಟೂ ಹತ್ತಿರವಾಗಿ</p>
<p dir="ltr">೩<br>
ಈ ಹಸಿವಿಗೆ ಮಾಪಕಗಳಿಲ್ಲ, ಹಸಿವೆ ಆಗುತ್ತಿಲ್ಲ ಎಂದರು ತಪ್ಪಾದೀತು<br>
ಇದು ಹರಿವ ನದಿಯ ಅಲೆಗಳಲ್ಲಿ ಕುಣಿವ ಧ್ಯಾನದ ಸ್ಥಿತಿ<br>
ಅದೇ ಅಕ್ಕ ಕದಳಿಯಲ್ಲಿ ಬಯಲಾಗುವ ಮುನ್ನ ಕಂಡಿರಾ ಕಂಡಿರಾ <br>
ಎಂದು ಗೋಗರೆದು ಹುಡುಕಿದ ಸ್ಥಿತಿ<br>
ನಾನೆನ್ನುವ ಮೈ ಅರಿವು ತಪ್ಪಿ ಹೋಗಿ ಎಲ್ಲೆಲ್ಲೂ ಅವನ ಬಿಂಬವೊಂದೇ ಕಾಣುವ ಸ್ಥಿತಿ<br>
ಎಲ್ಲದರಲ್ಲೂ ಅವನು ನಾನಾಗಿ ನಾನು ಅವನಾಗಿ ಈ ಹಸಿವು ಜಾಸ್ತಿಯಾಯಿತೆ ಹೊರತು ಇಂಗಲಿಲ್ಲ<br>
ಅಣುರೇಣು ತೃಣ ಕಾಷ್ಟಗಳಲ್ಲಿ ಅವನನ್ನೇ ಕಾಣುವಾಗ ಭುಂಜಿಸಲಿ ಏನನ್ನು?<br>
ಅವನ ರೂಪ ನನ್ನದೇ ಆಗಿರುವಾಗ ಈ ಹಸಿವು ತಣಿಯಲು ಉಣ್ಣುವುದೇನನ್ನು?</p>
<p dir="ltr">೪</p>
<p dir="ltr">ಅಮಾವಾಸ್ಯೆ ದಿನ ನನ್ನ ಜತೆ ಅವನು ಮಾತಾಡ್ಬಾರ್ದು ಅಂತ ಏನಾದ್ರೂ ನಿಯಮ ಇದ್ಯಾ? ನಮಗೆ ಕಾಲ ತಿಥಿಗಳ ಹಂಗಿಲ್ಲ...ಅವನ ಕಂದು ಕಣ್ಣುಗಳಲ್ಲಿ ಕಣ್ಣಿಟ್ಟ ಕ್ಷಣ  ತಿಂಗಳು ಎದೆಗಿಳಿಯುತ್ತದೆ, ಮಾಯದ ವೇಗದಲ್ಲಿ ಸಮಯ ನಮ್ಮಿಬ್ಬರನ್ನು ಈ ನಿಮ್ಮ ನಿಮ್ಮ ಅಂಗಡಿಮುಗ್ಗಟ್ಟುಗಳ  ಸವಾರಿ ಮಾಡಿಸುತ್ತದೆ. ನಾವು ಕೊಳ್ಳುಗರಲ್ಲ, ಈ ಸಂತೆಯಲ್ಲೂ ಕೈಹಿಡಿದು ನಗುವಿನೊಂದಿಗೆ ಹೃದಯ ವಿನಿಮಯ ಮಾಡಿಕೊಂಡವರು...ಅವನ ಹಿಂದೆ ಕೂತು ಬೆಚ್ಚಗೆ ಅಪ್ಪಿಕೊಂಡರೆ ಸವಾರಿ ಸೀದಾ ನಿಮ್ಮ ನಿಮ್ಮ ಕಲ್ಪನೆಯ ಸ್ವರ್ಗಕ್ಕೆ..ಅವ ಅರ್ಧ ಕುಡಿದ ಕಾಫಿಗೆ ನಾನು ತುಟಿಯಿಡುತ್ತೇನೆ ತಣ್ಣಗೆ ಅವ ಅಮೃತವನ್ನೆಲ್ಲ ತನ್ನ ಕಣ್ಣಲ್ಲೇ ಹೀರುತ್ತಾನೆ..ಮತ್ತು ಇದನ್ನೆಲ್ಲ ನೋಡುವ ಕೇಳುವ.ಹೊಟ್ಟೆ ಉರ್ಕೊಳ್ಳುವವರಿಗೆ ನಾವು ಜವಾಬ್ದಾರರಲ್ಲ</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-80125662828059335462019-09-17T10:10:00.001-07:002019-09-17T10:10:14.967-07:00ಈ ದಿನ 17/9<p dir="ltr">1<br>
ಪ್ರೇಮದಲ್ಲಿ<br>
ಕೊಟ್ಟೆ ಅನ್ನುವುದು ಘಾತಕ<br>
ನಿರೀಕ್ಷೆ ಮಹಾ ಪಾತಕ</p>
<p dir="ltr">ಬಾನಿಗೆ ಕೈ ಚಾಚಿ<br>
ಚಂದಿರನ್ನ ಕರೆದು<br>
ಬೆಳದಿಂಗಳ ಕಿರಣ ಹಿಡಿದು<br>
ನಗುವ<br>
ಮಗು<br>
ಪ್ರೇಮ</p>
<p dir="ltr">ಶೂನ್ಯಕ್ಕೆ ಕೈ ಹಾಕಿ<br>
ಬಾಚಿ ಬಾಚಿಕೊಂಡಮೇಲು<br>
ಶೂನ್ಯವೆ ಆಗಿ ಉಳಿವುದು ಪ್ರೇಮ</p>
<p dir="ltr">ಎಲ್ಲ ಇದ್ದರೂ ಇಲ್ಲದಂತಿರುವುದು<br>
ತುಂಬಿದ್ದರು ಖಾಲಿ ಇರುವುದು<br>
ಭ್ರಮೆಗಳಾಚೆಗೊಂದು ನೋಟ ತೋರುವುದು<br>
ಪ್ರೇಮ</p>
<p dir="ltr">ನಡೆದೇ ತೀರುವೆ ಅನ್ನುವ ಪಯಣಿಗನ<br>
ಕಾಲಕೆಳ ಭೂಮಿಯಲ್ಲಿ<br>
ಮುಳ್ಳಿನ ಮೇಲರಳುವ<br>
ನಂಬಿಕೆಯ ಹೂ ಪ್ರೇಮ</p>
<p dir="ltr">ಮಗು<br>
ಈ<br>
ಪ್ರೇಮ!😊</p>
<p dir="ltr">2</p>
<p dir="ltr">ಕರೆದು ತಾ...<br>
ಕರಗಿ ಹೋದ ಈ ಕೆನ್ನೆಕೆಂಪು<br>
ಆ ದಿನಗಳ ತಂಗಾಳಿ<br>
ಹೆಜ್ಜೆ ಇಟ್ಟಲ್ಲೆಲ್ಲ ಅರಳುತ್ತಿದ್ದ ಮರುಳ ಹೂ</p>
<p dir="ltr">ಕರೆದು ತಾ<br>
ಕನ್ನಡಿಯಲ್ಲಿ ಇಣುಕುತ್ತಿದ್ದ ನಾಚಿಕೆ<br>
ಏನನ್ನೋ ಹುಡುಕುತ್ತಿದ್ದ ಹಂಬಲ<br>
ಆ ಮೊದಲ ನೋಟದ ಕೆಣಕುವಿಕೆ<br>
ಇಲ್ಲೆಲ್ಲೋ ಕಳಕೊಂಡ ಹಾಗಿದೆ<br>
ಕಾಲನ ಕೈಯಲ್ಲಿ ಸಿಕ್ಕು ಈಗ ತೀರದ ನೋವಿದೆ</p>
<p dir="ltr">ಕರೆದು ತಾ<br>
ಮತ್ತೆ ಆ ವಸಂತ, ವರುಷಗಳ  ನಡುವೆಯೆಲ್ಲೋ<br>
ಕಳಚಿಕೊಂಡು ದೂರ ಸರಿದ<br>
ಆಕರ್ಷಣೆ<br>
ನಡುಗಾಲದ ತುಟಿಗಳಲ್ಲಿ ಬತ್ತಿದ ಮಕರಂದ<br>
ಏನಿಲ್ಲದಿದ್ದರು ಎಲ್ಲವೂ ಇದ್ದಂತೆ ಭ್ರಮಿಸುತ್ತಿದ್ದ<br>
ಹರೆಯಕ್ಕಷ್ಟೇ ಮೀಸಲಾದ ಆ ಅಂದ ಚಂದ</p>
<p dir="ltr">ಮರಳಿ ತಾ<br>
ಇವನೇ...<br>
ನಿನ್ನ ಬೆರಳುಗಳಲ್ಲಿ ಇರುವ ಕೊಳಲಿನಂದದಿ<br>
ಮಧುರವಾಗಿ ನುಡಿದ ರಾಗ<br>
ಆ ಮೊರೆವ ಪಿಸುನುಡಿಗಳ ಭೋರ್ಗರೆತ<br>
ಮರೆತೇ ಹೋದಂತನಿಸಿದ ಶ್ರಾವಣದ ಕನಲಿಕೆ<br>
ಈಗೇಕೋ ನಡುಕ ,ಸುಸ್ತು,  ದೂರ ತೀರದ ಬಳಲಿಕೆ<br>
3<br>
ಇಷ್ಟೇ ಪ್ರೀತಿ<br>
ಅಂತ ಪಾಲು ಮಾಡಿ ಪ್ರೀತಿಸಬಹುದಾ?<br>
ಕೇಳು ನದಿಯ ಪಾತ್ರಗಳ<br>
ಕಡಲ ತೀರಗಳ<br>
ಪದೇ ಪದೇ ಕಳಚಿಕೊಳ್ಳುವ ನೋವಿದ್ದರು<br>
ಎದೆಗುಂದದೆ ಸುರಿವ ಮೋಡಗಳ<br>
ತಲ್ಲಣಗಳ ರೆಪ್ಪೆಯಡಿಯಲ್ಲಿ ಬಚ್ಚಿಟ್ಟು<br>
ಕ್ಷಣದಲ್ಲಿ ನಿನಗಾಗಿ ತುಂಟಿಯಾಗಿ ಬಿಡುವ ನಾನು<br>
ಬತ್ತಿ ಹೋದರೂ ಸರಿಯೆ<br>
ಹುಚ್ಚಾಗಿ ಹರಿದೇನು<br>
ಆಗಸದ ಉಪಮೆಗಳ ಮೀರುವ ತನಕ!</p>
<p dir="ltr">4</p>
<p dir="ltr">ನೋಡೂ,<br>
ಅವರು ನಡೆದ ದಾರಿ ಬೇರೆ<br>
ತಿರುವುಗಳು ಬೇರೆ<br>
ಮತ್ತು ಬೆಸೆದ ಬಂಧಗಳು ಬೇರೆ<br>
ನೀನು ದಾರಿಬಿಟ್ಟವಳು<br>
ಕರುಣೆಯಷ್ಟೆ ಕನ್ನಡಿಯನ್ನಾಗಿಸಿ<br>
ಮುಖವಾಡಗಳ ಕಳಚಿಟ್ಟವಳು<br>
ನಿನ್ನ ಒಳಗಿನ ಬೆಳಕಿಗೆ ನೀನೆ ಮರುಳಾಗುತ್ತಾ<br>
ಕಂಬನಿಯ ಚಿಟ್ಟೆಗಳ ಸಿಂಗರಿಸಿ ಹೊಕ್ಕಳ ಘಮ ಸವರಿ<br>
ಬಾನತ್ತ ತೂ......ರಿ ಬಿಟ್ಟವಳು<br>
ಒಡೆದ ಮಡಿಕೆಯ ಮನಸೊಳಗೆ<br>
ಅಮೃತದ ಬಿಂದು <br>
ಹಾದು ಹೋದ ಹಾದಿಹೋಕರಿಗೆಲ್ಲ<br>
ಅರಿವೇ ಆಗದಂತೆ ಆನಂದದ ಅನುಭೂತಿ ಇತ್ತವಳು,<br>
ಹೆಣ್ಣೆ, ಹೀಗೇ ಇರು,<br>
ಎತ್ತಣದ ಗಾಳಿಯು ನಿನ್ನ ಗತಿ ಬದಲಿಸದಿರಲಿ<br>
ಚಿಟ್ಟೆಗೆ ದಾರಿಯ ಹಂಗಿಲ್ಲ ಕಣೇ!</p>
<p dir="ltr">5</p>
<p dir="ltr">ಈ ಜಗತ್ತಿನ ಸದ್ದು ಗದ್ದಲದ ನಡುವೆ<br>
ದೊಡ್ಡದಾಗಿ ದನಿಯೆತ್ತಿ ದಣಿಯಬೇಡ<br>
ನಿನ್ನ ಎದೆಯ ಬಡಿತದಷ್ಟೇ ಹಗುರವಾಗಿ<br>
ನನ್ನ ಕೂಗು...</p>
<p dir="ltr">ಹಕ್ಕಿ ರೆಕ್ಕೆಯ ಪುಕ್ಕ ಕಳಚಿಕೊಂಡು<br>
ಬಾನೆತ್ತರ ಈ ಧೂಮಹೋಮದ<br>
ಗಡಿ ದಾಟಿ ಗಾಳಿಯಲ್ಲಿ ಮೆಲ್ಲಗೆ<br>
ಮೇಲೇರುವಂತೆ<br>
ನನ್ನ ಕೂಗು....</p>
<p dir="ltr">ಕವುಚಿಕೊಂಡ ಮೋಡ<br>
ಬೆಟ್ಟದೊಡಲಿಗೆ ಸುರಿದು ತನ್ನೆಲ್ಲ ದುಃಖ<br>
ಸದ್ದಿಲ್ಲದಂತೆ ಸರಿದು ಹೋಗುವ ತೆರದಿ<br>
ನನ್ನ ಕೂಗು....</p>
<p dir="ltr">ಕೇಳಿಸದೇನೋ ಎನಬೇಡ<br>
ನನ್ನೆದೆಯಲ್ಲಿ ನಿ ನೆಟ್ಟ ಪ್ರಣಯಬೀಜ<br>
ಹೊಕ್ಕಳಲ್ಲಿ ಚಿಗುರಿ ನಿಡಿದಾಗಿ <br>
ಮೈಮುರಿದು ಮೈತುಂಬ ಪುಲಕದ<br>
ಹೂ ಅರಳುವಂತೆ<br>
ನನ್ನ ಕೂಗು.....<br>
-ಶಮ್ಮಿ</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-8635284254261193962018-02-20T00:21:00.000-08:002018-02-20T00:21:08.244-08:00<div dir="ltr" style="text-align: left;" trbidi="on">
ಅಲಾರಾಂ ಹೊಡೆದುಕೊಳ್ಳುತ್ತಿತ್ತು, ಟಪಾಕ್ ಅಂತ ಅದರ ತಲೆಯಮೇಲೊಂದು ಕುಕ್ಕಿದೆ, ಸುಮ್ಮನೆ ಬಾಯಿ ಮುಚ್ಚಿಕೊಂಡಿತು, ಮತ್ತೆ ಹಾಸಿಗೆಯ ಮೇಲೆ ಬಿದ್ದು ಹೊರಳಾಡಿದೆ , ಪಕ್ಕದಲ್ಲಿಯೇ ರಾತ್ರಿ ಓದಿ ಮುಗಿಸಿದ ಡಿಕನ್ಸನ್ನನ ಪುಸ್ತಕ "ಯಾವಾಗ ಮತ್ತೆ ನೀನು ನನ್ನ ಮುಟ್ಟೋದು " ಅಂತ ಅಂಗಾತ ಮಲಗಿತ್ತು. ಅದರ ಪೇಜುಗಳ ಮೇಲೆ ಮೃದುವಾಗಿ ಬೆರಳಾಡಿಸಿದೆ, ನನಗೆ ಹೊಸ ಮತ್ತು ಹಳೆಯ ಪುಸ್ತಕಗಳ ನಾಜೂಕು ಬಹಳ ಇಷ್ಟವಾಗುತ್ತದೆ, ಅದೊಂಥರಾ ಹೆಣ್ಣಿನಂತೆ ಅಂತನ್ನಿಸುವುದು , ವಯಸ್ಸಾದಂತೆಲ್ಲ ಮಾಗುತ್ತಾ ಒಂದು ಔನ್ಯತ್ಯ ಒಂದು ಹಿತವಾದ ಪಳಗಿಸಲ್ಪಟ್ಟ ನಾಜೂಕು ಹೆಣ್ಣಿನ ದೇಹ ಮತ್ತೆ ವರ್ತನೆಗಳಿಗೆ ಒದಗುತ್ತದೆ ಹಾಗೆಯೇ ಆಗಷ್ಟೇ ಕುಸುಮಿಸುವ ಹದಿಹರೆಯಕ್ಕು ಸಹ ಅಲ್ಲಿ ನಾಜೂಕು ಕಾಣುವುದು , ಅವೆರಡರ ನಡುವಿನದ್ದು ಕ್ಲಿಷ್ಟ ಮತ್ತು ಕ್ಲಿಷೆ ಅನ್ನಿಸಿ ನಗು ಬಂತು, ಓ ಆಗಲೇ ಆರಾಯಿತು ಪಮ್ಮಿ ಬಂದುಬಿಡುತ್ತಾನೆ ಬಾಗಿಲಿಗೆ , ವಾಕಿಂಗಿಗೆ ಹೋಗುವುದು ತಪ್ಪಿಸಲಾಗದು, ನಡೆಯುವುದಕ್ಕಿಂತಲೂ ತಮಗೆಂದೇ ಮೀಸಲಾದ ಬೆಂಚಿನಲ್ಲಿ ಕುಳಿತು ವಿದ್ಯಮಾನಗಳನ್ನೆಲ್ಲ ಚರ್ಚಿಸುವುದು ತಮಗೆ ಇಷ್ಟದ ಕೆಲಸ ಅಲ್ವೇ, ಪಮ್ಮಿಯಂತೂ ಅವನ ಬದುಕಿನಲ್ಲಿ ಬಂದು ಹೋದ ಹೆಣ್ಣುಗಳ ಬಗ್ಗೆ ಈಗಲೂ ಶಾಯರಿ ಕಟ್ಟುತ್ತಾನೆ , ನಾನು ಮೌನವಾಗಿ ಎಲ್ಲ ಕೇಳಿಸಿಕೊಂಡು ನಡೆಯುತ್ತೇನೆ<br />
ಬಾಗಿಲಿನ ಬಳಿ ಶಬ್ದವಾಯಿತು ಪಮ್ಮಿ ನಿಂತಿದ್ದಾನೆ . ನಾನಿನ್ನು ಸಾಕ್ಸ್ ಹಾಕಿಲ್ಲ , ಕಷ್ಟ ಪಟ್ಟು ಕಾಲಿಗೆ ಬಗ್ಗಲು ಹೋದರೆ ಸಂಧಿವಾತ ಹಿಡಿದುಕೊಂಡ ಕಾಲು ಜಪ್ಪಯ್ಯ ಅಂದರು ಹನಿ ಹಂದಲಿಲ್ಲ , ಪಮ್ಮಿ ತನ್ನ ಕೋಲನ್ನು ಒರಗಿಸಿ ಅಚ್ಯುತಾ ಅಂತ ನನ್ನ ಮಗನನ್ನು ಕರೆದ , ಅಚ್ಯುತ ಆಗಲೇ ಎದ್ದು ಜಿಮ್ಮಿಗೆ ತಯಾರಾಗುತ್ತಿದ್ದಾನೆ ಥೇಟು ನನ್ನದೇ ರೂಪ ವರ್ಷದಲ್ಲಿ ಎರಡು ತಿಂಗಳು ಇಲ್ಲಿ, ಇನ್ನುಳಿದಂತೆಲ್ಲ ಅಮೇರಿಕಾದಲ್ಲಿ , ಊರಿಗೆ ಬಂದಾಗಲೂ ಜಿಮ್ಮು ತಪ್ಪಿಸುವವನಲ್ಲ ಆವಾ, ಎಷ್ಟಂದರೂ ನನ್ನ ಮಗನಲ್ಲವೇ, ನೆನೆದು ಹೆಮ್ಮೆಯಾಯ್ತು, ಅಚ್ಯುತ ಹೊರಗೆ ಬಂದವನೇ ನೆಲದ ಮೇಲೆ ಕೂತು ಸಾಕ್ಸ್ ಹಾಕಿದ "ಅಪ್ಪಾ ಇವತ್ತು ವಾಕಿಂಗ್ ಬೇಡ ಇತ್ತು , ತುಂಬಾ ಚಳಿ ಇದೆ , ಆರು ತಿಂಗಳಾಯ್ತು ಬೈಪಾಸ್ ಮಾಡಿಸಿ ನಿಂಗಿ ವಯಸ್ಸಿಗೆ ಇದೆಲ್ಲ ಬೇಕಾ" ಅಂದ. ಅವನಿಗೆ ಉತ್ತರ ಕೊಡದೆ ಬರಿ ನಕ್ಕುಬಿಟ್ಟೆ , " ಅಪ್ಪ, ಎಷ್ಟು ಚಂದ ನಿನ್ನ ಸ್ಮೈಲ್ ಯಾವಾಗ್ಲೂ ಹೀಗೆ ಇರು, ನಿಂಗಿಷ್ಟ ಬಂದಿದ್ದೆ ಮಾಡು " ಅಂದವನೇ ತಾನು ತಯಾರಾಗತೊಡಗಿದ , ನಾನು ನಿಧಾನಕ್ಕೆ ಎದ್ದು ಪಮ್ಮಿಯೊಡನೆ ರಸ್ತೆಗಿಳಿದೆ<br />
ಈ ರಸ್ತೆಯ ಪ್ರತಿ ಅಂಗುಲಂಗುಲವು ಗೊತ್ತು ನನಗೆ , ಎಲ್ಲಿ ಗುಂಡಿ ಇದೆ, ಯಾರ ಮನೆಯಲ್ಲಿ ನಾಯಿ ಇದೆ, ಯಾರು ಯಾರ ಮನೆಯ ಹೂ ಕೀಳುತ್ತಾರೆ ಎಲ್ಲ ಗೊತ್ತು, ವಾಕಿಂಗಿನಲ್ಲಿ ನನ್ನದೇ ಎಪ್ಪತ್ತೈದು ಎಂಭತ್ತರ ಗುಂಪಿದೆ, ನಾವೆಲ್ಲಾ ಇದೆ ರಸ್ತೆಯಲ್ಲೇ ಆದಿ ಓದಿ ಕೀಟಲೆ ಮಾಡಿಕೊಂಡು ಬೆಳೆದವರು, ಎಲ್ಲೆಲ್ಲೋ ಕೆಲಸ ಮಾಡಿಯೂ ಕೊನೆಯ ಸಂಧ್ಯೆಗೆ ಎಲ್ಲ ಅವರವರ ಮನೆಗಳಲ್ಲಿ ನೆಲೆಸಿದವರು. ನಮಗೆ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಬಹಳ ವಿಷಯಗಳು ಗೊತ್ತು, ಮುಚ್ಚಿಡುವಂಥ ವಿಷಯಗಳೇ ಇರಲಿಲ್ಲ, ನಿಧಾನವಾಗಿ ಪಾರ್ಕ್ ಪ್ರವೇಶಿದೆವು, ನಮಗಾಗೇ ಅಂತ ಕಾದಿರಿಸಿದ್ದ ಆ ಬೆಂಚಿನಲ್ಲಿ ಇವತ್ತು ಅವಳೊಬ್ಬಳೆ ಕುಳಿತಿದ್ದಳು ಬೇರೆ ಎಲ್ಲ ವಾಕಿಂಗ್ ಮಾಡುತ್ತಿರಬೇಕು , ನಾನು ಹೋಗಿ ಕುಳಿತೆ, ಪಮ್ಮಿಯೂ ಗುಡ್ ಮಾರ್ನಿಂಗ್ ಅಂದ , ಅವಳು ಅಚ್ಚ ಕನ್ನಡದಲ್ಲಿ ಶುಭೋದಯ ಅಂದು ಮುಗುಳ್ನಕ್ಕಳು, ಒಂದು ಮುವ್ವತ್ತು ಮುವ್ವತ್ತೈದರ ಹೆಣ್ಣು, ಸದಾ ನಮ್ಮಂಥ ಚಿರಯುವಕರ ಸಂಗದಲ್ಲಿ ಸತ್ಸಂಗ ಮಾಡುತ್ತಾ ಕಾಲ ಕಳೆವಳು, ತೀರಾ ಮಾಡರ್ನ್ ಕಾಣುವ ಆದರೆ ಅದಕ್ಕೆ ತದ್ವಿರುದ್ಧವಾಗಿ ಅಧ್ಯಾತ್ಮ ಸಾಹಿತ್ಯದಲ್ಲಿ ನಿರರ್ಗಳ ಮಾತಾಡುವ, ಅತಿಯಾಗಿ ಎಲ್ಲರನ್ನು ಪ್ರೀತಿಸುವ, ಒಬ್ಬರು ಬರದಿದ್ದರೂ ವಿಚಾರಿಸುವ, ಈಕೆ ಪರಿಚಯ ಆದದ್ದು ನಮ್ಮಲ್ಲೆಲ್ಲ ಖುಷಿ ತಂದಿದೆ. ಬೇರೆಯವರೆಲ್ಲ ಆಕೆಯನ್ನು ಏನೋ ತಪ್ಪು ಮಾಡಿದವಳೆಂಬಂತೆ ನಮ್ಮೊಡನೆ ಇರುವಾಗ ನೋಡುತ್ತಿದ್ದರೆ, ಈಕೆ ಮಾತ್ರ ಎಲ್ಲರೊಡನೆ ಕೈ ಹಿಡಿದು ಪರಿಯಿಂದ ಒಂದಪ್ಪುಗೆ ಕೊಟ್ಟು ನಂತರ ಮಾತಿಗಿಳಿಯುತ್ತಿದ್ದಳು, ಅವ್ಳಿದ್ದುದರಿಂದಲೇ ನನ್ನ ವಾಕಿಂಗು ಸಾಂಗ ಅಂತ ಅನ್ನಿಸೋಕೆ ಶುರುವಾದದ್ದು.<br />
ಇವತ್ತು ಮಾತಿನೊಡನೆ ಗರುಡ ಪುರಾಣ ಬಂತು ಆಕೆ ಅದೆಲ್ಲ ಕಲ್ಪನೆಗಳು ಇತಿಹಾಸದಲ್ಲಿ ಸೃಷ್ಟಿಯಾದ ಸ್ವಾರಸ್ಯ ವಿವರಿಸುತ್ತಾ, ಯಾವುದೋ ಹಂತದಲ್ಲಿ ಕೈ ಹಿಡಿದಳು, ಆ ಆತ್ಮೀಯತೆ ಅದು ನನಗೋಸ್ಕರ ಮಾತ್ರ ಎನ್ನುವ ಅವಳ ವರ್ತನೆ ನನಗೆ ಬಹುಶಃ ಖುಷಿ ಕೊಡುತ್ತಿತ್ತು, ಗಂಟೆಗಳು ಸರಿದದ್ದೇ ಗೊತ್ತಾಗಲಿಲ್ಲ, ವಾಪಸ್ಸು ಮನೆಗೆ ಬಂಡ ಮೇಲು ದಿನಾಲು ಆಕೆ ಕಾಡುತ್ತಿದ್ದಳು, ಚಿಕ್ಕ ಮಗಳ ವಯಸ್ಸಿನ ಹುಡುಗಿ, ಬಹುಶಃ ನನಗೆ ಹುಟ್ಟಿರುವುದು ಅಕ್ಕರಾಸ್ಥೆಯ ಅನ್ನುವುದರ ಬಗ್ಗೆ ನಾನು ತುಂಬಾ ಸಾರಿ ಯೋಚಿಸಿದ್ದಿದೆ ಅದಲ್ಲ, ಯಾವುದೋ ನೆಮ್ಮದಿ ಅವಳ ಮಾತು ಕತೆಗಳಲ್ಲಿ , ಅವಳ ಹಾವ ಭಾವ ಎಲ್ಲ ನನಗಾಗೇ ಅನ್ನಿಸಲು ಶುರುವಾಗಿತ್ತು, ಬಹುಶಃ ಎಂಬತ್ತರ ಆಸುಪಾಸಿಗೆ ಈ ಮೋಹ ಹುಟ್ಟುವುದಿಲ್ಲ, ಅಷ್ಟಕ್ಕೂ ಅದು ಮೋಹವಾ ಅನ್ನುವ ಪ್ರಶ್ನೆಗೆ ಅಲ್ಲ ಅನ್ನುವುದೇ ಉತ್ತರವಾಗಿತ್ತು. ಇತ್ತೀಚಿಗೆ ಆಕೆಯ ಯೋಚನೆ ಇಂದಲೇ ಶುರುವಾಗಿ ಅವಳಿಂದಲೇ ಮುಗಿಯುತ್ತಿತ್ತು, ಒಂದು ದಿನ ಆಕೆ ಬರದಿದ್ದರೆ ಸಾಕು ನಾನು ನರಳುತ್ತಿದ್ದೆ.<br />
ನಿತ್ಯದಂತೆ ಇವತ್ತು ತರಕಾರಿ ತಂದೆ, ಸಂಜೆಗೊಂದು ಸೊಗಸಾದ ಹುಳಿ ಮಾಡಿ ವಿಶ್ರಮಿಸಿದೆ , ನಾಳೆ ಆಕೆಯೊಂದಿಗೆ ಮಾತಾಡಬೇಕು ಅನ್ನಿಸಿತು. ಹೆಂಡತಿಯ ಚಿತ್ರ ವನ್ನೊಮ್ಮೆ ನೋಡಿದೆ ಪ್ರಶಾಂತವಾಗಿ ದೀಪದಂತೆ ನಗುತ್ತಿದ್ದಳು ಅವಳು<br />
ಏನೋ ಒಂಥರಾ ಸಮಾಧಾನ ಅವಳ ಹತ್ತಿರ ಎಲ್ಲ ಹೇಳಿದರೆ, ದೀಪದ ಬೆಳಕಲ್ಲೇ ಹೂ ಅಂದಂತಾಯಿತು. ಒಂದೇಆರದು ಪೇಜು ಓಡುವಷ್ಟರಲ್ಲಿ ಗಾಢವಾದ ನಿದ್ದೆ.<br />
ಮತ್ತೆ ಎಚ್ಚರಾದಾಗ ಯಾವತ್ತಿನಂತೆ ಅಲಾರಾಂ ಸಡ್ಡು ಕೇಳಿಸಲಿಲ್ಲ, ನಾನು ಬಹುಶಃ ಸರಿಯಾದ ಸಮಯಕ್ಕಿಂತ ಮುಂಚೆ ಎದ್ದಿದ್ದೇನೆ ಅನ್ನಿಸಿತು, ಸುತ್ತ ನೋಡಿದೆ ಮಗನ ಕೊಣೆ ಯಲ್ಲಿ ಸಣ್ಣ ದೀಪವಿತ್ತು, ಸದ್ದು ಮಾಡದಂತೆ ಎದ್ದು ಹಾಲು ಕಾಯಿಸಿದೆ,ಹಲ್ಲು ತಿಕ್ಕಿ ಪೈಜಾಮ ಬದಲಿಸಿ ಸಾಕ್ಸ್ ಹಾಕಲಾರಂಭಿಸಿದೆ...ಆಶ್ಚರ್ಯ , ಸಲೀಸಾಗಿ ಒಂದೇ ನಿಮಿಷದಲ್ಲಿ ಹಾಕಿಬಿಟ್ಟೆ, ಎದ್ದುನಿಂತೆ ಇದ್ದಕ್ಕಿದ್ದಂತೆ ಯೌವನ ಉಕ್ಕಿಬಂದ ಹಗುರ ಭಾವ , ಬೆನ್ನಿನ ಕೊಲೆಲ್ಲ ಲ್ಲ ನೆಟ್ಟಗಾದಂತೆನ್ನಿಸಿತು<br />
ಮೆಟ್ಟಿಲಿಳಿವುದು ಕಷ್ಟವಾಗಲಿಲ್ಲ, ಇವತ್ತು ಅವಳ ಹತ್ತಿರ ಮಾತಾಡಬೇಕಾದ ವಿಷಯ ನೆನೆದು ಖುಷಿಯಾಗಿದ್ದೆ, ಇವತ್ತು ಪಮ್ಮಿ ಬದಲಿಗೆ ಬೇರೆ ಯಾರೋ ಗೇಟಿನ ಬಳಿ ಇರುವಂತೆನಿಸಿತು. ಅರೆ! ಶ್ರೀಕಂಠ ಅಲ್ವೇ, ಆಶ್ಚರ್ಯವಾದರೂ ಮಾತಾಡಿಸಿದೆ ಏನೋ ಅಂತೂ ಇವತ್ತಿಂದ ನೀನು ನಂಜೊತೆ ವಾಕಿಂಗ್ ಮಾಡೋ ಹಾಗಾಯ್ತು ಅಂತ ನಕ್ಕ, ನನ್ನ ಚಡ್ಡಿ ದೋಸ್ತ ಅವ , ಒಟ್ಟಿಗೆ ನಡೆದೆವು ಅವನಿಗೆ ಇವಳ ವಿಷಯವೆಲ್ಲ ಹೇಳಿದೆ, ಅದಕ್ಕವ ವಿಚಿತ್ರವಾಗಿ ನಕ್ಕು ನನ್ನ ಕಡೆ ನೋಡಿದ, " ನೀನೊಂದು, ಅವಳಿಗೆ ಇನ್ನು ಮೋಹ, ಸುಮ್ಮನೆ ಬಾ, ಕೂರೋಣ , ಅಂತ ನನ್ನ ಕರೆದುಕೊಂಡು ಹೋದ, ನನಗೆ ಏನೋ ತಾಳ ತಪ್ಪಿದಂತೆನಿಸಿತು, ಅವಳು ಅಲ್ಲೇ ಕೂತಿದ್ದಳು ಆ ಕಣ್ಣಿನಲ್ಲಿ ನಿರೀಕ್ಷೆ ಇತ್ತು , ಅದು ನನ್ನದೇ ಆದರೂ ಅವಳು ಎದುರು ಕೂಟ ನನ್ನ ನೋಡುತ್ತಿಲ್ಲ ಅಂತ ಗೊತ್ತಾಯಿತು , ಸಾಜು ಮೋಹನ ಇವರೆಲ್ಲರೂ ಕಂಡರೂ, ಅದೇ ಪಾರ್ಕಿನಲ್ಲಿ ಸಲೀಸಾಗಿ ಆನಂದವಾಗಿ ವಾಕ್ ಮಾಡುತ್ತಿದ್ದರು, ಅವರೆಲ್ಲರ ಮೈಯಲ್ಲೂ ನನ್ನಂಥದ್ದೇ ಕಸುವಿತ್ತು, ಹೊಸಾ ಉತ್ಸಾಹವಿತ್ತು. ಇದ್ದಕ್ಕಿದ್ದಂತೆ ನೆನಪಾಗಿದ್ದು, ಹೌದು, ಇವರೆಲ್ಲರ ದೇಹಕ್ಕೆ ಬೆಂಕಿ ಇಟ್ಟದ್ದನ್ನ ನಾನೇ ನೋಡಿದ್ದೇ..ಹಾಗಾದರೆ ನಾನು ನಾನು ಬದುಕಿಲ್ಲವಾ ..ಅಂತನ್ನಿಸಿತು! ಅಸಾವಿನ ಯಾವ ಕುರುಹು ಕಾಣ ಲಿಲ್ಲ ನನಗೆ...ನಾನು ಯಾವತ್ತಿನಂತೆಯೇ ಇದ್ದೇನೆ , ಮತ್ಯಾಕೆ ಈ ಗೊಂದಲ ಅನ್ನಿಸಿತು.ಅವಳ ಕಡೆ ನೋಡಿದೆ ಆ ಕಣ್ಣುಗಳಲ್ಲಿ ಶೂನ್ಯವೊಂದು ಕಾಣುತ್ತಿತ್ತು ...<br />
<br /></div>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-12171320350752062082017-11-10T08:48:00.001-08:002017-11-10T08:48:32.308-08:00ನಾನು ನನ್ನಂತೆ<p dir="ltr">ಯಾರೋ ಹೇಳಿದ್ರು,<br>
