Thursday, April 24, 2014

ವ್ಯಾಪ್ತಿ-ಪ್ರಾಪ್ತಿ

ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://ittigecement.blogspot.in/2014/04/blog-post.html

ಭಾಗ (೨) : ದಿನಕರ್ ಮೋಗೆರರವರ "ದಣಪೆ" http://dinakarmoger.blogspot.in/2014/04/blog-post_14.html 

ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://nimmolagobba.blogspot.in/2014/04/blog-post_1912.html

ಭಾಗ (೪) : "ಮಿತಿ" ರೂಪಾ ಸತೀಶ್ http://www.bilimugilu.blogspot.in/2014/04/blog-post_24.html

ಇದನ್ನ ಮುಂದುವರೆಸುವ ಪುಟ್ಟ ಪ್ರಯತ್ನ

ವ್ಯಾಪ್ತಿ-ಪ್ರಾಪ್ತಿ

ಹಾ... ಈ ನಂಬರ್ ಅವರ ಆಫೀಸಿನದ್ದಲ್ಲ ಮ ನೆ ಯ ವ್ಯವಹಾರಗಳಿಗಾಗಿ ಇಟ್ಟುಕೊಂಡ ಮತ್ತೊಂದು ನಂಬರು ..ಆದರೆ ಉಪಯೋಗಿಸಿದ್ದು ಬಹಳ ಕಮ್ಮಿ.. ನಮ್ಮ ನಿತ್ಯದ ವ್ಯವಹಾರಕ್ಕೂ ಅವರು ಅಫೀಸಿನ ಫೋನನ್ನೇ ಬಳಸುತ್ತಿದ್ದರು . ಅಷ್ಟಕ್ಕೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಹುಡುಕುವ ಯಾವ ಪ್ರಮೇಯವೂ ಬಂದಿರಲಿಲ್ಲ ..ನಾನು  ಅನುಮಾನಿಸಿದವಳಲ್ಲ.. ಕೈಯಲ್ಲಿದ್ದ ಮೊಬೈಲು..ಅದರಲ್ಲಿದ್ದ ನೂರೆಂಟು ಪ್ರೇಮಮಯ ಸಂದೇಶಗಳು ನನ್ನ ನಂಬಿಕೆಯ ಭಧ್ರ ಕೋಟೆಯನ್ನ ಒಂದೇ ಏಟಿಗೆ ಹೊಡೆದುರುಳಿಸಿತ್ತು...

ಈ ಕ್ಷಣಕ್ಕೆ ಬಂದ ಕೋಪಕ್ಕೆ ಬಟ್ಟೆ ಎಲ್ಲಾ ಪ್ಯಾಕ್ ಮಾಡಿ ಹೋಗಿಬಿಡಲೇ? ಇಲ್ಲ ಇಲ್ಲ ...ಕಾಲ್ ಮಾಡಿ"ನಿಮ್ಮ ಮಂಗಳಕರ ಬುದ್ಧಿ ಗೊತ್ತಾಯ್ತು " ಎಂದು ಕೂಗಾಡಿ ಡೈವೋರ್ಸ್ಗೆ ಅಪ್ಪ್ಲೈ ಮಾಡ ಬೇಕು ..ಈ ಗಂಡಿಗೆ ಸರಿಯಾಗಿ ಬುದ್ಧಿ ಕಲಿಸಬೇಕು..ಹಾಗೆ ಆಕೆಗೂ ... "ಅಹಹ .. ಡೈವೋರ್ಸೆ ಮಾಡಿದ್ರೆ ನಿನ್ನ ಗಂಡ  ಸರಿ  ಹೋಗ್ತಾನಾ? ಮಳ್ಳು ನಿನಗೆ.. ಹಾಳಾಗಿ ಹೋಗ್ತಾನೆ..ಇನ್ನೂ ಒಳ್ಳೇದೆ ಆಗುತ್ತೆ..ಈಗ ಕದ್ದು ಮುಚ್ಚಿ ನಡೀತಿರೋದು..ಮನೆಯಲ್ಲೇ ಶುರುವಾಗುತ್ತೆ " ಅಂತರಾತ್ಮ ಚುಚ್ಚತೊಡಗಿತ್ತು ... ಏನೂ ತೋಚದವಳಮ್ತೆ ಹಾಸಿಗೆಯ ಮೇಲೆ ಬಿದ್ದೆ .. ಮಾನಸಿಕ ತುಮುಲಕ್ಕೆ ಒಳಗಾದ ದೇಹ ನಿದ್ರೆಗೆ ಶರಣಾದ್ದು ತಿಳಿಯಲಿಲ್ಲ

ಎಚ್ಚರವಾಯ್ತು... ಬೆಚ್ಚಿಬಿದ್ದು ನೋಡಿದೆ  ಗಂಟೆ ೨.ರಾತ್ರಿ  ತಿನ್ನದೇ ಮಲಗಿದ್ದಕ್ಕೆ ಹೊಟ್ಟೆ ಚುರುಗುಟ್ಟುತ್ತಿತ್ತು..ಉರುಳಿ ಹೋಗುತ್ತಿರುವ ಸಾಮ್ರಾಜ್ಯದ ಸಾಮ್ರಾಜ್ಞಿ ನಾನು ...ಇಂತಹ ಶೂನ್ಯದಲ್ಲು ಹೊಟ್ಟೆ ಹಸಿವಾಯ್ತು ಹೇಗೆ..ತಿನ್ನಲೇ ಬಾರದು..ಇದು ಪಾಪಿಯ ಮನೆ ಓಡಿ ಹೋಗಬೇಕು ..ಇಂತದ್ದೆ ಯೊಚನೆಗಳು.."ಯಾಕೆ... ಇವತ್ತಷ್ಟೇ ನಿನ್ನ ಗೆಳೆಯ ಕಾವಲಿದ್ದ ಕೋಟೆಗೆ ನುಗ್ಗಿರಲಿಲ್ಲವೇ? ಆಗ  ನಿನ್ನ ವಿವೇಕ ಎಲ್ಲಿತ್ತು?... " ಅಂತರಾತ್ಮ ಮತ್ತೆ ಚುಚ್ಚಿತು ..ಇದ್ದಕ್ಕಿದ್ದಂತೆ ಓಶೋ  ನೆನಪಾದರೂ..ಅಪ್ಪ ಮತ್ತು ಅಮ್ಮ ನೆನಪಾದರು. ವರ್ಷ ಹೊತ್ತು ಹೆತ್ತು ಮುದ್ದಾಡಿದ್ದ ಮಗು ನೆನಪಾಯ್ತು... ನಾನು ಸಾಯಬೇಕು  ಅನ್ನಿಸುತ್ತಿತ್ತು ... ಹಿಂದೆಯೇ..ಸತ್ತರೇನು ಪ್ರಯೋಜನ..ಇದ್ದಾಗಲೇ ಸರಿಯಾಗದ್ದು ಇಲ್ಲದಿದ್ದಾಗ ಸರಿ ಆಗುತ್ತದೆಯೇ?.ಅನ್ನಿಸಿತು ...

