Wednesday, March 13, 2013

ಗಂಧರ್ವ ಮತ್ತು ಅತ್ತರು

ಬರೆದ ಕವನಗಳಲ್ಲಿ ಸೂಸುತ್ತಿರುವುದು
ಕೇವಲ ನಿನ್ನ ನೆನಪುಗಳ ಪರಿಮಳ
ನನ್ನ ಕವನದ ಸಾರವೆಲ್ಲ ನಿನ್ನ ನೆನಪುಗಳ
ಒಟ್ಟೂ ಸಂಕಲನ!!

ನಿನ್ನೆದೆಯ ಕಡಲ ತಡಿಯ
ಮರಳ ರಾಶಿಯಲ್ಲಿ
ನನ್ನ ಒದ್ದೆಯಾದ ಹೆಜ್ಜೆ
ಗುರುತುಗಳ
ಹುಡುಕುವಾಸೆ ಹುಡುಗಾ!!

ಇಂದೇಕೆ ಸುಪ್ತ ಸಾಗರಕೆ ಈ ಅಬ್ಬರ
ನೂರು ಬಯಕೆಗಳ ಉಬ್ಬರ,
ಹುಣ್ಣಿಮೆಯೂ ಇಲ್ಲ ಎಂದಾಗ
ಕಂಡದ್ದು ನಿನ್ನ ಮುದ್ದು ಮುಖ!!

ಅಲೆಗಳೆಲ್ಲ ಬಂದು
ನನ್ನ ತೋಯಿಸುವಾಗ
ಬೊಗಸೆಯಲ್ಲಿದ್ದ
ಕಪ್ಪೆ ಚಿಪ್ಪಲ್ಲಿತ್ತು
ನೀ ಕೊಟ್ಟ ಮುತ್ತು!!

ಹೂಗಳ ತುಟಿಯಂಚಿನಲ್ಲಿ
ತುಳುಕಿದ ಮಧುವೆಲ್ಲ
ನಿನ್ನ ತುಂಟತನವ ನುಡಿದಿರಲು
ಮೌನದ ಬಾಹುಗಳಲ್ಲಿ ನಾನು ಬಂಧಿ!!

ಹೀಗೆಲ್ಲಾ ಮೈಮರೆತ ಮನಸಿಗೆ
ನಿನ್ನ ಸಾಕ್ಷಾತ್ಕಾರ
ಆದದ್ದು ಗಂಧರ್ವ
ಗೀತೆಯಂತೆ ನಿನ್ನ ದನಿ
ಕೇಳಿದಾಗಲೇ

ಹೇಳು ದೇವರ ಸ್ವಂತ ನಾಡಿನವನೇ!!

ದೂರದೂರಿನ ಗಾಳಿಯಲ್ಲಿ ಹೊತ್ತ
ನಿನ್ನ ಗಂಧವ ಕುಡಿದ
ಮನಸಿಗೆ ಮಾಯದ ಮತ್ತೇರಿದೆ,
ಮನೋವೇಗದಲ್ಲಿ ನಿನ್ನೂರ ತಲುಪಿ
ನಿನ್ನ ಕಣ್ಣಲ್ಲಿ ಕಣ್ಣನಿಡುವ ಹೊತ್ತು
ಕೇಳುವಾಸೆ
ಹೇಳು,
ನನ್ನ ಊರಲ್ಲಿ ಪ್ರೇಮದ ಅತ್ತರು
ಸೂಸುವ
ನಿನ್ನಂಥ
ಗಂಧರ್ವರಿಹರೇ??


Sunday, March 10, 2013

ಲಹರಿ-ಸಾಗರಿಕಾಳಿಗೊಂದು ಉತ್ತರ(ಪತ್ರ)

ಪ್ರಿಯ ಗೆಳತಿ ಸಾಗರಿ,
ಎಷ್ಟು ವಿಚಿತ್ರ ನೋಡು,ನಿನ್ನ ಪತ್ರ ನಿನ್ನ ಗೊಂದಲಮಯ ಮನಸ್ಸಿನ ಪ್ರತೀಕ,ಗೆಳತೀ  ನನಗೂ ಗೊತ್ತಮ್ಮಾ ಗೆಳೆತನ ನಮ್ಮನ್ನು ಅಲ್ಪವಾದರೂ ಬದಲಾಯಿಸಬೇಕು ಎಂದು,ಅಷ್ಟಿದ್ದೂ ಗೆಳೆಯರು ಯಾಕೆ ಬೇಕು ಹೇಳು? ಒಳ್ಳೆಯ ಗೆಳೆತನ ನಮ್ಮ ವ್ಯಕ್ತಿತ್ವದ
ದೌರ್ಬಲ್ಯಗಳನ್ನ ತುಂಬಾ ಚೆನ್ನಾಗಿ ಮರೆ ಮಾಚುತ್ತದೆ,ಒಂದು ರೀತಿಯ ಫುಲ್ ಫಿಲ್ ಮೆಂಟ್ ಅದು ಅಲ್ವಾ? ನಾನು ನಿನ್ನಂತೆ ಭಾವ ಜೀವಿಯಲ್ಲ,ಆದರೆ ನಿನ್ನ ಪತ್ರಕ್ಕೆ ನಾನು ಉತ್ತರಿಸಲೇ ಬೇಕು ಎನ್ನಿಸಿತು...ಅದಕ್ಕೆ ಈ ಮಾರೋಲೆ!!