ನೋಡೂ ನಿನ್ನ ಕಣ್ಣು ಚಂದ ಇಲ್ಲ<br>
ಇನ್ಯಾರೋ ಕೂಗಿದ್ರು<br>
ಓ, ಅದೇ ಆ ಬಣ್ಣ ನಿನಗೆ ಚಂದ ಕಾಣೋದಿಲ್ಲ<br>
ಕೂದಲು ಹಾರಿಬಿಡಬೇಡ<br>
ಇನ್ನೊಂದು ದನಿ ನನಗೆ ನಿನ್ನ  ಯಾವ ವಿಷಯ ಕೂಡ ಇಷ್ಟವಾಗೋದಿಲ್ಲ<br>
ನಿನ್ನ ಕೂದಲು ಯಾಕೆ ಹೀಗೆ ಗುಂಗುರು<br>
ನಿನ್ನ ತುಟಿ ಯಾಕೆ ಸಣ್ಣ<br>
ನೀನೇಕೆ ತೆಳ್ಳಗಿಲ್ಲ<br>
ನನ್ನ ದೇಹದ ಮೇಲೆ<br>
ಮನಸಿನ ಮೇಲೆ ನಡೆಸಿಧ<br>
ಅದೆಷ್ಟೋ ಧಾಳಿಗಳ ನಡುವೆ <br>
ನಾನು ನಾನಾಗಿ ನಿಂತಿದ್ದೇನೆ<br>
ಅವತ್ತು ನೀನು ದಬ್ಬಿ ಹೊರಹಾಕಿದ<br>
ರಸ್ತೆಗಳಲ್ಲಿ ಅಕ್ಷರಶಃ ಪ್ರತಿ ಕ್ಷಣ ನಾನು<br>
ಜೀವಿಸಿದ್ದೇನೆ<br>
ವೈಯುಕ್ತಿಕ ಧಾಳಿಗಳು  ಹೇಡಿತನದ ಲಕ್ಷಣ<br>
ಹಾಗೆಂದೇ  ಧೈರ್ಯವಾಗಿ<br>
ವಿರೋಚಿತವಾಗಿ ಎಲ್ಲ ಎದುರಿಸಿ  ಮುಂದೆ ಸಾಗಿದ್ದೇನೆ<br>
ನಾನು ನನ್ನಂತೆಯೇ ಇದ್ದು!😊<br>
ಶಮ್ಮಿ</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-60806242144157600452017-09-14T21:09:00.001-07:002017-09-14T21:09:30.013-07:00ಬದುಕೊಂದು ಮುಗಿಯದ ಉತ್ಸವ<p dir="ltr">ಪಕ್ಕದ ಮನೆಯವಳ ನೋಂಪಿ, ಅವರಲ್ಲಿ ಅದನ್ನ ಪರಬು ಅಂತ ಕರೀತಾರಂತೆ,ಮಕ್ಕಳ ಆರೋಗ್ಯದ ಸಲುವಾಗೊಮ್ಮೆ,ಮತ್ತೆ ಅವಳ ತಾಳಿ ಭಾಗ್ಯದ ಸಲುವಾಗೊಮ್ಮೆ, ಅವಳಿಗೆ ಅದು ಅನಿವಾರ್ಯ ಕರ್ಮ(ಬಿಹಾರಿಗಳಲ್ಲಿ ವ್ರತ ಮಾಡದಿರುವುದು ಬಹಿಷ್ಕಾರಕ್ಕೆ ಅರ್ಹ ಅಪರಾಧ ಹೆಣ್ಣು ಮಕ್ಕಳಿಗೆ ಮಾತ್ರ!)ಅವಳ ಗಂಡ ಯಥಾ ಪ್ರಕಾರ ಬೆಳಗ್ಗೆ ೧೨ ಗಂಟೆಗೆ ಎದ್ದು ಜೋರಾಗಿ ಗೋವಿಂದ ಗೋವಿಂದ ಎಂದು ಪೂಜೆ ಮಾಡಿ ಹೋದರೆ ಬರುವುದು ಮಧ್ಯ ರಾತ್ರಿ ಮೂರುಗಂಟೆಗೆ ಫುಲ್ಲಿ ಟೈಟಗಿ....ಇಂತಿಪ್ಪ ಗಂಡನ ಹೆಂಡತಿ ಇಡೀ ದಿನ ತೊಟ್ಟು ನೀರು ಕುಡಿಯದೆ ಇರುವ ಎರಡು ಸೈತಾನನಂತ ಮಕ್ಕಳನ್ನು ಸಂಭಾಳಿಸಿ ಸುಸ್ತು ಬಿದ್ದು ಹೋದಳು..ತಾಳಲಾರದೆ ನಾನು ಮಕ್ಕಳಿಗಾದರೂ ಉಣ್ಣಲು ಮಾಡಿಕೊಡಲೇ ಅಂತ ಕೇಳಿದೆ..ಅಷ್ಟು ಕೇಳಿದ್ದೆ ತಡ ಅವಳ ಮಕ್ಕಳು ಗಂಡ ಅತ್ತೆ ಮಾವ ಎಲ್ಲರ ಮೇಲಿನ ಸಿಟ್ಟು ಅವಳಿಗೆ ಉಕ್ಕಿ ಬಂತು,ಮಕ್ಕಳನ್ನು ಒಳಗೆ ಕರೆದು ಮತ್ತೊಮ್ಮೆ ಚನ್ನಾಗಿ ಚಚ್ಚಿದಳು, ನನಗೆ ಈ ಭಾಗ್ಯಕ್ಕೆ ವ್ರತಗಳನ್ನ ಮಾಡಬೇಕಾದರೂ ಯಾಕೆ ಅನ್ನಿಸಿತು...</p>
<p dir="ltr">ಜಗತ್ತು ವೇಗವಾಗಿ  ಮುಂದುವರೆದಿದೆ...ಅಷ್ಟೇ  ವೇಗದ ತಂತ್ರಜ್ಞಾನಗಳು...ಆದರೆ ಮನುಷ್ಯ? ತನ್ನ ಒಳಗಣ ವ್ಯಕ್ತಿಯಲ್ಲಿದ್ದ ಮಾನವತೆಯನ್ನ ಸಾಯಲು ಬಿಟ್ಟು ಹಣದ ಹೆಣದ ಮೇಲೆ ನಡೆದಾಡುತ್ತಿದ್ದಾನೆ...ಅವನಿಗೆ ಗೊತ್ತಿಲ್ಲದಂಥ ಉಸಿರಾಟಕ್ಕೂ ಕಷ್ಟವಾದ ಹೊಟ್ಟೆಕಿಚ್ಚಿನ ಲೋಕದಲ್ಲಿ ಬದುಕುತ್ತಿದ್ದಾನೆ, </p>
<p dir="ltr">ಏನೇನೋ ನಡೆದಿಹುದು ವಿಜ್ಞಾನ ಸಂಧಾನ</p>
<p dir="ltr">ಮಾನುಷ್ಯ ಭಾಂಡವ್ಯವೊಂದು ಮುರಿದಿಹುದು</p>
<p dir="ltr">ತಾನೊಡರ್ಚಿದಹೊನ್ನ ರಸವೇ ನರನ ಕೊರಳ್ಗೆ</p>
<p dir="ltr">ನೇಣಾಗಿಹುದು ನೋಡು ಮರುಳ ಮುನಿಯ!!</p>
<p dir="ltr">ಹಣವೊಂದೇ ಬದುಕಲ್ಲ ಹಾಗಂತ ಅದು ಅನಿವಾರ್ಯ... ಕಾಂಚನಮೂಲ ಜಗತ್ತು ಅಂತ ಅವತ್ತು ಚಾಣಕ್ಯ ಹೇಳಿದ ನೀತಿ ಇವತ್ತಿಗೂ ಸರ್ಮಸಮ್ಮತವೇ..ಹಾಗಾದರೆ ನೆಮ್ಮದಿ ಎಲ್ಲಿದೆ? ಸಲ್ಪ ಇದ್ದವನಿಗೆ ತನಗಿಂತ ಜಾಸ್ತಿ ಇದ್ದವನ ಮೇಲೆ ಕರುಬು, ಜಾಸ್ತಿ ಇದ್ದವನಿಗೆ ಇನ್ನೂ ಜಾಸ್ತಿ ಇದ್ದವನ ಮೇಲೆ ಉರಿ, ಅವನಂತೆ ಇವನಾಗಲು ಇವನಂತೆ ಅವನಾಗಲು ಹಾರಾಟ ನಿಲ್ಲದ ಹೋರಾಟ, ಇದು ಹಣಕ್ಕಷ್ಟೆ ಅಲ್ಲ, ಓದಿಕೊಂಡ ಸಜ್ಜನರಲ್ಲೂ ಬುದ್ದಿಮತ್ತೆ ಪ್ರದರ್ಶನ ನಿಲ್ಲದ ಕಾಲೆಳೆಯುವ ಆಟ,</p>
<p dir="ltr">ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು</p>
<p dir="ltr">ಇವನ ಕಣ್ಗಿವನಿರವು ನೋಟಗಳು ಬೆಪ್ಪು</p>
<p dir="ltr">ಅವನವನಿಗವನವನ ಹುಚ್ಚಾಟದಲಿ ನಚ್ಚು</p>
<p dir="ltr">ಶಿವನಿಗಿದೆಲ್ಲವು ಮೆಚ್ಚು ಮರುಳ ಮುನಿಯ!!<br></p>
<p dir="ltr">ನಾವು ಇನ್ನೊಬ್ಬರಿಗೆ ಸಲಹೆ ನೀಡೋದರಲ್ಲಿ ಅವರನ್ನ ಇದಮಿತ್ಥಂ ಅಂತ ಅಳೆಯೋದರಲ್ಲಿ ಬಹಳ ನಿಪುಣರು, ಇದು ಅನಾದಿಕಾಲದಿಂದ ನಡಕೊಂಡು ಬಂದದ್ದು, ಅನವಶ್ಯಕ ಇನ್ನೊಬ್ಬರ ವಿಷ್ಯದಲ್ಲಿ ಮೂಗು ತೂರಿಸೋದು ಬೇಕಾದವರನ್ನ ಹೊಗಳಿ ಬೇಡದ ಜನಗಳನ್ನ ದಬಾರ್ ಅಂತ ಕೆಳಗೆ ಬೀಳಿಸೋದು ಎಲ್ಲಾ ಮೈಂಡ್ ಗೇಮ್...ಕಾರ್ಪೋರೇಟ್ ಜಗತ್ತು ಇMತಹ ಆಟಗಳನ್ನ ಆಡುತ್ತಲೇ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ,  ಅದು ನಮ್ಮ ಸರ್ವ ಮದಗಳಿಗೂ ಪ್ರೋತ್ಸಾಹ ನೀಡಿ ನಮ್ಮನ್ನ ಪಗಡೆಯಾಗಿ ನಡೆಸಿ ಮಾನವತೆಯನ್ನ ಮರೆಸುತ್ತದೆ...ದೊಡ್ಡದಾಗಿ ನಡೆಸುವ ಚಾರಿಟಿ ಶೋಗಳು ಚಂದಾ ಸಂಗ್ರಹಿಸುವ ಅಭಿಯಾನಗಳು ಒಂಚೂರಾದರೂ ಅಸಮಾನತೆ ಹೊಡೆದೋಡಿಸುತ್ತವೆಯಾ?? ತಿಳಿಯದು....<br></p>
<p dir="ltr">ಇಂಥ ಪರಿಸ್ಥಿತಿಯಲ್ಲಿ ಬಸವಣ್ಣನ ವಚನದ ಮನನ ಎಷ್ಟು ಪ್ರಸ್ತುತ...ನಿಮ್ಮ ನಿಮ್ಮ ಮಾನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಜಗದ ಡೊಂಕು ತಿದ್ದಲು ನಾವೇನು ಅಲ್ಲ,</p>
<p dir="ltr">ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।</p>
<p dir="ltr">ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।</p>
<p dir="ltr">ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- ।</p>
<p dir="ltr">ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ।।<br></p>
<p dir="ltr">ಹೌದು..ಮನಸ್ಸು ಶಾಂತವಾಗಿಟ್ಟುಕೊಳ್ಳಬೇಕು..ಅದಕ್ಕೆ ಯಾವುದೋ ಸಾವಿರಾರು ರೂಪಾಯಿಗಳ ಕೋರ್ಸಿಗೆ ಸೇರಬೇಕೆ..ವಿಷಾದವೆಂದರೆ ಪ್ರತಿ ಮನುಷ್ಯನಿಗೂ ಅವಶ್ಯಕವಾದ ಬದುಕುವ ಕ್ರಿಯೆಗಳನ್ನು ಮಾರಾಟದ ಸರಕು ಮಾಡಿ ಕೇವಲ ದುಡ್ಡಿದ್ದವರಾಷ್ಟೆ ಅನುಭವಿಸುವ ಸಂಪತ್ತಾಗಿ ಕುಡಿಟ್ಟಿರುವುದು, ಹಾಗಿದ್ದರೂ ಹಿಂದಿನ ಜೀವಗಳು ನಮಗಿಂತ ಚನ್ನಾಗಿ ಬದುಕಿರಲಿಲ್ಲವೇ, ಅಲ್ಲೂ ಕೆಟ್ಟದ್ದಿತ್ತು, ಒಳ್ಳೆಯದೂ...ಅದೇ...ಹಾಗೆ ಹೇಗೆ ಬದುಕಿದರವರು??ಹೇಳಿದಷ್ಟು ಸುಲಭಕ್ಕೆ ನಮ್ಮ ಆಸೆಗಳನ್ನ ನಿಯಂತ್ರಿಸಲಾದೀತೇ? ಇಲ್ಲ.. ಆದರೆ ಪ್ರಯತ್ನಿಸಬಹುದು....</p>
<p dir="ltr">ಅದು ತುಂಬಾ ಸುಲಭ..ಕಳಚಿಕೊಳ್ಳುವುದು ಅಸಾಧ್ಯವೇನಲ್ಲ..</p>
<p dir="ltr">ಹಿಂದಿನವರು ಈ ತರದ ವೈರುಧ್ಯಗಳಿಗೆ ಹೊರತಾಗಿರಲಿಲ್ಲ, ಕೆಲವು ಆತ್ಮಗಳ ಬೆಳಕು(ನಮ್ಬುವದಾದರೆ) ಜೋರಾಗಿ ಪ್ರಕಾಶಿಸಿತು, ಕೆಲವು ತಣ್ಣಗೆ ಹಣತೆಯಷ್ಟೆ ಬೆಳಕು ಚೆಲ್ಲಿ ಹತ್ತಿರ ಬಂದವರ ಬಾಳನ್ನುದ್ಧರಿಸಿ ನಂದಿ ಹೋಯಿತು...ಆ ಸ್ಥಿತಿ ಇಂದಿಗೂ ಇದೆ..ಕಾಲ ಬದಲಾಗಿದೆ ಎನ್ನುವ ಮಾತೆ ತಪ್ಪು, ಮತ್ತೆ ಮಾಡಿದುದನ್ನೇ ಮಾಡುತ್ತಾ ಆಡಿದುದನ್ನೇ ಆಡುತ್ತಾ ತೊಟ್ಟ ಬಟ್ಟೆಗಳೆಷ್ಟೋ, ಆದರೂ ಅಹಂಕಾರ ಅಳಿಯದು, ಅಂಟು ತೊಳೆಯದು.</p>
<p dir="ltr">ಅಂಟುವುದು ಮನಸ್ಸಿನ ಸಹಜ ಕ್ರಿಯೆ,ಅಂಟಿಕೊಂಡು ಕಳಚಲಾರದೆ ಒದ್ದಾಡಿ ನರಳುವುದು ಕೂಡ ಸಹಜ,ಆದರೆ ಇದು ಕೊಡುವ ನೋವು ತನ್ನನ್ನು ಸುತ್ತಲಿನವರನ್ನು ಭಾದಿಸಬಾರದಷ್ಟೆ,ಅಂಟು ಬಿಡಿಸುವುದು ಸುಲಭಲ್ಲ, ಅದು ಸಂಭಂಧದ ಅಂಟು,ಅಥವಾ ಆಸ್ತಿ ಹಣ ವೈಭವ ಪ್ರಸಿದ್ಧಿ ಯಾವುದಾಗಿರಬಹುದು...ಅದು ಅಂಟಿಕೊಳ್ಳುವ ಮುನ್ನವೇ ಶೋಧಕ್ಕೆ ಒಳಪಡಿಸಿಕೊಳ್ಳುವ ಕ್ರಿಯೆ, ಹಾಗನ್ದಾಕ್ಶಣಕ್ಕೆ, ನಮ್ಮ ಮನಸ್ಸಿನ ಸುತ್ತ ನಿಗ್ರಹದ ಕೋಟೆ ಕಟ್ಟಬೇಕೆ? ಬೇಡ..ಬಂದದ್ದನ್ನ ಅನುಭವಿಸೋದು,ಬಾರದ್ದನ್ನ ಅದರ ಪಾಡಿಗೆ ಬಿಡೋದು, ಬಯಸದೆ ಇರೋದು,ಇವತ್ತಿನದನ್ನ ಇವತ್ತೇ ಅಳಿಸಿ ಹಾಕೋದು,ಹತ್ತರಲ್ಲೊಬ್ಬರಂತೆ ಎಲೆಮರೆಯ ಕಾಯಾಗಿ ಕೈಲಾದಷ್ಟು ಸಹಾಯ ಮಾಡಿ ಹೊಟ್ಟೆ ತುಂಬಾ ಉಂಡು ಜೊತೆಯಲ್ಲಿದ್ದವರಿಗೂ ತಿನ್ನಿಸಿ,ನಕ್ಕು ಹರಟಿ,ಯಾರಿಗೂ ನೋಯಿಸದೆ ನಗುತ್ತಾ ಬದುಕೋದು...ಆಗಲ್ವೆ? ಖಂಡಿತಾ ಆಗುತ್ತೆ ಅದಕ್ಕೆ ಬೇಕಾದ್ದು ಗಾಳಿಯಷ್ಟು ತೇಲುವ ಹಗುರ ಹೃದಯ,ಅಲ್ಲಿ ಕ್ಷಮೆ ಪ್ರೀತಿ ಬಿಟ್ಟರೆ ಇನ್ನೇನು ಸಿಗಬಾರದು, ಮದ ಮಾತ್ಸರ್ಯಗಳ ಬದಲು ದೊಡ್ಡ ಸೊನ್ನೆ, ಖಾಲಿ ಖಾಲಿ ಜಾಗ, ಯಾರು ಬರಬಹುದು ಯಾರು ಹೋಗಬಹುದು,ಯಾವ ಜಂಜಡಗಳಿಲ್ಲ, ನಮ್ಮನ್ನ ನಾವು ಅರ್ಥ ಮಾಡಿಸುವುದು ಸಲ್ಲದು,ಅರ್ಥ ಮಾಡಿಕೊಳ್ಳದೆ ಹೊರ ಹೋದವರನ್ನ ಕಾಡಿಸುವುದು ಸಲ್ಲದು...</p>
<p dir="ltr">ಯೋಚಿಸಿ..ನಾವೊಂದು ದೊಡ್ಡ ಕಾಡು ಅಥವಾ ಬಯಲು ಅಥವಾ ಮರಳುಗಾಡು, ಅಲ್ಲಿರುವ ಯಾವ ಪಕ್ಷಿ ಪ್ರಾಣಿ ಚರ ಚಿರಗಳ ಮೇಲೆ ನಮ್ಮ ಹಕ್ಕಿದೆಯೇ? ಇಲ್ಲ, ನಾವು ನಿಮಿತ್ತಕ್ಕೆ ಇದ್ದು ಬಿಡಬೇಕು, ನೋವೋ ಸಾವೊ ಕಣ್ಣಿರೋ ಮಳೆಹನಿಯೋ ಎಲ್ಲಕ್ಕೂ ತೆರೆದುಕೊಂಡು...ಎಲ್ಲ ಋತುಗಳನ್ನ ಭಾವದ ವಿಷವೋ ಸಾಂತ್ವನದ ಸಿಹಿಯೋ ಯಾವುದು ಅಲ್ಲದಂತೆ...ಸಾಧ್ಯವೇ..ಯೋಚಿಸಿ...ಖಂಡಿತಾ ಸಾಧ್ಯವಿದೆ,...</p>
<p dir="ltr">ಹೀಗೊಂದು ಕ್ರಿಯೆ ನಿರಂತರ ನಡೆದಲ್ಲಿ ಬುದ್ಧಿಪೂರ್ವಕ, ಕೆಲದಿನಗಳ ನಂತರ ನಾವೇ ಹಗುರಾಗುತ್ತೇವೆ...ಅದೊಂದು ಮನಸ್ಸು ಭಾವಗಳು ಇಲ್ಲದಂತೆ ಬಾಸವಾಗುತ್ತೇವೆ,ಒಳಿತು ಕೆಡಕುಗಳು ಗೋಚರಿಸುತ್ತವೆ,ಹಾಗೆ ಮನಸ್ಸು ಹೊಸಾ ಸವಾಲಿಗು ಸದಾ ಎಚ್ಚರಿರುತ್ತದೆ,ಸಾಧನೆಗಿಂತ ಕೀರ್ತಿಗಿಂತ ಸವಿಯಾದ್ದು ಬೇರೇನೋ ಇದೆ ಅನ್ನೋದು ಪ್ರೀತಿಯಾಗಿ ಮಾರ್ಪಡುತ್ತೆ,ಆಗ ಅಂಟು ಕಷ್ಟ ಆಗುತ್ತದೆ...ಮತ್ತು ಹೊರಜಗತ್ತಿನ ತೋರ್ಪಡೆಗಾಗಿ  ಮಾಡೋ ಎಲ್ಲ ಕ್ರಿಯೆಗಳು ವ್ರತಗಳು ಪೂಜೆಗಳು ಅವಿವೇಕ ಅನ್ನಿಸುತ್ತದೆ...ಯಾರನ್ನೋ ದ್ವೇಷಿಸೋದು,ಅವಮಾನಿಸೋದು, ಅಥವಾ ಯಾರೋ ಗೊತ್ತಿಲ್ಲದವರು ಅವಮಾನಿಸಿದ್ದಕ್ಕೆ ಕೊರಗೋದು ಯಾವುದು ಇರಲಾರದು....ಬದುಕು ಉತ್ಸವವಾಗುತ್ತೆ....ಅಲ್ವೇ?<br></p>
ಮಹಿಮಾhttp://www.blogger.com/profile/08011639151501072102noreply@blogger.com4tag:blogger.com,1999:blog-3608058128402170169.post-80802561207611012472017-08-25T07:53:00.001-07:002017-08-25T07:53:17.061-07:00ನಮ್ಮ ಗಣಪ ಗೌರಿಯರು ಮಣ್ಣಿಂದಲೆ ಬಂದು ಮಣ್ಣಲ್ಲೇ ಬೆರೆತು<div dir="ltr" style="text-align: left;" trbidi="on">
<div class="" data-block="true" data-editor="eavis" data-offset-key="8fjmk-0-0" style="background-color: white; color: #1d2129; font-family: Helvetica, Arial, sans-serif; font-size: 14px; white-space: pre-wrap;">
<div class="_1mf _1mj" data-offset-key="8fjmk-0-0" style="direction: ltr; font-family: inherit; position: relative;">
<span data-offset-key="8fjmk-0-0" style="font-family: inherit;">ಅವತ್ತು ಸಂಜೆಯಾಗುವಂತಿಲ್ಲ, ನಮ್ಮೂರ ಚಿಲ್ಟರಿ ಪಿಲ್ಟಾರಿಗಳ ದಂಡು ಕೆರೆ ಏರಿ ಮೇಲೆ ಜಮಾಯಿಸುತ್ತಿತ್ತು. ಆಚೆ ಕಡೆ ಕೇರಿಯಿಂದ, ಒಂದೊಂದೇ ತಾವರೆ ಮುಡಿದ ತುರುಬುಗಳೂ, ಚೆಂಬು, ಗಂಟೆ ಸದ್ದು ಊದುಬತ್ತಿಯ ಹೊಗೆಯೂ ಕೆರೆ ಕಡೆಗೆ ಬರಲು ಶುರುವಾಗುತ್ತಿತ್ತು. ಅಲ್ಲಿ ಅದೇ ಕೆಳಗಿದ್ದ ಕಲ್ಲ ಮೇಲೆ ತಂದ ಪೂಜಾಸಾಮಾಗ್ರಿಗಳನ್ನಿಟ್ಟು ಸುಂದರಿಯರು ಗಂಗವ್ವನಿಗೆ ನಮಿಸುತ್ತಿದ್ದರು ಹೂವು ದೀಪ ತೇಲಿಬಿಟ್ಟು ತಂದ ಚೆಂಬಿನ ತುಂಬಾ ನೀರು ತುಂಬಿ ಸಿಂಬೆಸುತ್ತಿದ ತಲೆಯ ಮೇಲಿಟ್ಟು ಸಾಲಾಗಿ ನಡೆಯತೊಡಗಿದರೆ, ನನಗೋ ಆಗಷ್ಟೇ ನೋಡಿದ ಸಿನೆಮಾದ ಹಾಡುಗಳು ನೆನಪಾಗುತ್ತಿದ್ದವು. ಆಮೇಲಿನ ಸಂಭ್ರಮ ನೋಡಬೇಕು, ನಮ್ಮನೆ ಕೆಲಸಕ್ಕೆ ಬರುತ್ತಿದ್ದ ಹನುಮಿ ಮೈಲಿ ಶಾಂತಿ ಶಣ್ಣಿ ಮಂಜುಳೆಯರು ಮಧ್ಯಾಹ್ನಕ್ಕೆಲ್ಲ "ಅಮ್ಮಾ ಗೌರಿ ಕೂರ್ಸೇವಿ ಕುಂಕುಮಕ್ಕೆ ಬಾಗ್ನಕ್ಕೆ ಜನ ಬತ್ತಾರೆ, ನಾಳೆ ಬಂದ್ ಮಾಡ್ಕೊಡ್ತೇವಿ ಉಳಿದ್ ಕೆಲ್ಸ ಆತಾ" ಅಂತ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ತಾವರೆ ಹೂವಿನ ಕಿರೀಟ ಮುಗಿಲೆತ್ತರಕ್ಕೆತ್ತಿ ನಡೆದುಬಿಡುತ್ತಿದ್ದರು, ಸಂಜೆಗೆ ನಾವ್ಗಳು ಅವರ ಮನೆಗೆ ಹೋದರೆ ಸಾಕು, ಮಾಡಿದ ಕಜ್ಜಾಯ ಕರ್ಜಿಕಾಯಿ ಎಲ್ಲ ಕೈತುಂಬ ಕೊಟ್ಟು,"ಕೂಸೇ ತೋರ್ಸ್ಬ್ಯಾಡ ಮುಚ್ಚೀಟ್ಕಂಡು ತಿನ್" ಅಂತ ಕಟ್ಟಪ್ಪಣೆ ಹೊರಿಸಿ ಕಳಿಸುತ್ತಿದ್ದರು. </span></div>
</div>
<div class="" data-block="true" data-editor="eavis" data-offset-key="4u6ae-0-0" style="background-color: white; color: #1d2129; font-family: Helvetica, Arial, sans-serif; font-size: 14px; white-space: pre-wrap;">
<div class="_1mf _1mj" data-offset-key="4u6ae-0-0" style="direction: ltr; font-family: inherit; position: relative;">
<span data-offset-key="4u6ae-0-0" style="font-family: inherit;">ಇತ್ತ ನಮ್ಮನೆಯಲ್ಲಿ ಬಾಳೆ ಕಂಬವೂಕಾಯುತ್ತಿತ್ತು ನಮ್ಮ ಹಾದಿ. ಮನೆಯ ಇಷ್ಟೆತ್ತರದ ಬಾಗಿಲಿಗೆ ತೋರಣ ಕಟ್ಟುವ ಸಡಗರ, ಅಕ್ಕನಿಗೆ ನನಗೆ ಅಮ್ಮ ಮಾಡಿದ ಚಕ್ಕುಲಿ ಹಿಟ್ಟನ್ನು ನಾದಿ ಚಕ್ಕುಲಿ ಒರಳಿನಲ್ಲಿ ತುಂಬಿ ಒತ್ತಿ ಸುತ್ತುವ ಕೆಲಸಾಮ್ಮ ಅದನ್ನ ಕೆಂಪಗೆ ಹದಾ ಕರಿದು ಎಣ್ಣೆ ಎಲ್ಲ ತೆಗೆದು, ಚಕ್ಕುಲಿಯನ್ನ ದೊಡ್ಡದೊಂದು ಡಬ್ಬಿಗೆ ತುಂಬಿಡುತ್ತಿದ್ದರು. ಮಲಗುವ ಮುನ್ನ ಮಂಟಪದ ವ್ಯವಸ್ಥೆ ನೋಡುವುದು ಅಪ್ಪ ತಮ್ಮನ ಸರದಿ, ನನಗೆ ಅಕ್ಕನಿಗೆ ನಾವಿಬ್ಬರೂ ಸೇರಿ ಮಾಡಿದ(ನನ್ನಕ್ಕ ತುಂಬಾ ಚೊಕ್ಕ ಕೆಲಸಗಳಲ್ಲಿ) ಹತ್ತಿಯ . ಹಾರ ಮುಗಿಸುವ ಕೆಲಸ, ಹೂ ಬತ್ತಿ ದೀಪದ ಬತ್ತಿ ಮಾಡಿ ಮತ್ತು ಗೆಜ್ಜೆ ವಸ್ತ್ರಕ್ಕೆ ಅರಿಸಿನ ಕುಂಕುಮ ಹಚ್ಚಿ ತೆಗೆದಿಡುತ್ತಿದ್ದೆವು, ಜತೆಗೆ ಬಗೆಬಗೆಯ ಆರತಿ ತಟ್ಟೆಗಳನ್ನು ಸಜ್ಜು ಮಾಡಿಟ್ಟು ಮಲಗುತ್ತಿದ್ದೆವು.</span></div>
</div>
<div class="" data-block="true" data-editor="eavis" data-offset-key="9votn-0-0" style="background-color: white; color: #1d2129; font-family: Helvetica, Arial, sans-serif; font-size: 14px; white-space: pre-wrap;">
<div class="_1mf _1mj" data-offset-key="9votn-0-0" style="direction: ltr; font-family: inherit; position: relative;">
<span data-offset-key="9votn-0-0" style="font-family: inherit;"><br data-text="true" /></span></div>
</div>
<div class="" data-block="true" data-editor="eavis" data-offset-key="fa90g-0-0" style="background-color: white; color: #1d2129; font-family: Helvetica, Arial, sans-serif; font-size: 14px; white-space: pre-wrap;">