ದೇವರ ಮನೆಯ ನಂದಾ  ದೀಪದ  ಮಂದ ಬೆಳಕು ಕರೆದಿತ್ತು..ಹೋಗಿ ಸುಮ್ಮನೆ ಕುಳಿತೆ...ಮನದಲ್ಲಿದ್ದ ಆತಂಕ ನಿಧಾನಕ್ಕೆ ಕಮ್ಮಿ ಯಾದದ್ದು ಗಮನಕ್ಕೆ ಬರುತ್ತಾ ಹೋಯಿತು... ಓಶೋ ಮಾತು ನೆನಪಾಯ್ತು.."ಕಾಮ ಮೂಲದಿಂದ ಹುಟ್ಟಿದ ಎಲ್ಲ ಸಂಬಂಧಗಳಲ್ಲೂ ದು:ಖ ಸ್ಥಾಯಿ ..ಯಾವ ನಿರ್ಧಾರವು(ಗಂಡನನ್ನ ಅಥವಾ ಹೆಂಡತಿಯನ್ನ ಬದಲಿಸುವ ) ಹೆಣ  ಹೊತ್ತ ಹೆಗಲನ್ನು ಬದಲಾಯಿಸುವಷ್ಟೆ  ನಿರರ್ಥಕ...." "ಈಗ ಆದದ್ದಾದರೂ  ಏನು? ಒಂದಷ್ಟು ನಿನ್ನ ಮನಸ್ಸಿಗೆ ಆತಂಕ ಹುಟ್ಟಿಸುವ ಸಂದೇಶಗಳು ..ಅಷ್ಟೇ  ತಾನೇ ...ದೋಷ  ನನ್ನದು ಇದೆ..ಅವನದ್ದು ಕೂಡ .. ಬದುಕಿಗೆ ಬೆನ್ನು ತಿರುಗಿಸೋ ಯಾವ ಯೋಚನೆಯು ಬದುಕು ಕಟ್ಟಲಾರದು ..ಇದಕ್ಕೆ ನಿನ್ನ ಆತ್ಮಶಕ್ತಿಯೇ ಬೆಳಕು..ತೀರ ಕೈ ಮೀರಿದರೆ ಒಂಟಿ ಬದುಕು.... ಆದರೆ ಪ್ರಯತ್ನಿಸಲೇ ಬೇಕು..ಹೇಡಿಯಾಗಬಾರದು" ನಿರ್ಧಾರವೊಂದು  ಮನಕ್ಕೂ ಕಾಲಿಗೂ ಶಕ್ತಿ ನೀಡಿತ್ತು ..

ಕುಕ್ಕರಿನಲ್ಲಿ ಇದ್ದ ಸಲ್ಪ ಅನ್ನವನ್ನು ,ಮೊಸರಿನೊಂದಿಗೆ ತಿಂದೆ. ಮಧ್ಯ ರಾತ್ರಿಯ ಮೀಟಿಂಗು .ರಾತ್ರಿ  ಲೇಟ್ ಬರುತ್ತಿದ್ದ ಹಿಂದಿನ ನಿಜ ಕಾರಣಗಳೆಲ್ಲಾ ಈಗ ನಿಚ್ಚಳವಾಗಿದ್ದವು.. ಆದರು ತಪ್ಪು ತನ್ನದೇ ತುಂಬಾ ದಿವಸದಿಂದ ಅವರು ಕರೆಯುತ್ತಲೇ ಇದ್ದರು .."ಮನೆಯಲ್ಲೇ ಕೂತು ಏನು ಮಾಡುತ್ತಿ ..ಆಫೀಸಿಗೆ ಬಾ...ಮ್ಯಾನೇಜ್ ಮೆಂಟು  ನಿಂದೆ " ಇವತ್ತಿಂದ ಹೋಗಲೇ ಬೇಕು ..ನಿರ್ಧರಿಸಿದೆ ..ಸಮಯ ನೋಡಿದೆ..ಐದು ಗಂಟೆ .... ಕನ್ನಡಿಯ ಮುಂದೆ ನಿಂತೆ ... ಕನ್ನಡಿಯಲ್ಲಿದ್ದಾಕೆ ಅಷ್ಟು ಅಸಹ್ಯವಿರಲಿಲ್ಲ..ನೋವು ತುಂಬಿದ ನಿದ್ದೆ ಇಲ್ಲದ ಕಣ್ಣುಗಳನ್ನು ಬಿಟ್ಟರೆ ದೇಹದಲ್ಲಿ ಜಾಸ್ತಿ ಇರಬಹುದಾದ ಮೂರು ಕೆಜಿ ಕೊಬ್ಬು ಮಡಿಕೆ ಆಗಿತ್ತು..ಇವತ್ತಿಂದ ಜಿಮ್ಮಿಗೂ ಹೋಗಬೇಕು ಅಂದುಕೊಂಡೆ ... ಮಗು ನೆನಪಾಯ್ತು .. ಅಮ್ಮನ ಹತ್ತಿರ ಸಲ್ಪ ಮಾತಾಡಿ ಹಾಗೆ ಅಲ್ಲಿಂದ ಆಫಿಸಿಗೆ ಹೋಗೋಣ ಎಂದು ತೀರ್ಮಾನಿಸಿ ಸ್ನಾನಕ್ಕೆ ನಡೆದೆ ....

