Tuesday, August 22, 2017

ಹೃದಯದ ಭಾಷೆ

ಅದು ಪ್ರಾಕ್ಟಿಕಲ್ ಕ್ಲಾಸ್,ನಾನು ನಿಟ್ಟಿಂಗ್ ಕಡ್ಡಿ ಹಿಡಿದು ಕಷ್ಟ ಪಟ್ಟು ನಿಟ್ ಪರ್ಲ್ ಅಂತ ಎಣಿಸುತ್ತಾ ಕಲೀತಿದ್ದೆ...ಆಗ ಜವಾನ ಬಂದು ನನ್ನ ಹೆಸರು ಕೂಗಿದ...ನನಗೆ ಆಶ್ಚರ್ಯ...ಹೊರಬಂದು ನೋಡಿದರೆ ಅಪ್ಪ ನಿಂತಿದ್ದರು...ಬಿಳಿ ಪಂಚೆ..ಅದರ ಮೇಲೆ ತುಸು ಮಾಸಿದ ಬಿಳಿ ಶರ್ಟ್..ಬೇಸಿಗೆಯ ಧಗೆಗೆ ಅರೆ ತೆರೆದಿದ್ದ  ಅಂಗಿಯ ಗುಂಡಿಗಳು,  ಕೆಲಸದ ಮೇಲೆ ಆ ಊರಿಗೆ ಬಂದಿದ್ದರು..ಮತ್ತು ಹಾಗೆ ನನ್ನ ನೋಡಲು ಬಸ್ ಹಿಡಿದು ಬಂದಿದ್ದರಂತೆ...ನನ್ನ ತಂದೆಯನ್ನ ನೋಡಿ ನಮ್ಮ ಪ್ರಿನ್ಸಿಪಲ್ ಮಾತಾಡಿಸಿದರು...ಆ ಸಮಯ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟಿನ ಸಮಯ..ಅಮ್ಮ ತುಪ್ಪ ಬೆಲ್ಲ  ತಿಂಡಿಗಳನ್ನ ಕಳುಹಿಸುತ್ತಿದ್ದಳು   ..ಆದರೆ ಹಾಸ್ಟೆಲ್ಲು ಮತ್ತೆ ಫೀಸು ಹಾಗೂ ಕೋರ್ಸಿಗೆ ಸಂಬಂಧ ಪಟ್ಟಖರ್ಚುಗಳು ಅಪ್ಪನ ಬಹುಪಾಲು ಆದಾಯ ನುಂಗುತ್ತಿತ್ತು..ಅಪ್ಪ ದುಡ್ಡು ಹೊಂದಿಸುವುದರ ಬಗ್ಗೆ ಹೈರಾಣಾಗುತ್ತಿದ್ದರು...ಅಪ್ಪ ನನಗೆ ಫೀಸು ಮತ್ತೆ ಕೈ ಖರ್ಚಿಗೆ ಹಣ ಇತ್ತು ನಿರ್ಗಮಿಸಿದರು...ಪ್ರಿನ್ಸಿಪಲ್ ನನ್ನ ಕೇಳಿದರು.."ನಿಮ್ಮ ತಂದೆ ಏನು ಕೆಲಸ ಮಾಡ್ತಾರೆ?" ಅಲ್ಲಿ ಬರ್ತಿದ್ದವರ ಅಪ್ಪಂದಿರು ಪ್ಯಾಂಟ್ ಶರ್ಟ್ಧಾರಿಗಳು..ಮತ್ತು ಆದಷ್ಟು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದವರು...ನಾನು ಆತ್ಮವಿಶ್ವಾಸದಿಂದ ಉತ್ತರಿಸಿದೆ..."ಅವರು ರೈತರು,ನಮ್ಮನೆಯಲ್ಲಿ ತೋಟ ಇದೆ..ಸಲ್ಪ ಗದ್ದೆಯೂ, " ಅಂದೆ ,"ಹೌದಾ" ಅಂದಷ್ಟೆ ಹೇಳಿ ನಿರ್ಗಮಿಸಿದರು...

