Saturday, January 19, 2013

ನಾನು ಮತ್ತು ರುಮಿ

ನನ್ನ ಕಾಡಿದ ಬರಹಗಾರರಲ್ಲಿ ರುಮಿ-ಮಾಯ ಅಂಜೆಲೋ ತುಂಬಾ ಆಪ್ತರಾಗುತ್ತಾರೆ..ರುಮಿ-ಅವನು ಪ್ರಸ್ತಾಪಿಸದ ವಿಷಯಗಳೇ ಇಲ್ಲ...ಅವನ ಕಾವ್ಯ-ವಿಚಾರಗಳೊಡನೆ ನನ್ನ ದಿನಗಳು ಬಲು ರೋಚಕ- ಇತ್ತೀಚೆಗೆ ನನ್ನ ಮನಸ್ಸು ಅವನನ್ನು ಎಲ್ಲಾ ವಿಷಯಗಳಲ್ಲು ಪ್ರತಿಮೆಯಾಗಿ ಬಳಸುತ್ತಿದೆ!! ಈ ಪ್ರಕ್ರಿಯೆಯಲ್ಲಿ ನಾನು-ಅವನ ನಡುವೆ ಹುಟ್ಟಿದ ಕೆಲ ಕವಿತೆಗಳು ನಿಮಗಾಗಿ..
  •  
ನೀರವ ರಾತ್ರಿಯ ಏಕಾಂತದಲ್ಲಿ
ತಾರೆಗಳಿಲ್ಲದ ಬಾನ
ನೋಡುತಲಿದ್ದೆ
ಮುಗುಳ್ನಗೆಯ ಬೆಳ್ದಿಂಗಳ
ಚೆಲ್ಲಿ ಬಂದ ಅಲ್ಲಿಗೆ
ನನ್ನ ರುಮಿ
ಈಗ ನಾನೂ ಅವನು
ನಮ್ಮ ಕಣ್ಣೀರಿನ
ನಕ್ಷತ್ರಗಳನ್ನು ಹೆಕ್ಕುತ್ತಿದ್ದೇವೆ!!
  •  
 ರಾತ್ರಿ ಎಲ್ಲಾ ಅವನ ಬೆಚ್ಚನೆಯ
ಕಾವ್ಯಗಳ ಸಾಲು ಕೇಳುತ್ತಾ
ನಿದ್ರಿಸಿದ್ದೆ
ಬೆಳಕು ಹರಿಯಿತು
ಮೈ ತುಂಬ ಕಳ್ಳ ಕೇದಗೆಯ ಘಮ
ತುಟಿಗಳಲ್ಲಿ ರುಮಿಯ
ಕಾವ್ಯ ಜೇನು!!
  •  
ನಾನು ಮಲಗಿದ್ದೆ
ಕಣ್ತೆರೆದು
ನನ್ನೊಳಗಿನ ನನ್ನ
ಎಚ್ಚರಿಸಿದ್ದು
ಅವನ
ತಣ್ಣನೆಯ ಒರಟು
ಕಾವ್ಯದ ಕೈಗಳು !!

ನೆಲದಲ್ಲಿ ಮೂಡಿದ
ನಿನ್ನ ಪ್ರತಿ ಹೆಜ್ಜೆಗೊಂದು
ಕಾವ್ಯದ ಹೂವರಳಿದೆ
ರುಮಿ
ಅದರ ಗಂಧ ಕುಡಿಯುವ
ಚಿಟ್ಟೆ ನಾನು!!
  •  