ಈಗ ಅಮ್ಮನ ಮನೆ ಮುಂದಿದ್ದೇನೆ ..ಪಾಪುವಿನೋಂದಿಗೆ ಬಂದ ಅಮ್ಮ ನನ್ನ ನೋಡಿ ಆಶ್ಚರ್ಯ ಪಟ್ಟರು .."ಏನೇ ಇದು ಇಷ್ಟ್  ಬೆಳಗ್ಗೆ?" " ಏನಿಲ್ಲ  ಅಮ್ಮಾ .ಅವರು ಮನೇಲಿಲ್ಲ..ವ್ಯವಹಾರದ ಸಲುವಾಗಿ ಎಲ್ಲೋ ಹೋಗಿದ್ದಾರೆ. .. ಮನೇಲಿ ಒಬ್ಳೇ ..ಬೇಜಾರಾಯ್ತು ಬಂದೆ... " ಅವಳು ಅಮ್ಮ ಅಲ್ವೇ ನನ್ನ ತುಮುಲ ಆಕೆಯ ಮಮತೆಗೆ ನಿಚ್ಚಳ ... "ಸುಳ್ಳು ಹೇಳ್ತಿದ್ದಿ  ಅಂತ ಗೊತ್ತು ..ಬಾ ಒಳಗೆ..." ಅಪ್ಪ ಪತ್ರಿಕೆ ಓದುತ್ತಿದ್ದವರು ತಲೆ ಎತ್ತಿ "ಪುಟ್ಟಾ ಕುತ್ಕೊ... ನಿಂಗೆ ಏನೋ ಹೇಳ್ಬೇಕು"
"ಏನಪ್ಪಾ" ಅಂದೆ ಕೂತ್ಕೊಳ್ತಾ .."ನೀನಿದನ್ನ ತಪ್ಪು ತಿಳಿಬೇಡ ..ನೋಡು  ಮಗು ನಮಗೆ ಅಡ್ಜಷ್ಟ್  ಆಗಿದಾನೆ ..ನೀನಿಗ ನಿನ್ನ ಬದುಕು ನೋಡ್ಕೊ ಬೇಕಮ್ಮ ...ಹೆಣ್ಣು ಮಕ್ಕಳು ಮನೆಯಲ್ಲಿ ಕೂತರೆ ಸದರ ..ನಿಮ್ಮದೆ ಆಫಿಸು ಇದೆ..ಗಂಡ ನೀನು ಒಟ್ಟಿಗಿದ್ದರೆ ಕಂಪನಿ ಬೆಳೆಯುತ್ತೆ.. ಹಾಗು ಮನಸ್ಸಿಗೂ ನೆಮ್ಮದಿ".... ನನ್ನ ಕಣ್ಣುಗಳು ಅಪ್ಪನ ಕಣ್ಣುಗಳನ್ನ ಸಂಧಿಸಿದವು..ತಳಮಳ"ಅಪ್ಪನಿಗೆ ಎಲ್ಲವು ಗೊತ್ತೇ .ಆದಕ್ಕೆ  ಹೀಗನ್ನುತ್ತಿದ್ದಾರೆಯೇ..ಅಲ್ಲವೇ ಮತ್ತೆ ಇದರ ಹಿಂದಿನ ಮರ್ಮ ಏನಿರಲಿ..ನನ್ನ ಒಳ್ಳೇದಕ್ಕೆ ತಾನೆ... " ಮನಸ್ಸು ಯೋಚಿಸುತ್ತಿತ್ತು "ಹೂ ಅಪ್ಪಾ..ಅದನ್ನೇ ಹೇಳೋಣ ಅಂತ ಬಂದೆ ..ಇವತ್ತಿಂದ  ಆಫೀಸಿಗೆ ಹೋಗ್ತಾ ಇದ್ದೀನಿ ..ಪಾಪುನಾ ಸಂಜೆ ಬಂದು ಕರ್ಕೊಂಡು ಹೋಗ್ತಿನಿ.." ನನ್ನ ನೋಡಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಿ ಬಂದು ಅಪ್ಪಿದ ಪುಟ್ಟ ದೇವರ ತೋಳುಗಳಲ್ಲಿ ನನಗೆ ನನ್ನ ಗುರಿ ಸ್ಪಷ್ಟವಾಯ್ತು ...

ಮನೆಯಲ್ಲಿ ಅಮ್ಮನ ಕೈ ಉಪ್ಪಿಟ್ಟು ತಿಂದು..ಮಗುಗೆ ಸಂಜೆ ಬರುವ ಪ್ರಾಮಿಸ್ ಮಾಡಿ ಆಫೀಸಿಗೆ ನಡೆದಿದ್ದೇನೆ ... ಇದೋ ನಮ್ಮದೇ ಅಲ್ಲ ಇನ್ನು ನನ್ನದೇ ಆಫೀಸು..ಬಾಗಿಲು ತೆರೆದಿದೆ... ಒಳ ನುಗ್ಗಿದೆ .. ಯಾರು ಇರಲಿಲ್ಲ... ಸೀದಾ  ಇವರ ಕ್ಯಾಬಿನ್ ಹತ್ತಿರ ಹೋದೆ...ಬಾಗಿಲು ಹಾಕಿರಲಿಲ್ಲ .. ನೂಕಿದೆ ...  ಒಳಗಿದ್ದ ವ್ಯಕ್ತಿಯನ್ನ ನೋಡಿ ನನಗು ನನ್ನ ನೊಡಿ ಆ ವ್ಯಕ್ತಿಗೂ ಶಾಕ್ ಆಯಿತು "ನೀನು ಇಲ್ಲಿ..??".........

(ಮುಂದುವರೆಯುವುದು ...)









Thursday, April 17, 2014

ಮುಗಿಯದ ಚುನಾವಣೆ

ಚುನಾವಣೆ ಮುಗೀತು... ನನ್ನ ಮನದಲ್ಲಿ ಇನ್ನೂ ನಡೆಯುತ್ತಿದೆ!!

ಆಳೆತ್ತರದ  ಹಂಪು , ಅಷ್ಟೇ ಆಳದ  ಗುಂಡಿ ... ರಸ್ತೆಗಳೊ ದೇವರಿಗೆ ಪ್ರೀತಿ ..ಸೀದಾ ಯಮಲೋಕಕ್ಕೆ ದಾರಿ... ಹೀಗೆ ಪುಕ್ಕಟ್ಟೆ ಟಿಕೇಟು ಕೊಟ್ಟು  ಖಾಲಿಯಾಗದ ಕೋಟಿ ಕೋಟಿ ಗಳ ಲೆಕ್ಕದ ಜನಸಂಖ್ಯೆ... ಹಾಗೂ ಅವರು ಗುಂಡಿಯಲ್ಲಿ ಬೀಳಿಸುತ್ತಲೆ ಇದ್ದಾರೆ ನಾವು ಬೀಳುತ್ತಲೇ  ಇದ್ದೇವೆ...!!