ಮುಂದೆ ಒಂದು ವರುಷದಲ್ಲಿ..ಮತ್ತೆ ಭೇಟಿಯಾಗ ಬೇಕಾಯ್ತು ಪ್ರಿನ್ಸಿಪಲ್ ಮತ್ತು ನನ್ನಪ್ಪ..ಹಾಸ್ಟೆಲ್ಲಿನಲ್ಲಿ ಆದ ಸಣ್ಣ ಕಳ್ಳತನವೊಂದಕ್ಕೆ ನನ್ನ ಅಪರಾಧಿಯನ್ನಾಗಿಸಿ ನಮ್ಮ ವಾರ್ಡನ್ ಅಪ್ಪನನ್ನ ಕರೆಸಿದ್ದರು...ಅವರು ಸಂಶಯ ಪಡಲು ಇದ್ದ ಕಾರಣ ಇಷ್ಟೇ.. ಕಳ್ಳತನ ಆದ ದಿನ ನಾನು ಊರಿಗೆ ಹೋದದ್ದು...ನನ್ನ ಇಡೀ ವಾರ್ಡ್ ರೋಬ್ ನನ್ನ ವಸ್ತುಗಳು ಎಲ್ಲದನ್ನೂ ಕಿತ್ತೆಸೆಯಲಾಗಿತ್ತು....ಕಾರಣವೇ ಗೊತ್ತಿರದಿದ್ದ ನಾನು ಕುಸಿದು ಕೂತಿದ್ದೆ...ಏನು ಗೊತ್ತಿಲ್ಲದ ನನ್ನ ಹೌದು ಅಂತ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದರು..ಕಾರಣ ಆ ಹುಡುಗಿಯ ತಂದೆ ಭದ್ರಾವತಿಯವರು..ಗೂಂಡಾಗಿರಿಗೆ ಹೆಸರಾದ ಊರದು....ಆಕೆಯ ತಂದೆ ಅಣ್ಣ ಎಲ್ಲರೂ ಬಂದು ಹೆದರಿಸಿಹೋಗಿದ್ದರಂತೆ..ಅವತ್ತಿನ ದಿನ ಹೋಳಿ...ಇನ್ನೂ ನೆನಪಿದೆ...ಅಪ್ಪ ನನ್ನ ಕೈ ಜಗ್ಗಿ ಕೇಳಿದ್ದರು"ಕದ್ದಿದ್ದೀಯಾ" ಕದ್ದಿದ್ದರೆ ಅಪ್ಪನ ಎದುರು ಒಪ್ಪಿಬಿಡುತ್ತಿದ್ದೆ..ವಿಷಯವೇ ಗೊತ್ತಿಲ್ಲದ ನಾನು ಅಸಹಾಯಕಳಾಗಿ ಅತ್ತಿದ್ದೆ..."ಹೆದರಬೇಡ..."ಎಂದು ನನ್ನ ತಲೆ ಸವರಿ ಹೋದ ಅಪ್ಪ ಐದು ನಿಮಿಷದಲ್ಲಿ ನನ್ನ ಕರೆದಿದ್ದರು...ನಾನು ಧೈರ್ಯವಾಗಿ ಹೇಳಿದ್ದೆ..ಕದ್ದಿಲ್ಲ ಅಂತ...ಅವತ್ತು ಅಪ್ಪ ಅವರೊಡನೆ ತಮ್ಮ ವಿದ್ಯಾಬ್ಯಾಸದ ಬಗ್ಗೆ ಮಾತಾಡಿದ್ದರು...
ಇದೆಲ್ಲ ಮುಗಿದ ಮೇಲೆ ಎರಡು ದಿನ ಬಿಟ್ಟು ನನ್ನ ಕರೆಸಿದ ಪ್ರಿನ್ಸಿಪಲ್ ಹೇಳಿದ್ದು ಒಂದೇ ಮಾತು"ನಿಮ್ಮ ತಂದೆ ಬಹಳ ಗೌರವಸ್ಥರು..