Friday, January 2, 2009

ಒಂದಷ್ಟು ಹನಿಗಳು(ಸ್ವಂತದ್ದು)

ಸುಖ-ದು:ಖ

ಹೇಮಂತನ ಮಂದಾನಿಲ
ಹೊತ್ತು ತಂದ ವಿಷಾದ,
ಅದ ಮರೆಸಲು ತಿಳಿ ಬಿಸಿಲ
ಕೋಲ ಆ ಅರುಣ ಬೀಸಿದ
ಹೀಗೆ ಬದುಕಲೂ ನಡೆವುದು
ಋತುಗಳ ಆಟ,
ಸಿಹಿ ,ಕಹಿಗಳ ಮಿಶ್ರ
ಕೂಟ,
ದು:ಖದ ನಂತರ ಸುಖ
ಎನ್ನುವುದು ಬದುಕಿನ ರೀತಿ,
ಕತ್ತಲೆಯ ನಂತರವೆ ಬೆಳಕು
ಇದು ಸೃಷ್ಟಿಯ ನೀತಿ.

ಬಯಕೆ
ಮತ್ತೆ ಇವತ್ತು ಬೆಳ ಬೆಳಗ್ಗೆ
ತುಂತುರು ಮಳೆ ಹನಿ
ಎದೆಯೊಳಗೂ ಹೊರಗೂ
ತಂಪೋ ತಂಪು,
ಅಮ್ಮನಂತೆ ಬಾನು,
ಅಪ್ಪನಂತೆ ವರುಣ
ಕರುಳ ಕುಡಿಯಂತೆ ಅವನಿ,
ಅಲ್ಲಿ ನಾನು,ನೀನು,
ಅವನು
ಅವಳು
ಧನ್ಯೆ ಧರಣಿ,
ಕುಡಿಯೊಡೆಯುತಿವೆ ಕನಸುಗಳು
ನನ್ನಲ್ಲು,ಅವನಲ್ಲೂ
ಬಯಕೆ ಬುತ್ತಿಯ ಉಣ್ಣುವ ಸಮಯ
ಮಳೆಯೆಂಬ ಹಬ್ಬದ ಸಮಯ!!

ಮಗು
ತೊಟ್ಟಿಲ ತೂಗುವ ತಾಯಿಯ
ಮನದಲ್ಲು,
ಬೆಟ್ಟವ ಹತ್ತುವ ಯಾತ್ರಿಯ
ಎದೆಯಲ್ಲೂ
ಮಲಗಿದೆ ಪುಟ್ಟ ಮಗು
ಶ್ರದ್ಧೆಯ ರೂಪದಿ,
ಹಾಲುಣ್ಣುವ ಕಂದನ
ಕಣ್ಣಲ್ಲಿದೆ ಅಮ್ಮನ
ಚಂದ್ರಬಿಂಬ
ಹಾಲೂಡುವ ತಾಯಿಗೋ
ತನ್ನ ಮುದ್ದುಮಗುವೇ
ಮನಸಿನ ತುಂಬ
ಕಲ್ಲಲ್ಲೂ ಹೂವಿನ
ಕುರುಹು ಅರಳಲಿ
ಮಾನವನೆದೆಯಲಿ
ಪುಟ್ಟ ಮಗುವೊಂದು
ಸದಾ ನಲಿಯಲಿ!!

ದಾರಿ

ನಾ ನಿಂತಿದ್ದೆ
ನಿನ್ನ ಮನೆ ಬಾಗಿಲ ಮುಂದೆ,
ಕರೆಯಲು ಸ್ವರವೇ ಇರಲಿಲ್ಲ,
ನಾ ನಿಂತಿದ್ದೆ
ನೀ ಬರುವ ದಾರಿಯಲ್ಲಿ
ಅಂದು ಅಲ್ಲಿ ನೀ ಬರಲೇ ಇಲ್ಲ
ನದಿಯಂತೆ ನಿನ್ನ ಸೇರುವ
ಆಸೆ ಹೊತ್ತು ಬಂದೆ
ನೀನೇಕೆ ಸಮುದ್ರವಾದರೂ
ಹಿಂದೆ ಸರಿದೆ??
ಪ್ರೇಮದ ಮಹಲಿನೆಡೆಗೆ ಜೊತೆಯಲ್ಲಿ
ನಡೆಯಲಿತ್ತು ನಮ್ಮ ಪಯಣ
ಬೇರೆಯಾಯಿತೇಕೆ ದಾರಿ
ಮುಗಿತೇಕೆ ಕಥೆ ಆರಂಭದಲ್ಲಿ?

No comments:

Post a Comment