ಹುಟ್ಟಿದಾಗ ಅಪ್ಪ ಅಮ್ಮನಂತೆ ಆಮೇಲೆ ಗಂಡ ನಂತರ  ಮಗ ..ಈಗ ಅಷ್ಟಿಲ್ಲ .ಅದೇನೆನೊ ಕಾನೂನು ತಂದಿದ್ದಾರಂತೆ... ದೊಡ್ಡವರ ಮನೆ ಹೆಣ್ಣುಗಳು ಗಂಡನ್ನ ಪಾಪದ ನಾಯಿ ಮಾಡಲು ಬಳಸಿದಳು..ಮಧ್ಯಮ ಕೆಳ ಮಧ್ಯಮ ವರ್ಗದ  ಹೆಣ್ಣು ಮಕ್ಕಳು ಪಾಪ ಮರ್ಯಾದೆಗಂಜಿ ಇನ್ನು ಸೀಮೆ ಎಣ್ಣೆ ರೇಟು..ಗ್ಯಾಸು ಸಿಲೆಂಡರು .. ಫ್ಯಾನು..ನಿದ್ದೆಮಾತ್ರೆ  ರೇಟು ಜಾಸ್ತಿ ಮಾಡ್ತಿದ್ದಾರೆ ..ಪಾಪ ನಮ್ಮ ಮಹಿಳಾ ರಕ್ಷಣಾ ಸಂಘಗಳಿಗೆ ಏನ್.ಜಿ ಓ ಗಳಿಗೆ ಅಲ್ಲಿ ಯಾವುದೋ ಕೋಮುಗಲಭೆ(ಅದೂ ಅಲ್ಪ ಸಂಖ್ಯಾತ ಆಗಿರಬೇಕು!!) ಆಗಿ  ರುಚಿ ಕವಳದಂಥ ಸುದ್ದಿಗಳಾಗುವ.. ಟಿವಿ ಡಿಬೇಟುಗಳಲ್ಲಿ ಭಾಗವಹಿಸುವ ಅವಕಾಶ ದಕ್ಕಿಸುವ ಕೇಸು ಮಾತ್ರ ಕಣ್ಣಿಗೆ ಕಾಣುತ್ತದೆ .ಅದರ ಜೊತೆಗೆ ಸಂಸ್ತೆಗಳಿಗೆ ಹರಿದು ಬರುವ ಬಿಟ್ಟಿ ಹಣದ ಮೇಲೆಯೂ ಕಣ್ಣು.. ಹೀಗೆ ನಾಯಿ ರಕ್ಷಣೆಗಾಗಿ ಕಣ್ತೆರೆದ ಸಂಸ್ಥೆಯ  ಒಡತಿ  ಈಗ ಕೇವಲ ಕೋಟಿ ಲೆಕ್ಕದ ಮನೆ ತಗೊಂಡು ಅರ್ಧ ಕೋಟಿ ಲೆಕ್ಕದ ಕಾರಿನಲ್ಲಿ  ಗಂಡನೊಂದಿಗೆ ಓಡಾಡುತ್ತಾಳೆ.. ಪಾಪ ಬಿಡಿ ಅವರು ಬದುಕಿಕೊಳ್ಳ ಬೇಕು ಅಲ್ಲವೇ ??

ಅವನು ಪಾಪದ ಎಂ ಪಿ .. ಹೆಣ್ಣಿನ ದೇಹದ ಮೇಲೆ ಹಿಂಸ್ರ ಪಶುಗಳಂತೆ ಎರಗುವ ಗಂಡುಗಳು ಅವನ ರಕ್ತ ಸಂಬಂಧಿಗಳಿರಬೇಕು... ಅದಕ್ಕೆ ಅವರ ಪರ ನಿಂತಿದ್ದಾನೆ ..ಇದನ್ನೆ ದೊಡ್ದದು ಮಾಡಿ ಚಾನೆಲ್ಲುಗಳು ಟಿ ಆರ್ ಪಿ ಹೆಚ್ಚುಮಾಡಿ ಕೊಂಡವು.. ಮತ್ತು ನಮ್ಮ ದೇಶದಲ್ಲಿ ದಿನ ನಿತ್ಯ ಹೆಣ್ಣು ಎಂಬ ಜೀವಿಗಳು ಹುಟ್ಟುವುದು ತಪ್ಪು ಎಂದೂ ಇವರೆಲ್ಲಾ ಅಯೋನಿಜರೆಂದು ಸಾರಿ ಕೊಲ್ಲುತ್ತಲೇ ಇದ್ದಾರೆ ಹುಟ್ಟುವ ಮುನ್ನವೂ ಹುಟ್ಟಿನ ನಂತರವೂ ..ಒಬ್ಬ ನಿರ್ಭಯ ಮಾತ್ರ ಸುದ್ಧಿಯಾದಳು ನೂರು ಅಬಲೆಯರು ಸತ್ತ ವಿಷಯ ವಿಶೇಷವಲ್ಲ ಬಿಡಿ...

