Friday, July 21, 2017

ಎರಡು ಕಣ್ಣುಗಳು

"ಆ ಪುಟ್ಟ ಕಿಟಕಿ, ಪುಟ್ಟ ಕಿಟಕಿಯಲ್ಲಿ ಅದೆಷ್ಟು ವಿಶಾಲ ಬಾನು ತುರುಕಿಸಲಾದೀತು? ತೀರಾ ನೀಲಿ ಅಷ್ಟೇ ಕಾಣಿಸುವ ರಾತ್ರಿಯಲ್ಲಿ ದೂರ ತಾರೆಗಳು ಮಸುಕಾಗಿ ಹೊಳೆವಷ್ಟೇ ಜಾಗ, ಅದೇ ಹಸಿರು, ಅದೇ ಪಕ್ಕದ ಮನೆಯ ಕಿಟಕಿ ಅದೇ ವಾಹನಗಳ ಶಬ್ದ. ಹೊರ ನೆಟ್ಟ ಎರಡು ಕಣ್ಣುಗಳು ಮನೆಯಿಡೀ ಸುತ್ತಾಡಿ ಮತ್ತೆ ಬಂದು ಅದೇ ಕಿಟಕಿಯಲ್ಲಿ ಹಣುಕುತ್ತವೆ , ಹೊರಗಿನ  ಜಗತ್ತಿಗೆ ಮೈಯಾಗುತ್ತವೆ,ಮಧ್ಯಾಹ್ನ ೨ ಗಂಟೆಯ ತನಕ ಬೇರೆ ಕೆಲಸವೇ ಇಲ್ಲ ಅನ್ನುವ ಹಾಗೆ , ೨ ರ ನಂತರ ಗೇಟಿನ ಶಬ್ದ, ಕಣ್ಣಲ್ಲೊಂದು  ದೀಪ ಸೆರಗು ಹೊದ್ದು ಓಡಾಡುವುದು, ಆಗೀಗ ಸದ್ದು  ಕೇಳುವುದು , ಮತ್ತೆ ಸ್ವಲ್ಪ ಹೊತ್ತಿನ ನಂತರ ಹೊರಗೆ ಗೇಟಿನ ಶಬ್ದ, ಮತ್ತದೇ ಮೌನ, ನಾಲ್ಕು ಗಂಟೆಗೆ ಪಕ್ಕದ ಬಿಲ್ಡಿಂಗಿನಲ್ಲಿ ಗಲಾಟೆ, ಕಣ್ಣುಗಳು ಮತ್ತಷ್ಟು ದೂರ ಹಿಗ್ಗಿ ನೋಡಲು ಪ್ರಯತ್ನಿಸುತ್ತಿವೆ, ಹೌದು ಪಕ್ಕದ ಮನೆಗೆ  ಯಾವುದೋ ಬಾಡಿಗೆಯವರು ಬಂದಿರಬೇಕು. ಸ್ವಲ್ಪ ಹೊತ್ತಿಗೆಲ್ಲ ಸದ್ದು ಕಮ್ಮಿಯಾಗುವುದು , ಪಕ್ಕದ ಮನೆಯ ಕಿಟಕಿ ದೊಡ್ಡದಾಗಿ ತೆರೆಯುತ್ತಲಿದೆ, ಅಲ್ಲೆರಡು ಜೋಡಿ ಕಣ್ಣುಗಳು , ಬಹುಶಃ ಈ ಕಣ್ಣುಗಳಿಗೆ ಸಂಕೋಚವೇ, ಕಿಟಕಿ ತುಸು ಓರೆಯಾಯಿತು, ಮರುದಿನ ಒಂಬತ್ತಕ್ಕೆಲ್ಲ ಮತ್ತೆ ತೆರೆದ ಕಿಟಕಿ, ಮತ್ತದಕ್ಕೆ ಅಂಟಿದ ಕಣ್ಣುಗಳು , ಆ ಕಡೆಯ ಕಿಟಕಿಯಲ್ಲೂ ಎರಡು ಕಣ್ಣುಗಳು  ಆದರೆ ಇವತ್ತು ಚೂರು ಬಾನು ಕಣ್ಣಲ್ಲೂ ಮಿನುಗಿತ್ತಾ?  ನೀಲಿ ಕಣ್ಣುಗಳೆರಡೂ ದಿಟ್ಟಿಸುತ್ತವೆ, ಆ ಕಿಡಕಿಯಲ್ಲಿ ಕಣ್ಣು  ಅರಳುತ್ತದೆ, ದಿನ ಕಳೆದಂತೆಲ್ಲ ಅದೇನು ಸಂಭಾಷಣೆ , ಮೌನದಲ್ಲಿ ಕಳೆದು ಹೋಗುತ್ತಿದ್ದ ಮಧ್ಯಾಹ್ನಗಳಲ್ಲಿ ಈಗ ಸಂಗೀತ , ಕಣ್ಣುಗಳೋ ರಾತ್ರಿ ತಾರೆಗಳನ್ನು ಕದ್ದು ಕೆಡಗಿಕೊಂಡಂತೆ ಹೊಳೆಯುತ್ತವೆ, ನಿರೀಕ್ಷೆಯಲ್ಲಿ, ಬಹುಶಃ ಗಂಟೆಗಳು ನಿಮಿಷಗಳಾಗಿ.