ಮೂರು ವರ್ಷಗಳ ಹಿಂದೆ ಇದೇ ನಿನ್ನ ಶರೂ ಒಬ್ಬ ಸುಂದರ ಮನಸ್ಸಿನ ಗೆಳತಿಯನ್ನ ಭೇಟಿಯಾಗಿದ್ದು, ಆಕೆ ಸಾಹಿತ್ಯಾಸಕ್ತಳು,ಜಾಣೆ ಎಂದು ಖುಶಿ ಪಟ್ಟದ್ದೂ ಎಲ್ಲಾ ಸುಳ್ಳಲ್ಲ ,ಆದರೆ ಮೊದಮೊದಲು ತುಂಬಾ ಸರಳವಾಗಿರುತ್ತಿದ್ದ ನಿನ್ನ ಮಾತುಕತೆ ಒಗಟಂತಾದದ್ದು ಯಾಕೆ? ನಿನಗೆ ಗೊತ್ತಲ್ಲ, ನಾನು ಗುಡ್ ಲಿಸನರ್, ಅಷ್ಟಕ್ಕೆ ಬರಡು ಮನದವನಾದೆನೆ ಗೆಳತಿ?,ಒಪ್ಪಿದೆ,ನನಗೆ ನಿನ್ನಷ್ಟು ಎತ್ತರದಲ್ಲಿ ಯೋಚಿಸಲು ಬರದು, ಆದರೂ ನನಗೂ ಒಂದು ನೆಲೆಯಲ್ಲಿ ಇದ್ದ ನಿನ್ನ ಮೇಲಿನ ಗೌರವ ಪ್ರೀತಿ ಆದರವನ್ನ ಈ ಮೂರು ವರ್ಷಗಳಲ್ಲಿ ನೀನು ಅರಿತುಕೊಳ್ಳಲಿಲ್ಲ ಎಂದರೆ ನಾನೇನನ್ನಲಿ?

ಇನ್ನು ಗೆಳತಿ ಸಾಗರಿ, ನಾನು ಪುಸ್ತಕ ಮೇಳಕ್ಕೆ,ನಾಟಕಕ್ಕೆ ಬರಲಿಲ್ಲ ಎಂಬ ಸಣ್ಣ ಘಟನೆಗಳು ನಿನ್ನ ಯೋಚನೆಯಲ್ಲಿ ದೊಡ್ಡ ತಪ್ಪಾದದ್ದು ಯಾವಾಗ?ನಾನು ಸಾಮಾನ್ಯರಲ್ಲಿ ಸಾಮಾನ್ಯ,ನಿಮ್ಮ ಬುದ್ಧಿಜೀವಿಗಳ ಮಾತು-ಕತೆ,ನಡತೆ,ಚರ್ಚೆ,ಎಲ್ಲಾ ನನಗೆ ಅರ್ಥವಾಗದ ವಿಚಾರಗಳು, ನಾನು ಒಳ್ಳೆಯ ಸಾಹಿತ್ಯ ಮತ್ತು ಸಂಗಿತದ ಓದುಗ ಮತ್ತು ಕೇಳುಗ ಅಷ್ಟೇ, ಅದಕ್ಕಿಂತ ಹೆಚ್ಚಿನ ರಸಾಸ್ವಾದ ಮಾಡಲು ನನಗೆ ಆಗದು,ಅದು ನನ್ನ ಮಿತಿ,ನೀನು ನನ್ನನ್ನು ನನ್ನಂತೆಯೇ ಒಪ್ಪಿಕೊಳ್ಳಲು ಎಡವಿದ್ದು ಎಲ್ಲಿ? ನನ್ನ ಆರಡಿ ಎತ್ತರದ ದೇಹಕ್ಕೆ ನಿನ್ನ ಕನಸಿನ ಗೆಳೆಯನನ್ನ ಆರೋಪಿಸಿದ್ದು ನಿನ್ನದೇ ತಪ್ಪು ಅಲ್ಲವೇ?