ಕಾನೂನು  ತಿದ್ದುವ ಜಾಗದಲ್ಲಿ ಕೂರುವವರು ಓದಿಕೊಂಡವರೇ  ಇರಬೇಕೆ ..ಸ್ವಾಮಿ ನಾವು ಹಿರಿಯರ ಸಂಸ್ಕೃತಿ ಯನ್ನು ಗೌರವಿಸುವವರು .ಹೆಬ್ಬೆಟ್ಟಾದರೂ  ಪರವಾಗಿಲ್ಲ .....ನಮ್ಮ ದುಡ್ಡಿನಲ್ಲೇ ವಿಮಾನ ದಲ್ಲಿ ಮತ್ತು ಸಂಸತ್ತಿನಲ್ಲಿ ನಿದ್ರಿಸುವ ಯಜಮಾನರು ಬೇಕು..ನಾವು ಓಬೇರಾಯನ ಕಾಲದ  ಕುರಿಗಳು .. ಅವರು ಬದಲಾಯಿಸಬಹುದಾದ ಕಾನೂನುಗಳನ್ನ ಮಾಡುತ್ತಾರೆ..ಮತ್ತು ಅವರವರ ಅನುಕೂಲಕ್ಕೆ ತಕ್ಕಂತೆ  ಬೇಕಾದಾಗ ಬದಲಾಯಿಸಿಕೊಳ್ಳುತ್ತಾರೆ .. ನಾವು ವಂಶ ಪಾರಂಪರ್ಯ ಆಡಳಿತಕ್ಕೆ ಹೊಂದಿಕೊಳ್ಳುತ್ತೇವೆ..ಮತ್ತು ನಮ್ಮದು ಗುಲಾಮಿ ಮನಸ್ಥಿತಿ .. ಅದು ನೂರಾರು ವರ್ಷಗಳ ಕಾಲದ ಹಳೆ ವರ್ಣತಂತು .. ನಿಧಾನಕ್ಕೆ ಬದಲಾಗುತ್ತದೆ ಬಿಡಿ.. ಇಂಗ್ಲಿಷರು ಕೊಟ್ಟ ಒಡೆದು ಅಳುವ ಕತ್ತಿಯನ್ನ ಒರೆಯಲ್ಲಿಡುವ ಬದಲು..ಅದನ್ನ ಮಸೆದು ಮಸೆದು ಹರಿತಗೊಳಿಸಿ ಜಾತಿ ಧರ್ಮ ಅನ್ನೋ ನೂರು ಪಂಗಡಗಳನ್ನ ಮತ್ತೆ ಕೊಚ್ಚಿ ರಕ್ತಸಿಕ್ತ ಸಿಂಹಾಸನದ ಮೇಲೆ ಕೂರುವ ನರಿಗಳ ನಿತ್ಯ ಉತ್ಸವ .."ಹುಚ್ಚು ಮುಂಡೆ ಮದ್ವೇಲಿ ಉಂಡವನೆ  ಜಾಣ"
ಎಲ್ಲರು ಉರಿವ ಮನೆಯಲ್ಲಿ ಗಳ ಹಿರಿವ ಕೆಲಸ ಮಾಡುವವರೇ ಹೊರತು.. ಬಿಡಿ  ನಾವು ಅವರನ್ನು ಕ್ಷಮಿಸಿದ್ದೇವೆ ..ಮತದಾನಕ್ಕೆ ರಜೆ ಸಿಗುತ್ತಿದ್ದಂತೆ ಊರುಗಳಿಗಳಿಗೆ ತೆರಳಿ ಹಬ್ಬದೂಟ ಮಾಡಿ ಗಡದ್ದು ನಿದ್ರಿಸುತ್ತೇವೆ... ಬೇರೆಯವರಿಗೆ ಮತದಾನದ ಮಹತ್ವವನ್ನ ಫೇಸು ಬುಕ್ಕಿನಲ್ಲಿ ಟ್ವಿಟ್ಟರಿನಲ್ಲಿ  ಉಪದೇಶಿಸಿ ದೊಡ್ಡವರಾಗುತ್ತೇವೆ!!

 ನೀರಿಲ್ಲದಿದ್ದರು ನಳಗಳನ್ನು ಹಾಕುವ..ರಸ್ತೆಯೇ ಇಲ್ಲದಿದ್ದರೂ ಕಾಮಗಾರಿ ಮಾಡುವ..ಕೆರೆ ಹೂಳೆತ್ತಲು ಬಿಲ್ ಪಾಸು ಮಾಡಿಸಿ ಇಡಿ ಕೆರೆಯನ್ನೇ ಮಟಾ ಮಾಯ  ಮಾಡುವ ..ಚುನಾವಣೆಯ ಕಾಲಕ್ಕೆ ಸಪೂರ ಸೊಂಟದ ನಟೀಮಣಿಯರನ್ನು ಕಣಕ್ಕಿಳಿಸಿ ಮನರಂಜನೆ ಮಾಡಿಸುವ ,ಕೋತಿ ಕೋಟಿ  ಲೆಕ್ಕದ ಹಗರಣಗಳನ್ನು ಸುಳ್ಳು ಎಂದು ತೋರಿಸಲು ನಮ್ಮದೇ ದುಡ್ಡಲ್ಲಿ ತನಿಖಾ ಸಂಸ್ಥೆಯನ್ನು ಸ್ಥಾಪಿಸುವ , ಉದ್ಯಮಿಗಳಿಂದ ಸಾವಿರ ಕೋಟಿಗಳ  ಲೆಕ್ಕದಲ್ಲಿ ಫಂಡು ಸ್ವೀಕರಿಸುವ... ಜೂಜಾಡುವ ..ಶರ್ಟು ಕುರ್ಚಿ ಹಿಡಿದು ಹೊಡೆದಾಡುವ ... ಬಿಳಿಯಾನೆಗಳ ಕೈಯಲ್ಲಿ ಜುಟ್ಟು ಕೊಟ್ಟು ದೇಶವನ್ನು ಇಂಚಿಚಾಗಿ ನುಂಗುವ ಇವರನ್ನೆಲ್ಲಾ ನಾವು ಏನು ಮಾಡ ಬಾರದು..ಸ್ವಾಮೀ ..ಪ್ರಾಣಿ  ಹತ್ಯೆ ಮಹಾ ಪಾಪ..ತೊಳೆದು ಕೊಳ್ಳಲು ಈಗ ಗಂಗೆಯು ಶುದ್ಧಳಿಲ್ಲ!!

ಮುಗಿಯಿತೇ  ಚುನಾವಣೆ..ಭರವಸೆಯ ಬಂಡಿಯನ್ನ  ನಿಮ್ಮ ಊರುಗಳಲ್ಲಿ ಹಣ ಹೆಂಡ ಸೀರೆ ಜಾತಿ ಧರ್ಮ ಅಂತ ಹಾರಿಸಿದ್ದಾಯಿತು... ಹೊತ್ತಿಕೊಂಡ ಹೊಟ್ಟೆ ಅರವತ್ತು ವರ್ಷಗಳಲ್ಲೂ ಮುಂದೆ ಬರಲಿಲ್ಲ ..ಕಾರು ಇದ್ದವನ ಮನೆ ಮುಂದೆ ಈಗ ಕಾರುಗಳದ್ದೆ ಜಾತ್ರೆ..ಆದರೂ ಅನ್ನ  ತಿನ್ನುವವರು ಇನ್ನು ಬದುಕಿದಾರೆ.. ಮುಂದೊಂದು  ದಿನ ನಿಜವಾದ ಚುನಾವಣೆ ನಡೆಯಲಿದೆ ... ಮತ್ತು ಇನ್ನೂ ಚುನಾವಣೆ ಮುಗಿದಿಲ್ಲ ..!!
ನೋಟಿನಲ್ಲಿಯ ಗಾಂಧಿ ನಗುತ್ತಲೇ ಇದ್ದಾರೆ!!