ಬಹಳ ದಿನಗಳ ನಂತರ ಮತ್ತೆ ಕಿಟಕಿಯಲ್ಲಿ ಅವೇ ಎರಡು ಕಣ್ಣುಗಳು . ಪಕ್ಕದ ಮನೆಯ ಕಿಟಕಿಗಳು ಮುಚ್ಚಿವೆ ಹೊರಗೆಲ್ಲ  ಚೂರೇ ಚೂರು ಕಾಣಿಸುತ್ತಿದ್ದ ನೀಲಿ ಬಾನು, ರಾತ್ರಿಯ ಚುಕ್ಕಿ ಚಂದ್ರಮರು ಈಗ ಕಾಣಿಸುವುದಿಲ್ಲ, ಅಲ್ಲಿ  ಮತ್ತೊಂದು ಮಹಡಿ ಏಳುತ್ತಿದೆ. ಬರಿ ಧೂಳು , ಶಬ್ದ ಅಷ್ಟೇ, ಕಿಟಕಿಯಲ್ಲಿನ ಕಣ್ಣುಗಳು ಕಂಬನಿಯಲ್ಲಿ ತೊಳೆಯುತ್ತಿವೆ, ಧೂಳಿಗೋ "
ಬರೆದಿಟ್ಟು ಪುಸ್ತಕ ಮುಚ್ಚಿದೆ...ಬೆಳಗ್ಗೆ ನಾಲ್ಕರ ಮುಂಜಾವು...ಎದುರಿನ ಮನೆಯ ದೊಡ್ಡ ಜಾಗದಲ್ಲಿ ಇರುವ ಐದು ಮರಗಳಲ್ಲಿ ಹಳದಿ ನೇರಳೆ ಗುಲಾಬಿ ಬಣ್ಣದ ಹೂಗಳು ಮಂದ ಬೀದಿ ದೀಪದ ಬೆಳಕಿನಲ್ಲಿ ನಿತ್ಯ ದರ್ಶನ...ಇದು ಗೇಟ್‌ವೇ ಕಮ್ಯೂನಿಟಿ, ನಮ್ಮ ಮನೆಯ ಪಕ್ಕದ್ದು ಎರಡು ದೊಡ್ಡ ಸೈಟ್‌ ಅಲ್ಲಿ ಕಟ್ಟಿದ ಮನೆ...ದೊಡ್ಡ ಲಾನ್, ಮರಗಳು ರಸ್ತೆಯ ಬದಿಗೆ, ನಮ್ಮ ಮನೆಯ ಮಹಡಿಯ ಕೋಣೆಯ ಕಿಟಕಿಯಿಂದ ಈ ಹತ್ತು ವರ್ಷ ಅದೇ ದೃಶ್ಯ...