ಅಷ್ಟೆಲ್ಲ ಓದಿ ಹಳ್ಳಿಗೆ ಬಂದು ಕೃಷಿಯನ್ನ ಕೃಷಿಯನ್ನ ಉದ್ಯೋಗ ಮಾಡಿಕೊಂಡಿದ್ದಾರೆ, ಮತ್ತು ಇಲ್ಲದ ಊರನ್ನ ಕಟ್ಟಿ ಬೆಳೆಸಿದ್ದಾರೆ, ಸುಮಾರು ಕುಟುಂಬಗಳಿಗೆ ಅಶ್ರಯದಾತರಾಗಿದ್ದಾರೆ, ಅಂಥವರ ಮಗಳು ನೀನು, ಅವರಿಗೆ ಹೆಮ್ಮೆಯಾಗುವಂತೆ ಬದುಕು, ಯಾವುದೇ ಕಷ್ಟಕ್ಕೂ ಸುಲಭಕ್ಕೆ ತಲೆತಗ್ಗಿಸಬೇಡ,ಯಾವ ಅಪಮಾನ ಅವಮಾನವನ್ನು ಗೌರವದಿಂದಲೇ ಎದುರಿಸು, ಕಷ್ಟದ ಸಮಯದಲ್ಲಿ ನಾವು ಧೈರ್ಯಗೆಟ್ಟರೆ ನಮ್ಮ ಮೇಲಿನ ಆಪಾದನೆಗಳು ಸತ್ಯವೆಂದು ಸಾಬೀತಾಗುತ್ತದೆ, ಇದಕ್ಕಿಂತ ಇನ್ನೂ ಎಷ್ಟೋ ಕಷ್ಟದ ಕ್ಷಣಗಳು ಬರಬಹುದು, ಅದು ನಮ್ಮನ್ನು ಶುದ್ಧಗೊಳಿಸುತ್ತದೆ ಅಂತಲೇ ಭಾವಿಸಿ ಸ್ವೀಕರಿಸು," ನಾನು ಅಪ್ಪನ ಕಡೆ ಹೆಮ್ಮೆಯಿಂದ ನೋಡಿದೆ, 
ಇವತ್ತಿಗೂ ನನಗೆ ಅವರು ಹೇಳಿದ ಮಾತುಗಳಲ್ಲಿ ನನ್ನಪ್ಪನೆ ಕಾಣುತ್ತಾರೆ, ಮಾನಸಿಕ ಕ್ಷೋಭೆಯ ಕಾಲದಲ್ಲಿ ನನ್ನ ಮನೋಬಲವನ್ನು ಮತ್ತೆ ಮತ್ತೆ ಹೆಚ್ಚಿಸುತ್ತಾರೆ. ನಮ್ಮ ಬಟ್ಟೆ, ನಮ್ಮ ಭಾಷೆ ಇವೆಲ್ಲ ವ್ಯಾಖ್ಯಾನವನ್ನು  ಮೀರಿದ ಹೃದಯದ ಭಾಷೆ ಒಂದಿದೆ. ಅದನ್ನಷ್ಟೇ ನಾವು ಈಗಿನ ದಿನಮಾನದಲ್ಲಿ ಅಗತ್ಯವಾಗಿ ಪರಿಗಣಿಸಬೇಕಾಗಿರುವುದು. ಹಣ ಸಂಸ್ಕೃತಿಯ ಸುತ್ತ(ಹಣ ಅಗತ್ಯವೇ ಸರಿ) ಕುಣಿಯುವ ಇವತ್ತಿನ ಜಗತ್ತಿಗೆ,  ವಸ್ತುಗಳಷ್ಟೆ ನಮಗೆ ಬೆಲೆ ತರುವುದು ಎಂದು ಭಾವಿಸಲಾದ ಈ ಜಗತ್ತಿಗೆ ಆರ್ದ್ರತೆಯ, ಭಾಷೆಗಳನ್ನು ಮೀರಿದ  ಹೃದಯದ ಭಾಷೆ ಕಲಿಸಲೇ ಬೇಕಿದೆ ಇಲ್ಲವಾದರೆ  ನಮ್ಮ ಸುಂದರ ಜಗತ್ತಿನ ಆಸೆ ಕೇವಲ ಕನಸುಗಳಲ್ಲಿ ಮಾತ್ರ ಉಳಿದೀತು.

4 comments:

  1. ಹೃದಯ ಭಾಷೆ ಇಷ್ಟಾ ಆಯ್ತು

    ReplyDelete
  2. ನಿಮ್ಮ ಎಲ್ಲಾ ಕವನಗಳನ್ನು ಪೇಸ್ಬುಕ್ ನಲ್ಲಿ ನೊಡಿದ್ದೇನೆ....ಈ ಲೇಖನ ತುಂಬಾ ಇಷ್ಟವಾಯಿತು ನಿಮ್ಮ ಬರಹ ಹೀಗೆ ಬರುತಿರಲಿ...ನಿಮ್ಮ ಮತ್ತೊಂದು ಬರಹದ ನೀರಿಕ್ಷೆಯಲ್ಲಿ ನಾವು....ಧನ್ಯವಾದಗಳು

    ReplyDelete