<div class="_1mf _1mj" data-offset-key="fa90g-0-0" style="direction: ltr; font-family: inherit; position: relative;">
<span data-offset-key="fa90g-0-0" style="font-family: inherit;"> ಬೆಳಗ್ಗೆದ್ದು ಅಂಗಳವನ್ನ ಸಗಣಿಯಲ್ಲಿ ಬಳಿದು, ಚಂದ ಚಂದದ ರಂಗೋಲಿ ಹಾಕಿ ಒಳಬಂದರೆ ಅಮ್ಮ ಮಾಡುತ್ತಿರುವ ಪಂಚಕಜ್ಜಾಯದ ಘಮ ಹೊಸಿಲು ದಾಟಿ ಹೊರಹೋಗಲು ಹವಣಿಸುತ್ತಿತ್ತು ಇಡ್ಲಿ ಚಟ್ನಿ, ಕಾಯಿಕಡುಬು, ಮೋದಕ, ಉಂಡೆಪಾಯಸ ಕೋಸಂಬರಿ ಅಂಬೊಡೆಯ ಘಮ ಮನೆಯ ತುಂಬಾ ವ್ಯಾಪಿಸಿ ಹೊಟ್ಟೆಯೊಳಗೆ ಹಸಿವಿರದಿದ್ದರು ಹಸಿವು ಹುಟ್ಟುತ್ತಿತ್ತು, ಬಹುಶಃ ಇಂಥ ಕರ್ಮಠ ಬೆಳಗ್ಗೆಗೇ ಅಂತಾನೆ ಬ್ರಾಹ್ಮಣರ ಮನೆಗಳಲ್ಲಿ ಒಂದು ತಿಂಡಿ ಇರುತ್ತೆ, ಅದು ಅರಳು, ಅದಕ್ಕೆ ಮೊಸರು ಬೆಲ್ಲ ಹಾಕಿ ತಿಂದರೆ ಮುಗಿಯಿತು ಮತ್ತೆ ಪೂಜೆ ಮುಗಿವವರೆಗೂ ಹೊಟ್ಟೆ ಗಟ್ಟಿ, ಆದರೆ ಈ ಭಾಗ್ಯ ಮಕ್ಕಳಿಗೆ ಮಾತ್ರ, ಪೂಜೆ ಮುಗಿವ ತನಕ ಅಪ್ಪ ಅಮ್ಮ ಇಬ್ಬರು ಕಾಪಿ ಅಂಬ ಕಷಾಯದ ಬಲದ ಮೇಲೆಯೇ ಇರಬೇಕಾಗುತ್ತಿತ್ತುನಮ್ಮನೆಯ ಗಣಪ ಬೆಳ್ಳಿಯ ಗಣಪ, ಸಣ್ಣವ, ನಾವು ಬೆಳಗ್ಗೆಯೇ ಎದ್ದು ಕೊಯಿದ ದುರ್ವೆಯಲ್ಲಿ ಮುಳುಗಿಬಿಡುವ, ಒಬ್ಬೊಬ್ಬರು ೧೦೮ ದೂರ್ವೆ ಕೊಯ್ಯಲೆ ಬೇಕಾದ್ದು ನಿಯಮ, ಸ್ನಾನ ಆಗದೆ ಅಡಿಗೆ ಮನೆ ಮತ್ತು ದೇವರ ಮನೆಗೆ ಪ್ರವೇಶವೇ ಇಲ್ಲ. ಸ್ನಾನವಾಯಿತೋ ಅಪ್ಪನ ಪೂಜೆಗೆ ಕೈ ಕೆಲಸಕ್ಕೆ ಹತ್ತಿರ ಒಬ್ಬರು ಇರಲೇ ಬೇಕಿತ್ತು, ಅದರ ಭಾಗ್ಯ ತಮ್ಮನಿಗೆ ಅಥವಾ ನನಗೆ, ಅಪ್ಪನ ನ್ಯಾಸಾದಿಗಳ ನಂತರ ಶಾಸ್ತ್ರೋಕ್ತವಾಗಿ ಗಣಪತಿಯನ್ನ ಅರ್ಘ್ಯಪಾದಾದಿಗಲಿನ್ದ ಸತ್ಕರಿಸಿ ಅವನನ್ನು ಸ್ನಾನಕ್ಕೆ ಕರೆದು ಸ್ನಾನ ಮಾಡಿಸಿ ವಸ್ತ್ರಗಳನ್ನು ಅರ್ಪಿಸಿ ಪಂಚಲೋಹದ ಹರಿವಾಣದಲ್ಲಿ ಅಕ್ಕಿ ಕಡಲೆ ಕಾಯಿಯನ್ನಿಟ್ಟು ಪೀಠದಲ್ಲಿ ಕುಳ್ಳಿರಿಸಿ ಗ ಕಾರ ಗಣಪತಿ ಸಹಸ್ರನಾಮ ಓದಲು ಆರಂಭಿಸುತ್ತಿದ್ದರು, ಅಪ್ಪ ಇದೆಲ್ಲ ಮಾಡುತ್ತಿದ್ದುದು ಬಹಳ ಸಾವಕಾಶವಾಗಿ , ಅಲ್ಲೊಂದು ಪ್ರೀತಿಸುವ ಜೀವವಿದೆ ಅದಕ್ಕೆ ಇದೆಲ್ಲ ಮಾಡುತ್ತಿರುವುದು ಎನ್ನುವ ಅತೀವ ಆತ್ಮೀಯ ಭಾವದಲ್ಲಿ, ಸಹಸ್ರನಾಮದ ಹೊತ್ತಿಗೆಲ್ಲ ಅಮ್ಮನ ನೈವೇದ್ಯದ ತಯಾರಿ ಮುಗಿದು.ಎಲ್ಲ ಭಕ್ಷ್ಯಗಳು ಬಾಳೆ ಎಲೆಯಲ್ಲಿ ಮುಚ್ಚಿಕೊಂಡು ನಿಧಾನವಾಗಿ ದೇವರಮನೆಗೆ ಬಂದು ಸ್ಥಾಪಿತವಾಗುತ್ತಿದ್ದವು. ಅಪ್ಪ ಧೂಪಾರತಿಯ ನಂತರ ನೈವೇಧ್ಯವನ್ನು ಸ್ವೀಕರಿಸಲು ವಿನಂತಿಸಿ ಗೋಗ್ರಾಸಕ್ಕೂ ಅಲ್ಲಿಯೇ ಹಾಕುತ್ತಿದ್ದರು, ನೈವೇದ್ಯದ ನಂತರ ಮಹಾ ಮಂಗಳಾರತಿ, ನಮಸ್ಕಾರ,ತೀರ್ಥ ಪ್ರಸಾದ ಸ್ವೀಕಾರಣೆ. ನಮ್ಮ ಗಣಪ, ಪುರೋಹಿತರಿಗೆ ದಾನ ರೂಪದಲ್ಲಿ ಕೊಡಲ್ಪಡುವವನು, ಹಾಗಾಗಿ ಪ್ರಾಣ ಪ್ರತಿಷ್ಟೆಯಾದ ದಿನವೇ ಉದ್ವಾಸನೆಯೂ ಆಗಬೇಕಿತ್ತು, ಅದೇನಿದ್ದರೂ ಸಂಜೆಗೆ, ಮಂಗಳಾರತಿಯ ನಂತರ ಹಬ್ಬ ಮುಗಿಯುವ ಬದಲು ಇನ್ನಷ್ಟು ರಂಗೇರುತ್ತಿತ್ತು. </span></div>
</div>
<div class="" data-block="true" data-editor="eavis" data-offset-key="fgam-0-0" style="background-color: white; color: #1d2129; font-family: Helvetica, Arial, sans-serif; font-size: 14px; white-space: pre-wrap;">
<div class="_1mf _1mj" data-offset-key="fgam-0-0" style="direction: ltr; font-family: inherit; position: relative;">
<span data-offset-key="fgam-0-0" style="font-family: inherit;"><br data-text="true" /></span></div>
</div>
<div class="" data-block="true" data-editor="eavis" data-offset-key="6u268-0-0" style="background-color: white; color: #1d2129; font-family: Helvetica, Arial, sans-serif; font-size: 14px; white-space: pre-wrap;">
<div class="_1mf _1mj" data-offset-key="6u268-0-0" style="direction: ltr; font-family: inherit; position: relative;">
<span data-offset-key="6u268-0-0" style="font-family: inherit;"> ಊಟ ಮಾಡಿ ಸುಧಾರಿಸಿ ಹೊಸಾ ಬಟ್ಟೆ ತೊಟ್ಟು ಇಪ್ಪತ್ತೊಂದು ಗಣಪತಿಯನ್ನು ದರ್ಶನ ಮಾಡಿ ಬರುವ ಕೆಲಸ, ಇದಕ್ಕೆ ಬೇಗನೆ ಹೊರಡುತ್ತಿದ್ದೆವು. ಸಂಜೆಗತ್ತಲೊಳಗೆ ಮನೆಗೆ ವಾಪಾಸು ತಲುಪಬೇಕಿತ್ತು, ಚಂದ್ರ ಭಯಕ್ಕೆ ಹೆಜ್ಜೆಗಳು ತಡವರಿಸುತ್ತಿದ್ದವು, ಹಾಗೂ ನಾನು ತಲೆಯೆತ್ತಿ ನೋಡಿ, ನನಗೆ ಚಂದ್ರ ಕಂಡರೆ ಬೇರೆಲ್ಲರಿಗೂ ಮಂಗ ಮಾಡಿ ತೋರಿಸಿ ನಾನೊಬ್ಬಳೇ ಅಪಮಾನಕ್ಕೊಳಗಾಗುವ ಭೀತಿಯಿಂದ ತಪ್ಪಿಸಿಕೊಳ್ಳುತ್ತಿದ್ದೆ! ಪಟಾಕಿಯ ಗರ್ನಾಲಿನ ಸದ್ದು ನನ್ನ ಬಾಲ್ಯಕ್ಕಿರಲಿಲ್ಲ, ಹಾಗೆಯೇ ಡಿಜೆ ಕುಣಿತ ಸಂಗೀತವು ನಮಗೆ ಗೊತ್ತಿರಲಿಲ್ಲ, ನಮ್ಮ ಗಣಪ ಗೌರಿಯರು ಮಣ್ಣಿಂದಲೆ ಬಂದು ಮಣ್ಣಲ್ಲೇ ಬೆರೆತು ಹೋಗುತ್ತಿದ್ದರು. ಗಣಪ ಮಾತ್ರ ಮನಸು ಮೈಯೊಳಗೆಲ್ಲ ಆವರಿಸಿ, ಮತ್ತೆ ಮತ್ತೆ ಅವನು ಬರುವ ದಿನಕ್ಕೆ ಎದುರು ನೋಡುವಂತೆ ಮಾಡುತ್ತಿದ್ದ. ನನ್ನ ಬಾಲ್ಯದಲ್ಲಿ ಬಹುಶಃ ಈಗಿನ ಜಾತಿಬೇಧಗಳು ಇರಲಿಲ್ಲ, ಮೂರನೆಯ ದಿನ ಗೌರಿ ಕಳಿಸುವ ದಿನ,ಆವತ್ತು ಕೆರೆದಂಡೆಯಲ್ಲಿ ಜಾತ್ರೆ ನೆರೆಯುತ್ತಿತ್ತು, ಆ ನಸುಗತ್ತಲು ಹೂವು ಸಂಭ್ರಮ ಕಳಿಸಿದ ನಂತರ ನಮ್ಮೂರಿನ ತುಂಬಾ ಅವರಿಸುತ್ತಿದ್ದ ಆ ಮೌನ, ಥೇಟು ಗಂಡನ ಮನೆಗೆ ಮಗಳನ್ನ ಕಳಿಸಿದ ತವರಿನದ್ದೆ ಚಿತ್ರಿಕೆ. ಹಬ್ಬಗಳೆಂದರೆ ನನ್ನ ಬಾಲ್ಯದ ಹಬ್ಬಗಳು ಚಿತ್ರಿಸಿದ ನೆನಪಿನ ಮೆರವಣಿಗೆ, ಮುಗ್ಧತೆಯಲ್ಲೇ ನಂಬಿಕೆಯೂ ಶ್ರದ್ಧೆಯು ಮೇಳೈಸಿದ್ದ ಆ ಕಾಲ ಇವತ್ತಿಗೂ ನನ್ನ ಮಗುವಾಗಲು ಪ್ರೇರೇಪಿಸುತ್ತದೆ, ಮಾಧ್ಯಮಗಳು ನಿರ್ಮಿಸಿದ ಕಂದರಗಳ ನಡುವೆಯೂ ಮನುಷ್ಯ ಮನುಷ್ಯರ ನಡುವೆ ಬೆಸೆವ ಆತ್ಮೀಯತೆಯ ಸೇತುವೆಯಾಗಿ ಈ ಹಬ್ಬಗಳು ನನಗೆ ಗೋಚರಿಸುತ್ತವೆ!</span></div>
</div>
</div>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-91251727095115669652017-08-22T10:07:00.001-07:002017-08-22T10:07:55.759-07:00ಅಪ್ಪ ಹೇಳಿದ ನಿಯಮಗಳು<div dir="ltr" style="text-align: left;" trbidi="on">
<div style="color: #222222; font-family: arial, sans-serif; font-size: small;">
ಇದು ಈಗ ಕಲಿಕೆಯ ಸಮಯ ಅತಿಯಾಗಿ ಜಾತಕ ಫಲವನ್ನು ನಂಬದ ನಾನು ಅಪ್ಪ ಹೇಳಿದ್ದೆಲ್ಲ ನಿಜವಾಗುವಾಗ ಬಾಯಿಯ ಮೇಲೆ ಬೆರಳಿಟ್ಟಿದ್ದೇನೆ, ಅಪ್ಪನಿಗೆ ವಯಸ್ಸಾಯಿತು, ಈಗೀಗ ಪುಸ್ತಕ ಓದಲು ಕೂಡ ಅವರಿಗೆ ತೊಂದರೆ ಆಗುತ್ತಿದೆ, ಆದರೆ ಅವರ ಬುದ್ಧಿ ಮಾತ್ರ ಚುರುಕಾಗಿಯೇ ಇದೆ, ಬರಿ ಹೆಸರಿಗೆ ಕೃಷ್ಣಮೂರ್ತಿಯಲ್ಲ,ನನ್ನ ತಂದೆ ಅಕ್ಷರಶಃ ಆ ಕೃಷ್ಣನ ಜೀವನದಲ್ಲಿ ಬಂದಷ್ಟೇ ಕಷ್ಟಗಳ ಸರಮಾಲೆಯನ್ನು ದಿಟ್ಟವಾಗಿ ಎದುರಿಸಿದವರು, ತತ್ವಶಾಸ್ತ್ರ ಮತ್ತು ಬೃಹತ್ ಜಾತಖಾಕ್ಯ , ಭರ್ತೃಹರಿ ಕಾಳಿದಾಸ ಎಲ್ಲರನ್ನ ಓದಿಕೊಂಡವರು, ಸತತ ಮುವ್ವತ್ತು ವರ್ಷಗಳಿಂದ ಬಿಡದೆ ವಿಷ್ಣು ಸಹಸ್ರನಾಮ ಪಾರಾಯಣವನ್ನು ಚಾಚು ತಪ್ಪದೆ ನಡೆಸಿಕೊಂಡು ಬರುತ್ತಿರುವವರು. ಒಂದು ತೂಕದಲ್ಲಿ ಸಮತೋಲದಲ್ಲಿ ಬದುಕನ್ನ ಅದು ತಂದೊಡ್ಡುವ ಸವಾಲುಗಳನ್ನ ಎದುರಿಸಿ ಮನಸ್ಸಿನ ಶಾಂತಿಯನ್ನ ಕಾದಿಟ್ಟವರು, ಈ ಇಳಿ ವಯಸ್ಸಿನಲ್ಲೂ ಅವರು ಕಾಯಿ ಸುಲಿ ಯುತ್ತಾರೆ, ಕೆಲವೊಮ್ಮೆ ಅನಿವಾರ್ಯವಾಗಿ ಬರುವ ಮನೆಯ ದೈಹಿಕ ಶ್ರಮಗಳನ್ನು ದೇಹದ ನೋವುಗಳನ್ನು ಲೆಕ್ಕಿಸದೆ ಹೊರುತ್ತಾರೆ, ಇಂತಹ ಪ್ಪನನ್ನ ಪಡೆದ ನನ್ನ ಪುಣ್ಯ ದೊಡ್ಡದು, ಬಹುಶಃ ಅಮ್ಮ ನನ್ನಮ್ಮನು ಅಷ್ಟೇ, ಅಪ್ಪ ಮುಖಪುಟವಾದರೆ ಅಮ್ಮ ಒಳಗಿನ ತಿಳಿಹೂರಣ, ಅಪ್ಪನ ಬದುಕಿನ ಸಾರವೆಲ್ಲ ಅಮ್ಮನ ಚುರುಕುತನದಲ್ಲಿದೆ ಅಪ್ಪ ಮಿತಭಾಷಿ. ಎಂಬತ್ತರ ಹತ್ತಿರದಲ್ಲಿರುವ ಆಪ್ಪಾ ನನಗೆ ದೇವರಿಗಿಂತ ಮೊದಲು ನೆನಪಾಗುವ ನನ್ನ ದೇವರು. </div>
<div style="color: #222222; font-family: arial, sans-serif; font-size: small;">
ಮೊನ್ನೆ ಮನೆಯ ಯಾವ್ಯಾವುದೋ ಸಮಸ್ಯೆಗಳ ಸಲುವಾಗಿ ಕರೆ ಮಾಡಿದ್ದೆ, ಆಗ ಮಾತಾಡಿದ ಅವರು ನನ್ನ ಜಾತಕವನ್ನು ಪರಿಶೀಲಿಸಿ, ನನ್ನವನದನ್ನು ಪರಿಶೀಲಿಸಿ, ಅದರ ಫಲಗಳನ್ನು ಅದು ತಂದೊಡ್ಡಬಹುದಾದ ಅಪಾಯ ಮತ್ತು ಮಾನಸಿಕ ಸಂಕಷ್ಟಗಳನ್ನು ಹೇಳುತ್ತಾ, ನನಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು, ಆಶ್ಚರ್ಯಕರವಾಗಿ ಅವರು ಹೇಳಿದ ಎಲ್ಲ ಉತ್ತರಗಳು ನನ್ನ ಸಧ್ಯದ ಪರಿಸ್ಥಿತಿಗಳನ್ನು ಕರಾರುವಕ್ಕಾಗಿ ತಿಳಿಸಿದ್ದವು. ಅಪ್ಪನ ಹತ್ತಿರ ನಾನು ಯಾವಾಗಲೂ ವಾದಿಸುತ್ತೇನೆ, ಇದೆಲ್ಲ ಹೇಗೆ ಸಾಧ್ಯ ಎಂದು, ಆದರೆ ಅಪ್ಪ ಇದನ್ನು ಒಂದು ಗೆಸ್ ಗೇಂ ಅನ್ನೋದನ್ನ ಒಪ್ಪೋದಿಲ್ಲ, ಅದು ಬಹಳ ಕರಾರುವಾಕ್ಕು ಮತ್ತು ವಿಜ್ಞಾನ ಅನ್ನುತ್ತಾರೆ, ಅದಕ್ಕಿಂತಲೂ ಮೀರಿದ್ದು ಕೂಡ ಮತ್ತೊಂದಿದೆ, ಅದು ನಮ್ಮ ಆತ್ಮವಿಶ್ವಾಸ ಮತ್ತು ಕಷ್ಟ ಸಹಿಷ್ಣುತೆ ಅಂತನ್ನುತ್ತಾರೆ, ಅವರು ಹೇಳಿದ ಯಾವ ವಿಷಯವು ಕೂಡ ನನ್ನ ಪಾಲಿಗೆ ಸುಳ್ಳಾಗಿಲ್ಲ, </div>
<div style="color: #222222; font-family: arial, sans-serif; font-size: small;">
ಮೊನ್ನೆ ಅವರು ಹೇಳಿದ ಮಾತುಗಳು ನನ್ನ ಯಾವತ್ತಿಗೂ ಎಚ್ಚರಿಸುತ್ತಿರುತ್ತವೆ, ಇದನ್ನ ನಿಮ್ಮ ಜತೆ ಹಂಚಿಕೊಳ್ಳುವೆ </div>
<div style="color: #222222; font-family: arial, sans-serif; font-size: small;">
೧) ಕಷ್ಟಗಳು ನೋವುಗಳು ಆಪಮಾನಗಳನ್ನು ಎದುರಿಸದ ಯಾವ ಜೀವವು ಜಗತ್ತಿನಲ್ಲಿಲ್ಲ, ಹಾಗಾಗಿ ನಾವು ನಮ್ಮ ಪಾಲಿಗೆ ಕಷ್ಟಗಳು ಬಂದಾಗ ಮನಸ್ಸು ಗಟ್ಟಿ ಮಾಡಿ ಸುಮ್ಮನಾಗಬೇಕು, ಕೆಲವಕ್ಕೆ ಸಮಯ ಕೂಡಿಬಂದಾಗಲೇ ಪರಿಹಾರ ಸಿಗುವುದು, ಅಲ್ಲಿಯತನಕ ಸತತ ಜೇಡನಂತೆ ಪರಿಶ್ರಮಿಸುತ್ತಿರಬೇಕು </div>
<div style="color: #222222; font-family: arial, sans-serif; font-size: small;">
೨) ದೇವರು ಎಂದರೆ ಒಂದು ನಂಬಿಕೆ, ಅದು ಶ್ರದ್ಧೆ, ವಿಗ್ರಹ ರೂಪದಲ್ಲಿರುವ ದೇವರಿಗಿಂತ ನಮ್ಮ ಆತ್ಮಸಾಕ್ಷಿಯೇ ಮಿಗಿಲು ದೇವರು. </div>
<div style="color: #222222; font-family: arial, sans-serif; font-size: small;">
೩) ಇನ್ನೊಬ್ಬರನ್ನು ನೋಯಿಸುವುದು ಸುಲಭ, ಆದರೆ ಅವೇ ನೋವುಗಳು ನಮಗೆ ಕಂತುಗಳಲ್ಲಿ ಹಿಂದಿರುಗುತ್ತದೆ, ಇದರ ಲೆಕ್ಕದ ಪಟ್ಟಿ ಯಾವ ಚಿತ್ರಗುಪ್ತನ ಕೈಯಲ್ಲೂ ಇಲ್ಲ, ಮಾಡಿದ ಪಾಪವನ್ನು ತೊಳೆಯಲು ಯಾವ ದೇವರು ನೆರವಾಗಲಾರ, ಹಾಗಾಗಿ ನೋಯಿಸುವ ಮೊದಲು, ಪಾಪಕ್ಕೆ ಮೊದಲು ವಿವೇಕವನ್ನು ಜಾಗೃತ ಇಡಬೇಕು. </div>
<div style="color: #222222; font-family: arial, sans-serif; font-size: small;">
೪) ನಾವು ಬಯಸಿದ್ದೆಲ್ಲ, ಅಥವಾ ನಮ್ಮದು ಅಂತ ಅಂದುಕೊಂಡದ್ದೆಲ್ಲ ನಮ್ಮದಾಗಿರಲೇ ಬೇಕು ಅಂತಿಲ್ಲ, ಕೆಲವೊಮ್ಮೆ ನಮಗೆ ಅದು ದಕ್ಕಲಿಲ್ಲ ಅಂದರೆ ಅದಕ್ಕಿಂತ ಉನ್ನತವಾದದ್ದು, ಅದಕ್ಕಿಂತ ಬಹಳ ಯೋಗ್ಯವಾದದ್ದು ಬೇರೇನೋ ನಮ್ಮ ಪಾಲಿಗಿದೆ ಅನ್ನುವ ಸರಳ ವಿಷ್ಯ ಅರ್ಥ ಮಾಡಿಕೊಳ್ಳಬೇಕು, ಹರಿವ ನೀರಿನಂಥ ಜೀವನವನ್ನ ಕೊಳಕು ಮಾಡಿಕೊಳ್ಳಬಾರದು. </div>
<div style="color: #222222; font-family: arial, sans-serif; font-size: small;">
೫) ನಡೆದು ಹೋದದ್ದನ್ನು ಮರೆಯಬೇಕು, ಉಪಕಾರ ಮಾಡಿದವರನ್ನು ನೆನೆಯಬೇಕು, ಮತ್ತು ಮರೆಯದೆ ಹಣಕಾಸಿನ ಸಹಾಯವನ್ನು ಹಿಂದಿರುಗಿಸಲು ಬೇಕು ಅದು ಪುರಂದರದಾಸರು ಹೇಳಿದಂತೆ ಕೆಟ್ಟದ್ದು ಮಾಡುವುದು, ಋಣ ಸಂಚಯವು ಮನುಷ್ಯನನ್ನು ಜನ್ಮಾಂತರಗಳ ಕಾಲ ಬಂಧಿಸುತ್ತದೆ, "ದುಗ್ಗಾಣಿ ಬಲು ಕೆಟ್ಟದಣ್ಣ " ಮರೆಯಬಾರದು. </div>
<div style="color: #222222; font-family: arial, sans-serif; font-size: small;">
೬)ನನಗೇ ಯಾಕೆ ಕಷ್ಟ ಅಂತ ಕೇಳಲೇ ಬಾರದು, ಅದು ಇದ್ದರೇನೇ ಬದುಕು ಬೆಲೆ ಬರುವುದು. </div>
<div style="color: #222222; font-family: arial, sans-serif; font-size: small;">
೭) ಇಂತಹ ಸಮಯದಲ್ಲೂ ಮೋಹಕ್ಕೆ ಬಲಿ ಬೀಳಬಾರದು, ಇಷ್ಟಪಟ್ಟ ದೇಹ ಯೌವನ ಹಣ ಯಾವುದನ್ನು ನಾವು ಜತೆಗೆ ಕೊಂಡೊಯ್ಯಲಾಗದು ಇದ್ದಷ್ಟು ಕಾಲವು ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಅನ್ನುವುದನ್ನ ಮರೆಯಬಾರದು. </div>
<div style="color: #222222; font-family: arial, sans-serif; font-size: small;">
೮) ಸತ್ಯ ಬಹಳ ಕಹಿಯಾದ ಔಷಧ ಅದನ್ನು ಕುಡಿಯದಿದ್ದರೆ ರೋಗ ವಾಸಿಯಾಗುವುದಿಲ್ಲ. ಸತ್ಯ ಒಂದಲ್ಲ ಒಂದು ದಿನ ಹೊರ ಬರಲೇ ಬೇಕು ಹಾಗಾಗಿ ಸುಳ್ಳಿನ ಸಾಂಗತ್ಯ ಮಾಡಬಾರದು </div>
<div style="color: #222222; font-family: arial, sans-serif; font-size: small;">
೯) ಕೆಟ್ಟ ಸಮಯವೂ, ಕೆಟ್ಟ ಸ್ನೇಹಿತರನ್ನು ಮಾನಸಿಕವಾಗಿ ತುಂಬಾ ಕೆಳಮಟ್ಟದ ವ್ಯಕ್ತಿಗಳನ್ನು ಜೀವಕ್ಕೆ ಹತ್ತಿರ ತಂದು ವ್ಯವಹರಿಸುತ್ತದೆ, ಅಲ್ಲಿ ಆ ದಿನಗಳನ್ನು ಉಪಾಯವಾಗಿ ದಾಟಬೇಕು, ಅವರ ಸಾಂಗತ್ಯಕ್ಕೆ ಸ್ನೇಹಕ್ಕೆ ಸಿಕ್ಕಿಕೊಳ್ಳಬಾರದು. </div>
<div style="color: #222222; font-family: arial, sans-serif; font-size: small;">
ಕೊನೆಯದಾಗಿ ನನಗೆ ಹೇಳಿದ್ದು "ವಸ್ತುಗಳನ್ನು ಕೊಳ್ಳಬೇಡಿ ನೆನಪುಗಳನ್ನು ಕೊಳ್ಳಿ "</div>
<div style="color: #222222; font-family: arial, sans-serif; font-size: small;">
ನನ್ನಪ್ಪನಿಗೆ ನನ್ನ ಸಾಷ್ಟಾಂಗ ವಂದನೆಗಳು, ನಾನು ಅವರ ಕಿರು ಬೆರಳ ತುದಿಗೂ ಸಮನಲ್ಲ ಆದರೆ ನನ್ನ ಪ್ರಯಾಣ ಈಗ ಶುರುವಾಗಿದೆ, ಹಾಗೆಯೇ ಪ್ರಯಾಣದಲ್ಲಿ ಕೆಲವು ಬಿಟ್ಟು ಹೋಗಲೇ ಬೇಕಾದ ತಾಣಗಳನ್ನು ಮತ್ತೊಮ್ಮೆ ಸಂದರ್ಶಿಸಿ ಬರುತ್ತಿದ್ದೇನೆ, ಮುನಿಸಿಕೊಂಡ ಸ್ನೇಹಿತೆ,ಸ್ನೇಹಿತರು , ತಪ್ಪು ತಿಳುವಳಿಕೆಯಲ್ಲಿ ದೂರಾದ ಆಪ್ತರು, ಮತ್ತು ನನ್ನ ಕೆಲವೇ ಗತ ಪ್ರೇಮದ ನೆನಪುಗಳನ್ನು ಹಾಗೆಯೇ ಅಲ್ಲಿಯೇ ಇದ್ದಂತೆ ಬಿಟ್ಟುಹೋಗಲು ಸಂದರ್ಶಿಸುತ್ತಿದ್ದೇನೆ, ಇನ್ನು ಬಹುಶಃ ಹಿಮ್ಮುಖವಾದ ನಡಿಗೆ ಸಾಧ್ಯವಾಗಲಾರದು, ಹಾಗಾಗಿ ಅಳಬೇಕಾದಾಗಲೆಲ್ಲ ಅತ್ತು, ಎಲ್ಲೆಲ್ಲಿ ಅವರು ತಮ್ಮ ಲೋಕದಲ್ಲಿ ಆನಂದವಾಗಿ ಇರುವುದನ್ನ ನೋಡಿ ಸಂತಸ ಪಟ್ಟು, ಮುಂದುವರೆಯುತ್ತಿದ್ದೇನೆ, ಬಹುಶಃ ಇದರಿಂದ ಅರ್ಥವಾದದ್ದು ಒಂದೇ, ನಾನು ಅಂತರಂಗದಲ್ಲಿ ಬಹಳ ಸುಖಿ, ನನ್ನ ಅಪ್ಪನ ಮಾರ್ಗದರ್ಶನ ಗುರುವಿನ ಕರುಣೆ ನನ್ನ ಸಮತೋಲನದತ್ತ ನಿಜವಾಗಲೂ ಕೊಂಡೊಯ್ಯುತ್ತಿದೆ. ಮತ್ತು ಅಪ್ಪನ ಹರಕೆಯೊಂದು ಫಲಿಸಲಿ, ನನ್ನ ಬದುಕು ನಿಜವಾದ ಅರ್ಥದಲ್ಲಿ ಸಾರ್ಥಕವಾಗಲಿ. ಅಷ್ಟೇ ನನ್ನ ಆಶಯ, ಬಹುಶಃ ನನ್ನಪ್ಪನದೂ ಕೂಡ . ಜಾತಕ ಫಲವನ್ನು ನೀವು ನಂಬುವಿರೋ ಬಿಡುವಿರೋ ಅಪ್ಪ ಹೇಳಿದ ನಿಯಮಗಳಂತೂ ಇಂದಿಗೂ ಸತ್ಯ ಅಲ್ಲವಾ?</div>