ಬೆಳಗ್ಗೆ ಐದಕ್ಕೆ ಅವರ ಮನೆಯ ಬಾಗಿಲು ತೆರೆಯುತ್ತದೆ.ಕೆಲಸದವಳು ಗುಡಿಸಿ ರಂಗವಲ್ಲಿ ಹಾಕಿ ಒಳಹೋಗುತ್ತಾಳೆ.ನಂತರ ಲಾನಿನ ಪಕ್ಕದ ರೂಮ್ ಗಾಜಿನಲ್ಲಿ ಗಂಡ ಹೆಂಡತಿ ಇಬ್ಬರೂ ಜಿಮ್ ಮಾಡುತ್ತಿರುವುದು ಕಾಣಿಸುತ್ತದೆ.ಮೊದಮೊದಲು ನನಗೆ ವಿಶೇಷ ಅನ್ನಿಸಿದ್ದು, ಅಲ್ಲಿರುವ ಅಷ್ಟು ಹೊತ್ತು ಇಬ್ಬರೂ ಅಪ್ಪಿತಪ್ಪಿ ಕೂಡ ಒಂದು ಮಾತಾಡುತ್ತಿರಲಿಲ್ಲ.ತೀರಾ ಸಹಜ ದೃಶ್ಯ ಆದ್ದರಿಂದ  ಇತ್ತೀಚೆಗೆ ನಾನು ಧೀರ್ಘ  ಓದಿನಲ್ಲಿ ಮುಳುಗಿಹೋಗುತ್ತಿದ್ದೆ.ಅದೇ ದೃಶ್ಯಗಳನ್ನು ನೋಡಿ ಅದರಲ್ಲಿ ಏನೂ ಸ್ವಾರಸ್ಯ ಇಲ್ಲ ಅಂತ ಅನಿಸುತ್ತಿತ್ತು...

ಎಂಟು ಗಂಟೆ ಆಗುವುದಕ್ಕಿಲ್ಲ ಸರಿಯಾಗಿ ನಾನು ಸ್ನಾನಕ್ಕೆ ಹೊರಡುವ ಹೊತ್ತು, ಗಂಡ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದು ಬರುತ್ತಿದ್ದ, ಅವಳು ಹಿಂದೆಯೇ ಬಂದು ಟಾಟಾ ಮಾಡುತ್ತಿದ್ದಳು, ಜೊತೆಗೆ ಗಂಡ ಇವಳಿಗೊಂದು ಮುತ್ತು ಕೊಟ್ಟರೆ ವಾಪಸು ಇವಳೊಂದು ಕೊಡುತ್ತಿದ್ದಳು.ಈ ದೃಶ್ಯ ನನಗೆ ವೈಯಕ್ತಿಕವಾಗಿ ಅಪ್ಯಾಯಮಾನ.ಎಲ್ಲವೂ ಸರಿಯಿದೆ ಆ ಮನೆಯಲ್ಲಿ ಎಂಬುದರ ಸೂಚಕ.ನಾನು ನನ್ನ ಗೆಳೆಯರೊಂದಿಗೆ ಸಂಜೆ ವಾಕಿಂಗ್ ಮುಗಿಸಿ ಬರುವಾಗ, ಪಕ್ಕದ ಮನೆಯವನ ಕಾರು ಮನೆ ಎದಿರು ಜೋರು ಹಾರ್ನ್ ಹಾಕುತ್ತಿರುತ್ತದೆ.ಸಮಯವೆಂದರೆಸಮಯ. 