ಹೇಳು ಗೆಳತಿ,ನಿನಗೆ ನನ್ನ ಸ್ನೇಹ ನಿನ್ನ ವ್ಯಕ್ತಿತ್ವದ ಅಪೂರ್ಣತೆಯನ್ನ ತುಂಬುವ ಒಂದು ಮಿಥ್ಯೆಯಾಗಿ ಮಾತ್ರ ಬೇಕಿತ್ತೆ?ನನ್ನನ್ನೇ ಬಯಸಿ ಬಯಸಿ ಪಡಕೊಂಡವಳಿಗೆ ಯಾಕೆ ಈ ಸೋಲು ಗೆಲವಿನ ದ್ವಂದ್ವ? ಹುಚ್ಚಿ, ಪ್ರೀತಿ ಸ್ನೇಹಗಳು ನಿಮ್ಮ ಬುದ್ಧಿವಂತಿಕೆಯ ಮಾತಲ್ಲಿ, ಬೌದ್ಧಿಕ ಕಸರತ್ತಿನಲ್ಲಿ ಅಡಗಿಲ್ಲ, ಜೀವಗಳ ಜೀವಾಳ ಅದು..ಅರ್ಥ ಮಾಡಿಕೋ..ನಿನ್ನ ಪುಸ್ತಕಗಳು(ನನಗಾಗಿ ತೆಗೆದು ಕೊಂಡದ್ದಲ್ಲವೇ) ಎಲ್ಲೂ ಹೋಗೋದಿಲ್ಲ.ನಾವು ಹುಡುಗರು ಕಣೇ,ಮಾತಿನಲ್ಲಿ ನಂಬಿಕೆಗಿಂತ ಕೃತಿಯಲ್ಲಿ ಜಾಸ್ತಿ, ನಿನ್ನ ಕಠೋರ ಪತ್ರ ನನ್ನನ್ನು ಪೆನ್ ಹಿಡಿಯೊ ಹಾಗೆ ಮಾಡಿತು ,ಅಷ್ಟೆ.


ನಿನ್ನ ಸ್ನೇಹ ನನಗಿನ್ನೂ ಬೇಕು,ಸಂಬಂಧಗಳ ನಿರಂತರತೆ ಹೀಗೆ ಜಾರಿಯಲ್ಲಿರಲಿ, ನಿನ್ನ ಹುಡುಕಾಟಕ್ಕೆ ಯಶಸ್ಸನ್ನು ಹಾರೈಸುತ್ತೇನೆ, ನನಗೂ ನಿನ್ನಂತೆ ಯೋಚಿಸುವುದಾಗಿದ್ದರೆ?ಬಿಡು,ಬರಿ ಪ್ರಶ್ನೆಗಳನ್ನೆ ನಂಬಿದವನಲ್ಲ ನಾನು,ಸಾಮಾನ್ಯತೆಯನ್ನ ಒಪ್ಪಿಕೊಂಡವನು.ನಿನ್ನ ಯಶಸ್ಸಿಗೆ ಹಾರೈಕೆ ಇದ್ದೇ ಇದೆ.ಆದರೆ ಒಂದು ಮಾತು, ನೀನು ನನ್ನನ್ನಗಲಿ, ಈ ಸಂಬಂಧದ ಕೊಂಡಿ ಕಳಚಿ ನಿನ್ನ ಗಮ್ಯವನ್ನ ಸೇರಲಾರೆ(ಹೇಳು ಸಾಧ್ಯವೇ), ನನಗೆ ಒಂದಷ್ಟು ಬದಲಾವಣೆ ಬೇಕು, ಈ ಪತ್ರ ಓದಿ ಉತ್ತರಿಸು,ನಾ ಸ್ವಲ್ಪವಾದರು ಬದಲಾಗಿದ್ದೇನೆಯೇ?ಇಲ್ಲವೇ? ಎಂದು. ಹೋಗುವದಾದರೆ ಈ ಬದುಕಿನ ಪಯಣದಲ್ಲಿ ನಾ ನಿನ್ನ ಜೊತೆಗಿದ್ದೇನೆ.
ಒಂದು ಬಿನ್ನಹ, ನನ್ನ ನನ್ನಂತೆಯೇ ಒಪ್ಪಿಕೋ,ಇದೊಂದೆ ನನ್ನ ಮನವಿ,ಬರಲೇ? ನಿನ್ನೆಲ್ಲ ಪ್ರಶ್ನೆಗಳಿಗು ಉತ್ತರ ಸಿಕ್ಕಿರಬಹುದು ಅಂದು ಕೊಂಡಿದ್ದೇನೆ.

                                                                                                           ಎಂದಿಗು ನಿನ್ನವ
                                                                                                            ಶರಧಿ