<div style="color: #222222; font-family: arial, sans-serif; font-size: small;">
<br /></div>
<div style="color: #222222; font-family: arial, sans-serif; font-size: small;">
<br /></div>
<div style="color: #222222; font-family: arial, sans-serif; font-size: small;">
<br /></div>
<div style="color: #222222; font-family: arial, sans-serif; font-size: small;">
<br /></div>
</div>
ಮಹಿಮಾhttp://www.blogger.com/profile/08011639151501072102noreply@blogger.com2tag:blogger.com,1999:blog-3608058128402170169.post-16574019730396289232017-08-22T07:49:00.000-07:002017-08-22T07:49:17.564-07:00<div dir="ltr" style="text-align: left;" trbidi="on">
ಅದೆಷ್ಟೋ ಹೊತ್ತು, ಕತ್ತಲಲ್ಲಿ ಹೀಗೆಯೇ ಕೂತಿದ್ದೆ. ಭಯವೊಂದು ಆವರಿಸಿ ಮೈ ತುಂಬಾ ಅಲ್ಲಾಡಲು ಆಗದ ನಿಶ್ಯಕ್ತಿ , ಮುದ್ದಾಡಿ ತಬ್ಬ ಬೇಕಿದ್ದ ದೇಹವೊಂದು ತಣ್ಣಗಾಗಿ ಕೊರಡಾಗಿ ಪಕ್ಕದಲ್ಲಿದೆ ಯಾರಿಗೆ ಹೇಳುವುದು, ತಾಳಿಗೆ ತಲೆ ಕೊಟ್ಟು ಏನನ್ನು ಹಂಚಿಕೊಳ್ಳದ ಅವಳಿಗೆ ಈ ವಿಷಯ ಗೊತ್ತಾದರೆ ಬದುಕು ಬೀದಿಗೆ ಬೀಳುವುದು , ಹೊಟ್ಟೆ ಪಾಡಿಗೆಂದು ಹಿಡಿದಿದ್ದ ಕೆಲಸ ಕೈತಪ್ಪುವುದು ಹೇಗೆ ಪಾರಾಗಲಿ? ಗೊತ್ತಿಲ್ಲದೇ ಕಣ್ಣಿಂದ ನೀರು ಸುರಿಯಲಾರಂಭಿಸಿತು ಕತ್ತಲಲ್ಲೇ ತಡಕಾಡಿ ನೀರಿನ ಬಾಟಲ್ ಹುಡುಕಿದೆ , ಕೈಗೆ ತಾಗಿ ಬಾಟಲ್ ಬಿತ್ತು , ಅತ್ತ ಅಡಿಗೆ ಮನೆಯಲ್ಲಿ ಬೆಕ್ಕೊಂದು "ಮ್ಯಾವ್" ಅಂತ ಕಿರುಚಿಕೊಂಡು ಕತ್ತಲಲ್ಲೇ ಕೆಳಗೆ ಹಾರಿತು, ಸಮಯ ಎಷ್ಟಾಗಿರಬಹುದು? ಬಂದದ್ದು ಆರೂವರೆಗೆ , ಮಳೆ ಏಳಕ್ಕೆಲ್ಲ ಶುರುವಾಗಿತ್ತು , ಟೀ ತಂದಿಟ್ಟು ಒಳ ಹೋದವಳು ಕೋಣೆಯಿಂದ ಬಟ್ಟೆ ಬದಲಿಸಿ ಬಂದಳು, ಕೈ ಹಿಡಿದು ಮಾತಾಡುತ್ತಾ ಹೀಗೆ ಇಲ್ಲಿಯೇ ಕುಳಿತವಳು ಜಾರಿದಳು, ನಾನು ಅದು ಉನ್ಮತ್ತ ಸ್ಥಿತಿ ಅಂತ ಮೈಮರೆತೆ, ಆದರೆ ಮೈ ವಾಲಿ ಕೆಳಗೆ ಬಿದ್ದಾಗಲೇ ಅರಿವಾದ್ದು ಆದದ್ದು ಪ್ರಮಾದ , ದಿಗ್ಭ್ರಮೆ ಹಿಡಿದಿತ್ತು, ಕಿರುಚ ಬೇಕೆನ್ನುವ ಆತುರಕ್ಕೆ ಭಯ ತಡೆ ಹಿಡಿದಿತ್ತು ,ಮನೆಯಿಂದ ಒಂದೇ ಸಮನೆ ಫೋನ್ , ತೆಗೆದು ಸ್ವಿಚ್ ಆಫ್ ಮಾಡಿ ತಲೆ ಮೇಲೆ ಕೈ ಹೊತ್ತು ಕೂತವನಿಗೆ ಎಚ್ಚರಾದ್ದು ಈಗಲೇ , ಮಿದುಳಿನಲ್ಲಿ ನಾನು ನೋಡಿದ ಎಲ್ಲ ಚಿತ್ರಗಳು ಬಂದು ಹೋದವು, ದ್ರಿಶ್ಯಮ್ ನ ಜಾರ್ಜ್ ಕುಟ್ಟಿ , ಮನೆಯಲ್ಲೇ ಹೆಣ ಇಟ್ಟುಕೊಂಡು ಹೆದರುವ ತರ್ಕ, ಸರೋವರದಲ್ಲಿ ಪ್ರಿಯತಮನ ಜತೆ ಸರಸವಾಡಲು ಬಂದವಳ ಹೆಣ ಮುಳುಗಿಸುವ ದ ಇಸ್ಲೆ ಯ ದೃಶ್ಯ ಎಲ್ಲವೂ, ಸಧ್ಯಕ್ಕೆ ನನಗೆ ಇರುವ ಭಯ ಯಾರದ್ದು ಪಟ್ಟಿ ಮಾಡತೊಡಗಿದೆ <br />
೧) ಇವಳ ಗಂಡ(ಸಧ್ಯ ಬರಲಾರ , ಆರು ದಿನದ ಚೀನಾ ಪ್ರವಾಸ)<br />
೨)ನನ್ನ ಹೆಂಡತಿ ( ಇದು ದೊಡ್ಡ ಸಮಸ್ಯೆ)<br />
೩)ಕೆಲಸ-( ಕೊಲೆ ಕೇಸಿನಲ್ಲಿ ಸಿಕ್ಕಿ ಬಿದ್ದರೆ ಖಂಡಿತಾ ಉಳಿಯುವುದಿಲ್ಲ)<br />
<br />
ತಕ್ಷಣಕ್ಕೆ ಈ ವಿಷಯ ಯಾರಲ್ಲಿ ಹೇಳಲಿ? ಯಾರು ನಂಬಿಗಸ್ಥರು ಅನ್ನುವುದು ನನಗೆ ತೋಚುತ್ತಿರಲಿಲ್ಲ, ನನ್ನ ಆತ್ಮ ಬಲವೆಲ್ಲ ಪಣಕ್ಕಿಟ್ಟು ಧೈರ್ಯ ತಂದುಕೊಂಡೆ, ಈಗ ಹೆದರಿದರೆ ಕೆಲಸವಾಗದು,ಅಲ್ಲಿಯೇ ತಡಕಾಡಿದೆ, ಎದ್ದು ಗೋಡೆಯ ಮೇಲೆ ಕೈಯಾಡಿಸುತ್ತಾ ನಾಲ್ಕು ಹೆಜ್ಜೆ ನಡೆದೇ. ದೀಪದ ಸ್ವಿಚ್ಚು ಕೈಗೆ ತಗಲಿತು , ಒಂದೊಂದಾಗಿ ಹಾಕುತ್ತ ಬಂದೆ ಮೂರನೆಯದ್ದು ಹಾಲಿನದ್ದು ಹೊತ್ತಿಕೊಂಡಿತು, ಬೆಳಕು ಕಣ್ಣು ಕುಕ್ಕುತ್ತಿತ್ತು, ಅವಳ ದೇಹ ಎತ್ತಲಾಗದ ಭಾರವಿತ್ತು, ಪ್ರಯತ್ನಿಸಲಿಲ್ಲ, ಕೈ ಉಗುರುಗಳನ್ನ ನೋಡಿದೆ, ಒಹ್ ಒಂದೇ ಗಂಟೆಯಾದ್ದರಿಂದ ಜೀವಂತ ಇದ್ದಂತೆಯೇ ಅನಿಸುತ್ತಿದ್ದವು,ಪಕ್ಕದಲ್ಲೇ ಕೂತು ಯೋಚಿಸತೊಡಗಿದೆ <br />
ಸ್ಯಾಮುಯೆಲ್ - ಹೇಳಬಹುದು, ಒಳ್ಳೆಯವ , ಆದರೆ ನಂಬಿಕೆ ಇಲ್ಲ <br />
ದೀಪಾ- ಸೀದಾ ಮನೆಗೆ ವಿಷಯ ತಲುಪುವುದು <br />
ಮನೋಹರ- ಇಂತಹ ವಿಷಯದಲ್ಲೆಲ್ಲ ಹೈ ಇಂಪ್ಲ್ಯೂಯೆನ್ಸ್ ಮಾಡಿಸಬಹುದು, ಆದರೆ ಅವನಿಗೆ ನನ್ನವಳ ಮೇಲೆ ಅತಿಯಾದ ಆದರವಿದೆ , ಇದು ಅಪಾಯ, ಕೈ ಬಿಟ್ಟರು ಬಿಟ್ಟನೇ <br />
ಹೆಂಡತಿ- ಹೋದ ಸಾರಿ ದೀಪಾಳ ಮನೆಯಲ್ಲಿ ಅವಳ ಗಂಡ ಮೋಸ ಮಾಡಿದ್ದನ್ನು ಕಂಡು ದಿಪಾಳಿಗೂ ಹೇಳದೆ ಅವನನ್ನು ಕರೆದು ಬೆದರಿಕೆ ಹಾಕಿ ಸರಿ ದಾರಿಗೆ ತಂದದ್ದನ್ನು ಕಂಡಿದ್ದೇನೆ ತಾನು, ಈಗ ತಾನು ಅದೇ ದಾರಿಯಲ್ಲಿದ್ದೆಯೆಂದರೆ ಏನು ಮಾಡುವಳು? ತಿಳಿಯದು, ಸಣ್ಣದಾಗಿ ತಲೆ ಸಿಡಿಯಲಾರಂಭಿಸಿತು, ಕಣ್ಣು ಕತ್ತಲೆಗಟ್ಟಿತು ಅಷ್ಟೇ!<br />
<br />
ಎಚ್ಚರಾದಾಗ ಅವಳು ಎದುರು ಕೂತಿದ್ದಳು , ಕೈ ಚಾಚಿದೆ, ಮೃದುವಾಗಿ ಬೆರಳೊಡನೆ ಆಟವಾಡುತ್ತಾ ಸವರಿದಳು, ಮೈ ಝುಮ್ಮೆನ್ನುವ ಅನುಭವ, ಹಿತವಾಗಿ ಮುಗುಳ್ನಕ್ಕಳು, ನಾನು ನಂಬದವನಂತೆ ಪದೇ ಪದೇ ಕಣ್ಣುಜ್ಜಿದೆ, ಸೋಫಾದ ಕೆಳಗೆ ನೋಡಿದೆ, ಅಲ್ಲಿ ದೇಹ ಬಿದ್ದಿದ್ದ ಯಾವ ಗುರುತು ಇರಲಿಲ್ಲ,"ನಾನು ಭೂತವಾಗಿದ್ದೀನಾ ಅಂತ ಪರೀಕ್ಷಿಸುತ್ತಿದ್ದೀಯಾ?" ಅವಳ ತಣ್ಣನೆಯ ಹರಿತ ದನಿ ತೇಲಿಬಂತು, ಬಲವಂತದ ನಗು ನಕ್ಕೆ, "ಹೇಳು, ನನ್ನ ಯಾಕೆ ಬಿಟ್ಟು ಹೋದೆ?" "ಅ ... ಅ ... ಅದೂ , ಪ್ಲೀಸ್ ಈಗ್ಯಾಕೆ ಹಿಂದಿನ ಮಾತು , ಬಿಟ್ಟು ಬಿಡು, ಈಗ ನನ್ನ ಬರಹೇಳಿದ್ಯಾಕೆ ಮೊದಲು ಹೇಳು , ಪ್ಲೀಸ್" ನಾನು ಅಂಗಲಾಚಿದೆ, "ಇಲ್ಲ, ಕಾರಣ ಹೇಳಲೇಬೇಕು, ನೀನು ಕಾರಣ ಹೇಳಿದರೆ ನಾನು ನಿನಗೆ ಅತಿ ಮುಖ್ಯ ವಿಷಯ ಹೇಳೋದು" ಅವಳು ತುಂಟತನದಲ್ಲಿ(ಬಹುಶಃ ಅದು ನನ್ನ ಕಲ್ಪನೆಯೇ? ನನಗರ್ಥವಾಗಲಿಲ್ಲ)ಅವಳ ಕೆಳ ತುಟಿ ಕಚ್ಚಿದಳು, ನಾನು ಸಲ್ಪ ಹಗುರಾದೆ. <br />
"ನಿಜ ಹೇಳಲಾ,ಸುಳ್ಳ?" ಓ , ಇದು ನಾವಿಬ್ಬರು ಯಾವಾಗಲೂ ಆಡುತ್ತಿದ್ದ ಆಟ , ತುಂಬಾ ಸಾರಿ ಅವಳು ಪರವಾಗಿಲ್ಲ ಸುಳ್ಳೇ ಹೇಳು ಅಂತಿದ್ದಳು , ನನಗೆ ಹೂ ಮಲೆಯಲ್ಲಿ ಕಳೆದ ರಾತ್ರಿ ನೆನಪಾಗಿ ಮೈ ಬಿಸಿಯಾಯ್ತು, <br />
ಅವತ್ತು ಪೂರ್ಣ ಬೆಳದಿಂಗಳ ದಿನ , ಇವತ್ತು ರಾತ್ರಿ ಬರ್ತಿಯಾ? ಅಂತ ಅವಳನ್ನ ಕೇಳಿದ್ದೆ ಎಲ್ಲಿಗೆ ಅಂತ ತಡವರಿಸಿದ್ದಳು ಹೂ ಮಲೆಯ ತುದಿಗೆ ಹೋಗೋಣ, ಇವತ್ತು ಹುಣ್ಣಿಮೆ ಅಂದಾಗ ಭಯವಾಗುತ್ತೆ ಅಂದಿದ್ದಳು, ನಾನು ಒತ್ತಾಯಿಸಿದಾಗ ಒಪ್ಪಿ ನಾನು ಹೇಳಿದ ಜಾಗಕ್ಕೆ ಬಂದಿದ್ದಳು, ನಂತರ ಒಂದು ಗಂಟೆ ಉಸಿರು ಬಿಗಿ ಹಿಡಿದು ಹತ್ತಿದ್ದೆವು, ಹಾಲು ಮಂಟಪ, ಅದರ ತುದಿಯ ಮೇಲೆ ಸೂರ್ಯನ ಬೆಳಕು ಅಥವಾ ಚಂದ್ರನ ಬೆಳಕು ಯಾವುದು ಬಿದ್ದರು ಇಡೀ ಮಂಟಪದಲ್ಲಿ ಬೆಳಕು ಕೋರೈಸುತ್ತಿತ್ತು, ಹಾಗೆಂದೇ ಅದಕ್ಕೆ ಹಾಲು ಮಂಟಪ ಅನ್ನುತ್ತಿದ್ದರು ಯಾವ ದೊರೆಯೊ ಯಾವ ಪ್ರೇಯಸಿಗೋ ಕಟ್ಟಿದ ಕಥೆ ಊರ ತುಂಬೆಲ್ಲ ಹಾಡಾಗಿ ಕಥೆಯಾಗಿ ಹರಿದಾಡಿಕೊಂಡಿತ್ತು , ನನ್ನ ಅತಿ ರಹಸ್ಯಗಳನ್ನೆಲ್ಲ ಬಚ್ಚಿಟ್ಟುಕೊಂಡ ಈ ಮಂಟಪ ನನಗೆ ಬಹಳವೇ ಪ್ರಿಯವಾದ್ದು, ಅವತ್ತು ಕುಳಿತು ಬೆದರಿಕೆಯ ಕಣ್ಣಲ್ಲಿ ಬೆಳಗು ಹರಿವುದರೊಳಗೆ ನನಗೆ ನಮ್ಮನೆಯ ಹಿತ್ತಲಿಗೆ ಬಿಟ್ಟು ಬಿಡು ಅಂದಾಗ ನನಗೆ ಆ ಭಯ ತಮಾಷೆಯಂತೆ ಕಾಣಿಸಿತ್ತು ಮತ್ತೆ ಅವಳನ್ನು ಕೆಣಕಿದ್ದೆ ಸತಾಯಿಸಿದ್ದೆ ಅವಳು ಸತ್ಯ ಹೇಳು, ನಿನಗೆ ನಾನೇಕಿಷ್ಟ ಅಂದಾಗ ಸುಳ್ಳು ಹೇಳಲಾ ಸತ್ಯ ಹೇಳಲಾ ಅಂತ ಕೇಳಿದ್ದೆ, ಅವಳು ಮುಗ್ಧೆಯಾಗಿ ಸತ್ಯ ಹೇಳು ಅಥವಾ ನಿನಗಿಷ್ಟ ಆಗಿದ್ರೆ ಸುಳ್ಳು ಹೇಳು ಅಂದಾಗ ನನಗೆ ಈ ಕ್ಷಣಕ್ಕೆ ನೀನಿಷ್ಟ ಅಂದು ಸುಮ್ಮನಾಗಿದ್ದೆ, ಅವಳೂ ಹಠಕ್ಕೆ ಬಿದ್ದವಳಂತೆ ನನಗೆ ನೀನಿಷ್ಟವೇ ಇಲ್ಲ ಅಂದಿದ್ದಳು ಬಹುಶಃ ಅವಳ ಕಾಣುಗಳಲ್ಲಿದ್ದ ನೀರು ಪಸೆ ನನ್ನ ಕೈಗಂಟಿತ್ತು, ಅದನ್ನೊರೆಸುತ್ತ್ತ ಹೋದ ಬೆರಳಿಗೆ ಅವಳ ಮೂಗಿನ ನತ್ತು ಹಣೆಯ ಬೆವರು ಅದುರುತ್ತಿದ್ದ ತುಟಿಗಳೂ ಏರಿಳಿಯುತ್ತಿದ್ದ ಎದೆಯ ಲಯತಪ್ಪಿದ ಹಾಡೂ ಕೇಳಿಸಿತ್ತು, ನಾನು ಉನ್ಮತ್ತನಾಗಿದ್ದೆ ಅವಳ ದೇಹದ ತುಂಬೆಲ್ಲ ಅಂತಿದ್ದ ಅದಾವುದೋ ಮಾಯಕದ ಸುವಾಸನೆ ನನ್ನ ಕಟ್ಟಿ ಹಾಕಿತ್ತು, ಅವಳು ಅವತ್ತು ಬೆಳದಿಂಗಳಿನಲ್ಲಿ ಕನವರಿಸಿದ್ದಳು"ನಿನ್ನ ಬಿಟ್ಟು ಬದುಕಲಾರೆ, ಈ ಸುಖದಾಣೆ ಸತ್ಯ"<br />
<br />
"ಮತ್ತೆ ನನ್ನ ಹಾಲು ಮಂಟಪಕ್ಕೆ ಕರಿಬೇಡ"ಅವಳ ದನಿ ಎಚ್ಚರಿಸಿತು, ತಬ್ಬಿಬ್ಬಾಗಿ ನೋಡಿದೆ, ಇವಳು ನಿಜವಾಗಲೂ ನನ್ನ ಎದುರಿಗಿದ್ದಾಳೆ ಅನ್ನುವುದು ರೋಮಾಂಚನವನ್ನು ಭಯವನ್ನು ಒಟ್ಟಿಗೆ ತರುತ್ತಿತ್ತು, ನನ್ನ ಮನಸ್ಸನ್ನು ಓದುತ್ತಿದ್ದಾಳೆ ಅನ್ನುವುದು ಭಯವನ್ನು ಇನ್ನು ಹೆಚ್ಚಿಸಿತ್ತು, "ನೀನ್ಯಾವತ್ತು ಅಷ್ಟು ಕ್ರೂರಿಯಾಗಿ ನನ್ನ ಕಣ್ಣಿಗೆ ಕಾಣಲೇ ಇಲ್ಲ, ಅದೆಷ್ಟೋ ಸಾರಿ ನಿನ್ನ ಕ್ಷಮಿಸಿದ್ದೀನಿ ಅನ್ನೋ ಭ್ರಮೆಯಲ್ಲಿ ಬದುಕೋಕೆ ಪ್ರಯತ್ನಿಸಿದೆ, ನೀನು ಸಿಕ್ಕಿದ ಜಾಗಗಳನ್ನೆಲ್ಲ ಒಂದೊಂದಾಗಿ ನಿರಾಕರಿಸುತ್ತಾ ನಿರಾಕರಿಸುತ್ತ.... ಈಗ ಇಡೀ ಜಗತ್ತೇ ಬೇಡ ಅನಿಸಿಬಿಟ್ಟಿದೆ," ಅವಳು ಮಾತಾಡುತ್ತಾ ಹೋದಳು"ಅಷ್ಟಕ್ಕೂ ಯಾರನ್ನಾದರೂ ಈ ತರಹ ನಮ್ಮೊಳಗೇ ಬಿಟ್ಟು ಕೊಳ್ಳುವ ಅವಶ್ಯಕತೆ ಏನಿರುತ್ತೆ? ನನಗೆ ಉತ್ತರ ಸಿಕ್ಕಿಲ್ಲ, ನೀನವತ್ತು ಹಿಡಿದ ಕೈ ಕೊಡವಿ ಬಸ್ಸು ಹತ್ತಿದೆ ಅಲ್ಲ ಅವತ್ತು ನನ್ನ ಮನಸಿಗೆ ಖಾತ್ರಿ ಆಗಿತ್ತು ತಿರುಗಿ ಬರಲಾರೆ ಅಂತ, ಆದರೂ ನೋಡು ಆಗದ್ದನ್ನ ಆಗೇ ಬಿಡುತ್ತೆ ಅಂತ ಬಯಸುತ್ತಾ ಅದಕ್ಕಾಗಿ ಭ್ರಮಿಸುತ್ತಾ ಹುಡುಕಾಡುತ್ತಾ ಮನಸ್ಸು ತನ್ನ ತಪ್ಪಿದ ಲಯ ಕಂಡುಕೊಳ್ಳೋಕೆ ಪ್ರಯತ್ನಿಸುತ್ತೆ, ನೀನು ಹೋದ ಮೇಲೆಯೇ ನಾನು ನಿನ್ನ ಬಗ್ಗೆ ಬಹಳಷ್ಟು ತಿಳಿದುಕೊಂಡೆ, ನೀನು ನನ್ನಿoದ ಮುಚ್ಚಿಟ್ಟ ಎಲ್ಲ ವಿಷಯಗಳು ನನಗೆ ಗೊತ್ತಾಗುತ್ತಾ ಹೋದವು, ನೀನೊಂದು ಭ್ರಮೆಯಲ್ಲಿ ನನ್ನ ಬದುಕಲು ಬಿಟ್ಟಿದ್ದೆ, ನಾನು ಅದನ್ನೇ ಬಹಳ ಕಾಲ ಜೀವಿಸಿದ್ದೆ ಅನ್ನುವ ಸತ್ಯ ನನಗೆ ಅರಿವಾಗುತ್ತಾ ಹೋಯಿತು, ಆದರೆ ಈಗ ಬಂದದ್ದು ಮಾತ್ರ ನಿನ್ನ ಬಾಯಿಂದ ಕಾರಣ ಕೇಳಲು, ಹೇಳು , ಅದು ಯಾವ ಕಾರಣ ನಿನ್ನ ಇಲ್ಲಿಗೆ ನನ್ನಿಂದ ದೂರ ಎಳೆದು ತಂದದ್ದು" ಅವಳ ದ್ವನಿ ತೀವ್ರ ವಾಗುತ್ತಾ ಸಾಗಿತ್ತು , ನಾನು ಮಾತಾಡಲೇ ಬೇಕಿತ್ತು "ನಿನ್ನ ಬಿಟ್ಟು ಬರಲು ಅಂಥಾ ಕಾರಣ ಏನಿರಲಿಲ್ಲ, ಆದರೂ ನಾನು ಬಹುಶಃ ಬಂಧನಗಳಿಗೆ ಹೆದರಿದ್ದೆ, ಅಥವಾ ಪಲಾಯನ ನನ್ನ ರಕ್ತದಲ್ಲಿಯೇ ಇದೆ ಅ೦ದರು ಸರಿಯಾದೀತು, ನನಗೆ ಇನ್ಯಾವುದೋ ಕಾಣದ ಸೆಳೆತದ ಹುಡುಕಾಟ ಇತ್ತು ಅನಿಸುತ್ತೆ" ನನ್ನ ಮಾತು ಮುಗಿವ ಮೊದಲೇ ಜೋರಾಗಿ ನಕ್ಕಳು ಅವಳು, ತೀರಾ ಅಸಹಜ ನಗು, ನನ್ನ ಹೃದಯ ಬಡಿತ ಮತ್ತೆ ಏರಿತು, ಭಯದಲ್ಲಿ, ಭಯವನ್ನು ಮುಚ್ಚಿಡಲು ಯತ್ನಿಸುತ್ತಾ ಅವಳನ್ನೇ ನೋಡಿದೆ"ಹುಚ್ಚಾ , ಆತ್ಮಸಾಕ್ಷಿ ಸತ್ತು ಹೋಗಿದೆ ನಿಂಗೆ ಏಳೋ ಎದ್ದೇಳು, ನಿನಗೆ ಪಲಾಯನ ವಾದವಲ್ಲ, ಹತ್ತಿದ್ದು ದೇಹಗಳ ಸುವಾಸನೆಯ ಮತ್ತು, ನಿನ್ನೊಳಗಿನ ಮೃಗ ಕೇವಲ ದೇಹದ ಸಾಂಗತ್ಯ ಅಷ್ಟೇ ಬಯಸಿದ್ದು, ಅದಕ್ಕೆ ಬೇರೆಯ ಹೆಸರಿಟ್ಟು ವಂಚಿಸುತ್ತಾ ಬಂದವ ನೀನು" ಬೆ೦ಕಿಯ ಧಾರೆ ದನಿಯಲ್ಲಿ, <br />
ನಾನು ನಡುಗಿದೆ , "ನಿನೊಂದೆ ಅಲ್ಲ ನಿನ್ನಂಥ ಎಲ್ಲರಿಗು ಇದೊಂದೇ ದಾರಿ ಬದುಕಿನ ಸತ್ಯಗಳನ್ನ ಎದುರಿಸಲಾಗದೆ ಓಡುತ್ತಾ ಓಡುತ್ತಾ ದಾರಿಗಳೇ ಇಲ್ಲದ ಕಡೆ ತಲುಪಿಬಿಡುತ್ತೀರಿ, ನೀನು ನನ್ನಿಂದ ಕಿತ್ತುಕೊಂಡಿದ್ದು ಏನು ಗೊತ್ತಾ, ಪಾಪ ಪ್ರಜ್ಞೆ, ನಾನು ಸತ್ತು ಹುಟ್ಟಿದೆ, ಬಹಳ ಸಲ, ಇನ್ನೀಗ ನಿನ್ನ ಸರದಿ" ನಾನು ಬಾಯ್ತೆರೆವ ಮೊದಲೇ ಅವಳು ನಕ್ಕಳು "ನೀನು ಮದುವೆಯಾಗಿದ್ದೀಯಲ್ಲ, ಸುಖ ಸಿಕ್ಕಿತಾ, ನೀನು ಹುಡುಕುತ್ತಿದ್ದ ಆ ನೆಮ್ಮದಿ, ನನ್ನ ಬಿಟ್ಟು ಇನ್ನೊಂದು ದೇಹದಲ್ಲಿ ನೀನು ಅರಸುತ್ತಿದ್ದ ಆ ನೆಮ್ಮದಿ ಕ್ಷಣವಾದರೂ ಸಿಕ್ಕಿತಾ? ಇರುವ ಇಷ್ಟು ಸಣ್ಣ ಜೀವನವನ್ನ ಹೊಂದಿಕೆ ಇಲ್ಲದೆ ಅಳುತ್ತ ಕಳೆಯುತ್ತೀದ್ದಿ , ನಿನಗೆ ನಂಬಿಕೆ ಇಲ್ಲ ಯಾವುದರಲ್ಲೂ, ಸ್ವತಃ ನಿನ್ನಲ್ಲೂ ,ಅದಕ್ಕೆ ಬರಿ ಭ್ರಮೆಯಾದ ನಾನು ನಿನಗೆ ಕಾಣುತ್ತಿರುವುದು" ಎಂದು ನಕ್ಕಳು, ನಾನು ಅವಳನ್ನೇ ನಂಬಲಾರದವನಂತೆ ನೋಡಿದೆ, ಕೈ ಚಾಚಿದಳು , ನಾನು ತಪ್ಪಿಸಿಕೊಳ್ಳಲೆತ್ನಿಸಿ ಓದಿದೆ ಓಡಿದೆ , ಕೈಗಳು ಕಬಂಧವಾಗಿ ನನ್ನ ಹಿಡಿಯುತ್ತಲೇ ಹಿಂದೆ ಬಂದಿತು , ಅಷ್ಟೊತ್ತಿಗೆ ನಾನು ಟೆರ್ರೇಸಿನ ಮೇಲಿದ್ದೆ , ಕೆಳಗೆ ಹಾರಿದ್ದಷ್ಟೇ ಗೊತ್ತು, ಕಣ್ಣು ಮತ್ತೆ ಕತ್ತಲೆಗಟ್ಟಿತು <br />
ಎಚ್ಚರಾದಾಗ ಎದುರಲ್ಲಿ ಅವಳ ದೇಹ ಇರಲಿಲ್ಲ ಬಹುಶಃ ನಾನು ಯಾವ ಅವಸ್ಥೆಯಲ್ಲಿ ಕನಸು ಕಂಡೆನೋ , ನನಗೆ ಸತ್ಯ ಸುಳ್ಳುಗಳ ವ್ಯತ್ಯಾಸ ತಿಳಿಯಲಿಲ್ಲ, ಮೊಬೈಲ್ ಆನ್ ಮಾಡಿದೆ ಮನೆಯಿಂದ ಬಂಡ ಬಹಳಷ್ಟು ಕಾಲ್ಗಳು, ಇಲ್ಲ ಇವತ್ತು ಸುಳ್ಳು ಹೇಳಲಾರೆ, ಹೆಂಡತಿಗೆ ಫೋನಾಯಿಸಿದೆ " ಸುಜೀ , " "ರೀ ಏನ್ರೀ ಎಲ್ಲಿ ಇದ್ದೀರಾ. ಬೇಗ ಬನ್ನಿ " ಇಲ್ಲೆಲ್ಲೋ ಸಿಕ್ಕಾಕಿಕೊಂಡಿದ್ದೀನಿ ಈಗ ಸಮಯ ಎಷ್ಟು ಹೇಳು" "ಅಯ್ಯೋ ಕೈಲಿ ಮೊಬೈಲ್ ಇಲ್ವಾ, ಎಲ್ಲಿದ್ದೀರಾ ಹೇಳಿ, ನಾನು ವಿಳಾಸ ಕೊಟ್ಟೆ, ನಂತರ ಒಳ ಹೋಗಿ ನೀರು ಕುಡಿದು ಸೋಫಾದ ಮೇಲೆ ಕಾಲುಚಾಚಿದೆ , ಅವಳ ಬಿಸಿಯುಸಿರು ನನ್ನ ಎದೆಗೆ ತಾಕುತ್ತಿತ್ತು ಸಣ್ಣದಾದ ಮುಗುಳ್ನಗುವು, ಹೂ ಮಳೆಯ ಬಳದಿಂಗಳಲ್ಲಿ ನಾನು ಅವಳ ಕೈ ಹಿಡಿದ ಕ್ಷಣಗಳೆಲ್ಲ ಕಣ್ಣೆದುರೇ ನಡೆಯಲಾರಂಭಿಸಿದವು , ಮನೆಯ ಬಾಗಿಲು ತಟ್ಟಿದ ಶಬ್ದ , ನಂತರ ತೆರೆದ ಶಬ್ದ , ನಾನು ದಿಗ್ಭ್ರಮೆ ಹಿಡಿದವನಂತೆ ನೋಡುತ್ತಿದ್ದೆ,<br />
ನನ್ನ ಹೆಂಡತಿಯನ್ನು ಒಳಗೆ ಬರ ಮಾಡುತ್ತಿದ್ದವಳು ಅವಳು, ಹಿಂದೆಯೇ ದೀಪಾ , ಸ್ಯಾಮ್ಯುಯೆಲ್ ಎಲ್ಲರು ಒಳ ಬಂದರು, <br />
ಅವಳು ನನ್ನ ಕಡೆ ಕೈ ತೋರಿಸಿ ಗಾಭರಿ ಇಂದ ಏನೋ ಹೇಳುತ್ತಿದ್ದಳು, ನನ್ನ ಹೆಂಡತಿ ಚೀರಿದ್ದು ಕೇಳಿಸಿತು, ಜತೆಗೆ ಜೋರಾಗಿ ಅಳುವ ಶಬ್ದವೂ , ನಾನು ಅತ್ತಲೂ ಹೋಗಲಾಗದೆ ಅವಳನ್ನು ಬಿಡಲಾಗದೆ ಹೂಮಾಲೆಯ ಹಾದಿಯಲ್ಲಿ ಅಲೆಯುತ್ತಿದ್ದ ಭ್ರಮೆಗೆ ಸಿಕ್ಕಿದೆ,<br />
ಸತ್ತಿದ್ದು ಯಾರು, ನನಗೆ ನಿಜವಾಗಲೂ ತಿಳಿಯುತ್ತಿಲ್ಲ <br />
<br /></div>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-57702017158937211522017-08-22T07:44:00.000-07:002017-08-22T07:44:08.469-07:00ಹೃದಯದ ಭಾಷೆ <div dir="ltr" style="text-align: left;" trbidi="on">
<div style="color: #222222; font-family: arial, sans-serif; font-size: small;">
