Sunday, March 10, 2013

ಲಹರಿ-ಸಾಗರಿಕಾಳಿಗೊಂದು ಉತ್ತರ(ಪತ್ರ)

ಪ್ರಿಯ ಗೆಳತಿ ಸಾಗರಿ,
ಎಷ್ಟು ವಿಚಿತ್ರ ನೋಡು,ನಿನ್ನ ಪತ್ರ ನಿನ್ನ ಗೊಂದಲಮಯ ಮನಸ್ಸಿನ ಪ್ರತೀಕ,ಗೆಳತೀ  ನನಗೂ ಗೊತ್ತಮ್ಮಾ ಗೆಳೆತನ ನಮ್ಮನ್ನು ಅಲ್ಪವಾದರೂ ಬದಲಾಯಿಸಬೇಕು ಎಂದು,ಅಷ್ಟಿದ್ದೂ ಗೆಳೆಯರು ಯಾಕೆ ಬೇಕು ಹೇಳು? ಒಳ್ಳೆಯ ಗೆಳೆತನ ನಮ್ಮ ವ್ಯಕ್ತಿತ್ವದ
ದೌರ್ಬಲ್ಯಗಳನ್ನ ತುಂಬಾ ಚೆನ್ನಾಗಿ ಮರೆ ಮಾಚುತ್ತದೆ,ಒಂದು ರೀತಿಯ ಫುಲ್ ಫಿಲ್ ಮೆಂಟ್ ಅದು ಅಲ್ವಾ? ನಾನು ನಿನ್ನಂತೆ ಭಾವ ಜೀವಿಯಲ್ಲ,ಆದರೆ ನಿನ್ನ ಪತ್ರಕ್ಕೆ ನಾನು ಉತ್ತರಿಸಲೇ ಬೇಕು ಎನ್ನಿಸಿತು...ಅದಕ್ಕೆ ಈ ಮಾರೋಲೆ!!

ಮೂರು ವರ್ಷಗಳ ಹಿಂದೆ ಇದೇ ನಿನ್ನ ಶರೂ ಒಬ್ಬ ಸುಂದರ ಮನಸ್ಸಿನ ಗೆಳತಿಯನ್ನ ಭೇಟಿಯಾಗಿದ್ದು, ಆಕೆ ಸಾಹಿತ್ಯಾಸಕ್ತಳು,ಜಾಣೆ ಎಂದು ಖುಶಿ ಪಟ್ಟದ್ದೂ ಎಲ್ಲಾ ಸುಳ್ಳಲ್ಲ ,ಆದರೆ ಮೊದಮೊದಲು ತುಂಬಾ ಸರಳವಾಗಿರುತ್ತಿದ್ದ ನಿನ್ನ ಮಾತುಕತೆ ಒಗಟಂತಾದದ್ದು ಯಾಕೆ? ನಿನಗೆ ಗೊತ್ತಲ್ಲ, ನಾನು ಗುಡ್ ಲಿಸನರ್, ಅಷ್ಟಕ್ಕೆ ಬರಡು ಮನದವನಾದೆನೆ ಗೆಳತಿ?,ಒಪ್ಪಿದೆ,ನನಗೆ ನಿನ್ನಷ್ಟು ಎತ್ತರದಲ್ಲಿ ಯೋಚಿಸಲು ಬರದು, ಆದರೂ ನನಗೂ ಒಂದು ನೆಲೆಯಲ್ಲಿ ಇದ್ದ ನಿನ್ನ ಮೇಲಿನ ಗೌರವ ಪ್ರೀತಿ ಆದರವನ್ನ ಈ ಮೂರು ವರ್ಷಗಳಲ್ಲಿ ನೀನು ಅರಿತುಕೊಳ್ಳಲಿಲ್ಲ ಎಂದರೆ ನಾನೇನನ್ನಲಿ?

ಇನ್ನು ಗೆಳತಿ ಸಾಗರಿ, ನಾನು ಪುಸ್ತಕ ಮೇಳಕ್ಕೆ,ನಾಟಕಕ್ಕೆ ಬರಲಿಲ್ಲ ಎಂಬ ಸಣ್ಣ ಘಟನೆಗಳು ನಿನ್ನ ಯೋಚನೆಯಲ್ಲಿ ದೊಡ್ಡ ತಪ್ಪಾದದ್ದು ಯಾವಾಗ?ನಾನು ಸಾಮಾನ್ಯರಲ್ಲಿ ಸಾಮಾನ್ಯ,ನಿಮ್ಮ ಬುದ್ಧಿಜೀವಿಗಳ ಮಾತು-ಕತೆ,ನಡತೆ,ಚರ್ಚೆ,ಎಲ್ಲಾ ನನಗೆ ಅರ್ಥವಾಗದ ವಿಚಾರಗಳು, ನಾನು ಒಳ್ಳೆಯ ಸಾಹಿತ್ಯ ಮತ್ತು ಸಂಗಿತದ ಓದುಗ ಮತ್ತು ಕೇಳುಗ ಅಷ್ಟೇ, ಅದಕ್ಕಿಂತ ಹೆಚ್ಚಿನ ರಸಾಸ್ವಾದ ಮಾಡಲು ನನಗೆ ಆಗದು,ಅದು ನನ್ನ ಮಿತಿ,ನೀನು ನನ್ನನ್ನು ನನ್ನಂತೆಯೇ ಒಪ್ಪಿಕೊಳ್ಳಲು ಎಡವಿದ್ದು ಎಲ್ಲಿ? ನನ್ನ ಆರಡಿ ಎತ್ತರದ ದೇಹಕ್ಕೆ ನಿನ್ನ ಕನಸಿನ ಗೆಳೆಯನನ್ನ ಆರೋಪಿಸಿದ್ದು ನಿನ್ನದೇ ತಪ್ಪು ಅಲ್ಲವೇ?

ಹೇಳು ಗೆಳತಿ,ನಿನಗೆ ನನ್ನ ಸ್ನೇಹ ನಿನ್ನ ವ್ಯಕ್ತಿತ್ವದ ಅಪೂರ್ಣತೆಯನ್ನ ತುಂಬುವ ಒಂದು ಮಿಥ್ಯೆಯಾಗಿ ಮಾತ್ರ ಬೇಕಿತ್ತೆ?ನನ್ನನ್ನೇ ಬಯಸಿ ಬಯಸಿ ಪಡಕೊಂಡವಳಿಗೆ ಯಾಕೆ ಈ ಸೋಲು ಗೆಲವಿನ ದ್ವಂದ್ವ? ಹುಚ್ಚಿ, ಪ್ರೀತಿ ಸ್ನೇಹಗಳು ನಿಮ್ಮ ಬುದ್ಧಿವಂತಿಕೆಯ ಮಾತಲ್ಲಿ, ಬೌದ್ಧಿಕ ಕಸರತ್ತಿನಲ್ಲಿ ಅಡಗಿಲ್ಲ, ಜೀವಗಳ ಜೀವಾಳ ಅದು..ಅರ್ಥ ಮಾಡಿಕೋ..ನಿನ್ನ ಪುಸ್ತಕಗಳು(ನನಗಾಗಿ ತೆಗೆದು ಕೊಂಡದ್ದಲ್ಲವೇ) ಎಲ್ಲೂ ಹೋಗೋದಿಲ್ಲ.ನಾವು ಹುಡುಗರು ಕಣೇ,ಮಾತಿನಲ್ಲಿ ನಂಬಿಕೆಗಿಂತ ಕೃತಿಯಲ್ಲಿ ಜಾಸ್ತಿ, ನಿನ್ನ ಕಠೋರ ಪತ್ರ ನನ್ನನ್ನು ಪೆನ್ ಹಿಡಿಯೊ ಹಾಗೆ ಮಾಡಿತು ,ಅಷ್ಟೆ.