ಚಿತ್ರ ಕೃಪೆ -ಅಂತರ್ಜಾಲ 

Friday, March 14, 2014

ಹರೆಯ ಬಂತು ಹರೆಯ

ಆಗಷ್ಟೇ ಕಿತ್ತು ಬಿದ್ದ ಗಾಳಿಪಟ,ಹೊಟ್ಟೆಯೊಳಗೆ ನುಲಿವ ಸಂಕಟ 
ಜೀವ ಪ್ರಕ್ರಿಯೆಗೆ ಅನುಗೊಳ್ಳುವ ದೇಹ 
ರಕ್ತಮಯ  ತೊಡೆಗಳ ನಡುವೆ ಚಿಗುರುವ ಚಿಟ್ಟೆ ಮೊಟ್ಟೆ
ದಿನಕಳೆದಂತೆಲ್ಲಾ ಬಟ್ಟೆಯಂತೆ ದೇಹ 
ಒಗೆದು ಹರಡುವ ಬಯಕೆ 
ದಾರಿತಪ್ಪದೇ ಅಮ್ಮನ ಎದೆಗವಿತು ಆಶ್ರಯ 
ಪ್ರತಿ ಹುಡುಗನಲ್ಲು ಕಾಡುವ ರೋಮಿಯೋ 
ಥೇಟ್ ಕ್ಲಿಯೊಪಾತ್ರಳದ್ದೆ ನೃತ್ಯ ನಡಿಗೆಗೆ 
ಜಂಬದ ಕೊಂಬು ಹಾರು ಕೂದಲ ಮೇಲೆ 
ಮಿಗ್ ವಿಮಾನದ್ದೆ ವೇಗ  ಸ್ಕೊಟಿಗೆ 
ಹಾದಿಗಳ ಹಾದು ,ಹಳ್ಳ ಕೊಳ್ಳಗಳ  ದಾಟಿ ಓಡುವ 
ಹುಮ್ಮಸ್ಸಿನಲ್ಲಿ ಕರೆಯುವುದ ಮರೆತಳು "ಕರುಣಾಳು ಬಾ ಬೆಳಕೇ"
ಮುಗಿಲ ಮಾರಿಗೆ ತುಂಬಿದ ರಾಗ ಕೆಂಪಿನ ಸಮಯ 
ಕಳ್ಳ ಬೆಕ್ಕೊಂದು ದಾರಿಗಡ್ಡ 
ಹಾವಾದಳು ಫುತ್ಕರಿಸಿ ಹೂ ಆದಳು 
ದುಂಬಿ ಮುಖವೆಲ್ಲ ಉನ್ಮತ್ತ.. ಮಧುಮತ್ತ 
ಕಿವಿ ತುಂಬಾ ಇಂಪಾದ  ಕಾಮಗಾನ 
ಮೈಮರೆತ ಕ್ಷಣಕ್ಕೆ ನೋವ ಮೀರಿ 
ಹೊಮ್ಮಿದ ಸುಖದ ಕಡಲ ಆಳುವ ರತಿ!!
ಹಾವು ಕಚ್ಚಿದ ಜಾಗವೆಲ್ಲಾ ನೀಲಿ 
ಮಾನಿನಿ ನರಳುತಾಳೆ ಈಗ 
ಮೊಬೈಲು ಸಂದೇಶಗಳಲ್ಲಿ 
ಮುಖಪುಸ್ತಕದ ಚಿತ್ರಗಳಲ್ಲಿ 
ಮಾಳ ಬೆಕ್ಕಿನ ಕಥೆಯ ಯಾರು ನಂಬುತ್ತಿಲ್ಲ 
ಹಗಲು ಮಲಗಿದ ಮೇಲೆ ಮಂದ ಬೆಳಕಿನಲ್ಲಿ 
ಚಿಗುರು ಮೊಲೆಗಳ ನಡುವೆ ಉಗುರ
ಗುರುತ ನೋಡುತಾಳೆ ... ಮತ್ತಷ್ಟು ಸ್ವಗತ 
ಐ ಪಿಲ್ಲಿನ ಸಂಗತ್ಯದಲ್ಲಿ ಇಳಿದುಹೋದ 
ಗುಟ್ಟೊಂದನ್ನು ಬಚ್ಚಿಟ್ಟು ಮಲಗಿದವಳಿಗೆ
 ರಾತ್ರಿ ಎಲ್ಲಾ ಪೊರೆ ಬಿಟ್ಟ ಕನಸು!!
ಬೆಳಗೆದ್ದಾಗ ಕಂಡದ್ದು  ಬೆನ್ನಿಗೆ ಅಂಟಿಕೊಂಡ 
ಪಾತರಗಿತ್ತಿಯ ಬಣ್ಣ ಬಣ್ಣದ ರೆಕ್ಕೆಗಳು!!
ನೀವು ನೋಡಿದಿರಾ??

"ಮಹಿ"
(ಪಂಜುವಿನಲ್ಲಿ ಪ್ರಕಟವಾದ ಕವಿತೆ)

Friday, March 7, 2014

ಮನದಲ್ಲಿ ಹೊಳೆದದ್ದು !!


ಎದುರು ಬದುರು ಕುಳಿತಿದ್ದೆವು... ಬರೀ ದೂರವಾಣಿಯಲ್ಲಿ ಮಾತಿತ್ತು ನಿನ್ನೆಯ ತನಕ ,ಇವತ್ತು ತುಂಬಾ ಚರ್ಚೆಗಳು.. ನನಗೆ ಆರೋಗ್ಯಕರವಾದ ಸಂವಾದ ಬೇಸರ ತರುವದಿಲ್ಲ ..ಯಾವ ವಿಷಯಕ್ಕೂ ಸೈ,ನನಗೆ ಗೊತ್ತಿದ್ದನ್ನು ಹೇಳಿ ಗೊತ್ತಿಲ್ಲದ್ದನ್ನು  ಕೇಳುವ ತನಕ ... ನಾನು ಆಗಷ್ಟೇ ಓಶೋ ಪುಸ್ತಕ ಓದಿ ಮುಗಿಸಿದ್ದೆ..ಮಾತಾಡುತ್ತಾ ಆಡುತ್ತಾ ಮುಕ್ತ ಲೈಂಗಿಕತೆ ಎಡೆಗೆ ಮಾತು ಹೊರಳಿತು... ನನ್ನ ಅಭಿಪ್ರಾಯ ಕೇಳಿದ ..ನಾನು ಹೇಳಿದೆ... ಮನಸ್ಸು ಒಪ್ಪಿದವರೊಡನೆ ಇರುವುದು ಖಂಡಿತಾ ತಪ್ಪಲ್ಲ,ಮನಸ್ಸು ಮುರಿದವರೊಡನೆ ಬದುಕುವುದು ತಪ್ಪು .. ಈಗವನ ಬಾರಿ , ಒಂದು ಕ್ಷಣ ಏನು ಹೇಳಲಿಲ್ಲ ..ನಂತರ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ "ನನ್ನ ಮನೆ ಮನಸ್ಸು ಖಾಲಿ ಇದೆ ..ಬಿಟ್ಟು  ಬಂದು ಬಿಡು " ನಿರುತ್ತರಳಾಗುವ ಸರದಿ ನನ್ನದು..ಆಡದೆ ಉಳಿದ ಮಾತಿತ್ತು .ಅದಕ್ಕು ಮೀರಿದ ಕರ್ತವ್ಯದ ಕರೆ ಇತ್ತು .. ಹಾಗೇ ಒಂದು ಕಲ್ಪನೆಗಾದರು ಕನಸಿಗಾದರೂ ಸಿಗಬಹುದಾದ ಅವನ ಲೋಕವನ್ನ ವಾಸ್ತವಕ್ಕೆ ಬಂದು ಕಳಕೊಳ್ಳೋ ಭಯವಿತ್ತು !! ಮತ್ತೆ ನಾ ಅವನೊಡನೆ ಮುಕ್ತ ಲೈಂಗಿಕತೆಯ ಬಗ್ಗೆ ಮಾತಾಡಲಿಲ್ಲ..ಅವನೂ ಸಹ!!