ಹಸಿ ಮಣ್ಣಿನೊಳಗೆ ಬಿತ್ತಿದಂತೊಂದು ಬೀಜ
ನೀ ನನ್ನೊಳಗೆ ನೆಟ್ಟ
ಸೂಫಿ ಈಗ
ಮರವಾಗಿದೆ
ಸಂತ,
ನೋಡಿ ಆನಂದಿಸಲು ಎಂದು
ಬರುವೆ ನನ್ನ ರುಮಿ??
ಕೇಳು
ಕಾಲ-ದೇಶಗಳಮೀರಿದ
ಹಕ್ಕಿಗಳ ಗಾನ
ಕೊಂಬೆ ಕೊಂಬೆಗೆ ಅರಳಿರುವ
ನಿನ್ನ ಕನಸುಗಳ
ಹೂ
ನನ್ನ ಹುಡುಕದಿರು
ಮರದೊಳಗೊಂದು ಮರಿ ಬೀಜವಾಗಿ
ನಿನ್ನ ಕರೆಗೆ
ಕಾಯುತಿರುವೆ ನಾನೂ
ಮತ್ತೆ
ಮೊಳಕೆಯೊಡೆಯಲು!!







Sunday, January 13, 2013

ಸುಮ್ಮನಿರದ ಸಾಲುಗಳು...

  ನಾನಳಿಯಲಿ

ನಿನಗೆಂಥ ಪ್ರೇಮದ ಹಸಿವು ದೊರೆ??
ನಿನ್ನ ಬಯಕೆಯ ಕಡಲ ಹೀರಿ
ಮುತ್ತಿನ ಮಧು ಮಳೆಯಸುರಿದೆ
ನೋಟದ ಮಿಂಚಿತ್ತು
ಪಿಸುಮಾತುಗಳ ಗುಡುಗಿತ್ತು
 ಆದರೆ...
ನಿನ್ನೆದೆಯ ಬರಡು ಮರುಭೂಮಿಯಲ್ಲಿ
ತಾಕಿ ಆವಿಯಾಯಿತು..
 ನನ್ನಲ್ಲಿ ಇನ್ನೂ ಬತ್ತದ ಜೀವಸೆಲೆಯಿದೆ
ಸುರಿವೆ ನಿನ್ನೊಡಲಿಗೆ
ತಕ್ಕೋ..ನಿನ್ನ ವಿರಹದ
ಬಡಬಾನಲಕ್ಕೆ ಸಿಕ್ಕಿ "ನಾನ"ಳಿಯಲಿ!!



ಸಂಕ್ರಾಂತಿ

 ಸಂಕ್ರಾಂತಿ ಬಂದಿದೆ
’ಸಮ್" ಕ್ರಾಂತಿ ಬರುವುದೇ??

ಅದೆಷ್ಟು ಸೀತೆಯರು..
ಅದೆಷ್ಟು ದ್ರೌಪದಿಯರು..
ಅದೆಷ್ಟು ಅಂಬೆಯರು,
ಅಂಬಾಲಿಕೆಯರು
ಕಣ್ಣ ನೀರ ಹರಿಸಿ 
ಒಡಲ ಅಸು ನೀಗಿಹರು
ನೀನು ದುಶ್ಯಾಸನರ 
ಅಳಿಸಿ ರಾಮರ ತರುವೆ
ಕ್ರಾಂತಿಯ ಕಿಡಿಯ ಹೆಣ್ಣ 
ಮನದಲ್ಲಿ ಹೊತ್ತಿಸಿ
ಒಂದಷ್ಟು ಶಾಂತಿಯ 
ತಂದಿಯೆಂದು ಆಸೆ 
ಹೊತ್ತಿದೆ ಎನ್ನ ಮನ!!
 ಹೇಳು ಬರೀ ಎಳ್ಳು ಬೆಲ್ಲ
ತರುವುದೇ ರಾಮರಾಜ್ಯ??
ಎಷ್ಟು ಕೊಟ್ಟರೇನು,ಎಷ್ಟು ಪಡೆದರೇನು?
ಸಂಕ್ರಾಂತಿ ಕ್ರಾಂತಿಯಾಗಬೇಕು
ಹೆಣ್ಣು ಕಾಳಿಯಾಗಬೇಕು
ರಣಚಂಡಿಯಾಗಬೇಕು!!