Tuesday, October 16, 2012

ಪ್ರೇಮ ಎಂದರೆ...

ಅವಳ ಕಣ್ಣುಗಳಲ್ಲಿ ಕಾಂತಿ ಇಲ್ಲ ಈ ದಿನ..ನಾನು ಅರ್ಥೈಸಿದ ಪ್ರಕಾರ ಯಾವಾಗಲೂ ಹಸನ್ಮುಖಿ,ಮಂದದನಿಯ ಮಾತುಗಾತಿ ನನ್ನೀ ಗೆಳತಿ..ಅವಳನ್ನ ಪೂರ್ತಿ ಅಲ್ಲದಿದ್ದರೂ ಮುಕ್ಕಾಲಾದರೂ ಅರ್ಥೈಸಿಕೊಂಡಿದ್ದೇನೆ ಇಷ್ಟು ದಿನದ ಸಾಂಗತ್ಯದಲ್ಲಿ ಅನ್ನೋದು ನನ್ನ ಬಲವಾದ ನಂಬಿಕೆ...ಕೆಲಸದ ಒತ್ತಡದಲ್ಲಿ ಮಧ್ಯಾಹ್ನದ ತನಕ ಮಾತಾಡಲಿಲ್ಲ...ಊಟದ ಸಮಯ ಅಂದರೆ ನಮಗೆ ಹಂಚಿಕೊಳ್ಳುವ ಸಮಯ..ತಂದ ಊಟದೊಂದಿಗೆ ನೂರಾರು ವಿಷಯಗಳ ಚರ್ಚೆ ತುಂಬಾ ಸಾಮಾನ್ಯ..ಆದರೆ ಈ ದಿನ ಆಕೆ ಮಹಾ ಮೌನಿ..ನನ್ಗೋ ಕೇಳಬೇಕೇನು ತಿಳಿಯುತ್ತಲಿಲ್ಲ,ಎಲ್ಲಾ ತಿಳಿದೂ ಮತ್ತೆ ಹೇಳು ಅನ್ನಲೇ..ಕೇಳದೇ ಸುಮ್ಮನೆ ಉಳಿದು ಬಿಡಲೇ..ಕೊನೆಗೂ ಕೇಳಲೆಬೇಕು ಅಂತ ನಿರ್ಧರಿಸಿದೆ...
"ಯಾಕೆ ಮಂಕಾಗಿದೀಯ ಕಣೇ ಹೇಳು" ನನ್ನ ಪ್ರಶ್ನೆಗೆ ಕಾದಿದ್ದಂತೆ ಕಣ್ಣ ಅಂಚಿನಲ್ಲಿ ಕಂಡ ಬಿಂದುವನ್ನು ಒರೆಸಿ ಹೇಳಿದ್ದು ಇಷ್ಟು.."ನಿಂಗೇ ಗೊತ್ತಲ್ಲಾ ಮತ್ತೆ ಜಗಳ ಮನೆಯಲ್ಲಿ,ನಾನು ಇಲ್ಲಿಂದ ದುಡಿದು ಸಾಕಾಗಿ ಹೋಗಿರ್ತೀನಿ,ಒಂದು ಮಾತಿಲ್ಲ ಕತೆ ಇಲ್ಲ..ಟೀವಿ ನೋಡ್ತಾ ಕುತಿರೋರು ಏಳೊದಿರಲಿ,ಬಂದ್ಯಾ?ಹೇಗಿತ್ತು ಕೆಲಸ ಅಂತ ಕೇಳೊದಿಲ್ಲ,ಮಾತಾಡಿದರೂ ಸಾಕು ಬರೀ ಕೊಂಕುಗಳೆ,ಜೀವನಾನೇ ಬೇಸರ ಕಣೆ..ನೀ ಏನೇ ಹೇಳು..ಒಂಟಿ ಜೀವನಾನೆ ಎಷ್ಟೋ ಪರವಾಗಿಲ್ಲ,ನಂಗೆ ಅವರ ಆಸರೆ ಅಥವಾ ದೈಹಿಕ ಪ್ರೀತಿ ಬೇಕಾಗಿಲ್ಲ ನಾನು ಆ ಮಟ್ಟವನ್ನ ಯಾವತ್ತೋ ದಾಟಿದ್ದೀನಿ,ಆದರೆ ಇಷ್ಟು ವರ್ಷದ ಸಾಂಗತ್ಯ ಒಂದು ಮಾತು ಒಂದು ಕಾಳಜಿ ಅದಕ್ಕೂ ನಾನು ಬೇಡವಾದವಳಾ?"
ನನಗೆ ಮಾತಾಡಲಾಗಲಿಲ್ಲ..ಏನಂತ ಹೇಳಲಿ..ಎಲ್ಲರದ್ದು ಇದೇ ಸಮಸ್ಯೆ ಅನ್ನಲೇ..ನಾನು ನಿನ್ನಂತೆ ಕಣೇ ಅನ್ನಲೇ..ಭಾವನೆಗಳೇ ಇಲ್ಲದ ಜೀವನದಲ್ಲಿ ಎಲ್ಲಿಂದ ತರಬಹುದು ಭಾವಗಳನ್ನ..ಸಮಯದ ಪರಿಧಿಯಲ್ಲಿ ದಾಂಪತ್ಯ ಯಾಕೆ ರಸರಹಿತ ಆಗುತ್ತೆ..ನಮ್ಮ ಹೆಣ್ಣು ಮನಸೇ ಹಾಗೆ..ಒಂದು ಭರವಸೆಯೊಂದಿಗೆ ಇಡೀ ಬದುಕನ್ನ ಕಳೆಯಬಲ್ಲದು..ಇಂದಲ್ಲ ನಾಳೆ ಹೊಸಾ ಬೆಳಕಿಗಾಗಿ ಕಾಯುತ್ತಾ ,ನಮ್ಮನ್ನ ನಮ್ಮ ಮನಸನ್ನ ಅರ್ಥ ಮಾಡಿಕೊಲ್ಲುವ ಆ ಪ್ರಕ್ರಿಯೆಗಾಗಿ ಕಾಯುತ್ತಾ..ಆದರೆ ಅದು ಅರ್ಥ ಆಗುವದಾದರೂ ಹೇಗೆ ನಮ್ಮ ಸಂಗಾತಿಗೆ? ಯಾಕೆ ಒಂದು ಪ್ರೇಮ ಬದುಕಿನ ಮೂಸೆಯಲ್ಲಿ ಬಂಗಾರವಾಗುವ ಬದಲು,ನಮ್ಮ ದೌರ್ಬಲ್ಯ,ಶಕ್ತಿಗಳು ಒಪ್ಪಿಗೆ ಆಗುವ ಬದಲು, ನಗೆಪಾಟಲಾಗುತ್ತವೆ? ಸದರ ಇರಬೇಕು ಆದರೆ ಅದು ಮಿತಿಯನ್ನ ದಾಟಬಾರದು..ಹತ್ತು ಹೊಡೆತಗಳ ನೋವನ್ನು ಸಹಿಸಬಹುದೇನೋ ಆದರೆ ಮಾತಿನ ಇರಿತ..ನಿಂತಲ್ಲಿಯೇ ನಮ್ಮನ್ನ ಜೀವಂತ ಸಮಾಧಿ ಮಾಡುತ್ತದೆ..