ಪಕ್ಕದ ಮನೆಯಾಕೆ ನೀರು ಹಾಕಿ ಒಪ್ಪವಾಗಿ ರಂಗೋಲಿ ಇಡುತ್ತಾಳೆ ..ನಮ್ಮವ ಅದನ್ನ ನೋಡಿದಾಗಲೆಲ್ಲಾ ನನ್ನತ್ತ ಕಣ್ಣು ಹರಿಸಿ ನಿಟ್ಟುಸಿರಿಡುತ್ತಾನೆ ... ನನಗೆ ಇವನಂತವರ  ಮನಸ್ಥಿತಿಗೆ  ಮರುಕ, ಸಂಬಳ ತಂದ ಹದಿನೈದು ದಿನ ಗೆಳೆಯರೆದುರು ದೇವತೆ   ಎಂದು ಅಟ್ಟಕ್ಕೆರಿಸುವುದು ,ಉಳಿದ ದಿನ ರಾತ್ರಿಗಳು ದೂರದೂರಿನ  ಮನೆಯವರೆದುರು ಅವಳು ಒಪ್ಪವಿಲ್ಲ ಅದು ಮಾಡೋದಿಲ್ಲ ಇದು ಮಾಡೋದಿಲ್ಲ ಎಂದು ದೂರೋದು ... ಮೊದಲೆಲ್ಲಾ ಏಣಿ ಹತ್ತಿದ್ದು ಇಳಿದದ್ದು ಗೊತ್ತಾಗುತ್ತಿರಲಿಲ್ಲ ..ಈಗೀಗ ಹುಶಾರಾಗಿದ್ದೇನೆ...  ಅವನ ಹೊಗಳಿಕೆಗೂ ತೆಗಳಿಕೆಗೂ ಆಕಾಶದಲ್ಲಿ ಕಣ್ಣು ನೆಟ್ಟು ಅಮವ್ಯಾಸೆಯಲ್ಲಿ ಕಾಣದ ಚಂದ್ರಮನ  ನೆನೆದು ನಿಟ್ಟುಸಿರಿಡುತ್ತೇನೆ !!



ಅವನು ಹತ್ತಿರದ ಗೆಳೆಯ ಅವನ ತೀರ  ವೈಯುಕ್ತಿಕ ವಿಷಯಗಳು ನನಗೆ ಗೊತ್ತು ..ನೋಡಲಿಕ್ಕೂ ಚನ್ನಾಗಿದ್ದಾನೆ..
ಓದಿಕೊಂಡಿದ್ದಾನೆ ..ಸ್ತ್ರೀವಾದದ ಬಗ್ಗೆ ಸ್ತ್ರಿಲಿಂಗಿಯಾದ  ನನ್ನೇ ಸೋಲಿಸುವಷ್ಟು ಮಾತಾಡುತ್ತಾನೆ , ಆದರೆ ನನ್ನ ಕಷ್ಟಗಳನ್ನ ಹೇಳಿದಾಗ ಮಾತ್ರ ಆಥವಾ  ಅಪ್ಪಟ ಅಪ್ಪನಂತೆ ಅಥವಾ ತಮ್ಮನಂತೆ "ನೀನು ಹೆಣ್ಣು ಕಣೇ ..ಸಹಿಸಿಕೋಬೇಕು ..ಏನೋ ಒತ್ತಡದ ಗಳಿಗೆಗಳು" ನನಗೆ ಉರಿದು ಹೋಗುತ್ತದೆ .. ಅವನೊಡನೆ ಶರಂಪರ ಕಿತ್ತಾಡಿ ಬರುತ್ತೇನೆ ..ಕಣ್ಣತುಂಬಾ ಪ್ರಶ್ನಾರ್ಥಕ ಚಿಹ್ನೆ ಹೊತ್ತು ಕಾಯುತ್ತಿರುವ ನನ್ನವನೆದುರು ನಿಂತು "ಆಯ್ತಾ,ಇವತ್ತು ಜಗಳವಿಲ್ಲ...ಏನು ಮಾಡಲಿ ಊಟಕ್ಕೆ.. ಕಾಫಿ ಕುಡಿತೀಯಾ?" ಕೇಳುತ್ತೇನೆ, ಕಿತ್ತಾಟಕ್ಕೆ ಸಿದ್ಧವಾಗಿ ಶಸ್ತ್ರ ಸಜ್ಜಿತನಾಗಿದ್ದ ಅವ ಕತ್ತು  ಕೆಳಗಿಳಿಸಿ" ಕಾಫೀ ಮಾಡು" ಅನ್ನುತ್ತಾನೆ ..ಕಣ್ಣಲ್ಲಿ  ತುಂಟ ವಿಜಯದ ನಗು ಹೊತ್ತು ನಾನು ಅಡಿಗೆ ಮನೆಯತ್ತ ಧಾವಿಸುತ್ತೇನೆ ಮನದಲ್ಲಿ ದಿನವೂ ಅವನು ಸಿಗಬಾರದೇ ಎಂದು ಶಾಪ ಹಾಕುತ್ತಾ  !!

ಚಿತ್ರಕೃಪೆ :ಅಂತರ್ಜಾಲ 

Saturday, January 4, 2014

ಪ್ರೇಮ ನಾದ ಮತ್ತು ಬೆಳಕು(ಕಾವ್ಯ ಗುಚ್ಛ)

 ನಾದ -೧

ತೂಗುವ ಸಮಯದ ತೂಗುಯ್ಯಾಲೆ
ಇತ್ತಿಂದತ್ತ ಅತ್ತಿಂದಿತ್ತ ತೂಗದೆ ನಿಂತ ಹಾಗಿದೆ!!