ಕಮ್ಯೂನಿಟಿಯ ಯಾರೂ ಜಾಸ್ತಿ ಅವರ ಮನೆಗೆ ಹೋಗುವುದಿಲ್ಲ, ಮೊನ್ನೆ ನಮ್ಮ ಸಂಘದ ಚುನಾವಣೆಯಲ್ಲಿ ಸೆಕ್ರೆಟರಿ ಹುದ್ದೆಗೆ ಸ್ಪರ್ಧಿಸಿ ಅಂತ ಕೇಳಲು ಅವನ ಮನೆಗೆ ಹೋಗಿದ್ದಾಗ ಕೆಲಸದವನನ್ನು ಕಳಿಸಿ ಬ್ಯುಸಿ ಅಂತ ಹೇಳಿಕಳಿಸಿದನಂತೆ. ವಿಚಿತ್ರ ಅನಿಸಿತ್ತು ನನಗೆ. ನಾನೊ, ಹರೆಯದಲ್ಲಿ ಹೆಂಡತಿಯನ್ನು ಕಳೆದುಕೊಂಡ ವಿದುರ. ಮನೆಯಲ್ಲಿ ಇದ್ದೊಬ್ಬ ಮಗ ವಿದೇಶ ವಾಸಿ.ಓದು ತಿರುಗಾಟದ ಹುಚ್ಚು ನನ್ನ ಒಂದೇ ಕಡೆ ಕಟ್ಟಿ ಹಾಕಲು ಸಮರ್ಥವಾಗಿರಲಿಲ್ಲ.ಆದರೂ ಕೊನೆಗೆ ನನ್ನನ್ನೇ ಸೆಕ್ರೆಟರಿ ಅಂತ ಆರಿಸಿದ್ದರು.ಅವತ್ತು ಗೆಟ್ ಟುಗೆದರ್ ಗೆ ಕರೆಯಲು ಅವರ ಮನೆಗೆ ಹೋಗಿದ್ದೆ. ಮಾತುಕತೆಯ ನಡುವೆ ಅವನ ಹೆಂಡತಿ ಕೂಡ ಬಂದು ಸೇರಿಕೊಂಡಳು. ನೋಡಲು ಸುಂದರವಾದ ಜೋಡಿ. ಅರ್ಧ ಗಂಟೆ ಹರಟಿ ನಾನು ಹೊರಟಾಗ ಆತ'ಮತ್ತೊಮ್ಮೆ ಬನ್ನಿ'ಅಂತ ಔಪಚಾರಿಕವಾಗಿ ಆಹ್ವಾನಿಸಿದ.ಮನೆಯ ಬಾಗಿಲಿಗೆ ಬಂದು ಬರುತ್ತೇನೆ ಅಂತ ನೋಡಿದೆ.. ಅವನ ಹೆಂಡತಿಯ ಕಣ್ಣುಗಳಲ್ಲಿ ಏನೋ ನೋವಿದ್ದಂತೆ ಅನಿಸಿತು ಒಂದು ಕ್ಷಣ, ಆಕೆ ಕಣ್ಣು ತಪ್ಪಿಸಿ ಒಳ ಹೋದಳು. 

Monday, July 17, 2017

ಧಾರವಾಹಿ ಸುಗಂಧಿನಿ - ಭಾಗ ೩

ಯಮುನೆ ಹರಿಯುತ್ತಿದ್ದಳು ಇಕ್ಕೆಲಗಳನ್ನು ಬಾಚಿ ಬಾಚಿ ತಬ್ಬಿ , ಒಮ್ಮೊಮ್ಮೆ ಮುನಿಸು ಹೊತ್ತಿನಲ್ಲಿ ಪುಂಡಾಟ ಮಾಡುವ ಮಗು, ಒಮ್ಮೊಮ್ಮೆ ಸರಳ ಸುಂದರಿ, ಒಮ್ಮೊಮ್ಮೆ ತೀರಾ ಯಾರಿಗೋ ಕಾದು  ಬೇಸತ್ತವಳಂತೆ, ವೈರಾಗಿಯೊಮ್ಮೊಮ್ಮೆ, ಒಮ್ಮೊಮ್ಮೆ ಮೋಹಿನಿ, ನದಿಯೆಂದರೆ ಯಮುನೆ, ನನ್ನೆದೆಯೊಳಗೂ ಅವಳು ಹರಿಯುತ್ತಿದ್ದಳು, ತಬ್ಬಲಿತನವನ್ನು ಸಂತೈಸಿ, ಸದಾ ನಾನಿಲ್ಲವೆ ಎನ್ನುವಳು, ನನ್ನ ಭಾವದ ಹರಿವು  ಅವಳ ನೀರ  ಹರಿವು ಎರಡೂ  ನೀರಸ ಬದುಕಿಗೆ ಆಗಾಗ ರಂಗು ತುಂಬುವ ಸುತ್ತಲ ಹಸಿರನ್ನ ನೋಡುತ್ತಾ ಕಳೆಯುತ್ತಲಿತ್ತು, ಕೈಯಿಟ್ಟರೆ ಸಾಕು ತಣ್ಣಗೆ ಕೊರೆವ ನೀರು, ಕಾಳಿಂದಿಯಲ್ಲಿ ಅಮೃತಪಾನವಾಗಿ ಬದಲಾಗುವ ಪರಿಗೆ ನಾನು ಆಶ್ಚರ್ಯ ಪಟ್ಟಿದ್ದುಂಟು ಬಹಳ ಸಲ  , ನನಗೆ ನೆನಪೇ ಇದೆ, ಚಿಕ್ಕವಳಿದ್ದಾಗ ಇದೆ ದಡದಗುಂಟ ಅಜಮಾಸು ನೂರು ಯೋಜನ  ಒಂದು ವಾರ ನಡೆದು ಅಲ್ಲಿ ಹಳ್ಳಿಯಲ್ಲಿ ತಂಗಿದ್ದೆವು ಅದನ್ನು ತಂದೆ "ವೃಂದಾವನ" ಅಂತ ಪರಿಚಯಿಸಿಕೊಟ್ಟಿದ್ದರು, ಅಲ್ಲಿಯ ಮಣ್ಣು ಹೂ ಹಣ್ಣು ಗೋಧಿಗೆ ಹೇಳಿ ಮಾಡಿಸಿದಂತಿತ್ತು , ಮಕ್ಕಳು ಬಲು ಚೂಟಿಯಾಗಿದ್ದರು , ಎಲ್ಲಕ್ಕಿಂತ ನನಗೆ ಆಗ ಬೆನ್ನು ಗೊತ್ತಾಗದಷ್ಟು ಚೂರು ಬಾಗಿತ್ತು , ಕಾಲೂ ,ಅಷ್ಟೇ, ಸುಮತಿ ಸುಗಣ್ಯ  ರಮಣಿ ಮುಂತಾದ ಮಕ್ಕಳೊಂದಿಗೆ ತಾನು ಕಳೆದ ಆ ದಿನಗಳು ಇವತ್ತಿಗೂ ನೆನಪಿದೆ, ಅಲ್ಲಿಯ ಯಮುನೆ ಇಲ್ಲಿಯವಳಲ್ಲ ಅಂತ ಬಹಳ ಸರಿ ಅನಿಸಿದ್ದಿದೆ, ಬೆಟ್ಟ ಬಯಲು ಎರಡು ಸಮ್ಮಾನವಾಗಿ ಹಂಚಿ ಹರಿಯುತ್ತಿದ್ದ ಆ ಪ್ರದೇಶ ಕೂಡ ನಂದನ ವಂಶಸ್ಥರಿಗೆ ಸೇರಿದ್ದು ಅಂತ ತಂದೆ ಯಾವಾಗಲೂ ಕಥೆ ಹೇಳುತ್ತಿದ್ದರು.
ತಟದಲ್ಲಿ ನಿಂತು ಹಣೆಯ ಮೇಲೆ ಕೈ ಇತ್ತು ದೂರದೆಡೆಗೆ ಕಣ್ಣು ಹಾಯಿಸಿದೆ , ಸುಶೇಷಣ ತನ್ನ ದೋಣಿಯನ್ನು ದಡದಲ್ಲಿದ್ದ ಮಾಮರಕ್ಕೆ ಕಟ್ಟಿ ಮಾಯವಾಗಿದ್ದ, ಬಹುಶಃ ನಿನ್ನೆ ಬಹಳ ದಣಿದಿದ್ದನೇನೋ ಎದ್ದಿರಲಿಲ್ಲ, ಉಳಿದ ಮೀನುಗಾರರು ಯಮುನೆಯ ಆ ತುದಿಯಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು . ಆ ದಡ ತಲುಪಿಸಲು ಯಾವ ಮಾಯಾವಿ ಬಂದಾನು? ಆದರೆ ನನಗೆ ಅಲ್ಲಿಗೆ ತಲುಪಲೇ ಬೇಕಿತ್ತು. ಅದೂ  ಬಹಳ ತುರ್ತಾಗಿ ರಾಣಿ ರೋಹಿಣಿಯ ಸಂದೇಶ ಹೊತ್ತು , ತಾಯಿ ದೇವಕಿಯನ್ನು ನೋಡಲು, ಮತ್ತೆ ಮೈಯೆಲ್ಲಾ ಪುಳಕಿಸಿತು,ಕೈಯಲ್ಲಿದ್ದ ಗಂಧ ಚಂದನದ ಪೆಟ್ಟಿಗೆ, ಜತೆಗೆ ರಾಣೀವಾಸದವರು ನೀಡಿದ್ದ ಪುಟ್ಟ ಬುಟ್ಟಿ , ಕೈಗಳು ನೋಯಲಾರಂಭಿಸಿತ್ತು
ಇದ್ದಕ್ಕಿದ್ದಂತೆ ಆ ಕಡೆಯಿಂದ ಒಂದು ದೋಣಿ ಇತ್ತ ಬರುತ್ತಿರುವಂತೆ ಕಾಣಿಸಿತು, ಓ ಅದು ಸೈನಿಕರ ದೋಣಿ ಅವರಿಗೆ ಇಲ್ಲೇನು ರಾಜಕಾರ್ಯ, ನನಗರ್ಥವಾಗಲಿಲ್ಲ, ಉಗ್ರಸೇನ ಮಥುರೆಯ ಪಟ್ಟದಲ್ಲಿದ್ದಾಗ ನಂದನನ್ನು ಮತ್ತು ನಂದನ ತಂದೆಯನ್ನು ಪ್ರಾಣಕ್ಕೆ ಸ್ನೇಹಿತರಂತೆ ನೋಡಿದ್ದ, ಆದರೆ ಅವನ ಇದ್ದೊಬ್ಬ ಮಗ ರಾಜ್ಯದ ಮಾನವನ್ನು ಸೂರೆಗೈಯತೊಡಗಿದ, ಸಾಲದು ಅಂತ ತಂದೆಯನ್ನು ಪಟ್ಟದಿಂದ ಕೆಳಗಿಳಿಸಿ ಸ್ವಯಂ ಪಟ್ಟಾಭಿಷೇಕ ಮಾಡಿಕೊಂಡ, ತಂದೆಯ ಸಲಹೆಗಳಿಗೆ ಕಿವಿಗೊಡದೆ, ರಾಜ್ಯದ ಸಾಮಂತರಿಗೆ ಕೊಡಲಾಗುತ್ತಿದ್ದ ಗೌರವ ಮತ್ತು ಮರ್ಯಾದೆ ಕಿತ್ತೆಸೆದು ತೆರಿಗೆ ಮತ್ತು ದಂಡಗಳನ್ನು ಹೆಚ್ಚಿಸಿದ. ಅವನ ಮಾತು ಕೆಳದವರನ್ನು ಮೂಲೆಗೊತ್ತಿದ, ಅಂತೆಲ್ಲಾ ಹಲವಾರು ಕಥೆಗಳು ಆ ದಡದಿಂದ ತೇಲಿ ಬರುತ್ತಿದ್ದವು , ನಾನು ರಾಜಕಾರಣ ಅರಿತವಳಲ್ಲ, ಆದರೂ ನಮ್ಮ ವ್ರಜ ಭೂಮಿಗೆ ಯಾವತ್ತೂ ಕೆಟ್ಟದ್ದು ತಡೆದುಕೊಳ್ಳುವ ಶಕ್ತಿ  ಇರಲಿಲ್ಲ, ಅದು ನಂದ ರಾಜನಂತೂ ರಿಷಿ ಸಮಾನ ರಾಜ, ಆಚಾರ ವಿಚಾರದಲ್ಲಾಗಲಿ ಅವನು ಯಾರನ್ನು ನೋಯಿಸಿದ್ದೆ ಇಲ್ಲ, ಮಕ್ಕಳಿಂದ ವೃದ್ಧರವರೆಗೆ ಅದೇ ಆದರೆ ಅದೇ ಪ್ರೀತಿ, ಅಷ್ಟು ಸಮ ತೂಗುವ ಅವನ ಪ್ರಾಮಾಣಿಕತೆಯನ್ನು ಇತ್ತೀಚಿಗೆ ಕಂಸ ಪ್ರಶ್ನಿಸಲಾರಂಭಿಸಿದ್ದ , ಕಂಸ ನಂದನನ್ನು ಬಲ್ಲದಿದ್ದವನೇನಲ್ಲ , ವಸುದೇವ ನಂದ  ಕಂಸ ಮೂವರ ಗೆಳೆತನ ಹಳೆಯದ್ದೇ, ಯಾವತ್ತೋ ಒಮ್ಮೆ ವಾಸುದೇವ ಕುಂತಿಯನ್ನು ಕಂಸನಿಗೆ ಕೊಟ್ಟು  ವಿವಾಹ ನೆರವೇರಿಸಬೇಕೆಂದುಕೊಂಡಿದ್ದನಂತೆ, ಅವನೋ ಕುಂತಲ ರಾಜ್ಯದ ರಾಜಕುಮಾರನಾದರೂ  ಕಂಸನ ಮೇಲೆ ಅತಿಯಾದ ವಿಶ್ವಾಸ, ಅದೆಲ್ಲವೂ ಈಗ ಮರೆತ ಕಥೆ.