ನಿನ್ನ ಸ್ನೇಹ ನನಗಿನ್ನೂ ಬೇಕು,ಸಂಬಂಧಗಳ ನಿರಂತರತೆ ಹೀಗೆ ಜಾರಿಯಲ್ಲಿರಲಿ, ನಿನ್ನ ಹುಡುಕಾಟಕ್ಕೆ ಯಶಸ್ಸನ್ನು ಹಾರೈಸುತ್ತೇನೆ, ನನಗೂ ನಿನ್ನಂತೆ ಯೋಚಿಸುವುದಾಗಿದ್ದರೆ?ಬಿಡು,ಬರಿ ಪ್ರಶ್ನೆಗಳನ್ನೆ ನಂಬಿದವನಲ್ಲ ನಾನು,ಸಾಮಾನ್ಯತೆಯನ್ನ ಒಪ್ಪಿಕೊಂಡವನು.ನಿನ್ನ ಯಶಸ್ಸಿಗೆ ಹಾರೈಕೆ ಇದ್ದೇ ಇದೆ.ಆದರೆ ಒಂದು ಮಾತು, ನೀನು ನನ್ನನ್ನಗಲಿ, ಈ ಸಂಬಂಧದ ಕೊಂಡಿ ಕಳಚಿ ನಿನ್ನ ಗಮ್ಯವನ್ನ ಸೇರಲಾರೆ(ಹೇಳು ಸಾಧ್ಯವೇ), ನನಗೆ ಒಂದಷ್ಟು ಬದಲಾವಣೆ ಬೇಕು, ಈ ಪತ್ರ ಓದಿ ಉತ್ತರಿಸು,ನಾ ಸ್ವಲ್ಪವಾದರು ಬದಲಾಗಿದ್ದೇನೆಯೇ?ಇಲ್ಲವೇ? ಎಂದು. ಹೋಗುವದಾದರೆ ಈ ಬದುಕಿನ ಪಯಣದಲ್ಲಿ ನಾ ನಿನ್ನ ಜೊತೆಗಿದ್ದೇನೆ.
ಒಂದು ಬಿನ್ನಹ, ನನ್ನ ನನ್ನಂತೆಯೇ ಒಪ್ಪಿಕೋ,ಇದೊಂದೆ ನನ್ನ ಮನವಿ,ಬರಲೇ? ನಿನ್ನೆಲ್ಲ ಪ್ರಶ್ನೆಗಳಿಗು ಉತ್ತರ ಸಿಕ್ಕಿರಬಹುದು ಅಂದು ಕೊಂಡಿದ್ದೇನೆ.

                                                                                                           ಎಂದಿಗು ನಿನ್ನವ
                                                                                                            ಶರಧಿ


6 comments:

  1. ಗೆಳೆತನ ಒಂದು ದೇವರ ವರವೆಂದು ಹೇಳುತ್ತಾರೆ. ವರವನ್ನು ಹೇಗೆ ಸಿಕ್ಕಿದೆಯೋ ಹಾಗೆಯೇ ಇಟ್ಟುಕೊಳ್ಳಬೇಕು. ಅವಾಗಲೇ ಅದಕ್ಕೊಂದು ಹೊಳಪು ಎನ್ನುತ್ತಾರೆ. ಗೆಳೆತನದಲ್ಲಿ ನಮಗರಿಯದೆ ನಾವು ಗೆಳೆಯ/ತಿಯ ಭಾವಕ್ಕೆ ಬದಲಾಗುತ್ತ ಹೋದಾಗ ಕೆಲವೊಮ್ಮೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ. ಇಟ್ಟಾಂಗೆ ಇರಬೇಕು ಕೊಟ್ಟಿದ್ದು ತಿನ್ನಬೇಕು ಪರಶಿವನು ಕರೆದಾಗ ನಡಿಬೇಕು ಎನ್ನುವ ಭಕ್ತ ಸಿರಿಯಾಳ ಹಾಡಿನಂತೆ ಇದ್ದರೇ ಗೆಳೆತನದ ಶಿಖರ ಮುಟ್ಟುವಲ್ಲಿ ಯಶಸ್ವಿಯಾಗುತ್ತೇವೆ ಗೆಳೆತನದ ನಿರೀಕ್ಷೆಗಳ ಗೊಂದಲ, ತವಕ ಎಲ್ಲವನ್ನು ಪತ್ರದಲ್ಲಿ ಎಷ್ಟು ಚೆನ್ನಾಗಿ ವಿವರಿಸಿದ್ದೀರಿ. ಸೂಪರ್