ಅದು ಪ್ರಾಕ್ಟಿಕಲ್ ಕ್ಲಾಸ್,ನಾನು ನಿಟ್ಟಿಂಗ್ ಕಡ್ಡಿ ಹಿಡಿದು ಕಷ್ಟ ಪಟ್ಟು ನಿಟ್ ಪರ್ಲ್ ಅಂತ ಎಣಿಸುತ್ತಾ ಕಲೀತಿದ್ದೆ...ಆಗ ಜವಾನ ಬಂದು ನನ್ನ ಹೆಸರು ಕೂಗಿದ...ನನಗೆ ಆಶ್ಚರ್ಯ...ಹೊರಬಂದು ನೋಡಿದರೆ ಅಪ್ಪ ನಿಂತಿದ್ದರು...ಬಿಳಿ ಪಂಚೆ..ಅದರ ಮೇಲೆ ತುಸು ಮಾಸಿದ ಬಿಳಿ ಶರ್ಟ್..ಬೇಸಿಗೆಯ ಧಗೆಗೆ ಅರೆ ತೆರೆದಿದ್ದ ಅಂಗಿಯ ಗುಂಡಿಗಳು, ಕೆಲಸದ ಮೇಲೆ ಆ ಊರಿಗೆ ಬಂದಿದ್ದರು..ಮತ್ತು ಹಾಗೆ ನನ್ನ ನೋಡಲು ಬಸ್ ಹಿಡಿದು ಬಂದಿದ್ದರಂತೆ...ನನ್ನ ತಂದೆಯನ್ನ ನೋಡಿ ನಮ್ಮ ಪ್ರಿನ್ಸಿಪಲ್ ಮಾತಾಡಿಸಿದರು...ಆ ಸಮಯ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟಿನ ಸಮಯ..ಅಮ್ಮ ತುಪ್ಪ ಬೆಲ್ಲ ತಿಂಡಿಗಳನ್ನ ಕಳುಹಿಸುತ್ತಿದ್ದಳು ..ಆದರೆ ಹಾಸ್ಟೆಲ್ಲು ಮತ್ತೆ ಫೀಸು ಹಾಗೂ ಕೋರ್ಸಿಗೆ ಸಂಬಂಧ ಪಟ್ಟಖರ್ಚುಗಳು ಅಪ್ಪನ ಬಹುಪಾಲು ಆದಾಯ ನುಂಗುತ್ತಿತ್ತು..ಅಪ್ಪ ದುಡ್ಡು ಹೊಂದಿಸುವುದರ ಬಗ್ಗೆ ಹೈರಾಣಾಗುತ್ತಿದ್ದರು...ಅಪ್ಪ ನನಗೆ ಫೀಸು ಮತ್ತೆ ಕೈ ಖರ್ಚಿಗೆ ಹಣ ಇತ್ತು ನಿರ್ಗಮಿಸಿದರು...ಪ್ರಿನ್ಸಿಪಲ್ ನನ್ನ ಕೇಳಿದರು.."ನಿಮ್ಮ ತಂದೆ ಏನು ಕೆಲಸ ಮಾಡ್ತಾರೆ?" ಅಲ್ಲಿ ಬರ್ತಿದ್ದವರ ಅಪ್ಪಂದಿರು ಪ್ಯಾಂಟ್ ಶರ್ಟ್ಧಾರಿಗಳು..ಮತ್ತು ಆದಷ್ಟು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದವರು...ನಾನು ಆತ್ಮವಿಶ್ವಾಸದಿಂದ ಉತ್ತರಿಸಿದೆ..."ಅವರು ರೈತರು,ನಮ್ಮನೆಯಲ್ಲಿ ತೋಟ ಇದೆ..ಸಲ್ಪ ಗದ್ದೆಯೂ, " ಅಂದೆ ,"ಹೌದಾ" ಅಂದಷ್ಟೆ ಹೇಳಿ ನಿರ್ಗಮಿಸಿದರು...</div>
<div style="color: #222222; font-family: arial, sans-serif; font-size: small;">
<br /></div>
<div style="color: #222222; font-family: arial, sans-serif; font-size: small;">
ಮುಂದೆ ಒಂದು ವರುಷದಲ್ಲಿ..ಮತ್ತೆ ಭೇಟಿಯಾಗ ಬೇಕಾಯ್ತು ಪ್ರಿನ್ಸಿಪಲ್ ಮತ್ತು ನನ್ನಪ್ಪ..ಹಾಸ್ಟೆಲ್ಲಿನಲ್ಲಿ ಆದ ಸಣ್ಣ ಕಳ್ಳತನವೊಂದಕ್ಕೆ ನನ್ನ ಅಪರಾಧಿಯನ್ನಾಗಿಸಿ ನಮ್ಮ ವಾರ್ಡನ್ ಅಪ್ಪನನ್ನ ಕರೆಸಿದ್ದರು...ಅವರು ಸಂಶಯ ಪಡಲು ಇದ್ದ ಕಾರಣ ಇಷ್ಟೇ.. ಕಳ್ಳತನ ಆದ ದಿನ ನಾನು ಊರಿಗೆ ಹೋದದ್ದು...ನನ್ನ ಇಡೀ ವಾರ್ಡ್ ರೋಬ್ ನನ್ನ ವಸ್ತುಗಳು ಎಲ್ಲದನ್ನೂ ಕಿತ್ತೆಸೆಯಲಾಗಿತ್ತು....ಕಾರಣವೇ ಗೊತ್ತಿರದಿದ್ದ ನಾನು ಕುಸಿದು ಕೂತಿದ್ದೆ...ಏನು ಗೊತ್ತಿಲ್ಲದ ನನ್ನ ಹೌದು ಅಂತ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದರು..ಕಾರಣ ಆ ಹುಡುಗಿಯ ತಂದೆ ಭದ್ರಾವತಿಯವರು..ಗೂಂಡಾಗಿರಿಗೆ ಹೆಸರಾದ ಊರದು....ಆಕೆಯ ತಂದೆ ಅಣ್ಣ ಎಲ್ಲರೂ ಬಂದು ಹೆದರಿಸಿಹೋಗಿದ್ದರಂತೆ..ಅವತ್ತಿನ ದಿನ ಹೋಳಿ...ಇನ್ನೂ ನೆನಪಿದೆ...ಅಪ್ಪ ನನ್ನ ಕೈ ಜಗ್ಗಿ ಕೇಳಿದ್ದರು"ಕದ್ದಿದ್ದೀಯಾ" ಕದ್ದಿದ್ದರೆ ಅಪ್ಪನ ಎದುರು ಒಪ್ಪಿಬಿಡುತ್ತಿದ್ದೆ..ವಿಷಯವೇ ಗೊತ್ತಿಲ್ಲದ ನಾನು ಅಸಹಾಯಕಳಾಗಿ ಅತ್ತಿದ್ದೆ..."ಹೆದರಬೇಡ..."ಎಂದು ನನ್ನ ತಲೆ ಸವರಿ ಹೋದ ಅಪ್ಪ ಐದು ನಿಮಿಷದಲ್ಲಿ ನನ್ನ ಕರೆದಿದ್ದರು...ನಾನು ಧೈರ್ಯವಾಗಿ ಹೇಳಿದ್ದೆ..ಕದ್ದಿಲ್ಲ ಅಂತ...ಅವತ್ತು ಅಪ್ಪ ಅವರೊಡನೆ ತಮ್ಮ ವಿದ್ಯಾಬ್ಯಾಸದ ಬಗ್ಗೆ ಮಾತಾಡಿದ್ದರು...</div>
<div style="color: #222222; font-family: arial, sans-serif; font-size: small;">
ಇದೆಲ್ಲ ಮುಗಿದ ಮೇಲೆ ಎರಡು ದಿನ ಬಿಟ್ಟು ನನ್ನ ಕರೆಸಿದ ಪ್ರಿನ್ಸಿಪಲ್ ಹೇಳಿದ್ದು ಒಂದೇ ಮಾತು"ನಿಮ್ಮ ತಂದೆ ಬಹಳ ಗೌರವಸ್ಥರು..ಅಷ್ಟೆಲ್ಲ ಓದಿ ಹಳ್ಳಿಗೆ ಬಂದು ಕೃಷಿಯನ್ನ ಕೃಷಿಯನ್ನ ಉದ್ಯೋಗ ಮಾಡಿಕೊಂಡಿದ್ದಾರೆ, ಮತ್ತು ಇಲ್ಲದ ಊರನ್ನ ಕಟ್ಟಿ ಬೆಳೆಸಿದ್ದಾರೆ, ಸುಮಾರು ಕುಟುಂಬಗಳಿಗೆ ಅಶ್ರಯದಾತರಾಗಿದ್ದಾರೆ, ಅಂಥವರ ಮಗಳು ನೀನು, ಅವರಿಗೆ ಹೆಮ್ಮೆಯಾಗುವಂತೆ ಬದುಕು, ಯಾವುದೇ ಕಷ್ಟಕ್ಕೂ ಸುಲಭಕ್ಕೆ ತಲೆತಗ್ಗಿಸಬೇಡ,ಯಾವ ಅಪಮಾನ ಅವಮಾನವನ್ನು ಗೌರವದಿಂದಲೇ ಎದುರಿಸು, ಕಷ್ಟದ ಸಮಯದಲ್ಲಿ ನಾವು ಧೈರ್ಯಗೆಟ್ಟರೆ ನಮ್ಮ ಮೇಲಿನ ಆಪಾದನೆಗಳು ಸತ್ಯವೆಂದು ಸಾಬೀತಾಗುತ್ತದೆ, ಇದಕ್ಕಿಂತ ಇನ್ನೂ ಎಷ್ಟೋ ಕಷ್ಟದ ಕ್ಷಣಗಳು ಬರಬಹುದು, ಅದು ನಮ್ಮನ್ನು ಶುದ್ಧಗೊಳಿಸುತ್ತದೆ ಅಂತಲೇ ಭಾವಿಸಿ ಸ್ವೀಕರಿಸು," ನಾನು ಅಪ್ಪನ ಕಡೆ ಹೆಮ್ಮೆಯಿಂದ ನೋಡಿದೆ, </div>
<div style="color: #222222; font-family: arial, sans-serif; font-size: small;">
ಇವತ್ತಿಗೂ ನನಗೆ ಅವರು ಹೇಳಿದ ಮಾತುಗಳಲ್ಲಿ ನನ್ನಪ್ಪನೆ ಕಾಣುತ್ತಾರೆ, ಮಾನಸಿಕ ಕ್ಷೋಭೆಯ ಕಾಲದಲ್ಲಿ ನನ್ನ ಮನೋಬಲವನ್ನು ಮತ್ತೆ ಮತ್ತೆ ಹೆಚ್ಚಿಸುತ್ತಾರೆ. ನಮ್ಮ ಬಟ್ಟೆ, ನಮ್ಮ ಭಾಷೆ ಇವೆಲ್ಲ ವ್ಯಾಖ್ಯಾನವನ್ನು ಮೀರಿದ ಹೃದಯದ ಭಾಷೆ ಒಂದಿದೆ. ಅದನ್ನಷ್ಟೇ ನಾವು ಈಗಿನ ದಿನಮಾನದಲ್ಲಿ ಅಗತ್ಯವಾಗಿ ಪರಿಗಣಿಸಬೇಕಾಗಿರುವುದು. ಹಣ ಸಂಸ್ಕೃತಿಯ ಸುತ್ತ(ಹಣ ಅಗತ್ಯವೇ ಸರಿ) ಕುಣಿಯುವ ಇವತ್ತಿನ ಜಗತ್ತಿಗೆ, ವಸ್ತುಗಳಷ್ಟೆ ನಮಗೆ ಬೆಲೆ ತರುವುದು ಎಂದು ಭಾವಿಸಲಾದ ಈ ಜಗತ್ತಿಗೆ ಆರ್ದ್ರತೆಯ, ಭಾಷೆಗಳನ್ನು ಮೀರಿದ ಹೃದಯದ ಭಾಷೆ ಕಲಿಸಲೇ ಬೇಕಿದೆ ಇಲ್ಲವಾದರೆ ನಮ್ಮ ಸುಂದರ ಜಗತ್ತಿನ ಆಸೆ ಕೇವಲ ಕನಸುಗಳಲ್ಲಿ ಮಾತ್ರ ಉಳಿದೀತು.</div>
</div>
ಮಹಿಮಾhttp://www.blogger.com/profile/08011639151501072102noreply@blogger.com4tag:blogger.com,1999:blog-3608058128402170169.post-8344223949149850942017-08-19T16:58:00.000-07:002017-10-13T08:41:08.814-07:00ಅವನಿಗೆ<p dir="ltr">ಆಧುನಿಕ ಮನುಷ್ಯರಲ್ಲಿ ಇತರರ ನೋವನ್ನು, ಅವಮಾನವನ್ನು ನೋಡಿ ಸಂತೋಷಪಡುವ ಪ್ರವೃತ್ತಿ ಹೆಚ್ಚುತ್ತಿದೆ_ಯೆಂದು ಆತಂಕ ವ್ಯಕ್ತಪಡಿಸಿದ್ದಾನೆ.</p>
<p dir="ltr">ಎಸ್ ದಿವಾಕರ್ ಅವರು ಅನುವಾದಿಸಿದ ಸಾಲುಗಳನ್ನು ಓದುತ್ತ ತಟ್ಟನೆ ನಿನ್ನ ನೆನಪಾಯ್ತು. ನೀನು ಕಳಿಸಿದ ಕೊನೆಯ ಮೆಸೇಜು, "ಸಾರಿ ದಟ್ ವಾಸ್ ವೆರಿ unfortunate , sincerely sorry if I hurt you" ಜೊತೆಗೆ ನನ್ನ ಅವಮಾನಿಸಿ ಹೊರ ಕಳುಹಿಸಿದ ನಂತರ ನನ್ನ ಕಿವಿಗಪ್ಪಳಿಸಿದ ನಿನ್ನ ನಗುವು ಮತ್ತದರ ಹಿಂದೆ ನೀನು ದೊಡ್ಡ ಸಾಧನೆ ಮಾಡಿದವನಂತೆ ಹೇಳಿದ ವಾಕ್ಯಗಳು , ನಾನಾಗೆ ನಿನ್ನ ಬಾಗಿಲಿಗೆ ಯಾವತ್ತೂ ಬಂದಿರಲಿಲ್ಲ ನಾನು ಮನಸ್ಸು ಮಾಡಿದ್ದರೆ ಅವಷ್ಟು ಮೆಸೇಜುಗಳನ್ನ ನಿನ್ನ ಯೋಗ್ಯತೆಯನ್ನು ಇವತ್ತು ಬೀದಿಗೆಳೆಯಬಹುದು, ಅಥವಾ ಇನ್ನೇನೋ ಮಾಡಬಹುದು, ನೀನು ಮಾಡಿದ ಮೊಸವಿದೆಯಲ್ಲ ಅಂತೆಸಿಟಿ ಅನ್ನುವ ಅಂತೆಕಂತೆಗಳಲ್ಲಿ ನಿನ್ನ ನೀನು ಸುಳ್ಳಿಗೆ ಮಾರಿಕೊಂಡ ಅವನ್ಯಾರೋ ಎಳೆ ನಿಂಬೇಕಾಯಿಯ ಆಟಗಳನ್ನು ನಿನ್ನ ನಿಯತ್ತಿಗೆ ಬಲಿಕೊಟ್ಟ ನಿನ್ನ ಅಸಹಾಯಕತೆ, ರಕ್ತದಲ್ಲಿ ಅದ್ದಿದ ನಿನ್ನ ಆದರ್ಶಗಳು ಛೇ ಅಸಹ್ಯ ಹೇಸಿಗೆ ಗಬ್ಬು ಹೊಲಸನ್ನ ಬಿಟ್ಟು ಇನ್ಯಾವುದೇ ಪದವಿದ್ದರೂ ಅದನ್ನ ನಾನು ಬಳಸ ಬಯಸುವೆ , ನನ್ನ ಅಸಹಾಯಕ ಸ್ಥಿತಿಯನ್ನು ಬಳಸಿಕೊಂಡು ಆಡಿದ ಆಟವಿದೆಯಲ್ಲ, ಎಂಥ ಕೀಳು ಭಿಕ್ಷುಕ ಕೂಡ ಆ ಕೆಲಸ ಮಾಡಲಾರ. ನಿನಗೆ ನಿನ್ನ ಲ್ಯಾಂಡ್ಮಾರ್ಕ್ ಕೋರ್ಸು ಸುಳ್ಳನ್ನು authentic ಆಗಿ ಹೇಳುವುದನ್ನು ಕಲಿಸಿಕೊಟ್ಟಿದೆಯಷ್ಟೇ, ನಿನ್ನ ವೃತ್ತಿಯ ಮೂಲ ಸ್ವಭಾವವೇ ಹಾಗಿರುವಾಗ ಇಂತಹ ಘಟನೆಗಳು ಇನ್ನಷ್ಟು ಆ ವೃತ್ತಿಯ ಬಗ್ಯೆ ಅಸಹ್ಯವನ್ನೇ ಹುಟ್ಟು ಹಾಕುತ್ತದೆ ಅಷ್ಟೇ, ಇಂತಹ ದುರಾದೃಷ್ಟ ನಿನ್ನದು, ಯಾವತ್ತೂ ನಿನಗೆ ನನ್ನ ಬೆಲೆ ಅರಿವಾಗಲೇ ಇಲ್ಲ ಹಣದ ಮುಂದೆ, ನನ್ನ ಅದಮ್ಯ ನಂಬಿಕೆ ವಿಶ್ವಾಸಗಳನ್ನ ಮುರಿದ ನಿನ್ನ ಅದ್ಯಾವ ಹಾರೈಕೆ ಕಾಪಾಡುವುದು"ಅವಳ" ಆಶ್ರಯವು ಕಾಪಾಡಲಾರದು, ನೀನು ಅದೆಷ್ಟು ಸುಳ್ಳುಗಳ ಬಚ್ಚಿಟ್ಟಿದ್ದಿ, ಆಹಾ<br>
ಪ್ರಖ್ಯಾತ ಮನೋವಿಶ್ಲೇಷಣಾ ತಜ್ಞ ಎರಿಕ್ ಪ್ರಾಮ್ ತನ್ನ *`ದಿ ಅನಾಟಮಿ ಆಫ್ ಹ್ಯೂಮನ್ ಡಿಸ್ಟ್ರಕ್ಟಿವ್‌ನೆಸ್'* ಎಂಬ ಗ್ರಂಥದಲ್ಲಿ ಬರೆದಿರುವಂತೆ _`ಇತರರನ್ನು ಹಂಗಿಸುವ, ಅವರ ಭಾವನೆಗಳ ಮೇಲೆ ಹಲ್ಲೆ ಮಾಡುವ ಮಾನಸಿಕ ಕ್ರೌರ್ಯವಿದೆಯಲ್ಲ, ಅದು ದೈಹಿಕ ಕ್ರೌರ್ಯಕ್ಕಿಂತ ಹೆಚ್ಚು ವ್ಯಾಪಕ. ಇಂಥ ಕ್ರೌರ್ಯ ಎಸಗುವವನು ಸ್ವತಃ ಸುರಕ್ಷಿತವಾಗಿರುತ್ತಾನೆ. ಯಾಕೆಂದರೆ ಅವನು ಉಪಯೋಗಿಸುವುದು ದೈಹಿಕ ಶಕ್ತಿಯನ್ನಲ್ಲ, `ಕೇವಲ' ಶಬ್ದಗಳನ್ನು ಮಾತ್ರ. ಆದರೆ ಮಾನಸಿಕ ಆಘಾತ ದೈಹಿಕ ಬಾಧೆಗಿಂತ ಹೆಚ್ಚು ಮಾರಕವಾಗಬಲ್ಲುದು... ಕೇವಲ ಒಂದು ಸೂಕ್ತ ಶಬ್ದದ ಮೂಲಕ ಅಥವಾ ಹಾವಭಾವದ ಮೂಲಕ ಇತರರಿಗೆ ಮುಜುಗರವುಂಟುಮಾಡುವ ಅಥವಾ ತೇಜೋವಧೆ ಮಾಡುವ `ಕಲಾವಿದ' ಯಾರಿಗೆ ಗೊತ್ತಿಲ್ಲ? ಈ ಬಗೆಯ ಸ್ಯಾಡಿಸಂ ಅನ್ನು ಇತರರ ಸಮ್ಮುಖದಲ್ಲಿ ಪ್ರಯೋಗಿಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ'._<br>
ನೀನು ಮಾಡಿದ್ದು exactly ಇದನ್ನೇ , ಒಳ್ಳೆಯದಾಗಲಿ, ನಿನ್ನನ್ನ ಹರಿದು ಬಿಸಾಡುವುದು ಎಷ್ಟೋತ್ತಿನ ಕೆಲಸ, ಆದರೆ ನೀನು ಬದುಕಿರಬೇಕು, ಹೀಗೆ ನನ್ನ ಪಡೆಯಲಾರದೆ ಎಸಗಿದ ಅನ್ಯಾಯ ಅವಮಾನಗಳ ನೆರಳಿನಲ್ಲಿ, ಕೊನೆಗೆ ಮಾಡುವ ಪ್ರತಿ ಪೂಜೆ ಪ್ರತಿ ದಾನ ಪ್ರತಿ ಪ್ರಾರ್ಥನೆಯ ಹಿಂದೆಯೂ ನೀನು ಹೂತು ಹಾಕಿದ ನಿನ್ನ ಸುಳ್ಳು ಬೇಟೆಯಾಡುತ್ತದೆ, ಮುಂದೆ ಸಾಯುವ ಮುನ್ನವಾದರು ನಿನ್ನ ಕ್ಷಮೆಗಳ ಪಟ್ಟಿಯಲ್ಲಿ ನನ್ನದು ಮೊದಲಿರುತ್ತದೆ<br>
ಬದುಕಿಕೊ ಹೋಗ್!😊<br>
</p>
ಮಹಿಮಾhttp://www.blogger.com/profile/08011639151501072102noreply@blogger.com1tag:blogger.com,1999:blog-3608058128402170169.post-47162895759353758962017-08-17T01:55:00.003-07:002017-08-17T01:55:50.333-07:00ಮಧುಮಾಸ ಚಂದ್ರಮ<div dir="ltr" style="text-align: left;" trbidi="on">
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px;">
ಇವತ್ತು ನಿನ್ನ ನೆನಪಾಗ್ತಿದೆ, ತುಂಬಾ ಅಂದರೆ ತುಂಬಾ, ಸಣ್ಣಗೆ ಬಿಸಿಲು ಕಾಯುವ ಮಧ್ಯಾಹ್ನಗಳಲ್ಲಿ ನಾನ್ಯಾವತ್ತೂ ನಿನ್ನೇ ಕಾಯುತ್ತಿದ್ದೆ, ಪುಟ್ಟ ಪಾರಿವಾಳವೊಂದು ಬೆಚ್ಚನೆಯ ಗೂಡಿಂದ ಕಾಣೆಯಾದರೆ ಅದೆಂಥ ಆಘಾತ ಅಲ್ಲವಾ?</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮಾ<br />ಒಲವಿನ ಲೋಕಕೆ ನೀ ತಂದೆ ಪೂರ್ಣಿಮಾ....</div>
<div class="text_exposed_show" style="background-color: white; color: #1d2129; display: inline; font-family: Helvetica, Arial, sans-serif; font-size: 14px;">
<div style="font-family: inherit; margin-bottom: 6px;">
ನೀನು ಹೊಸಬನಲ್ಲ, ಹಳಬನು ಅಲ್ಲ, ನಮ್ಮ ಪ್ರೇಮಕಥೆಗೆ ಅದ್ವಿತೀಯ ನಾಯಕನಲ್ಲ, ಆದರೂ ಬಾರಿ ಬಾರಿ ನಿನ್ನೇ ಬಯಸಿದ್ದು, ತನ್ಮೂಲಕ ನಾನು ಬಹುಶಃ ನನ್ನೇ ಹುಡುಕಿದ್ದು ನನಗೆ ಗೊತ್ತಿರುವ ವಿಷಯ, ನಿಜ ವರುಷ ಕಳೆದಂತೆಲ್ಲಾ ಜವಾಬ್ದಾರಿಗಳು ಬದಲಾಗುತ್ತವೆ, ಪ್ರಾಮುಖ್ಯತೆಗಳೂ, ಆದರೆ ಅದಕ್ಕೆಲ್ಲ ಮೂಲ ಪ್ರೇಮವನ್ನೇ ಬಿಟ್ಟು ಬೇರೆಲ್ಲ ಕಡೆ ಕೈ ಚಾಚಿದರೆ ನೆಮ್ಮದಿ ದೊರಕುತ್ತದಾ? ಇಲ್ಲ. ನೀನೀಗ ಅದನ್ನೇ ಮಾಡುತ್ತಿದ್ದಿ.<br />ನಾನಿಲ್ಲೆ ಇದ್ದೇನೆ ಎಂದು ಒಮ್ಮೆ ತೋಳ್ ಚಾಚಿ ನೀನಪ್ಪಬಾರದೆ? ನನ್ನ ತಲೆ ನೇವರಿಸಿ ಒಮ್ಮೆ ನೀನಿರು ಜತೆಗೆ, ಈ ಪ್ರಯಾಣ ಸುಗಮ ಅನ್ನಬಾರದೆ? ಮಾತುಗಳನ್ನೆಲ್ಲ ಅದಾವ ತಿಜೋರಿಯಲ್ಲಿ ಬಚ್ಚಿಟ್ಟು ಕೀ ಕಳೆದು ಕೊಂಡೆ?ದೂರವಿದ್ದು ಹತ್ತಿರ ಇರುವ ಪರಿಪಾಠ (ಪಡಿಪಾಟಲು ಕೂಡ)ನಾನು ನೋಡಿದ್ದೇನೆ<br />ಹತ್ತಿರವಿದ್ದು ಅದೆಷ್ಟೋ ಮೈಲಿಗಳ ಅಂತರವನ್ನು ಅದೆಷ್ಟು ಸಲೀಸಾಗಿ ಸ್ಥಾಪಿಸಿದ್ದೀ ನೀನು?ನನಗೆ ಅಷ್ಟು ದೂರಾ ಹೊರಳಿ ನಡೆಯಲಾಗದು, ನೀರಿರದ ನದಿಯ ದಡದಲ್ಲಿ ನಿಂತ ಒಂಟಿ ನಾವೆಯಂತೆ ನಾನು ಕಾಯುತ್ತಲೇ ಇರುವೆ, ನಿನ್ನ ಆ ದಡಕ್ಕೆ ನನ್ನ ತಲುಪಿಸಲಿ ಅಂತ, ನಮ್ಮ ನಡುವಿನ ಅಂತರ ಕೊಚ್ಚಿ ಹೋಗುವ ಪ್ರೇಮ ಮಳೆಯೊಂದು ಬರಲಿ, ನಾನು ಕಾದು ಕಾದು ಸೋತಿದ್ದೇನೆ. ನಿನಗಾಗಿ, ನನ್ನ ಕ್ಷೀಣ ದನಿ ನಿನಗೆ ಈ ಬಾರಿಯಾದರೂ ಕೇಳಲಿ<br />ಒಮ್ಮೆ ಬಾರೋ ಒಮ್ಮೆ ಬಾರೋ<br />ಹೇಗೆ ನೀನಿದ್ದರೂ<br />ಒಮ್ಮೆ ಬಾರೋ ಒಮ್ಮೆ ಬಾರೋ<br />ಎಲ್ಲೆ ನೀನಿದ್ದರೂ<br />ಸುರಿ ಮಳೆ ಸುರಿಯುವ ಸೂಚನೆ<br />ಶುರುವಾಗಿದೆ ಶುರುವಾಗಿದೆ<br />ಜತೆಯಲಿ ನೆನೆಯಲು ನಲ್ಲನೆ ಮನಸಾಗಿದೆ, ಮನಸೋತಿದೆ.....</div>
<div style="font-family: inherit; margin-bottom: 6px;">
(copy paste)</div>
<div style="font-family: inherit; margin-bottom: 6px;">
(Devakanagile)</div>
</div>
</div>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-51489768601116130092017-07-21T00:10:00.001-07:002022-04-25T00:28:50.054-07:00ಎರಡು ಕಣ್ಣುಗಳು <div dir="ltr" style="text-align: left;" trbidi="on">"ಆ ಪುಟ್ಟ ಕಿಟಕಿ, ಪುಟ್ಟ ಕಿಟಕಿಯಲ್ಲಿ ಅದೆಷ್ಟು ವಿಶಾಲ ಬಾನು ತುರುಕಿಸಲಾದೀತು? ತೀರಾ ನೀಲಿ ಅಷ್ಟೇ ಕಾಣಿಸುವ ರಾತ್ರಿಯಲ್ಲಿ ದೂರ ತಾರೆಗಳು ಮಸುಕಾಗಿ ಹೊಳೆವಷ್ಟೇ ಜಾಗ, ಅದೇ ಹಸಿರು, ಅದೇ ಪಕ್ಕದ ಮನೆಯ ಕಿಟಕಿ ಅದೇ ವಾಹನಗಳ ಶಬ್ದ. ಹೊರ ನೆಟ್ಟ ಎರಡು ಕಣ್ಣುಗಳು ಮನೆಯಿಡೀ ಸುತ್ತಾಡಿ ಮತ್ತೆ ಬಂದು ಅದೇ ಕಿಟಕಿಯಲ್ಲಿ ಹಣುಕುತ್ತವೆ , ಹೊರಗಿನ ಜಗತ್ತಿಗೆ ಮೈಯಾಗುತ್ತವೆ,ಮಧ್ಯಾಹ್ನ ೨ ಗಂಟೆಯ ತನಕ ಬೇರೆ ಕೆಲಸವೇ ಇಲ್ಲ ಅನ್ನುವ ಹಾಗೆ , ೨ ರ ನಂತರ ಗೇಟಿನ ಶಬ್ದ, ಕಣ್ಣಲ್ಲೊಂದು ದೀಪ ಸೆರಗು ಹೊದ್ದು ಓಡಾಡುವುದು, ಆಗೀಗ ಸದ್ದು ಕೇಳುವುದು , ಮತ್ತೆ ಸ್ವಲ್ಪ ಹೊತ್ತಿನ ನಂತರ ಹೊರಗೆ ಗೇಟಿನ ಶಬ್ದ, ಮತ್ತದೇ ಮೌನ, ನಾಲ್ಕು ಗಂಟೆಗೆ ಪಕ್ಕದ ಬಿಲ್ಡಿಂಗಿನಲ್ಲಿ ಗಲಾಟೆ, ಕಣ್ಣುಗಳು ಮತ್ತಷ್ಟು ದೂರ ಹಿಗ್ಗಿ ನೋಡಲು ಪ್ರಯತ್ನಿಸುತ್ತಿವೆ, ಹೌದು ಪಕ್ಕದ ಮನೆಗೆ ಯಾವುದೋ ಬಾಡಿಗೆಯವರು ಬಂದಿರಬೇಕು. ಸ್ವಲ್ಪ ಹೊತ್ತಿಗೆಲ್ಲ ಸದ್ದು ಕಮ್ಮಿಯಾಗುವುದು , ಪಕ್ಕದ ಮನೆಯ ಕಿಟಕಿ ದೊಡ್ಡದಾಗಿ ತೆರೆಯುತ್ತಲಿದೆ, ಅಲ್ಲೆರಡು ಜೋಡಿ ಕಣ್ಣುಗಳು , ಬಹುಶಃ ಈ ಕಣ್ಣುಗಳಿಗೆ ಸಂಕೋಚವೇ, ಕಿಟಕಿ ತುಸು ಓರೆಯಾಯಿತು, ಮರುದಿನ ಒಂಬತ್ತಕ್ಕೆಲ್ಲ ಮತ್ತೆ ತೆರೆದ ಕಿಟಕಿ, ಮತ್ತದಕ್ಕೆ ಅಂಟಿದ ಕಣ್ಣುಗಳು , ಆ ಕಡೆಯ ಕಿಟಕಿಯಲ್ಲೂ ಎರಡು ಕಣ್ಣುಗಳು ಆದರೆ ಇವತ್ತು ಚೂರು ಬಾನು ಕಣ್ಣಲ್ಲೂ ಮಿನುಗಿತ್ತಾ? ನೀಲಿ ಕಣ್ಣುಗಳೆರಡೂ ದಿಟ್ಟಿಸುತ್ತವೆ, ಆ ಕಿಡಕಿಯಲ್ಲಿ ಕಣ್ಣು ಅರಳುತ್ತದೆ, ದಿನ ಕಳೆದಂತೆಲ್ಲ ಅದೇನು ಸಂಭಾಷಣೆ , ಮೌನದಲ್ಲಿ ಕಳೆದು ಹೋಗುತ್ತಿದ್ದ ಮಧ್ಯಾಹ್ನಗಳಲ್ಲಿ ಈಗ ಸಂಗೀತ , ಕಣ್ಣುಗಳೋ ರಾತ್ರಿ ತಾರೆಗಳನ್ನು ಕದ್ದು ಕೆಡಗಿಕೊಂಡಂತೆ ಹೊಳೆಯುತ್ತವೆ, ನಿರೀಕ್ಷೆಯಲ್ಲಿ, ಬಹುಶಃ ಗಂಟೆಗಳು ನಿಮಿಷಗಳಾಗಿ.<br>
<div>