ಪ್ರೇಮ ದಾಂಪತ್ಯ ಅಂದರೆ ಅದೊಂದು ಮಹಾಯಾನ...ಕೈ ಹಿಡಿದು ಜೊತೆ ಜೊತೆಗೆ ಸಾಗುವ..ನಂಬಿಕೆ ದೋಣಿಯ ಪಯಣ..ನಂಬಿಕೆಯ ತಳವಿಲ್ಲದ ದೋಣಿ ಸಾಗೀತು ಎಷ್ಟು ದೂರ??ತಾಳ್ಮೆ,ಅರ್ಥೈಸಿಕೊಳ್ಳುವಿಕೆಯ ಹುಟ್ಟುಗಳು ನಿರಂತರ ನಮ್ಮನ್ನ ದಡದತ್ತ ತಳ್ಳುತ್ತವೆ..ಭಾವಗಳ ಜೊತೆ ಬೇಕು..ಹಾಗೆ ರಸಗಳ ಸುಂದರ ನೋಟವೂ ಬೇಕು..ಯಾಕೆಂದರೆ ನಾವೆಲ್ಲ ಬರೀ ಮನುಷ್ಯರು ಕಣ್ರೀ..ಒಂದು ನಿರಂತರ ಆಸಕ್ತಿ ಒಂದು ನಿರಂತರ ನಿಶ್ಚಲ ಪ್ರೇಮದ ಒರತೆ ಎದೆಯಲ್ಲಿರಬೇಕು..ಬದುಕಿಗೆ ಹಣ ಬೇಕೇ ಬೇಕು..ಆದರೆ ಹಣವೊಂದೇ ಜೀವನ ಅಲ್ಲ..ಸರಿಯಾದ ಸಾಂಗತ್ಯ ಇಲ್ಲದ ಜೀವನ ಎಂದಿಗೂ ಸಾರ್ಥಕ ಆಗಲಾರದು..ನಾವೇನೂ ದೊಡ್ ತ್ಯಾಗ ಮಾಡಬೇಕಿಲ್ಲ,ಚಿಕ್ಕ ಚಿಕ್ಕ ವಿಚಾರಗಳಿಗೆ ಗಮನ ಕೊಟ್ಟರೆ ಸಾಕು..ಬದುಕು ಬಂಗಾರವಾದೀತು..
"ಏಯ್,ನೀನ್ಯಾಕೆ ಮೌನ ಆಗಿಬಿಟ್ಟೆ ಯಾಕೆ ಏನಾಯ್ತು.." ಗೆಳತಿಯ ಕೈ ನನ್ನ ಕೆನ್ನೆ ಒರೆಸಿದಾಗ ನನಗೆ ಎಚ್ಚರವಾಯ್ತು...
ನಾತಿಚರಾಮಿ ಅಂತ ಾಯಿಮಾತಲ್ಲಿ ಹೇಳೋದಲ್ಲ ಹಾಗೆ ನಡೆದರೆ ನಮ್ಮ ಎಲ್ಲಾ ಸಂಪ್ರದಾಯಗಳಿಗೆ ಅದೆಷ್ಟು ಸುಂದರ ಚೌಕಟ್ಟು ಸಿಕ್ಕೀತು..ಅಂದು ಕೊಳ್ಳುತಾ..ಎದ್ದೆ..