    ReplyDelete
  2. ಒಳ್ಳೆಯ ನಿರ್ಧಾರದ ಮತ್ತು ಆತ್ಮ ವಿಮರ್ಶೆಯ ಪತ್ರ ಶರಧಿ ಯಿಂದ.ಹೋಚಿಸಬೇಕಾದ ವಿಷಯಗಳು ಬಹಳ ಇದೆ ಅದರಲ್ಲಿ. ಗೆಳೆತನ ಎನ್ನುವುದು ಹಣ್ಣನ್ನು ತಿಂದು ಸಿಪ್ಪೆಯನ್ನು ಬೀಸಾಡುವಂತಾಗಬಾರದು. ಅದು ಎಂದಿಗೂ ಅಮರವಾಗಿರಬೇಕು.ಪರಸ್ಪರ ಸ್ನೇಹ,ಪ್ರೀತಿ,ಮೆಚ್ಹುಗೆ,ಕಷ್ಟ,ಸಂತೋಷ,ಸುಖ ಮತ್ತು ದುಖಃ ಎಲ್ಲದರಲ್ಲೂ ಅರಿತು ಸಮ ಪಾಲುದಾರರಾಗಿರಬೇಕು.ಗೆಳೆತನ ಎಂಬುದು ಗಂಡ ಹೆಂಡತಿ ಯ ಜೀವನಗಿಂತ ಮಿಗಿಲಾದದ್ದು. ಒಮ್ಮೆ ಒಡೆದರೆ ಅದು ಒಡೆದ ಕನ್ನಡಿಯಂತಾಗುತ್ತದೆ. ಗೆಳೆತನದಲ್ಲಿ ಮುಖ್ಯವಾಗಿ ನಿರೀಕ್ಷೆ ಮತ್ತು ಸ್ವಾರ್ಥ ಇರಲೇ ಬಾರದು. ಇವೆಲ್ಲ ಕಷ್ಟ ಅಂತೀರಾ ಇದೆ ಜೀವನದಲ್ಲಿ ಎಲ್ಲವೂ ಸಾಧ್ಯ. ಅನುಭವ ಮನಷ್ಯನನ್ನು ಸಾಧನೆಯ ದಾರಿಗೆ ನಾಂದಿಯಾಗುತ್ತದೆ. ಒಳ್ಳೆಯದಾಗಲಿ.

    ReplyDelete
  3. ಈ ಪತ್ರದಲ್ಲಿ ನನ್ನ ಆಸಕ್ತಿಗಳಲ್ಲಿ ತನ್ನವನ್ನ ಕಾಣದ ಮತ್ತು ಅದಕ್ಕಾಗಿ ನನ್ನ ಸಣ್ಣ ಮೌನ ಮುನಿಸಿಗೆ ತುತ್ತಾಗುವ ನನ್ನ ಪತಿಯ ಮಾತಾಗದ ಅಸಹಾಯಕ ಅನಿಸಿಕೆಗಳೂ ಬಿಂಬಿಸಲ್ಪಟ್ಟಿವೆ ಅನ್ನಿಸಿತು, ಚೆನ್ನಾಗಿದೆ ..

    ReplyDelete
  4. ಸ್ನೇಹ ಒಂದು ಆಕಸ್ಮಿಕ ಆದಮೇಲೆ ನಿಲ್ಲುತ್ತೆ ಹೆಚ್ಚು ಕಾಲ, ಶುದ್ಧವಾಗಿದ್ದರೆ. ಅಪೇಕ್ಷೆಯದ್ದಾಗಿದ್ದರೆ ಬಿರುಕು ಸಹಜ. ಪರಸ್ಪರ ಅನುಕೂಲದ್ದಾಗಿ ಪರಿಧಿಯಲ್ಲಿದ್ದರೆ ಗಟ್ಟಿಯಾಗುತ್ತೆ... ಇದೇ ಸಾಂಸಾರಿಕ ಬಂಧಗಳಲ್ಲೂ ಸಾಧ್ಯ... ಸುಂದರ ಲೇಖನ ಶಮ್ಮಿ.

    ReplyDelete
  5. ಶೀರ್ಷಿಕೆಯಲ್ಲೇ ಗೆಲ್ಲುವ ಕಲೆ ಎಂದರೆ ಇದೇ, ಉತ್ತರ - ಪತ್ರ.

    ಶರಧಿ ಮತ್ತು ಸಾಗರಿಗಳ ನಡುವಿನ ಈ ಪತ್ರವು ನನಗೆ ಗಾಢವಾಗಿ ಕಾಡುತ್ತದೆ. ಕಳೆದ ಕೊಂಡಿಗಳು ಮತ್ತೆ ಬೆಸೆಯಲಿ ಎಂದು ನನ್ನ ಹಾರೈಕೆ.

    ReplyDelete
  6. ನನ್ನ ನನ್ನಂತೆಯೇ ಒಪ್ಪಿಕೋ ಎಂಬ ಬಿನ್ನಹ ಮತ್ತು ಎದುರಿನವರನ್ನು ನಾವೂ ಹಾಗೇ ಒಪ್ಪಿಕೊಳ್ಳುವುದರಲ್ಲೇ ಗೆಳೆತನದ ಗೆಲುವಿದೆ...ಚಂದದ ಬರಹ...

    ReplyDelete