ಬಹಳ ದಿನಗಳ ನಂತರ ಮತ್ತೆ ಕಿಟಕಿಯಲ್ಲಿ ಅವೇ ಎರಡು ಕಣ್ಣುಗಳು . ಪಕ್ಕದ ಮನೆಯ ಕಿಟಕಿಗಳು ಮುಚ್ಚಿವೆ ಹೊರಗೆಲ್ಲ ಚೂರೇ ಚೂರು ಕಾಣಿಸುತ್ತಿದ್ದ ನೀಲಿ ಬಾನು, ರಾತ್ರಿಯ ಚುಕ್ಕಿ ಚಂದ್ರಮರು ಈಗ ಕಾಣಿಸುವುದಿಲ್ಲ, ಅಲ್ಲಿ ಮತ್ತೊಂದು ಮಹಡಿ ಏಳುತ್ತಿದೆ. ಬರಿ ಧೂಳು , ಶಬ್ದ ಅಷ್ಟೇ, ಕಿಟಕಿಯಲ್ಲಿನ ಕಣ್ಣುಗಳು ಕಂಬನಿಯಲ್ಲಿ ತೊಳೆಯುತ್ತಿವೆ, ಧೂಳಿಗೋ "</div><div>ಬರೆದಿಟ್ಟು ಪುಸ್ತಕ ಮುಚ್ಚಿದೆ...ಬೆಳಗ್ಗೆ ನಾಲ್ಕರ ಮುಂಜಾವು...ಎದುರಿನ ಮನೆಯ ದೊಡ್ಡ ಜಾಗದಲ್ಲಿ ಇರುವ ಐದು ಮರಗಳಲ್ಲಿ ಹಳದಿ ನೇರಳೆ ಗುಲಾಬಿ ಬಣ್ಣದ ಹೂಗಳು ಮಂದ ಬೀದಿ ದೀಪದ ಬೆಳಕಿನಲ್ಲಿ ನಿತ್ಯ ದರ್ಶನ...ಇದು ಗೇಟ್ವೇ ಕಮ್ಯೂನಿಟಿ, ನಮ್ಮ ಮನೆಯ ಪಕ್ಕದ್ದು ಎರಡು ದೊಡ್ಡ ಸೈಟ್ ಅಲ್ಲಿ ಕಟ್ಟಿದ ಮನೆ...ದೊಡ್ಡ ಲಾನ್, ಮರಗಳು ರಸ್ತೆಯ ಬದಿಗೆ, ನಮ್ಮ ಮನೆಯ ಮಹಡಿಯ ಕೋಣೆಯ ಕಿಟಕಿಯಿಂದ ಈ ಹತ್ತು ವರ್ಷ ಅದೇ ದೃಶ್ಯ...</div><div><br></div><div>ಬೆಳಗ್ಗೆ ಐದಕ್ಕೆ ಅವರ ಮನೆಯ ಬಾಗಿಲು ತೆರೆಯುತ್ತದೆ.ಕೆಲಸದವಳು ಗುಡಿಸಿ ರಂಗವಲ್ಲಿ ಹಾಕಿ ಒಳಹೋಗುತ್ತಾಳೆ.ನಂತರ ಲಾನಿನ ಪಕ್ಕದ ರೂಮ್ ಗಾಜಿನಲ್ಲಿ ಗಂಡ ಹೆಂಡತಿ ಇಬ್ಬರೂ ಜಿಮ್ ಮಾಡುತ್ತಿರುವುದು ಕಾಣಿಸುತ್ತದೆ.ಮೊದಮೊದಲು ನನಗೆ ವಿಶೇಷ ಅನ್ನಿಸಿದ್ದು, ಅಲ್ಲಿರುವ ಅಷ್ಟು ಹೊತ್ತು ಇಬ್ಬರೂ ಅಪ್ಪಿತಪ್ಪಿ ಕೂಡ ಒಂದು ಮಾತಾಡುತ್ತಿರಲಿಲ್ಲ.ತೀರಾ ಸಹಜ ದೃಶ್ಯ ಆದ್ದರಿಂದ ಇತ್ತೀಚೆಗೆ ನಾನು ಧೀರ್ಘ ಓದಿನಲ್ಲಿ ಮುಳುಗಿಹೋಗುತ್ತಿದ್ದೆ.ಅದೇ ದೃಶ್ಯಗಳನ್ನು ನೋಡಿ ಅದರಲ್ಲಿ ಏನೂ ಸ್ವಾರಸ್ಯ ಇಲ್ಲ ಅಂತ ಅನಿಸುತ್ತಿತ್ತು...</div><div><br></div><div>ಎಂಟು ಗಂಟೆ ಆಗುವುದಕ್ಕಿಲ್ಲ ಸರಿಯಾಗಿ ನಾನು ಸ್ನಾನಕ್ಕೆ ಹೊರಡುವ ಹೊತ್ತು, ಗಂಡ ಲ್ಯಾಪ್ಟಾಪ್ ಬ್ಯಾಗ್ ಹಿಡಿದು ಬರುತ್ತಿದ್ದ, ಅವಳು ಹಿಂದೆಯೇ ಬಂದು ಟಾಟಾ ಮಾಡುತ್ತಿದ್ದಳು, ಜೊತೆಗೆ ಗಂಡ ಇವಳಿಗೊಂದು ಮುತ್ತು ಕೊಟ್ಟರೆ ವಾಪಸು ಇವಳೊಂದು ಕೊಡುತ್ತಿದ್ದಳು.ಈ ದೃಶ್ಯ ನನಗೆ ವೈಯಕ್ತಿಕವಾಗಿ ಅಪ್ಯಾಯಮಾನ.ಎಲ್ಲವೂ ಸರಿಯಿದೆ ಆ ಮನೆಯಲ್ಲಿ ಎಂಬುದರ ಸೂಚಕ.ನಾನು ನನ್ನ ಗೆಳೆಯರೊಂದಿಗೆ ಸಂಜೆ ವಾಕಿಂಗ್ ಮುಗಿಸಿ ಬರುವಾಗ, ಪಕ್ಕದ ಮನೆಯವನ ಕಾರು ಮನೆ ಎದಿರು ಜೋರು ಹಾರ್ನ್ ಹಾಕುತ್ತಿರುತ್ತದೆ.ಸಮಯವೆಂದರೆಸಮಯ. </div><div><br></div><div>ಕಮ್ಯೂನಿಟಿಯ ಯಾರೂ ಜಾಸ್ತಿ ಅವರ ಮನೆಗೆ ಹೋಗುವುದಿಲ್ಲ, ಮೊನ್ನೆ ನಮ್ಮ ಸಂಘದ ಚುನಾವಣೆಯಲ್ಲಿ ಸೆಕ್ರೆಟರಿ ಹುದ್ದೆಗೆ ಸ್ಪರ್ಧಿಸಿ ಅಂತ ಕೇಳಲು ಅವನ ಮನೆಗೆ ಹೋಗಿದ್ದಾಗ ಕೆಲಸದವನನ್ನು ಕಳಿಸಿ ಬ್ಯುಸಿ ಅಂತ ಹೇಳಿಕಳಿಸಿದನಂತೆ. ವಿಚಿತ್ರ ಅನಿಸಿತ್ತು ನನಗೆ. ನಾನೊ, ಹರೆಯದಲ್ಲಿ ಹೆಂಡತಿಯನ್ನು ಕಳೆದುಕೊಂಡ ವಿದುರ. ಮನೆಯಲ್ಲಿ ಇದ್ದೊಬ್ಬ ಮಗ ವಿದೇಶ ವಾಸಿ.ಓದು ತಿರುಗಾಟದ ಹುಚ್ಚು ನನ್ನ ಒಂದೇ ಕಡೆ ಕಟ್ಟಿ ಹಾಕಲು ಸಮರ್ಥವಾಗಿರಲಿಲ್ಲ.ಆದರೂ ಕೊನೆಗೆ ನನ್ನನ್ನೇ ಸೆಕ್ರೆಟರಿ ಅಂತ ಆರಿಸಿದ್ದರು.ಅವತ್ತು ಗೆಟ್ ಟುಗೆದರ್ ಗೆ ಕರೆಯಲು ಅವರ ಮನೆಗೆ ಹೋಗಿದ್ದೆ. ಮಾತುಕತೆಯ ನಡುವೆ ಅವನ ಹೆಂಡತಿ ಕೂಡ ಬಂದು ಸೇರಿಕೊಂಡಳು. ನೋಡಲು ಸುಂದರವಾದ ಜೋಡಿ. ಅರ್ಧ ಗಂಟೆ ಹರಟಿ ನಾನು ಹೊರಟಾಗ ಆತ'ಮತ್ತೊಮ್ಮೆ ಬನ್ನಿ'ಅಂತ ಔಪಚಾರಿಕವಾಗಿ ಆಹ್ವಾನಿಸಿದ.ಮನೆಯ ಬಾಗಿಲಿಗೆ ಬಂದು ಬರುತ್ತೇನೆ ಅಂತ ನೋಡಿದೆ.. ಅವನ ಹೆಂಡತಿಯ ಕಣ್ಣುಗಳಲ್ಲಿ ಏನೋ ನೋವಿದ್ದಂತೆ ಅನಿಸಿತು ಒಂದು ಕ್ಷಣ, ಆಕೆ ಕಣ್ಣು ತಪ್ಪಿಸಿ ಒಳ ಹೋದಳು. </div>
<div>
</div>
</div>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-62366763160012035212017-07-17T01:45:00.001-07:002017-07-17T01:45:12.366-07:00ಧಾರವಾಹಿ ಸುಗಂಧಿನಿ - ಭಾಗ ೩<div dir="ltr" style="text-align: left;" trbidi="on">
ಯಮುನೆ ಹರಿಯುತ್ತಿದ್ದಳು ಇಕ್ಕೆಲಗಳನ್ನು ಬಾಚಿ ಬಾಚಿ ತಬ್ಬಿ , ಒಮ್ಮೊಮ್ಮೆ ಮುನಿಸು ಹೊತ್ತಿನಲ್ಲಿ ಪುಂಡಾಟ ಮಾಡುವ ಮಗು, ಒಮ್ಮೊಮ್ಮೆ ಸರಳ ಸುಂದರಿ, ಒಮ್ಮೊಮ್ಮೆ ತೀರಾ ಯಾರಿಗೋ ಕಾದು ಬೇಸತ್ತವಳಂತೆ, ವೈರಾಗಿಯೊಮ್ಮೊಮ್ಮೆ, ಒಮ್ಮೊಮ್ಮೆ ಮೋಹಿನಿ, ನದಿಯೆಂದರೆ ಯಮುನೆ, ನನ್ನೆದೆಯೊಳಗೂ ಅವಳು ಹರಿಯುತ್ತಿದ್ದಳು, ತಬ್ಬಲಿತನವನ್ನು ಸಂತೈಸಿ, ಸದಾ ನಾನಿಲ್ಲವೆ ಎನ್ನುವಳು, ನನ್ನ ಭಾವದ ಹರಿವು ಅವಳ ನೀರ ಹರಿವು ಎರಡೂ ನೀರಸ ಬದುಕಿಗೆ ಆಗಾಗ ರಂಗು ತುಂಬುವ ಸುತ್ತಲ ಹಸಿರನ್ನ ನೋಡುತ್ತಾ ಕಳೆಯುತ್ತಲಿತ್ತು, ಕೈಯಿಟ್ಟರೆ ಸಾಕು ತಣ್ಣಗೆ ಕೊರೆವ ನೀರು, ಕಾಳಿಂದಿಯಲ್ಲಿ ಅಮೃತಪಾನವಾಗಿ ಬದಲಾಗುವ ಪರಿಗೆ ನಾನು ಆಶ್ಚರ್ಯ ಪಟ್ಟಿದ್ದುಂಟು ಬಹಳ ಸಲ , ನನಗೆ ನೆನಪೇ ಇದೆ, ಚಿಕ್ಕವಳಿದ್ದಾಗ ಇದೆ ದಡದಗುಂಟ ಅಜಮಾಸು ನೂರು ಯೋಜನ ಒಂದು ವಾರ ನಡೆದು ಅಲ್ಲಿ ಹಳ್ಳಿಯಲ್ಲಿ ತಂಗಿದ್ದೆವು ಅದನ್ನು ತಂದೆ "ವೃಂದಾವನ" ಅಂತ ಪರಿಚಯಿಸಿಕೊಟ್ಟಿದ್ದರು, ಅಲ್ಲಿಯ ಮಣ್ಣು ಹೂ ಹಣ್ಣು ಗೋಧಿಗೆ ಹೇಳಿ ಮಾಡಿಸಿದಂತಿತ್ತು , ಮಕ್ಕಳು ಬಲು ಚೂಟಿಯಾಗಿದ್ದರು , ಎಲ್ಲಕ್ಕಿಂತ ನನಗೆ ಆಗ ಬೆನ್ನು ಗೊತ್ತಾಗದಷ್ಟು ಚೂರು ಬಾಗಿತ್ತು , ಕಾಲೂ ,ಅಷ್ಟೇ, ಸುಮತಿ ಸುಗಣ್ಯ ರಮಣಿ ಮುಂತಾದ ಮಕ್ಕಳೊಂದಿಗೆ ತಾನು ಕಳೆದ ಆ ದಿನಗಳು ಇವತ್ತಿಗೂ ನೆನಪಿದೆ, ಅಲ್ಲಿಯ ಯಮುನೆ ಇಲ್ಲಿಯವಳಲ್ಲ ಅಂತ ಬಹಳ ಸರಿ ಅನಿಸಿದ್ದಿದೆ, ಬೆಟ್ಟ ಬಯಲು ಎರಡು ಸಮ್ಮಾನವಾಗಿ ಹಂಚಿ ಹರಿಯುತ್ತಿದ್ದ ಆ ಪ್ರದೇಶ ಕೂಡ ನಂದನ ವಂಶಸ್ಥರಿಗೆ ಸೇರಿದ್ದು ಅಂತ ತಂದೆ ಯಾವಾಗಲೂ ಕಥೆ ಹೇಳುತ್ತಿದ್ದರು.<br />
ತಟದಲ್ಲಿ ನಿಂತು ಹಣೆಯ ಮೇಲೆ ಕೈ ಇತ್ತು ದೂರದೆಡೆಗೆ ಕಣ್ಣು ಹಾಯಿಸಿದೆ , ಸುಶೇಷಣ ತನ್ನ ದೋಣಿಯನ್ನು ದಡದಲ್ಲಿದ್ದ ಮಾಮರಕ್ಕೆ ಕಟ್ಟಿ ಮಾಯವಾಗಿದ್ದ, ಬಹುಶಃ ನಿನ್ನೆ ಬಹಳ ದಣಿದಿದ್ದನೇನೋ ಎದ್ದಿರಲಿಲ್ಲ, ಉಳಿದ ಮೀನುಗಾರರು ಯಮುನೆಯ ಆ ತುದಿಯಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು . ಆ ದಡ ತಲುಪಿಸಲು ಯಾವ ಮಾಯಾವಿ ಬಂದಾನು? ಆದರೆ ನನಗೆ ಅಲ್ಲಿಗೆ ತಲುಪಲೇ ಬೇಕಿತ್ತು. ಅದೂ ಬಹಳ ತುರ್ತಾಗಿ ರಾಣಿ ರೋಹಿಣಿಯ ಸಂದೇಶ ಹೊತ್ತು , ತಾಯಿ ದೇವಕಿಯನ್ನು ನೋಡಲು, ಮತ್ತೆ ಮೈಯೆಲ್ಲಾ ಪುಳಕಿಸಿತು,ಕೈಯಲ್ಲಿದ್ದ ಗಂಧ ಚಂದನದ ಪೆಟ್ಟಿಗೆ, ಜತೆಗೆ ರಾಣೀವಾಸದವರು ನೀಡಿದ್ದ ಪುಟ್ಟ ಬುಟ್ಟಿ , ಕೈಗಳು ನೋಯಲಾರಂಭಿಸಿತ್ತು<br />
ಇದ್ದಕ್ಕಿದ್ದಂತೆ ಆ ಕಡೆಯಿಂದ ಒಂದು ದೋಣಿ ಇತ್ತ ಬರುತ್ತಿರುವಂತೆ ಕಾಣಿಸಿತು, ಓ ಅದು ಸೈನಿಕರ ದೋಣಿ ಅವರಿಗೆ ಇಲ್ಲೇನು ರಾಜಕಾರ್ಯ, ನನಗರ್ಥವಾಗಲಿಲ್ಲ, ಉಗ್ರಸೇನ ಮಥುರೆಯ ಪಟ್ಟದಲ್ಲಿದ್ದಾಗ ನಂದನನ್ನು ಮತ್ತು ನಂದನ ತಂದೆಯನ್ನು ಪ್ರಾಣಕ್ಕೆ ಸ್ನೇಹಿತರಂತೆ ನೋಡಿದ್ದ, ಆದರೆ ಅವನ ಇದ್ದೊಬ್ಬ ಮಗ ರಾಜ್ಯದ ಮಾನವನ್ನು ಸೂರೆಗೈಯತೊಡಗಿದ, ಸಾಲದು ಅಂತ ತಂದೆಯನ್ನು ಪಟ್ಟದಿಂದ ಕೆಳಗಿಳಿಸಿ ಸ್ವಯಂ ಪಟ್ಟಾಭಿಷೇಕ ಮಾಡಿಕೊಂಡ, ತಂದೆಯ ಸಲಹೆಗಳಿಗೆ ಕಿವಿಗೊಡದೆ, ರಾಜ್ಯದ ಸಾಮಂತರಿಗೆ ಕೊಡಲಾಗುತ್ತಿದ್ದ ಗೌರವ ಮತ್ತು ಮರ್ಯಾದೆ ಕಿತ್ತೆಸೆದು ತೆರಿಗೆ ಮತ್ತು ದಂಡಗಳನ್ನು ಹೆಚ್ಚಿಸಿದ. ಅವನ ಮಾತು ಕೆಳದವರನ್ನು ಮೂಲೆಗೊತ್ತಿದ, ಅಂತೆಲ್ಲಾ ಹಲವಾರು ಕಥೆಗಳು ಆ ದಡದಿಂದ ತೇಲಿ ಬರುತ್ತಿದ್ದವು , ನಾನು ರಾಜಕಾರಣ ಅರಿತವಳಲ್ಲ, ಆದರೂ ನಮ್ಮ ವ್ರಜ ಭೂಮಿಗೆ ಯಾವತ್ತೂ ಕೆಟ್ಟದ್ದು ತಡೆದುಕೊಳ್ಳುವ ಶಕ್ತಿ ಇರಲಿಲ್ಲ, ಅದು ನಂದ ರಾಜನಂತೂ ರಿಷಿ ಸಮಾನ ರಾಜ, ಆಚಾರ ವಿಚಾರದಲ್ಲಾಗಲಿ ಅವನು ಯಾರನ್ನು ನೋಯಿಸಿದ್ದೆ ಇಲ್ಲ, ಮಕ್ಕಳಿಂದ ವೃದ್ಧರವರೆಗೆ ಅದೇ ಆದರೆ ಅದೇ ಪ್ರೀತಿ, ಅಷ್ಟು ಸಮ ತೂಗುವ ಅವನ ಪ್ರಾಮಾಣಿಕತೆಯನ್ನು ಇತ್ತೀಚಿಗೆ ಕಂಸ ಪ್ರಶ್ನಿಸಲಾರಂಭಿಸಿದ್ದ , ಕಂಸ ನಂದನನ್ನು ಬಲ್ಲದಿದ್ದವನೇನಲ್ಲ , ವಸುದೇವ ನಂದ ಕಂಸ ಮೂವರ ಗೆಳೆತನ ಹಳೆಯದ್ದೇ, ಯಾವತ್ತೋ ಒಮ್ಮೆ ವಾಸುದೇವ ಕುಂತಿಯನ್ನು ಕಂಸನಿಗೆ ಕೊಟ್ಟು ವಿವಾಹ ನೆರವೇರಿಸಬೇಕೆಂದುಕೊಂಡಿದ್ದನಂತೆ, ಅವನೋ ಕುಂತಲ ರಾಜ್ಯದ ರಾಜಕುಮಾರನಾದರೂ ಕಂಸನ ಮೇಲೆ ಅತಿಯಾದ ವಿಶ್ವಾಸ, ಅದೆಲ್ಲವೂ ಈಗ ಮರೆತ ಕಥೆ.<br />
<br />
ದೂರದಲ್ಲಿದ್ದ ದೋಣಿ ಹತ್ತಿರಕ್ಕೆ ಬಂದಿತ್ತು , ಅದು ಎರಡೆರಡು ಸೈನಿಕರನ್ನು ಹೊತ್ತು ತಂದಿತ್ತು ಒಬ್ಬ ಕಾಂಗದ , ಮತ್ತೊಬ್ಬ ನಿರೂಪ ಇಬ್ಬರು ಇದು ಎರಡನೇ ಸಲ ಬರುತ್ತಿರುವುದು, ಪಾಪ ಅವರೇನು ಮಾಡಿಯಾರು, ಜೀವಂತ ಇರಬೇಕಾದರೆ ರಾಜ ಹೇಳಿದ ಕೆಲಸ ಮಾಡಲೇಬೇಕು, ನನ್ನೆದೆಯಲ್ಲಿ ಯಾಕೋ ಅವರಿಗಾಗಿ ತುಸು ಆರ್ದ್ರ ಭಾವವೊಂದು ಅವತ್ತೇ ಹುಟ್ಟಿತ್ತು, ಹಾಗೆಯೇ ನಂದರಾಜರ ಬಗ್ಯೆ ಕಾಳಜಿಯೂ, ದಡಕ್ಕೆ ದೋಣಿ ಕಟ್ಟಿ ಇಬ್ಬರೂ ಕಟ್ಟಿ ಹಿಡಿದು ಇಳಿದರು , ನನ್ನ ನೋಡುತ್ತಲೇ ಪರಿಚಿತ ಭಾವವೊಂದು ನಗೆಯಲ್ಲಿ ಕೊನೆಯಾಯಿತು, "ತ್ರಿವಕ್ರೆ, ನಂದರಾಜರು ಲಭ್ಯವಿರುವರೇನು? ನಾವು ಬಂದ ವಿಷಯ ಅವರಿಗೆ ತಿಳಿಸಬೇಕಿತ್ತು" ಸಣ್ಣದಾದ ನಡುಕವೊಂದು ನನ್ನೇ ಆವರಿಸಿತು, ತಕ್ಷಣ ಎಚ್ಚೆತ್ತು ನುಡಿದೆ"ನನಗೆ ತಿಳಿಯದು, ನೀವು ಅರಮನೆಯ ಹತ್ತಿರ ಹೋಗಿ ಕೇಳಬೇಕು" "ನೀನು ದೋಣಿಗಾಗಿ ಕಾಯುತ್ತಿರುವೆಯಾ ಸಹೋದರಿ, ನಮ್ಮ ವಿಶಂಕು ನಿನ್ನ ಆ ದಡಕ್ಕೆ ತಲುಪಿಸಿ ಬರುವ, ಸರಿಯೆನು?" ನಿರೂಪನ ದನಿ, ಅದರಲ್ಲಿದ್ದ ನಿಜ ಕಾಳಜಿಗೆ ಕರಗಿದೆ ನಾನು, ನನ್ನ ಯೋಗ್ಯತೆಯನ್ನು ಅರ್ಹತೆಯನ್ನು ಕೇವಲ ನನ್ನ ರೂಪದಿಂದಲೇ ಅಳೆವವರ ಮಧ್ಯೆ ನನಗೆ ಗೌರವಿಸಿ ಅರ್ಥೈಸಿಕೊಳ್ಳುವವರು ಬಹಳೇ ಕಮ್ಮಿ. ಮರು ಮಾತಾಡದೆ ದೋಣಿ ಹತ್ತಿ ಕುಳಿತೆ. ದೋಣಿ ಸಾಗಿತು ಯಮುನೆಯ ನೊರೆ ನೊರೆ ತೆರೆ ಸೀಳುತ್ತ.<br />
(ಮುಂದುವರೆಯುವುದು)</div>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-55363981481142319072017-07-13T06:35:00.002-07:002017-07-13T06:35:23.539-07:00ಅವನಿಗೆ <div dir="ltr" style="text-align: left;" trbidi="on">
<br />
ಅವನಿಗೆ ,<br />
ಕೇಳು <br />
ತಣ್ಣನೆಯ ನೀರು ತಲೆಯ ಮೇಲೆ ಬೀಳುತ್ತಿತ್ತು, ಯಾವುದೋ ಜನುಮದ ಪಾಪ ತೊಳೆಯುವಂತೆ ಕಣ್ಣಿಂದ ಜಾರಿದ ಹನಿಯೊಂದು ನೀರ ಜತೆ ಸೇರಿ ಹರಿದು ಹೋಯಿತು ಅದೆಷ್ಟು ಕಣ್ಣ ಹನಿಗಳು ಸೇರಿ ಸಾಗರ ಉಪ್ಪಾಯಿತು? ನಾನು ಕಣ್ಣೊರಸಿ ಬಿಕ್ಕು ತಡೆ ಹಿಡಿದೆ. ಕಾರಣವೇ ಇಲ್ಲದೆ ಬರುವ ಕಣ್ಣೀರು ಒಂದೋ ಸುಖದ್ದು ಕೃತಜ್ಞತೆಯದ್ದು ಮತ್ತೊಂದು ಬಹುಶಃ , ಗತ ಕಾಲದ ನೆನಪುಗಳದ್ದು ಕಹಿಯಾದ್ದು. ನನ್ನ ಕಣ್ಣಿನ ಹನಿ ಅವೆರಡಕ್ಕೂ ಸೇರಿದ್ದಾಗಿರಲಿಲ್ಲ, ನೀರು ಹಿಡಿದಿಟ್ಟ ಮೋಡ ನಾನು , ಸಣ್ಣದ್ದನ್ನು ಸಹಿಸದ ಸೂಕ್ಷ್ಮ ಮನಸ್ಥಿತಿ ಹಾಗಿದ್ದರೆ ಒಳ್ಳೆಯದಿತ್ತೇನೋ , ಆದರೆ ಎಲ್ಲ ಬದಲಾಯಿತು <br />
<br />
ಪೂಜೆ ಮುಗಿಸಿ ಕೂತಾಗ ಏನೋ ಮರೆತಂತನಿಸಿ ಕ್ಯಾಲೆಂಡರ್ ನೋಡಿದೆ, ಜುಲೈ ಹದಿಮೂರು ಅಂತ ತೋರಿಸುತ್ತಿತ್ತು ತಟ್ಟನೆ ನೆನಪಾಯಿತು ಇವತ್ತು ಅವನ ಜನ್ಮದಿನ , ಒಂದು ಸಣ್ಣ ಸೆಳಕು ಎದೆಯಲ್ಲಿ, ವಾಟ್ಸಾಪಿನಲ್ಲಿ ನೋಡಿದೆ ನನ್ನ ಶುಭೋದಯಕ್ಕೆ ನಿತ್ಯ ಬರುತ್ತಿದ್ದ ಉತ್ತರವಿಲ್ಲ, ಅವನ ಸಣ್ಣ ಮುನಿಸಿಗೆ ಕಾರಣ ನನಗೆ ಗೊತ್ತಿಲ್ಲದ್ದೇನು ಅಲ್ಲ, ಆದರೆ ನಾನು ಸಂಸಾರದ ನೂರು ಬಳ್ಳಿಗಳಲ್ಲಿ ಬಂಧಿತಳು , ಸೆರಗಲ್ಲಿ ಕೆಂಡದಂತ ಬದುಕನ್ನು ಕಟ್ಟಿಕೊಂಡು ನಿತ್ಯ ಒದ್ದಾಡುತ್ತಿರುವವಳು ಯಾವತ್ತೋ ಅದನ್ನು ಕಿತ್ತು ಓಡಿಹೋಗುತ್ತೇನೆ ಎನ್ನುವ ಹುಚ್ಚು ಭರವಸೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮೋಹವನ್ನು ಮಮತೆಯನ್ನು ಬಟ್ಟೆಯಾಗಿ ಸುತ್ತಿಕೊಂಡವಳು , ಮನಸ್ಸೇನೋ ಸದಾ ಸಂಚಾರಿ ಆದರೆ ನಿತ್ಯ ಕೆಲಸಕ್ಕೆ ಅದನ್ನ ಕಟ್ಟಿ ಹಾಕಲೇ ಬೇಕಲ್ಲ, ಬೇಕೆಂದಾಗ ಬೇಕೆನಿಸಿದವರನ್ನ ನೋಡುವ ಅವಕಾಶ ಅದೆಷ್ಟು ಜನಕ್ಕೆ ಸಿಕ್ಕೀತು ನಾನಂತು ಹುಟ್ಟಾ ಪಾಪಿ ಕಾಲಿಟ್ಟ ಕಡೆ ಮುಳ್ಳು ಮನಸ್ಸಿನ ಹೃದಯಗಳು ಹೂಗಳ ಮುಖವಾಡ ಹಾಕಿ ಚುಚ್ಚುವಾಗಲು ಸಹಿಸಿ ನಾಳೆ ಎನ್ನುವ ಆಶಾವಾದಕ್ಕೆ ಜೋತು ಬಿದ್ದವಳು ಆದರೆ ಗಂಡು ಎನ್ನುವ ಪ್ರಭೇದದ ಬದುಕು ಈ ಭೂಮಿಯಲ್ಲಿ ಬಹಳ ಸುಲಭವಿದೆ, ಇಷ್ಟೆಲ್ಲಾ ಕಷ್ಟ ಪಡಬೇಕಿಲ್ಲ ಅಲ್ಲವೇ, ಬಹುತೇಕ ಎಲ್ಲ ಸಾರವಜನಿಕ ಮತ್ತು ಖಾಸಗಿ ಜಾಗಗಳಲ್ಲಿ ಜಗತ್ತು ಹೇಗಿದ್ದರೂ ಗಂಡು ಎನ್ನುವ ಪಟ್ಟ ಕಟ್ಟಿ ವಿನಾಯತಿ ಕೊಟ್ಟುಬಿಡುತ್ತದೆ <br />
ನಾನು ಯೋಚನೆಗಳಲ್ಲಿ ಕಳೆದು ಹೋಗಿದ್ದೆ, ನನ್ನ ಮನಸ್ಸು ಮಾತ್ರ ನೋಡ ಬಯಸುತ್ತಿತ್ತು, ಅವನನ್ನ,ಆದರೆ ನಾನು ನೋಡ ಬಯಸಿದ್ದ ಅವನು ಅವನಾಗೆ ಉಳಿದಿರಲಿಲ್ಲ, ಸುಮ್ಮನೆ ಮುನಿಸು, ನಮ್ಮ ಬದಲಾದ ಬದುಕುಗಳ ಜತೆ ಜತೆಗೆ ಬದಲಾದ ಪ್ರಾಮುಖ್ಯತೆಗಳನ್ನ ಅರ್ಥೈಸದೆ ಹಳೆಯ ನೆನಪುಗಳಿಗೆ ಅದು ಕೊಡುವ ನೋವುಗಳಿಗೆ ನಾನೇ ಕಾರಣ ಅನ್ನುವ ಮಾತು ನನ್ನ ಚುಚ್ಚಿ ನೋಯಿಸುವುದು, ನನಗೆ ನಿಜವೆಂದರೆ ಈ ಜಗತ್ತಿನಲ್ಲಿ ಯಾರು ಬೇಕಿಲ್ಲ, ನೀನೊಬ್ಬ ಸಾಕು ಎನ್ನುವ ನನ್ನ ಮನಸ್ಥಿತಿಯನ್ನ ಮುಚ್ಚಿಡಲು ಪ್ರತಿಬಾರಿಯೂ ಪ್ರಯತ್ನಿಸಿ ಸೋತಿದ್ದೇನೆ,ಮತ್ತೆ ಮತ್ತೆ ಬದಲಾಗುವ ಪರಿಸ್ಥಿತಿಗಳ ನಡುವೆಯೂ ನೀನೊಬ್ಬ ಮಾತ್ರ ಬದಲಾಗದ ಅದೇ ಸ್ಥಾನದಲ್ಲಿ ಹೃದಯದಲ್ಲಿ ಕೂತಿದ್ದೀಯಾ ಎನ್ನಲು ಪ್ರಯತ್ನಿಸಿ ಸೋತಿದ್ದೇನೆ ಕೊನೆಗೆ ಇದೆಲ್ಲವೂ ಹನಂಬಿಕೆ ಇಲ್ಲದ ಅವನಲ್ಲಿ ಹೇಳುವದಕ್ಕಿಂತ ಮೌನಿಯಾಗಿರುವುದೇ ಲೇಸು ಅನ್ನಿಸಿ ಮೌನವು ಆಗಿಬಿಟ್ಟಿದ್ದೇನೆ, <br />
ನದಿ ತನ್ನ ಪಾತ್ರಗಳನ್ನು ಸದಾ ಬದಲಿಸಬೇಕಾಗುತ್ತದೆ,ಭೂಮಿಯ ಏರಿಳತಗಳಿಗೆ ತಕ್ಕಂತೆ ಆದರೆ ಕೊನೆಯ ತನಕವೂ ದಡಗಳೆರಡೂ ನದಿಯೊಡನೆ ಮೌನವಾಗಿ ಪಯಣಿಸುತ್ತದೆ, ನೋವಿನಲ್ಲಿ ನಲಿವಿನಲ್ಲಿ ಅದೇ ತಬ್ಬುಗೆಯಲ್ಲಿ ಸಂತೈಸುತ್ತಾ ಸಾಗರನ ಒಡಲು ಸೇರುವವರೆಗೂ , ಆ ಮಹಾಯಾತ್ರೆಯಲ್ಲಿ ನದಿಗೆ ಈ ಸಾಂಗತ್ಯ ಕೊಡುವ ಆತ್ಮಬಲ ಬಣ್ಣಿಸಲಾಗದ್ದು, ನನ್ನ ಚಂದ್ರಮ ಹಾಗೆಯೆ , ಅವನು ಜತೆಗಿರಲಿ ಇಲ್ಲದಿರಲಿ, ಮುನಿಸಿರಲಿ ಸೊಗವಿರಲಿ ಅವನಿರದೆ ಈ ಬದುಕೆಂಬ ನದಿಗೆ ಯಾವದಡಗಳಿಲ್ಲ ನಾನೆಲ್ಲಿ ಹೋದರು ಅವನ ನೆನಪಿನ ಬಾಹುಗಳು ಕಾಳಜಿಯ ಕಣ್ಣುಗಳು ಸದಾ ನನ್ನ ಜತೆಗಿರುತ್ತವೆ, ಜೀವವೊಂದು ಮತ್ತೊಂದು ಜೀವಕ್ಕೆ ದೇಹದ ಅರಿವಿಲ್ಲದೆ ಅಂಟಿಕೊಂಡ ಹಾಗೇ <br />
ಅ ವನೇ, ನಾನು ಉರಿಯುತ್ತಿರುತ್ತೇನೆ , ನಿನ್ನ ಅದೃಶ್ಯ ಸಹಾಯದೊಂದಿಗೆ, ನಿನ್ನ ಮುನಿಸು ಕರಗಲಿ, ಮತ್ತದೇ ಬೆಚ್ಚನೆಯ ಪುಳಕ ಇಬ್ಬರ ಹಾದಿಯಲ್ಲಿ ಚೆಲ್ಲಿಕೊಳ್ಳಲಿ, ನಿನ್ನ ಅರೋಗ್ಯ ನಗು ನನಗಾಗಿಯಾದರೂ ಸದಾ ನಳನಳಿಸುತ್ತಿರಲಿ <br />
ನಿತ್ಯವೂ ಹುಟ್ಟಿದ ಹಬ್ಬವಾಲಿ <br />
ಇಂತಿ ನಿನ್ನವಳಾಗದ ನಿನ್ನವಳು ಇವಳು <br />