ದೂರದಲ್ಲಿದ್ದ ದೋಣಿ ಹತ್ತಿರಕ್ಕೆ ಬಂದಿತ್ತು , ಅದು ಎರಡೆರಡು ಸೈನಿಕರನ್ನು ಹೊತ್ತು ತಂದಿತ್ತು ಒಬ್ಬ ಕಾಂಗದ , ಮತ್ತೊಬ್ಬ ನಿರೂಪ ಇಬ್ಬರು ಇದು ಎರಡನೇ ಸಲ ಬರುತ್ತಿರುವುದು, ಪಾಪ ಅವರೇನು ಮಾಡಿಯಾರು, ಜೀವಂತ ಇರಬೇಕಾದರೆ  ರಾಜ ಹೇಳಿದ ಕೆಲಸ ಮಾಡಲೇಬೇಕು, ನನ್ನೆದೆಯಲ್ಲಿ ಯಾಕೋ ಅವರಿಗಾಗಿ ತುಸು  ಆರ್ದ್ರ ಭಾವವೊಂದು ಅವತ್ತೇ ಹುಟ್ಟಿತ್ತು, ಹಾಗೆಯೇ ನಂದರಾಜರ ಬಗ್ಯೆ ಕಾಳಜಿಯೂ, ದಡಕ್ಕೆ ದೋಣಿ ಕಟ್ಟಿ ಇಬ್ಬರೂ  ಕಟ್ಟಿ ಹಿಡಿದು ಇಳಿದರು , ನನ್ನ ನೋಡುತ್ತಲೇ ಪರಿಚಿತ ಭಾವವೊಂದು ನಗೆಯಲ್ಲಿ ಕೊನೆಯಾಯಿತು, "ತ್ರಿವಕ್ರೆ, ನಂದರಾಜರು ಲಭ್ಯವಿರುವರೇನು? ನಾವು ಬಂದ  ವಿಷಯ ಅವರಿಗೆ ತಿಳಿಸಬೇಕಿತ್ತು" ಸಣ್ಣದಾದ ನಡುಕವೊಂದು ನನ್ನೇ ಆವರಿಸಿತು, ತಕ್ಷಣ ಎಚ್ಚೆತ್ತು ನುಡಿದೆ"ನನಗೆ ತಿಳಿಯದು, ನೀವು ಅರಮನೆಯ ಹತ್ತಿರ ಹೋಗಿ ಕೇಳಬೇಕು" "ನೀನು ದೋಣಿಗಾಗಿ ಕಾಯುತ್ತಿರುವೆಯಾ ಸಹೋದರಿ, ನಮ್ಮ ವಿಶಂಕು ನಿನ್ನ ಆ ದಡಕ್ಕೆ ತಲುಪಿಸಿ ಬರುವ, ಸರಿಯೆನು?" ನಿರೂಪನ  ದನಿ, ಅದರಲ್ಲಿದ್ದ ನಿಜ ಕಾಳಜಿಗೆ ಕರಗಿದೆ ನಾನು, ನನ್ನ ಯೋಗ್ಯತೆಯನ್ನು ಅರ್ಹತೆಯನ್ನು ಕೇವಲ ನನ್ನ ರೂಪದಿಂದಲೇ ಅಳೆವವರ ಮಧ್ಯೆ ನನಗೆ ಗೌರವಿಸಿ ಅರ್ಥೈಸಿಕೊಳ್ಳುವವರು ಬಹಳೇ ಕಮ್ಮಿ. ಮರು ಮಾತಾಡದೆ ದೋಣಿ ಹತ್ತಿ ಕುಳಿತೆ. ದೋಣಿ ಸಾಗಿತು ಯಮುನೆಯ ನೊರೆ ನೊರೆ ತೆರೆ ಸೀಳುತ್ತ.
(ಮುಂದುವರೆಯುವುದು)