<br /></div>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-70575879286136583112016-12-15T07:20:00.001-08:002016-12-15T07:20:54.762-08:00ಬದುಕೆಂಬ ಬೀಸುಗಲ್ಲು<p dir="ltr">"ಕೈ ನೋವು ಬಂತೆನಾ ನಿಂಗೆ, ನಾಕೊಳ್ಳು ಹೂರಣ ಬೀಸದು ಸುಲಭದ್ ಕೆಲ್ಸಲ್ಲ, ಏಳು , ಈ ಒಳ್ಳು ಆನೆ ಬೀಸ್ಕೊಡ್ತಿ" ಅಪ್ಪನ ಕಣ್ಣುಗಳನ್ನೆ ನಿಟ್ಟಿಸಿದಳು ನಕ್ಷತ್ರ, ಅಲ್ಲಿ ಕಕ್ಕುಲಾತಿ ಬಿಟ್ಟರೆ ಬೇರೇನಿರಲಿಲ್ಲ, "ಇಲ್ಲೆ ಅಪ್ಪ, ಸುಸ್ತೇನು ಆಗಲ್ಲೆ, ಇನ್ನೊಂದು ಒಳ್ಳಾಗ್ತು ಅಷ್ಟೆಯಾ, ನೀನು ಬ್ಯಾಗ ಪೂಜಿಗೆ ರೆಡಿ ಮಾಡ್ಕ್ಯ" ಎಂದವಳೆ ಬೇಳೆ ಮಿಶ್ರಣವನ್ನ ಹದಾ ಸೌಟಲ್ಲಿ ಒರಳಿಗೆ ದಬ್ಬತೊಡಗಿದಳು, ದೀಪಾವಳಿಯಲ್ಲವೆ ಕೆಲಸದ ಹೊರೆ ಕಾಯುತ್ತಿತ್ತು, ಸೂರ್ಯ ಮತ್ತು ಜಿತುವಿನ ಮಾತು ಜಗಲಿಯಿಂದ ಒಳ್ಳುಕಲ್ಲು ಇಟ್ಟಿದ್ದ ಹಿತ್ತಿಲವರೆಗು ಕೇಳುತ್ತಿತ್ತು, ಹೌದಲ್ಲ, ತೋರಣ ಕಟ್ಟಬೇಕು, ತುರುರೊಟ್ಟಿ ಚೆಂಡು ಶೇವಂತಿಗೆ ಹಾರ ಕೊಟ್ಟಿಗೆ ಯಲ್ಲಿ ನ ಅಷ್ಟೂ ಜೀವಗಳಿಗೆ, ಮೊನ್ನೆ ಬಂದವನೆ ಜಿತು ಅವಕ್ಕೆ ಎಣ್ಣೆ ನೀರು ಹಾಕಿ ಹೇನು ನೊಣ ತೆಗೆದು ನೀಟಾಗಿ ಸ್ನಾನ ಮಾಡಿಸಿದ್ದ, ಬೆಳ್ಳಿ ದನಕ್ಕೆ ಅವನ ದನಿ ಕೇಳಿದರೆ ಖುಷಿ, ಎರಡು ಸಾರಿ ಹೆಚ್ಚೆ ಅಂಬಾ ಅನ್ನುತ್ತಾಳೆ, ಅಪ್ಪ ಅವುಗಳನ್ನು ಪ್ರಾಣಿಗಳಲ್ಲ ದೇವತೆಯರು ಅನ್ನುತ್ತಿದ್ದ, ಸಮೃದ್ಧ ಹಾಲು ಹೈನು, ಹಸಿರಾದ ತೋಟ ಆದರು ತಾಯಿಲ್ಲದ ತವರು ಸಂಕಟವೆ, ಅಂಟಾಗಿ ಉಂಡೆ ಕಟ್ಟುವ ಹದಕ್ಕೆ ಬಂದು ನುಣ್ಣಗಾದ ಹೂರಣವನ್ನು ತೆಗೆದಳು ನಕ್ಷತ್ರ, ಒಳ್ಳು ಕಲ್ಲಿಗೆ ನೆನೆಯುವಷ್ಟು ನೀರು ಬಸಿದು ಏಳುವ ವೇಳೆಗಾಗಲೇ ಒಳಗಿನಿಂದ " ಈಶಾನ ಸರ್ವ ವಿದ್ಯಾನಾಂ ಈಶ್ವರ ಸರ್ವ ಭೂತಾನಾಂ, ಬ್ರಹ್ಮಾಧಿಪತಿರ್ ಬ್ರಹ್ಮಣೋಧಿಪತಿರ್ ಬ್ರಹ್ಮ, ಶಿವೋಮೆ ಅಸ್ತು ಸದಾ ಶಿವೋಹಮ್" ಅಂತ ಅಪ್ಪನ ಮಂತ್ರ ಧಾರೆಯಲ್ಲಿ ಕಳೆದು ಹೋದಳು ಕೈಗಳು ಯಾಂತ್ರಿಕವಾಗಿ ಕೆಲಸಗಳನ್ನು ಮಾಡುತ್ತಿದ್ದರೆ ಆಕೆ ನೆನಪುಗಳ ಲೋಕದಲ್ಲಿ ಅಮ್ಮನೆದುರು ಕೂತಿದ್ದಳು, ಅದೇ ಅಮ್ಮ, ಆರ್ದ್ರ ಕಣ್ಣಿನ ಗಂಟಲೊಳಗಡೆಯೆ ಹೂತುಹೋಗುತ್ತಿದ್ದ ಮಾತಿನ ಅಮ್ಮ, ಒಟ್ಟು ಕುಟುಂಬದ ಗಾಣದೆತ್ತು, ಕೆಲಸದವರಿಂದಲು ಕೂಡ ಬೋಳೆ ಅಮ್ಮ ಅನಿಸಿಕೊಂಡ ತನ್ನಮ್ಮ, ಎದುರು ಕೂತು ಮಾತಾಡುತಿದ್ದಳು" ಬ್ಯಾಡ ಕೂಸೆ, ನಿಂಗವ ಇಷ್ಟ ಹೇಳಿ ಸೈತ ಯಾರೆದ್ರಿಗು ಹೇಳಡ, ಮದ್ಲೆ ಮನೆಲಿ ನಿಮ್ಮಪ್ಪ ಕೋಲೆಬಸವ, ಆನು ದನಿ ಹೂತ್ ಹೋದೋಳು, ನಿನ್ ಬೆನ್ನಿಗೊಬ್ಬ ತಮ್ಮ ಇದ್ದ ಹೇಳಿ ಮರೆಯಡ, ಆನಂತು ಈ ಸಂಸಾರಕ್ಕೆ ತೇದು ತೇದು ಜೀವ ಹೈರಾಣ ಮಾಡ್ಕ್ಯಂಡಿ, ಆದ್ರು ಮಾತು ಕೇಳದು ತಪ್ಪದಿಲ್ಲೆ, ನೀ ಮತ್ತೆ ನಂಗಳ ತಲೆ ಮ್ಯಾಲೆ ಚಪ್ಪಡಿ ಕಲ್ಲು ಹಾಕಡ, ಆನಂತು ಬದ್ಕದಿಲ್ಲೆ, ಜನ ಮಾತು ಕೇಳೇ ಕೇಳೆ ಸತ್ತೋಗ್ತಿ" ಆಕೆಯ ಕಣ್ಣುಗಳು ಆಹ್, ಅದು ಕಣ್ಣಲ್ಲ ಸಾಗರ, ಪೂರ್ತಿ ನೀರು ತುಂಬಿತ್ತು, ತನಗೆ ವಿಚಿತ್ರ ಅನ್ನಿಸಿತ್ತು, ಯಾರೋ ಜನಕ್ಕಾಗಿ ಅಮ್ಮ ತನ್ನ ಮಗಳಬಲಿ ಕೊಡುತ್ತಾಳೆ ಜೀವ ತೆಗೆದುಕೊಳ್ಳುತ್ತಾಳೆ ಅನ್ನುವುದು ಅತ್ಯಂತ ಸೋಜಿಗ ತರುವ ವಸ್ತುವಾಗಿತ್ತು, ಜತೆಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು, "ಬೇರೆ ಯಾರ್ಜೊತಿಗಾದ್ರು ಎನ್ ಮದ್ವೆ ಆಗದಾದ್ರೆ ನಾನೆ ಹೋಗಿ ಚೌಡಿ ಹೊಳಿಗೆ ಹಾರ್ಕತ್ತಿ, ಈ ಮಗಳು ನಿಂಗಳ್ ಪಾಲಿಗೆ ಸತ್ತೋದ ಅಂದ್ಕಳಿ" ಅಂದವಳೆ ಎದ್ದು ಮೆತ್ತು ಹತ್ತಿ ಧಡಾರ್ ಅಂತ ಬಾಗಿಲಿಳೆದುಕೊಂಡಿದ್ದೆ ತಾನು, ಅಮ್ಮನ ಸ್ವಭಾವವೆ ಅದಾಗಿತ್ತಾ? ಮೊದಲನೆಯ ಸೊಸೆ, ಮೂರು ಜನ ಅಣ್ಣ ತಮ್ಮಂದಿರು ಇರುವ ಮನೆಗೆ ಅಮ್ಮ ಎರಡು ಹಸು, ಒಂದು ಒಳ್ಳ್ಕಲ್ಲು ಒಂದು ಟ್ರಂಕು ಹಿಡಿದು ಗೃಹ ಪ್ರವೇಶ ಮಾಡಿದವಳು, ಅತ್ತೆ ಮಾವ ಇಬ್ಬರು ಇಲ್ಲದ ಸಂಸಾರಕ್ಕೆ ದಿಕ್ಕಾದವಳು, ಅಪ್ಪನೋ ಬೋಳೆಶಂಕರ, ತಮ್ಮಂದಿರು ಮದುವೆಯಾದರು, ಅವರ ಹೆಂಡದಿರಿಗೆ ಪೇಟೆಯ ಹುಚ್ಚು, ಒಬ್ಬಳು ಸದಾ ಸಾಗರದ ತವರುಮನೆಯಲ್ಲಿ ಝಾಂಡ, ಮತ್ತೊಬ್ಬಳು ಕೋಣೆಯಿಂದ ಕೆಳಗಿಳಿಯುತ್ತಿರಲಿಲ್ಲ, ಅವರಿವರ ಮಾತುಗಳು ಅಮ್ಮನ ಕಿವಿಯಲ್ಲಿ ಅದ್ಹೇಗೆ ಬೀಳುತ್ತಿತ್ತೋ, ,,"ಜನ ನೂರ್ ಹೇಳ್ಲಿ, ನಂಗವು ನಿಯತ್ತಲಿದ್ವಲ, ದೇವ್ರು ಕಾಯ್ತ, ಸುಮ್ನಿರು" ಅಂತ ಸಮಾಧಾನಿಸುತ್ತಿದ್ದ ಅಪ್ಪನ ಮಾತುಗಳು ಅವಳೆದೆಗೆ ನಾಟುತ್ತಲೆ ಇರಲಿಲ್ಲ, ಸದಾ ಯೋಚನೆಯಲ್ಲಿಯೆ ಇರುತ್ತಿದ್ದಳು, ತನಗು ಸದಾ ಅದೇ ಉಪದೇಶ" ಜನ್ರ ಬಾಯಿಗೆ ಶಿಕ್ಕಡ ಕೂಸೆ, ಜೀವ ಇದ್ಹಾಂಗೆ ಸಾಯಿಸ್ಬುಡ್ತ, ಒಳ್ಳೆ ಕಡಿಗೆ ನಿನ್ ಮದ್ವೆ ಆದ್ರೆ ಸಾಕು" ವಿಧಿಯ ಆಟ ಬೇರೆಯೆ ಇತ್ತು, ಹತ್ತು ವರ್ಷದಿಂದ ಪರಿಚಿತ ಕೈಸಾಲಿನ ಹುಡುಗ ಸೂರ್ಯನ ಸ್ನೇಹ ಸೆಳೆಯತೊಡಗಿತ್ತು, ಅವನು ಡೆಲ್ಲಿಗೆ ಹೊರಟು ನಿಂತಿದ್ದ, ತಾನು ನಿರ್ಧಾರ ಮಾಡುವಂತದ್ದೇನಿತ್ತು, ಜಾತಿಯವನೆ, ಮನೆಯಲ್ಲಿ ಅನುಕೂಲಸ್ಥ, ಅದೆಲ್ಲಕ್ಕಿಂತ ತಾನು ಒಲಿದದ್ದು ಅಪ್ಪನ ಸ್ವಭಾವಕ್ಕು ಅವನ ಸ್ವಭಾವಕ್ಕು ಇದ್ದ ಸಾಮ್ಯತೆಗೆ, ಅಮ್ಮನಿಗೆ ಅದೂ ಒಂದಿ ಮರ್ಯಾದೆ ತೆಗೆಯುವ ವಿಷಯವಾಗಿತ್ತು, ಯಾಕೆಂದರೆ ಅವ ಸಗೋತ್ರ, ಸಗೋತ್ರದ ಸಂಬಂಧಗಳು ಅಣ್ಣ ತಂಗಿ ಅಂತಾನೆ ಪರಿಗಣಿಸಲ್ಪಡುತ್ತದೆ ಅಂತ ಚಿಕ್ಕಪ್ಪಂದಿರು ಮಾತಾಡುತ್ತಿದ್ದದ್ದು ತಾನೂ ಕೇಳಿಸಿಕೊಂಡಿದ್ದಳು, ಅವರಿಗೂ ಹೆಣ್ಮಕ್ಕಳಿದ್ದರು ಎನ್ನುವುದನ್ನು ಮರೆತಂತೆ ಅವರು ಮಾತಾನಾಡುತ್ತಿದ್ದ ಪರಿ ತನ್ನ ಹಟವನ್ನು ಇನ್ನೂ ಹೆಚ್ಚಿಸಿತ್ತು, ಆ ಸಮಯದಲ್ಲಿ ಅಪ್ಪ ಜತೆ ನಿಂತಿದ್ದ, ಮಠದವರು ಸಗೋತ್ರ ವಿವಾಹ ನಿಶ್ಚಯಿಸಿದ್ದಕ್ಕೆ ಸೀಮೆಯ ಜನರನ್ನೆಲ್ಲ ಕರೆದು ಅವರೆದುರು ಅಪ್ಪನಿಗೆ ಛೀಮಾರಿ ಹಾಕಿದ್ದರು, ಆದರೆ ಅಪ್ಪನ ಮಾತೊಂದೆ" ನನ್ನ ಮಗಳು ಯಾವ ತಪ್ಪು ಮಾಡಿಲ್ಲ, ಅವಳಿಷ್ಟ ಪಟ್ಟರೆ ಹೊಲೇರ ಹುಡುಗಂಗೆ ಕೊಟ್ಟು ಬೇಕಾದರೆ ಮದುವೆ ಮಾಡತ್ತಿನಿ' ಅಪ್ಪನಲ್ಲೊಂದು ಅಂತ ಮನಸ್ಥಿತಿ ಇದ್ದದ್ದು ತನಗೆ ಗೊತ್ತಾದದ್ದೆ ಅವಾಗ, ತಾನು ರೂಪದಲ್ಲೆನೊ ಅಪ್ಪನ ಪಡಿಯಚ್ಚು ಆದರೆ ಕಣ್ಣುಗಳು ಮಾತ್ರ ಅಮ್ಮನವೆ ಅಂತ ಅಪ್ಪಯಾವಾಗ್ಲು ಹೇಳ್ತಿದ್ದರು, ಅಪ್ಪ ಗಟ್ಟಿ ನಿಂತು ಮದುವೆ ಮಾಡಿಸಿದರು, ಆದರೆ ಅಮ್ಮ ಮನಸ್ಪೂರ್ವಕ ಆಶೀರ್ವಾದ ಮಾಡಲೆ ಇಲ್ಲ, ಕೊಂಡಿ ಕಳಚಿದ ಬೇರಾದ ತಾನು ಪೇಟೆಗೆ ಬಂದೆನಾದರು ಮತ್ತೆ ಮನೆಯ ಸಂಪರ್ಕ ದಕ್ಕಲೆ ಇಲ್ಲ, ಆದರೆ ಜಿತು ಎಸ್ ಎಸ್ ಎಲ್ ಸಿ ಮುಗಿಸಿದವ ಬೆಂಗಳೂರಲ್ಲಿ ಪಿಯುಸಿ ಓದತಿದ್ದಾನೆ ಅಂತ ಊರಗೌಡರ ಮಗ ಪ್ರಶಾಂತ ಸಿಕ್ಕಿದಾಗ ಹೇಳಿದ್ದ, ತನ್ನ ಮನಸ್ಥಿತಿಯ ಅರಿವಿದ್ದ ಸೂರ್ಯ ತನ್ನ ಜತೆಗೆ ಬಂದು ಕಾಲೇಜು ಹುಡುಕಿದ್ದ, ತಾನು ಬರುವಾಗ ಐದನೆ ತರಗತಿಯಿದ್ದ ಮುದ್ದು ಕೆನ್ನೆಯ ತಮ್ಮ ತನ್ನೆತ್ರಕ್ಕೆ ಬೆಳೆದಿದ್ದು ನೋಡಿ ಖುಷಿಯಾಗಿತ್ತು ತನಗೆ, ಅವನು ಅಷ್ಟೇ ನಿಧಾನಕ್ಕೆ ಅದೇ ಸಲಿಗೆ ಪ್ರೀತಿಗೆ ಮರಳಿದ್ದ, ಮನೆಯ ಸುದ್ದಿಯೆಲ್ಲ ತಿಳಿದಿತ್ತು, ಚಿಕ್ಕಪ್ಪನ ಮೊದಲನೆ ಮಗಳು ಸ್ವಾತಿ ವಿದೇಶಕ್ಕೆ ಗೌಡರ ಹುಡುಗನೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡು ಹಾರಿದ್ದನ್ನು, ಮತ್ತೊಬ್ಬ ಚಿಕ್ಕಪ್ಪನ ಒಂದೇ ಮಗಳು ಗ್ಯಾರೇಜಿನ ಅನ್ವರನೊಂದಿಗೆ ಓಡಿಹೋಗಿ ಕಾಣೆಯಾದ ಸುದ್ದಿಗಳು ತನ್ನ ತಲುಪುತ್ತಲೆ ಇದ್ದವು, ಅಮ್ಮ ಸದಾ ತನ್ನ ಸುದ್ದಿ ಮಾತಾಡುವ ಸಂದರ್ಭದಲ್ಲಿ ಕಣ್ಣು ತುಂಬಿಕೊಳ್ಳುವುದನ್ನು ಕೇಳಿದಾಗಲೆಲ್ಲ ತನಗೆಷ್ಟು ಬಾರಿ ಓಡಿ ಹೋಗಿ ತೆಕ್ಕೆ ಬೀಳಬೇಕೆಂದನಿಸಿರಲಿಲ್ಲ, ಆದರೆ ಅದೇ ಸಮಯಕ್ಕೆ ಸೂರ್ಯನ ಕೆಲಸ ಅಮೆರಿಕಾದಲ್ಲಿ ಒಂದು ವರ್ಷದ ಕಾಂಟ್ರಾಕ್ಟ್ ಮೇಲಾಗಿತ್ತು,ಅವನನ್ನ ಕಳಿಸಿ , ಮನೆಗೆ ಮೊದಲ ಬಾರಿ ಹೊರಟು ನಿಂತಾಗ, ಅಮ್ಮನ ನೋಡುವ ಕಾತರವಿತ್ತು, ಅದೇ ಕಾತರದಲ್ಲೆ ಬಂದವಳಿಗೆ ಸಿಕ್ಕಿದ್ದು ನಿಸ್ತೇಜ ಅಮ್ಮ, ಸಣ್ಣ ದನಿಯಲ್ಲಿ ವಿಚಾರಿಸಿದ್ದಳು " ಅಂತು ಬಂದ್ಯಲ್ಲ, ಎಷ್ಟ್ವರ್ಷಾತೆ ನಿನ್ ಮದ್ವೆ ಆಗಿ? ಸ್ವಾತಿ ಬಸುರಿಯಡ, ನಿಂಗೆ ಇನ್ನು ಸುದ್ದಿ ಇಲ್ಲೆ, ಚೆಕ್ ಮಾಡ್ಸಕ್ಕಾಯಿತ್ತು, ಅವ ಚೆನಾಗಿದ್ನ ನಿನ್ನತ್ರ, ಮನೆ ತಗಳ್ಳಲ ಇನ್ನೂ? ಸ್ವಾತಿಯವು ಬೆಂಗಳೂರಲಿ ಮನೆ ತಗಂಡ್ವಡ, ಎಂಗೊತ್ತಿಲ್ಯಪ, ನಿಮ್ ಚಿಕ್ಕಿ ಹೋಗಿತ್ತು ಹಂಗಾಗಿ ಹೇಳ್ದಿ, ಅಷ್ಟೇ " ಅಂತೆಲ್ಲ ತನಿಖೆ ಶುರು ಮಾಡಿದಾಗ ಎಷ್ಟು ಮನಸ್ಸಿಗೆ ನಿರಾಸೆಯಾಗಿತ್ತು, ಮನೆಗೆ ತಂದ ಫ್ರಿಜ್ಜು ವಾಶಿಂಗ್ ಮಷೀನು, ಮಿಕ್ಸಿ ಎಲ್ಲ ತೋರಿಸಿ ಅದೆಲ್ಲ ಸ್ವಾತಿಯೆ ಕೊಟ್ಟದ್ದು ಅಂದಾಗ ಇನ್ನು ಒಂಥರಾ ಅನಿಸಿತ್ತು ತನಗೆ, ಹೌದು ಸೂರ್ಯ ತಾನು ದೇಶ ಸುತ್ತಿದ್ದೆವು, ಇಬ್ಬರು ಮಗುವಿನ ಬಗ್ಗೆ ಯೋಚಿಸಿರಲಿಲ್ಲ, ಅದಕ್ಕೆ ಸರಿಯಾಗಿ ದೋಷಗಳೆ ಇಲ್ಲದಿದ್ದರು ಮಕ್ಕಳಾಗಿರಲಿಲ್ಲ, ಮನೆಯ ಬಗ್ಗೆ ಇಬ್ಬರಿಗೂ ಅಂತಹ ವ್ಯಾಮೋಹ ಇರಲಿಲ್ಲ" ಆಗ ಕಾಲಕ್ಕೆ ಆಗ್ತು ಬಿಡು ಪುಟ್ಟಿ, ಅಮ್ಮನ್ ಮಾತು ಮನಸಿಗೆ ತಗಳಡ" ಅಂದ ಅಪ್ಪನನ್ನ ಅಪ್ಪಿ ಅತ್ತಿದ್ದೆ ತಾನು, ಅಮ್ಮನಿಗೆ ಅಷ್ಟು ಸೂಕ್ಷ್ಮ ಇಲ್ಲದೆ ಹೋಯಿತೆ? ಯಾಕೆ ಹೀಗೆ ಈ ಅಮ್ಮ? ತನಗೆ ಅರ್ಥವೆ ಆಗಿರಲಿಲ್ಲ, ಮತ್ತೆ ಹೋಗುವದಕ್ಕು ಮನಸಾಗಲಿಲ್ಲ ತನಗೆ ಅದಾಗಿ ಒಂದೇ ವರ್ಷಕ್ಕೆ ಅಮ್ಮ ಮೂಳೆ ಸವೆತಕ್ಕೊಳಗಾಗಿ ಹಾಸಿಗೆ ಹಿಡಿದ ಸುದ್ದಿ ಕೇಳಿ ಓಡಿ ಬಂದಿದ್ದೆ ತಾನು ಸೂರ್ಯ ನೊಂದಿಗೆ, ಉಳಿಸಿಕೊಳ್ಳಲಾಗಲೆ ಇಲ್ಲ, ಅವಳ ಕೊನೆಯ ಮಾತುಗಳು ಇನ್ನೂ ಕಿವಿಯಲ್ಲಿ ಸುತ್ತುತ್ತಿವೆ"ಮಕ್ಕಳು ಬೇಕೆ ಬೇಕು ಕೂಸೆ, ನಿಂಗಕ್ಕಾಗ್ಲೆ ಅಂದ್ರೆ ದತ್ತು ತಗಳಿ, ಜಿತುಗೆ ಒಳ್ಳೆ ಅವ ಇಷ್ಟ ಪಡ ಹುಡ್ಗಿನೆ ಮದ್ವೆ ಮಾಡಿ, ಎಂತಕ್ಕು ಯೋಚನೆ ಮಾಡಡ, ಎರಡೆಳೆ ಸರ ನಿಂಗೆ ಮತ್ತೆ ಬರ ಸೊಸೆಕೂಸಿಗೆ ಮಾಡ್ಸಿದ್ದಿ, ಇನ್ನು ಆನು ಉಳಿತ್ನಲ್ಲೆ, ಎಂಗೆ ಗೊತ್ತಾಯ್ದು, ಹಾ, ನಿಂಗೊಂದು ವಿಷಯ ಹೇಳಕ್ಕು, ನೀನು ಹುಟ್ಟಿದ್ದು ಒಳ್ಳುಕಲ್ಲು ಪೂಜೆ ದಿನ, "ಗಳೆಗೆಮಟ್ಟಿ" ಗೆ ಪ್ರತಿ ವರ್ಷ ದೀಪಾವಳಿ ಪೂಜೆ ತಪ್ಸಡ, ಒಳ್ಳೆದಾಗ್ತು" ಅದಾಗಿ ನಾಲ್ಕೆ ದಿನಕ್ಕೆ ತವರು ಖಾಲಿಯಾಗಿತ್ತು, ದುಃಖ ಹೊತ್ತ ಹಿತ್ತಿಲ ತುಂಬೆಲ್ಲ ಅಮ್ಮನೆ ಇದ್ದಾಳೆ ಎನಿಸಿಬಿಟ್ಟಿತ್ತು, ಈ ಮಾತಿಗೀಗ ಎರಡನೆ ವರ್ಷ, ಭೂಮಿ ಹುಣ್ಣಿಮೆ ದಿನ ಅಮ್ಮ ದೂರವಾಗಿದ್ದು, ದೀಪಾವಳಿ ಅಲ್ಲಿಂದ ಬರೀ ಎರಡು ವಾರಕ್ಕಿಂತ ಕಮ್ಮಿ ದಿನಗಳು, ಇವತ್ತು ತಾನಿಲ್ಲಿ ಅವಳ ಜಾಗದಲಿ ಕೂತು ಅವಳಂತಾಗದ ಮನಸ್ಥಿತಿಯಲ್ಲಿ ಪೂಜೆಗೆ ಅಣಿ ಮಾಡುತ್ತಿದ್ದೇನೆ ಎಂತ ಕಾಲ, ಯಾವುದನ್ನು ಬದಲಾಯಿಸಿಬಿಡುತ್ತದೆ, " ಅಂದುಕೊಂಡಳು ನಕ್ಷತ್ರ, ಹಬ್ಬದ ಸಡಗರ ಗಳಿಗೆ ಮಟ್ಟಿಯ ಪೂಜೆ ಮಾಡಿ ಬಲಿರಾಯನನ್ನು ರಾತ್ರಿ ದೀಪಗಳ ಮೆರವಣಿಗೆಯಲ್ಲಿ ಕಳಿಸಿಕೊಟ್ಟು ಮುಗಿಯಿತು, ಮರುದಿನ ಹಾಯಾಗಿ ಕಾಲುಚಾಚಿ ಎಲ್ಲ ಜಗಲಿ‌ಕಟ್ಟೆಯ ಮೇಲೆ ಕೂತಾಗ <br>
ನಕ್ಷತ್ರ ನುಡಿದಳು"ಅಪ್ಪ, ಎರಡು ವಿಷಯ ಮಾತಾಡಕ್ಕು,ಈಗ ಮಾತಾಡಲಡ್ಯಿಲ್ಲ್ಯ?" ಅಪ್ಪ ಮುಗುಳ್ನಕ್ಕು ನುಡಿದರು"ಮದಲ್ನೆ ವಿಷ್ಯ ಎಂಗೊತ್ತಾಯ್ದು, ಎರಡನೆದು ಹೇಳು" ನಾಚಿಗೆಯ ತೆರೆಯಲ್ಲಿ "ಹು ನಂಗೆ ನಾಕು ತಿಂಗಳು ಈಗ , ಅಪ್ಪ, ಜಿತು ಮದ್ವೆಯಾಗಿದ್ರೆ ಈ ಮನೆಗೊಂದು ದಿಕ್ಕಾಗ್ತಿತ್ತು, ನಂಗವು ಇಲ್ಲೆ ಅರಿಶಿನಗೇರಿಲಿ ತೋಟ ಮನೆ ತಗತ್ಯ, ನಿಂಗೆ ಹತ್ರ ಇದ್ದಾಂಗಾತು ಹೇಳಿ ಸೂರ್ಯ ಅವರಪ್ಪ ಅಮ್ಮ ಎಲ್ಲ ತೀರ್ಮಾನ ತಗೈಂದ, ಇನ್ನು ಒಂದ್ವಿಷ್ಯ ಇದ್ದು, ಎನ್ನ ಮನೆಯವರ ಆಫೀಸು ಗೆಳೆಯನ ಮಗಳು ಒಂದಿದ್ದು, ಅದಕ್ಕೆ ಹಳ್ಳಿ ಜೀವನವೆ ಬೇಕಡ, ಜಿತುಗೆ ಮುವತ್ತೆರಡು ಅದಕ್ಕೆ ಇಪ್ಪತ್ತೇಳಾತು, ಜಾತಿ ಸಲ್ಪ ಬೇರೆದೆ ಆಗ್ತು ಆದ್ರೆ ಹುಡ್ಗಿ ಒಳ್ಳೆದೆ, ಹೆಂಗು ನಮ್ಮನೆ ಅಪ್ಪಿ ಇಲ್ಲೆ ಕೆಲಸ , ಒಳ್ಳೆ ಜೋಡಿ, ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದ, ನೀ ಹೂ ಅಂದ್ರೆ ಕರ್ಕಬತ್ತಿ ಮುಂದಿನ್ವಾರ" ಅಪ್ಪನ ಕಣ್ಣು ಪಸೆಗಟ್ಟಿತು ಅನಿಸಿತಾ? "ಆಗ್ಲಿ, ಹೆಣ್ಣು ಗಂಡು ಒಪ್ಪಿದ್ದ ಅಂದ್ಮೇಲೆ ನಂದೇನಿದ್ದು, ಕೂತ್ಕ ಬಾ ಇಲ್ಲಿ" ಅಂದ ಅಪ್ಪನ ಪಕ್ಕ ಕೂತಳು ನಕ್ಷತ್ರ, ಅಪ್ಪನ ಕೈ ಮಗಳ ತಲೆ ಸವರುತ್ತಿತ್ತು, ಮಗ್ಳೆ ಹೆಣ್ಮಕ್ಕಳು ಹೃದಯ ಒಳ್ಳುಕಲ್ಲು ಇದ್ದಂಗೆ, ನಾವೇನ್ ಪದಾರ್ಥ ಹಾಕ್ತು ಅದನ್ನ ತಿರುಳು ಸಮೇತ ಅರೆದು ರುಚಿಯಾಗಿ ಮಾಡ್ತ ಬದುಕನ್ನ, ನೀನು ನಿನ್ನಮ್ಮನ ತರ ದ್ವಂದದಲ್ಲಿ ಬದುಕ್ಲೆ, ನನ್ ತರ ಎಲ್ಲದನ್ನು ಒಪ್ಕ್ಕ್ಯಂಡು ಬದುಕ್ಲೆ, ಜೀವ್ನ ಅಂದಮೇಲೆ ಎಲ್ಲದು ಇರ್ತು, ನಿನ್ನ ಚಿಕಪ್ಪದಿಕ್ಕಳು ಇವತ್ತು ಬತ್ವಡ ಊಟಕ್ಕೆ, ರೆಡಿ ಮಾಡನ ಏಳು, ಸೂರ್ಯನ್ನ ಕರಿ, ಪೂಜೆ ಮಾಡ್ಲಿ ಅವ, ಆ ಕಾಲಕ್ಕೆ ಆ ನಿಯಮಗಳು ಈ ಕಾಲಕ್ಕೆ ಇದೆ ಸತ್ಯ, ಹತ್ತು ವರುಷಕ್ಕೊಂದ್ಸಾರಿ ಸಮಾಜದ ಕಟ್ಟಳೆ ಎಲ್ಲ ಅಷ್ಟಷ್ಟು ಬದಲಾಗ್ತಾ ಹೋಗ್ತು, ಹೊಸದೆಷ್ಟೆ ಬಂದರು ಹಳತು ಚೂರುಪಾರು ಇರವು, ಅವಾಗ್ಲೆ ಚೆನ್ನ " ಅಂತ ಮುಗುಳ್ನಕ್ಕ ಅಪ್ಪನ ಕಣ್ಣಲ್ಲಿ ಅಮ್ಮನ ಹೊಸ ಅವತಾರ ಕಂಡು ಕಣ್ಣು ತುಂಬಿತು ನಕ್ಷತ್ರ <u>ಳಿಗೆ</u></p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-34679978253914390502016-07-09T01:18:00.001-07:002016-07-09T01:18:49.107-07:00ಹೆಸರಿಲ್ಲದ ಕಥೆ<p dir="ltr">ಯು.ಬಿ.ಸಿಟಿಯ ಬಿಯರ್ರೆ ಲೌಂಜಿನಲ್ಲಿ ಎರಡು ಮನಸುಗಳು ಬೀರಿನ ಜತೆ ಬಿಕ್ಕುತ್ತಿದ್ದವು, ಒಂದು ವಿದೇಶದ್ದು, ಮತ್ತೊಂದು ಅಪ್ಪಟ ಸ್ವದೇಶಿ, ಸೂಕ್ಷ್ಮ ಗಮನಿಸಿದರೆ ಅವೆರಡೂ ರೋಗಪೀಡಿತ ವಾದವು ಅಂತ ಎಲ್ಲರಿಗೂ ಗೊತ್ತಾಗುತ್ತಿತ್ತು, ಎದುರು ಮೂಲೆಯವನು ಅದಾವುದೋ ಅರಿಸಿನದ ದ್ರವವನ್ನು ಕುಡಿಯುತ್ತಾ ಹಲುಬುತ್ತಿದ್ದ"bro I left the new York for her bro, she told me to be vegan, see now am pure vegan, I don't eat meat, I left my favorite beef, am ready to put that holy thread also " ಅವ ಹಲುಬುತ್ತಿದ್ದರೆ ಇವ ಹೇಳುತ್ತಿದ್ದ, " ನನ್ನಮಗನೆ, ನಮಗೆ ಬುದ್ದಿ ಇಲ್ಲ, ನೀನು ತಿನ್ನೋದು ಬಿಟ್ಟೆ ನಾನು ಅವಳಿಗಾಗೆ ಕಲಿತೆ, ನೋಡು ಮೇಲೆ ಹೋಗಿ ಒಬ್ಬಳೇ ಕುಣೀತಿದ್ದಾಳೆ ಹೊಸಬರು ಯಾರಾದರೂ ಸಿಕ್ಕುತ್ತಾರೆ " ಅವನು ತಣ್ಣನೆಯ ದ್ರವವನ್ನು ಗುಟುಕರಿಸಿ ತಲೆ ತಗ್ಗಿಸಿದ್ದ, ಆ ಕತ್ತಲ ಮೂಲೆಯಲ್ಲಿ ಕುಳಿತ ಅವಳು ಸುಮ್ಮನೆ ಕೈಲಿರುವ ಸಿಗರೇಟನ್ನು ನೋಡಿ ನಗುತ್ತಿದ್ದಳು, "life is paradox, ಅದಿಲ್ಲ ಅಂದರೆ ಇಡೀ ಜಗತ್ತನ್ನು ಧಿಕ್ಕರಿಸಿ ಈ ಬ್ರಾಹ್ಮಣ ಹುಡುಗನ್ನ ನಾನ್ಯಾಕೆ ಮದುವೆಯಾಗಬೇಕಿತ್ತು, ನಾನಿವನಿಗೆ ಕುಡಿಯುವುದು ಮಾಂಸ ತಿನ್ನುವುದು ಕಲಿಸಿದೆನಾ, ಅಷ್ಟಕ್ಕು ಆ ಸಮಯದಲ್ಲಿ ಅದೆಲ್ಲ ಯಾವ ಲೆಕ್ಕಕ್ಕಿಲ್ಲದ ವಿಷಯಗಳು, ಅವನು ಕಲಿತಿದ್ದು ಇದನ್ನು ಮುಂಚೆ, ಶೋಕಿಗೆ, ತಾನಿವನಿಗಾಗಿ ಸಂಸ್ಕೃತ ಕಲಿತೆ ಶ್ಲೋಕ ಕಲಿತೆ, ಹಾಳಾದ್ದು ಸಿಗರೇಟು ಒಂದು ಬಿಟ್ಟರೆ ಇನ್ ಯಾವ ದುರಭ್ಯಾಸ ಇಲ್ಲ ತನಗೆ, ಅದು ಹೇಗೆ ಸುಳ್ಳನ್ನೆ ಕುಡಿಯುತ್ತಾನೆ ಅವ ದಿನಾಲು ಸೋಜಿಗ ತನಗೆ, ಹತ್ತು ಬಾರಿ ಹೇಳಿದರೆ ಸುಳ್ಳು ಸತ್ಯವಾಗುತ್ತದಂತೆ, ಇದೂ ಅದೆ ಇರಬಹುದು ಅಂದವಳಿಗೆ ಅವನ ಎದುರು ಕೂತ ವಿದೇಶಿ ಇಷ್ಟವಾಗತೊಡಗಿದ್ದ, ಯಾವ ದೇಶವೊ ಏನೋ ಇಲ್ಲಿ ಬಂದು ಅವಳಿಗಾಗಿ ಎಲ್ಲ ತ್ಯಾಗ ಮಾಡಿದ ಅವನು ಗ್ರೇಟ್ ಅನ್ನಿಸತೊಡಗಿದ, ಆದರೆ ಅಲ್ಲಿಂದ ಮಿಸುಕಲಿಲ್ಲ ಅವಳು, ಈ ಮೂವರನ್ನು ಸಾಮಾನ್ಯವಾಗಿ ಅಲ್ಲಿಯೆ ನೋಡುತ್ತಿದ್ದ ಪಕ್ಕದ ಅಸಾಮಿಗೆ ಜೋರಾದ ನಗು ಬರುತ್ತಿತ್ತು , "ಕುಡಿಯೋದಿಕ್ಕೆ ಕಾರಣ ಬೇಕಾ, ಸುಳ್ಳು, ಮೊದಮೊದಲು ಕಾರಣ ನಮ್ಮನ್ನು ಹುಡುಕತ್ತೆ, ಆಮೇಲಾಮೇಲೆ ನಾವೆ ಹುಡುಕ್ಕೊಳ್ಳೋದು, ಅದು ಮುಗಿದ ಮೇಲೆ ತನ್ನ ತರಾ, ಸುಮ್ಮನೆ ಕುಡಿಯುವುದು" ಲೌಂಜಿನ ಸೀಟುಗಳೆಲ್ಲ ಭರ್ತಿಯಾಗಿದ್ದವು, ದೊಡ್ಡ ಮಗ್ಗಿನಲ್ಲಿ ಕಾಣುತ್ತಿದ್ದ ದ್ರವದಲ್ಲಿ ಸಂಜೆ ರಾತ್ರಿಗೆ‌ ಕೆಂಪಾಗತೊಡಗಿತ್ತು, ಮತ್ತು ಗಾಳಿಯಲ್ಲಿದ್ದ ನಶೆಗೆ ಸತ್ಯ ಸುಳ್ಳಾಗಿಯು ಸುಳ್ಳು ಸತ್ಯವಾಗಿಯು ನಿಚ್ಚಳವಿಲ್ಲದ ಅಲ್ಲಿಯ ಜಗತ್ತು ಅಮಲಿನಲ್ಲಿ ಲೀನವಾಗತೊಡಗಿತ್ತು, ಸದ್ದು ಮರೆಯಾಗಿ ಮಾತಾಡಬೇಕಾದ್ದು ಇನ್ನೇನೋ ಆಗಿ ಸುತ್ತಲಿನ ವಾತಾವರಣದಲ್ಲಿ ಸುಟ್ಟುಕೊಂಡ ಹೃದಯಗಳು ಮತ್ತೆಂದು ಸರಿಯಾಗಲಾರದಂತೆ ಬಣ್ಣಬಣ್ಣದ ದ್ರವಗಳಲ್ಲಿ ಮುಳುಗುತ್ತಾ ತೇಲುತ್ತಾ ಮೈ <u>ಮರೆತಿದ್ದವು😊</u></p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-72695978789024871012016-07-09T01:16:00.001-07:002016-07-09T01:16:41.941-07:00ಅವಳು<p dir="ltr">ನನಗೆ ತಲೆ ಸುತ್ತುತ್ತಿತ್ತು, ಸುತ್ತ ನಡೆಯುತ್ತಿದ್ದ ಯಾವ ವಿದ್ಯಮಾನವೂ ನನಗೆ ತಲುಪದ ಉನ್ಮತ್ತ ಸ್ಥಿತಿ, ಹಾಗೊಂದು ಕ್ರಿಯೆ ನಡೆದದ್ದೆ ಹೌದೋ ಅಲ್ಲವೋ ಎಂಬಂತೆ ಸುತ್ತಲಿನ ಗೋಡೆ ದೀಪಗಳು ಸುಮ್ಮನೆ ನಿಂತಿದ್ದವು, ಆದರೆ ಕನ್ನಡಿಯಲ್ಲಿ ಕಾಣುತ್ತಿದ್ದ ಕೆಂಪಾಗಿ ರಕ್ತ ಒಸರುವಂತಾದ ತುಟಿಗಳು ನಡೆದದ್ದಕ್ಕೆ ಸಾಕ್ಷಿ ಒದಗಿಸಿ ದಂತೆ ವಕ್ರವಾಗಿದ್ದವು, ಅದೆಂಥದ್ದೋ ಆಘಾತಕ್ಕೊಳಗಾದ ಮನಸ್ಸು ಅದೇ ಘಟನೆಯನ್ನು ನೆನೆಯುತ್ತಿತ್ತು, ಸೆಟ್ ವೆಟ್ ಹಚ್ಚಿ ಸ್ಪೈಕ್ ಮಾಡಿದ್ದ ಕೂದಲು ಚದುರಿತ್ತು, ಕನ್ನಡಿಯಲ್ಲಿ ನೋಡುತ್ತಾ ಸರಿಮಾಡಿಕೊಂಡೆ, ತುಟಿಯ ಗುರುತು ಅಳಿಸಲು ಇಷ್ಟವಿರಲಿಲ್ಲ, ಹಾಕಿದ್ದ ಕ್ಯಾಲ್ವಿನ್ ಕೈನ್ ಸುಗಂಧದ ಜತೆ ಮತ್ತಾವುದೋ ಹೂಗಳ ಸುಗಂಧ ಬೆರೆತಂತಿತ್ತು, ಇನ್ ಶರ್ಟ್ ಮಾಡಿ ಮತ್ತೊಮ್ಮೆ ಬೆರಳುಗಳಲ್ಲೆ ಸ್ಪೈಕ್ ಸರಿ ಮಾಡಿ ರೆಸ್ಟ್ ರೂಮಿನಿಂದ ಹೊರಬರುವಾಗ ಅರ್ಧ ಗಂಟೆ ನಿಮಿಷದಂತೆ ಕಳೆದಿತ್ತು, ಅವಳ ಕ್ಯಾಬಿನ್ನಿನತ್ತ ನೋಡಿದೆ, ಏನೂ ನಡೆದೇ ಇಲ್ಲದವಳಂತೆ ಸಲೀಸಾಗಿ ನಗುತ್ತಾ ಓಡಾಡುತ್ತಿದ್ದಳು, ಹೌದು, ಇನ್ನೆರಡೆ ದಿನ ತಾನು ಈ ಕಂಪನಿಯ ಅತಿಥಿ, ನನಗೆ ಒಂಥರದ ಖುಷಿ, ಅದರ ಜತೆ ಈಗ ಸಿಕ್ಕದ್ದು ಉಡುಗೊರೆಯೆ? ಜತೆಗೆ ಇದ್ದೆವಲ್ಲ ನಾಲ್ಕು ವರ್ಷ, ಬೇಕೆಂದದ್ದನ್ನ ಪಡೆಯದೆ ಬಿಡದ ತಾನು , ಅದೇ ಮನೋಭಾವದ ಅವಳು, ಈ ಕಂಪನಿಗೆ ಫ್ರೆಶರ್ ಆಗಿ ಸೇರಿದ್ದ ತನ್ನ ಟೀಮಿಗಾಗಲೆ ಅವಳು ಮ್ಯಾನೇಜರ್, ಐದಡಿ ಏಳಿಂಚು, ಹೆಚ್ಚು ಕಮ್ಮಿ ಬೇರ್ ಆಗಿಯೆ ಇರುತ್ತಿದ್ದ ನೀಳ ಕಾಲುಗಳು ಮತ್ತದರ ಮೇಲಿನ ಚಿಟ್ಟೆ ಟಾಟೂ, ಬೇಡವೆಂದರೂ ಕಾಣುತ್ತಿದ್ದ ಕರ್ವ್ ದೇಹ, ದಪ್ಪ ಕೂಡ ಒಂಥರದ ಸೌಂದರ್ಯ ಅನಿಸೋಕೆ ಶುರುವಾದ್ದೆ ಅವಳನ್ನು ನೋಡಿದಾಗ, ಹತ್ತಿರ ಬಂದು "ಹಲೋ" ಅಂದಾಗ ತೇಲಿಬಂದ ಸುಗಂಧ ಅವಳ ಅಭಿರುಚಿಯನ್ನು ತಿಳಿಸಿತ್ತು, ತಾನು ಪೆಕರನಂತೆ ಬೆರಗಿನ ಕಣ್ಣುಬಿಟ್ಟು ಆಕೆಯನ್ನೆ ನೋಡುತ್ತ ನಿಂತು ಬಿಟ್ಟಿದ್ದೆ, ಆಕೆ ಮುಗುಳ್ನಕ್ಕು ಇದೆಲ್ಲ ನಾರ್ಮಲ್ ಅನ್ನೋ ಹಾಗೆ ಸರಿದು ಹೋಗಿದ್ದಳು , ನಂತರದ ದಿನಗಳಲ್ಲಿ ಅರಿವಾದದ್ದು, ಅವಳು ಬರೀ ಸುಂದರಿ ಅಷ್ಟೇ ಅಲ್ಲ ವಿಷ ತುಂಬಿದ ಹೆಣ್ಣು, ನನಗಂತು ಹತ್ತಲಾಗದ ಬೆಟ್ಟದಂತೆ, ಆದರೂ ಇದೇನು ದೊಡ್ಡದಲ್ಲ ಅನ್ನೋ ಲೆಕ್ಕದಲ್ಲಿ ನಾನು ಕೇರ್ ಲೆಸ್ ಆಗಿ ಇರಲಾಂಬಿಸಿದ್ದೆ, ಅವಳಿಗೂ ಗೊತ್ತಾಗಿತ್ತೇನೋ, ಕೆಲಸದಲ್ಲಿ ತಪ್ಪು ಹುಡುಕಲಾಗದೆ ಸುಮ್ಮನಾಗಿದ್ದಳು, ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಬಂದು ತನ್ನ ಕ್ಯಾಬಿನ್ನಿಗೆ ಎಳೆದೊಯ್ದುಕೂರಿಸಿ "ನೋಡೂ, ನೀನು ನನ್ನ ಕಾಲು ನೋಡೋದು, ಕತ್ತಿನ ಕೆಳಗೆ ಆಸೆಯಿಂದ ನೋಡೋದು ಎಲ್ಲ ಗೊತ್ತಾಗುತ್ತೆ,you know its so obvious in your age, you are bomman boy with a good family back ground, and more over that, I am six years older than you, so there is no intention to get involve with you physically, don't see like that, if I get mad your survival will be in question" ಸುಮ್ಮನೆ ತಲೆಯಾಡಿಸಿದ್ದೆ, ಆದರೆ ಕನಸಿನಲ್ಲಿ ಆ ಕಾಲ್ಗಳು ಮತ್ತು ಟಾಟು, ಕುತ್ತಿಗೆಯ ಚೂರು ಕೆಳಗೆ ಕಾಣುತ್ತಿದ್ದ ಪ್ಲಮೇರಿಯ ಟಾಟು ನನ್ನ ಹುಚ್ಚಿಗೆಬ್ಬಿಸಿದ್ದವು,ಕೆಲಸದ ವಿಷಯದಲ್ಲಿ ಯಾವ ಭಿನ್ನಾಭಿಪ್ರಾಯ ಇರದಿದ್ದರೂ ಅವಳು ಮಾತ್ರ ಇದೆಲ್ಲದಕ್ಕಿಂತ ಮುಖ್ಯವಿಷಯವಾಗಿ ನನಗೆ ಕಾಡುತ್ತಿದ್ದಳು, ನನ್ನ ಕಣ್ಣಲ್ಲಿನ ಆರಾಧನೆ ಗೊತ್ತೆ ಆಗದವಳಂತೆ ನಿಭಾಯಿಸುತ್ತಿದ್ದ ಚತುರತೆ ಮತ್ತಷ್ಟು ಮೋಹ ಹುಟ್ಟಿಸುತ್ತಿತ್ತು‌. <br>
ಬೇರೆ ಹುಡುಗಿಯರು ಮನಸ್ಸಿಗೆ ಹಿಡಿಸುತ್ತಿರಲಿಲ್ಲ ಅಂತ ಏನಲ್ಲ, ಅದೇನೋ ಸಿಗಲಾರದ್ದೆ ಜಾಸ್ತಿ ನೆನಪಾಗುವಂತೆ ಅವಳು, ಇಲ್ಲಿನ ಏಕತಾನತೆ, ಅವಳ ತೀವ್ರ ನಿರ್ಲಕ್ಷ್ಯ ನಾನು ಮತ್ತೊಂದು ಆಫರ್ ಅನ್ನು ಪರಿಗಣಿಸುವಂತೆ ಮಾಡಿತ್ತು, ದೊಡ್ಡ ಕಂಪನಿ, ಇಲ್ಲಿಯದಕ್ಕಿಂತ ಜಾಸ್ತಿಯೆ ಸ್ಯಾಲರಿ ಅಪ್ಪ ಅಮ್ಮ ನೋಡಿದ ಹೆಣ್ಣನ್ನೆ ಮದುವೆಯಾದರೆ ಒಂಥರಕ್ಕೆ ಲೈಫು ಸೆಟಲ್, ಆ ನಿರ್ಧಾರದಲ್ಲೆ ಬಹಳ ನಿರಾಳ ಮನಸ್ಥಿತಿಯಲ್ಲಿಯೆ ಇವತ್ತು ಆಫೀಸು ತಲುಪಿ ವಿಷಯ ತಿಳಿಸಿದಾಗ ಇಡೀ ಟೀಮ್ ಅಭಿನಂದಿಸಿತ್ತು, ಅದೇ ಗುಂಗಿನಲ್ಲಿ ರೆಸ್ಟ್ ರೂಮಿನೆಡೆಗೆ ನಡೆದಿದ್ದೆ, ಅಲ್ಲೆ ಅವಳು ಅದೇ ತಿರುವಿನಲ್ಲಿ ಬೇಟೆಗಾಗಿ ಕಾದವಳಂತೆ ಒಮ್ಮೆಲೆ ಹಿಂದಿನಿಂದ ಅಪ್ಪಿದ್ದಳು, ಅದನ್ನು ನಂಬಲಾಗದ ಮನಸ್ಥಿತಿಯಲ್ಲಿದ್ದ ನನ್ನ ಐದು ನಿಮಿಷ ಬಿಟ್ಟೂ ಬಿಡದಂತೆ ತೀವ್ರವಾಗಿ ಚುಂಬಿಸಿ ಮರೆಯಾಗಿದ್ದಳು, ಇದು ಏನಂತಲೆ ಅರ್ಥವಾಗಿರಲಿಲ್ಲ ನನಗೆ, ಅವಳಿಗೆ ನನ್ನ ಮೇಲೆ ಪ್ರೀತಿಯಾ, ಅಥವಾ ಹೋಗುತ್ತಿದ್ದೀನಿ ಅನ್ನೋ ದುಃಖವಾ, ಏನಂತ ಗೊತ್ತಾಗದೆ ಗೊಂದಲಕ್ಕೆ ಬಿದ್ದಿದ್ದ ನನಗುಳಿದ ಎರಡು ದಿನ ಸರಿದದ್ದೆ ಗೊತ್ತಾಗಲಿಲ್ಲ.<br>
ಹೊಸಾ ಆಫೀಸಿನ ಮೊದಲ ದಿನ, ದೊಡ್ಡದಾದ ಸ್ಪೇಸ್, ನನಗೊಂದು ಸಪರೇಟ್ ಕ್ಯಾಬಿನ್ ಜೀವನ ಸಾರ್ಥಕವಾದಂತನ್ನಿಸಿತು ,ನಾನೀಗ ಕ್ಲೈಂಟ್ ಮ್ಯಾನೇಜ್ಮೆಂಟ್ ಹೆಡ್, ಹ್ಮ್, ಹೂಗುಚ್ಚವೊಂದು ನನ್ನ ಕ್ಯಾಬಿನ್ನಿನಲ್ಲಿ ನನಗಾಗಿ ಕಾಣುತ್ತಿತ್ತು, ಮತ್ತು ಅದನ್ನ ಹಿಡಿದು ಕಾಯುತ್ತಿದ್ದ ಅವಳು?</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-44070369627128313872016-06-29T05:11:00.001-07:002016-06-29T05:11:55.538-07:00ಅವಳೆಂಬ ಮಾಯೆ<p dir="ltr">"ಬೀಪ್" ಮೆಸೇಜ್ ಬಂದ ಸದ್ದು, ಹ್ಮ್ ಇವತ್ತು ಎಂಟನೆಯ ತಾರೀಖು, ಮನೆಗೆ ಮಾಡಿದ ಸಾಲ ಬ್ಯಾಂಕ್ ಸೇರಿದ್ದು, ಇದೊಂದಾದರೆ ಕೈಯಲ್ಲಿ ಬರೋಬ್ಬರಿ ಐವತ್ತು ಸಾವಿರ ಉಳಿತಾಯ, ವೀಕೆಂಡು ಅದೂ ಇದೂ ಶಾಪಿಂಗ್ ಮಾಡಿದರೂ ಹತ್ತು ಸಾವಿರ ಖರ್ಚಾಗಲಿಕ್ಕಿಲ್ಲ, ಮನೆಯ ಖರ್ಚೆಲ್ಲ ಅವಳ ಸಂಪಾದನೆಯಲ್ಲಿ, ತನಗೇನೂ ಭಾರೀ ಆಸೆಯಿಲ್ಲ, ಅವಳಿಗೆ ಊರು ಸುತ್ತುವ ಆಸೆ ಅದೂ ಐಷಾರಾಮಿಯಾಗಿ, ಅದಕ್ಕಾಗಿ ಉಳಿಸುತ್ತಾಳೆ,</p>
<p dir="ltr"> "ನೀನೂ ಉಳಿಸು, ಉಳಿಸುವ ಹೆಂಡತಿ ಉಳಿಸುವ ಮಕ್ಕಳು ಮತ್ತು ಉಳಿಸುವ ನೀನು, ಸುಂದರ ಸುಖೀ ಸಂಸಾರ, ವಾರಕ್ಕೊಮ್ಮೆ ಸಿನೆಮಾ, ಶಾಪಿಂಗು ಇಲ್ಲ ಹತ್ತಿರದಲ್ಲಿರುವ ಯಾವುದೋ ದೇವಸ್ಥಾನ, ಪಾರ್ಕ್, ವರ್ಷಕ್ಕೊಮ್ಮೆ ವಿದೇಶ, ಬೀರುವಿನಲ್ಲಿ ಇಡಲು ಆಭರಣಗಳು ಮತ್ತು ಕಾಣೆಯಾದ ನೆಮ್ಮದಿ" ಅವಳ ಖಿಲ ಖಿಲ ನಗು ಎದೆಯಲ್ಲಿ ಚುಚ್ಚಿ  ತಲೆಯಲ್ಲೊಮ್ಮೆ ಕೈಯಾಡಿಸಿಕೊಂಡೆ,ಅವಳ ನೆನಪಾದಾಗೆಲ್ಲ ಒಂಥರದ ಸೆಳಕು ಎದೆಯಲ್ಲಿ, ಆ ಸೆಳೆತ, ಆ ಮಾದಕ ನೋಟ, ಅಬ್ಬ ಗಟ್ಟಿ ಗುಂಡಿಗೆಯ ಹೆಣ್ಣು, ಅವಳು ಇಷ್ಟಪಟ್ಟಿದ್ದಳು, ನಾನೂ, ಮದುವೆಯಾಗುವಾ ಅಂದೆ, ಮದುವೆಯಾದರೆ? ಅಂತ ಮರುಪ್ರಶ್ನೆ, ಅದಕ್ಕೆ ತಾನೇ ನಾಚಿ ತಲೆ ತಗ್ಗಿಸಿದ್ದೆ, ಅರ್ದ ಗಂಟೆ ಜೋರಾಗಿ ನಕ್ಕು ನಂತರ "ನೀನು ಒಳ್ಳೆಯ ಹುಡುಗ, ನಿನಗೆ ಒಳ್ಳೆಯ ಹುಡುಗಿ ಸಿಗಲಿ" <br>
ತನ್ನದು ಅವಳೇ ಬೇಕೆಂಬ ಹಟ, ತೋರುಬೆರಳಲ್ಲಿ ಕ್ಷಿತಿಜಕ್ಕೆ ಕೈ ಮಾಡಿ ತೋರಿದ್ದಳು, ನೋಡು, ನಾನು ಹೇಗಿದ್ದೀನಿ ಹಾಗೆ ಒಪ್ಪತೀಯಾ? ನಿಮ್ಮ ಸಮಾಜ ನನ್ನ ಒಪ್ಪುತ್ತದಾ? ಅಪ್ಪ ಅಮ್ಮ? ನಾನು ಸ್ವತಂತ್ರ ಬದುಕಿದವಳು, ಆ ಖುಷಿಯನ್ನ ಕಳೆಯದೆ ನಾನು ನಿನ್ನ ಹೆಂಡತಿಯಾಗಿ ಇರಬಹುದಾ? ಯೋಚಿಸು, ಇದು ನಿನ್ನ ನಿರ್ಧಾರ, ಅಷ್ಟಕ್ಕು ಈ ಸಂಬಂಧಕ್ಕೆ ಮದುವೆಯೆ ಕೊನೆ ಅಂತ ಏನಿದೆ? ಸ್ನೇಹ ಪ್ರೀತಿ ಇವೆಲ್ಲ ತೀವ್ರ ಭಾವನೆಗಳು, ಕೊಚ್ಚಿಹೋಗಬೇಡ, "  ಆಕೆಯ ಪ್ರಾಮಾಣಿಕತೆ ದಿಗಿಲು ಹುಟ್ಟಿಸುತ್ತಿತ್ತು,ಅವಳ ಸ್ನೇಹಿತರು , ಸ್ವಚ್ಛಂದ ಹಕ್ಕಿಯಂತೆ ಸದಾ ಲವಲವಿಕೆಯ ಮನಸ್ಸು , ಸುತ್ತ ಇರುತ್ತಲಿದ್ದ ಹುಡುಗರ ಹಿಂಡು ಅವರ ಆರಾಧನೆಯ ನೋಟಗಳು,<br>
ತಾನು ದೂರಾಗುವ ಮುಂಚೆ ಇರಬೇಕು, ಮನೆಗೊಂದು ಹುಡುಗರು ಓಡಿಸುವ ದೊಡ್ಡ ಬೈಕು ತಂದಿದ್ದಳು, ನಾಲ್ಕೆ ದಿನದಲ್ಲಿ ಕಲಿತು ಅದೆಲ್ಲಿಗೋ ಟ್ರಿಪ್ ಹೋಗಿ ಬಂದವಳ ಜತೆ ಅದಾವುದೋ ಹುಡುಗನನ್ನು ಕರೆ ತಂದಿದ್ದಳು, ಅವನ ಜತೆ ಮದುವೆಯಾಗುವುದಿಲ್ಲ   ಆದರೆ ಅವನು ತನ್ನ ಬಿಸಿನೆಸ್ ಗೆ ಹೆಲ್ಪ್ ಮಾಡುತ್ತಾನೆಂದು ಹೇಳಿದ್ದಳಲ್ಲ, ತನಗೆ ಇದ್ದ ಒಂದು ನಿರೀಕ್ಷೆ ಕಳಚಿಕೊಂಡಿತ್ತು, ಹೋಗುತ್ತೇನೆ ಅಂದಾಗ ಆಕೆ ಹೇಳಿದ್ದು ಈಗಲು ಕಿವಿಯಲ್ಲಿಯೆ ಇದೆ" ಹೋಗ್ತೀನಿ ಅನ್ಬೇಡ, ಹಾಗೆ ಹೋಗೋದು ಬರೋದು ಇರೋದೆಲ್ಲ ಸಾಂಕೇತಿಕ ಮಾತ್ರ, ಅಲ್ಲ ಮಾರಾಯ ಭೂಮಿ ಗುಂಡಗಿದೆ ಅಂತ ಕೇಳಿಲ್ವಾ, ಜತೆಗೆ ಇರ್ತೀನಿ ಹೋಗು" ಅವಳ ಆತ್ಮವಿಶ್ವಾಸ , ಹೆಗಲ ಮೇಲೆ ಕೈ ಹಾಕಿ ಸಮಾಧಾನಿಸಿದ ಕ್ಷಣಗಳನ್ನೆಲ್ಲ ಹೊತ್ತು ಬದುಕು ಶುರು ಮಾಡಿದ್ದೆ,<br>
ಅದೇ ಹೆಂಡತಿ ಮಕ್ಕಳು, ಹಾಹಾ ನಗು ಬಂತು, ಮೊನ್ನೆ ಟೀವಿಯಲ್ಲಿ ಅವಳನ್ನು ನೋಡಿದಾಗ ನಂಬಿಕೆಯೆ ಬರಲಿಲ್ಲ ಹಾಗೆಯೆ ಇದ್ದಳು, ಮುಖದ ಮೇಲಿನ ಮುಗುಳ್ನಗು,ಅದೇ ಪ್ರಭಾವಲಯ ಅದೇ ಮಾದಕತೆ, ಮತ್ತಷ್ಟು ದೃಢ ಧ್ವನಿ, ಬೆಟ್ಟ ಹತ್ತುವ ತರಬೇತಿಯನ್ನು ಕಲಿಸುತ್ತಿದ್ದಳು, ಅವಳನ್ನೊಮ್ಮೆ ಭೇಟಿಯಾಗಲೆ ಅಂದುಕೊಂಡವನು ಮತ್ತೆ ಸುಮ್ಮನಾದೆ, ಹೌದು ಅವಳು ಎಲ್ಲರಂತಲ್ಲ ಅಥವಾ ನಾನು ಸಾಮಾನ್ಯ, ಅತೀ ಸಾಮಾನ್ಯ, ಭೆಟ್ಟಿಯಿಂದ ಬದುಕು ಬಹಳ ಬದಲೇನೂ ಆಗಲಾರದು ಅನ್ನಿಸತೊಡಗಿತು, ಬ್ಯಾಂಕಿನಿಂದ ಬಂದ ಮೆಸೇಜು ನೋಡಿ ಉಳಿದ ಹಣದಲ್ಲಿ ಮಗದೊಂದು ಸೈಟು ನೋಡಲು ನಮ್ಮ ರಿಯಲ್ ಎಸ್ಟೇಟ್ ಏಜೆಂಟನಿಗೆ ಫೋನಾಯಿಸಿದೆ.ಅವನು ಅದಾವುದೋ ವೆಬ್ ಸೈಟಿನಲ್ಲಿ ನೋಂದಾಯಿಸಿದ್ದೇನೆ ಎಂದೂ, ಮೆಸೇಜಿನಲ್ಲಿಯೆ ಎಲ್ಲ ವಿವರಗಳು ಬರುತ್ತದೆಂದು ಹೇಳಿದ,  ಅವಳು ನಿಧಾನಕ್ಕೆ ಬರಲು ಶುರುವಾದ ಮೆಸೇಜ್ ಗಳ ಬೀಪ್ ಸದ್ದಿನಲ್ಲಿ ಮರೆಯಾದಳು.</p>
ಮಹಿಮಾhttp://www.blogger.com/profile/08011639151501072102noreply@blogger.com0tag:blogger.com,1999:blog-3608058128402170169.post-10353840362960611282016-06-21T23:14:00.001-07:002016-06-21T23:14:08.388-07:00ಧಾರಾವಾಹಿ ಸುಗಂಧಿನಿ ಭಾಗ-೨<p dir="ltr">ನಂದನ ತಲಬಾಗಿಲು ದೂರವೇನಿಲ್ಲ, ಇಲ್ಲಿಂದ ಕೂಗಿದರೆ ಅವರ ಮನೆಯ ಹಂಸನಂದಿ ಅಂಬಾ ಅನ್ನುತ್ತದೆ,  " ದಾರಿ ದೂರ ತೋರುವುದಿಲ್ಲ, ಹುಚ್ಚು ಸೆಳೆತಕ್ಕೆ ಯಾವ ದಾರಿಯು ದೂರವಲ್ಲ" ಮನದೊಳಗಿನ ದನಿ ಪಿಸುಗುಟ್ಟಿತು, ಯಮುನೆಯಾಚೆಗಿನ ದಡ ಸದಾ ಹಸಿರಾಗಿ ಸೆಳೆಯುತ್ತಿತ್ತು, ಈ ದಿನ ಅಲ್ಲಿಂದ ತೇಲಿಬಂದ ದೇವಗಂಧ ಮೂಗಿಗಡರಿತು, ನನಗೋ ಭ್ರಮೆ, ಇದೆಂಥ ಭ್ರಮೆ, ಹರೆಯ ಕಾಲಿಡುವ ಸಮಯ, ನನಗೆ ಸಹಜವಲ್ಲವಾ ಈ ಕಳವಳ, ಬಯಕೆ, ಭ್ರಮೆಗಳು? ಉಹುಮ್, ನಾನು ಎಲ್ಲರಂತಲ್ಲ, ಕನಸುವ ಹಕ್ಕು ನನಗಿಲ್ಲ, ಹುಟ್ಟಿದಾಗಿನಿಂದ ಬಾಗಿದ ಬೆನ್ನು, ನಿಲ್ಲದ ತಲೆ, ತಿರಿಚಿದ ಕಾಲುಗಳು, ಹರೆಯ ಬಂದಿತ್ತು, ಮುಖ ತೊಳೆವ ಮುಂಚೆ ನಾ ಯಮುನೆಯ ನೀರಲ್ಲಿ ನೋಡಿದ ಬಾಲೆಗೆ ಉದ್ದ ಕೂದಲಿತ್ತು ಹೊಳೆವ ಕಣ್ಣಿತ್ತು, ಆದರೆ ...<br>
ಯೋಚನೆಗಳು ಅಲ್ಲಿಗೆ ನಿಂತವು, ಎದುರಿಂದ ಕಾಮಿನಿ ಬರುತ್ತಿದ್ದಳು, ಅವಳ ಕೈಯಲ್ಲಿ ಹೂ ದಂಡೆ, ಅದು ಬಹುಶಃ ಪುಣ್ಯಕೋಟಿಗೋ, ಹಂಸ ನಂದಿಗೋ? ಪುಣ್ಯಕೋಟಿಗೆ ಅದು ಎರಡನೆಯ ಬಸಿರು, ಹಂಸನಂದಿ ಚೊಚ್ಚಲ ಬಸುರು, ರಾಣಿಯರು ಅರಮನೆಯಲ್ಲಿ ಬೆಳಕಿತ್ತರೆ ಇವೆರಡೂ ಕಾಮಧೇನುಗಳು ನಂದನ ಕೊಟ್ಟಿಗೆಯ ಪಟ್ಟದರಸಿಯರು, ಇವರಿಬ್ಬರಿಗೆ ಗೋಗ್ರಾಸ ಕೊಡದೆ ಬೆಳಗಿನ ಜಾವ ತೊಟ್ಟು ನೀರು ಕುಡಿವುದಿಲ್ಲ ನಂದ ಯಶೋದೆಯರು,ಅದು ನನಗೆ ಹೊತ್ತಿದ್ದ ವಿಷಯವೇ, ಕಾಮಿನಿ ಲಗುಬಗೆಯಲ್ಲಿ ಕೈಗೆ ಮಾಲೆ ಇತ್ತು, ನನ್ನ ಕೈಲಿದ್ದ ಸುಗಂಧ ದ್ರವ್ಯಗಳ ಬುಟ್ಟಿಯನ್ನು ಕಸಿದು" ಇವತ್ತು ಪುಣ್ಯಕೋಟಿಗೆ ಈ ಹಾರ ನೀನೆ ಹಾಕಬೇಕು, ಹಾಗೆಯೆ ಒಳಮನೆಗೆ ಬಂದುಬಿಡು, ರಾಣಿಯರು ಕಾಯುತ್ತಿದ್ದಾರೆ" ಅಂದು ಓಡಿದಳು, ಗೆಜ್ಜೆಯ ಸದ್ದು ಮರೆಯಾಯ್ತು, ನನಗೆ ಆನಂದವಾಯ್ತು, ಪುಣ್ಯಕೋಟಿ ಬಿಳಿಯ ಹಸು ಹಣೆಯ ಮೇಲೊಂದು ದೈವದತ್ತ ಕಪ್ಪು ಗುರುತು, ಸದಾ ನಗುತ್ತಿರುವಳೋ ಅನ್ನುವ ಹಾಗೆ, ಇಡೀ ಕೊಟ್ಟಿಗೆಯಲ್ಲಿ ಆಕೆಯ ಸಂತಾನವೆ ಜಾಸ್ತಿ, ನಾನು ನಿಧಾನಕ್ಕೆ ಒಳ ಕಾಲಿಟ್ಟೆ, ಕತ್ತಿನಲ್ಲಿದ್ದ ಗಂಟೆ ನಿನಾದಿಸಿತು, ನನ್ನ ಗೂನಿಗೆ ತನ್ನ ಕೆನ್ನೆಯಿಟ್ಟು ಲಾಲಿಸಿದಳು ಪುಣ್ಯಕೋಟಿ, ಹೌದು ಹುಟ್ಟಿದಾಗಿನಿಂದ ತಾತ್ಸಾರ ಹಳಿಯುವ ಮಾತುಗಳನ್ನೆ ಕೇಳಿ ಬೆಳೆದ ನನಗೆ ಮೂಕ ಪ್ರಾಣಿಗಳ ಮೌನದ ಭಾಷೆ ಅರ್ಥವಾಗುತ್ತಿತ್ತು, ಇವತ್ತು ಪುಣ್ಯಕೋಟಿ ಸಂಭ್ರಮ ದಲ್ಲಿದ್ದ ಳು, ನಾನೂ , ನಿಧಾನವಾಗಿ ಮಲ್ಲಿಗೆಯ ಹೂದಂಡೆ ಅವಳಿಗೇರಿಸಿ ನನ್ನ ಸಂಭ್ರಮ ಪಿಸುಗುಟ್ಟಿದೆ, ಆಕೆ ತನ್ನ ಹಾಲು ನೆಲದ ಮೇಲೆಲ್ಲ ಸುರಿದು ಯಾವುದೋ ಆಹ್ಲಾದ ವ್ಯಕ್ತಪಡಿಸಿ ನನ್ನ ಬಲು ಪ್ರೀತಿಯಿಂದ ನೆಕ್ಕಿದಳು, ಪಕ್ಕದಲ್ಲಿದ್ದ ಹಂಸನಂದಿ ಸಂತಸದ ಕಣ್ಣೀರು ಸುರಿಸುತ್ತಿದ್ದಳು<br>
ಹಗುರಾಗಿ ಅರಮನೆಯತ್ತ ನಡೆಯತೊಡಗಿದೆ.<br>
ತೊಟ್ಟಿಯ ಮನೆಯಲ್ಲಿ ಗೋಪಿಯರ ಮಾತು ಸಲ್ಲಾಪಗಳು ಮುಗಿಲು ಮುಟ್ಟಿತ್ತು, ಹಾದಿಯಲ್ಲಿ ಎದುರಾದ ಸೂಲಗಿತ್ತಿ ಶ್ಯಾಮಲೆಯು "ಬಂದೆಯಾ ತ್ರಿವಕ್ರೆ, ನೋಡು, ರಾಣಿಯರ ಮುಖದ ಕಳೆ, ನಾಳೆಅಥವಾ ನಾಡಿದ್ದು ಶುಭ ಸುದ್ದಿ ಖಂಡಿತಾ" ಎಂದು ನಕ್ಕಳು. ರಾಣಿಯರ ಬೆನ್ನಿಗೆ ನಿಧಾನವಾಗಿ ಚಂದನ ಸವರಿ ಕೈಗಳಲ್ಲಿ ಹಗುರಾಗಿ ತಿಕ್ಕುತ್ತಾ ಗಂಧ ಲೇಪನಕ್ಕೆ ನನ್ನ ಬುಟ್ಟಿಯೆಡೆಗೆ ತಿರುಗಿದೆ, ಎಲ್ಲಿಂದ ಬಂತು ಅಲ್ಲಿ ಗಂಧದ ಬಟ್ಟಲಲ್ಲಿ ಎರಡು ಪುಟ್ಟ ಹೆಜ್ಜೆಯ ಗುರುತುಗಳು, ನಾನು ಮತ್ತೆ ವಿಭ್ರಮೆಗೆ ಬಿದ್ದೆ, ಮತ್ತದೇ ದೇವಗಂಧ, ನನ್ನ ಕರೆಯುತ್ತಲಿರುವಂತೆ ಯಮುನೆಯ ದಡದಲ್ಲಿ ಕನಸಿನ ಸಂಗತಿ ಮತ್ತೆ ಮರುಕಳಿಸಿದಂತೆ , ಈ ಬಾರಿ ಬೆಚ್ಚಲಿಲ್ಲ, ಲೇಪನವನ್ನು ಅರ್ಧ ಗಳಿಗೆಯ ನಂತರ ನಿಧಾನಕ್ಕೆ ತೆಗೆಯಲು ಹೇಳಿ, ಕೆನ್ನೆ ಕತ್ತಿಗೆಲ್ಲ ಕಣಗಿಲೆಯ ಸುಗಂಧ ಲೇಪಿಸಿ ಹೊರಡಲಣಿಯಾದೆ,ರೋಹಿಣಿ ಕರೆದು ಕೈಗೆ ಬಂಗಾರದ ನಾಣ್ಯ ಇತ್ತು ಮೃದುವಾಗಿ ನನ್ನ ಕೈ ಹಿಡಿದು ಬೇಡಿದಳು" ಮಥುರೆಗೆ ಹೋಗಿ ದೇವಕಿಗೆ ನನ್ನ ಸಂದೇಶ ಮತ್ತು ನಿನ್ನ ಸೇವೆ ಮುಟ್ಟಿಸುವೆಯಾ, "<br>
ನನಗೆ ಮಾತು ಹೊರಡಲಿಲ್ಲ, ಎತ್ತ ಇತ್ತು ಚಿತ್ತ? ಆಚೆಯ ದಡದ ಸೆಳೆತ ಯಾವ ಕಾಣದ ಕೊರಳಿನ ಕರೆ ತಿಳಿಯಲೆ ಇಲ್ಲ, ಅರ್ಧ ಘಳಿಗೆಯಲ್ಲಿ ನಾನು ಯಮುನೆಯ ದಡದಲ್ಲಿದ್ದೆ.<br>
(ಮುಂದುವರೆಯುವುದು)<br></p>
ಮಹಿಮಾhttp://www.blogger.com/profile/08011639151501072102noreply@blogger.com0