ನಿನ್ನ ನನ್ನ ಕಾಣದ ಈ ದ್ವೀಪದ ದಡ ಸೇರಿಸಿದ
ದೋಣಿ ಇಲ್ಲೆ ಇದೆ
ಅಂಬಿಗ ಎಲ್ಲೋ ಕಳೆದು ಹೋಗಿದ್ದಾನೆ
ಹುಡುಕುವ ದರ್ದು ನಮಗೂ ಇಲ್ಲ

ನಿನ್ನೆದೆಯ ಮೇಲಿನ ಅಷ್ಟೂ ಕೂದಲ ಎಣಿಸುತ್ತಾ 
ಮಲಗಿದ್ದೇನೆ
ಯಾರು ಎಚ್ಚರಿಸುವದಿಲ್ಲ

ಅನಾಹತ ದ  ಆಳದಲ್ಲಿ ಮಿಡಿಯುವ
ನಮ್ಮ ಆತ್ಮಗಳ ಮಿಲನದ ನಾದಕ್ಕೆ
ಜಗತ್ತು ಮನ ಸೋತಿದೆಯಂತೆ 

ಹೌದಾ ?? ನನ್ನ ಚಲುವ ಶ್ಯಾಮಾ??


ನಾದ-೨


ಕಾರಣ ನೀನೇ!!


ಬಕ್ಕ ಬಾರಲು ಬಿದ್ದಿದ್ದ ಆಸೆಗಳು
ನಿನ್ನ ನೋಡುತ್ತಲೇ ಚಿಗುರಿಕೊಂಡವು
ಮುಗುಳ್ನಕ್ಕು ವರ್ಷಗಟ್ಟಲೇ ತುಕ್ಕು
ಹಿಡಿದಿದ್ದ ನರನಾಡಿಗಳ ಸವರಿ ಮತ್ತೆ ದೇಹ
ವೀಣೆಯ ಶ್ರುತಿ ಹಿಡಿದವಳು ನೀನೇ!!

ತಾರೆಗಳ ಬೆಳಕಿನ ಮಳೆಯಲ್ಲಿ ಮಿಂದ ಕನಸಿತ್ತು
ಅಲ್ಲಿ ನನ್ನ ಕೈ ಚಾಚಿದ್ದು ನಿನ್ನ ಹೃದಯ ಚಂದ್ರಮನಿಗಾಗಿ
ಕಳೆದ ವಸಂತಗಳ ಲೆಕ್ಕವಿಟ್ಟಿರಲಿಲ್ಲ ನಾನೂ
ದಿನಾ ಇಣುಕುವ ಬಿಳಿ ಕೂದಲಿಗೆ
ಕಪ್ಪು ಬಣ್ಣ ಬೇಕು ಅಂದದ್ದು ನಿನ್ನ ಕೊಂಕು ಕಣ್ಣೋಟವೇ!!

ಚಿಪ್ಪಿನಲ್ಲಿ ಅವಿತಿದ್ದ ತುಂಟತನ
ಈಗ ಕಚಗುಳಿ ಇಡುತ್ತಿದೆ
ಚಳೀಗಾಲವಿದು..ಎಳೆಬಿಸಿಲು 
ನೀ ಆದರೆ ಚಂದ, ಮಾತು ಬರದ
ನನ್ನ ಮೌನ ಒಲವಿಗೆ ನಿನ್ನ 
ಬಿಸಿ ಮುತ್ತಿನ ಒಪ್ಪಿಗೆ ಸಿಕ್ಕರೆ ಸಾಕು!!

ಕೇಳಬೇಡ ಈಗ, ಎಲ್ಲದಕು ಕಾರಣ
ನೀನೇ!!

ನಾದ -೩


ದಾರಿಯಲಿ ಬಿದ್ದವಳು ಕಣ್ತೆರೆವ ಮೊದಲೇ 
ತುಳಿದು ತಳ್ಳಿದವರು ಎಷ್ಟೋ ಮಂದಿ 
ತಿರಸ್ಕಾರ ನಿಂದೆಗಳಿಗೆ  ಪಕ್ಕಾಗಿ ಸುಕ್ಕಾದರೂ 
ಹರಿಯುತಿದ್ದ ಆಸೆಯ ಅಮೃತ ವಾಹಿನಿಯ ಹೊತ್ತು ಕಾಯುತಲಿದ್ದೆ... 

ಬಂದೇ ಬಂದನಲ್ಲ ಅವ.. 
ಯಾವ ಸೀಮೆಯ ಮಾಯಕಾರ ??
ಯಾವ ಲೋಕದ ಸಂತ??
ಬರುವ ಹಾದಿಗೆಲ್ಲಾ ಕಾಮನಬಿಲ್ಲು 
ನಿಂತಲ್ಲೆಲ್ಲ  ಕಿಲಿಸುವ ಹೂ ಹುಲ್ಲು 
ನನ್ನ ನೋಡಿ ಮುಗುಳ್ನಕ್ಕ 
ಅಂತಿದ್ದ ನೂರು ಜಾಢ್ಯಗಳ ಧೂಳ 
ತನ್ನ ಚಿಗುರು ಬೆರಳುಗಳಲ್ಲಿ ಸವರಿ 
ತನ್ನ ತುಟಿಗಿಟ್ಟ!!

ಇವ ಗಂಧರ್ವನೇ  ಇರಬೇಕು!!

ನಾನೀಗ ಹರಿಯುತ್ತಿದ್ದೇನೆ ಸಲಿಲ ಹೊಸ ರಾಗಗಳಲ್ಲಿ 
ನವ ರಂಧ್ರಗಳ ಕೊಳೆಯ ತೊಳೆದವನೇ ಹೇಳು 
ಅದೋ ಮಂದ್ರದಿಂದ ಷಡ್ಜದವರೆಗೆ 
ಕಣಕಣವ ಅರಳಿಸಿ 
ನನ್ನ ಭಾಗ್ಯದ ಕುಂಡಲಿನಿಯ 
ಮೂಲಾಧಾರದಿಂದ ಸಹಸ್ರಾರಕ್ಕೆ 
ತಾಕಿಸಿ ಹೋಳಾಗಿಸಿದೆ .. 


ಇದು ಚಂದ್ರ ಕೌಂಸ ವಲ್ಲ ಭೈರವಿಯೂ ಅಲ್ಲ 
ಬಹುಶಃ  ಮೋಹನವೇ ? ಇರಬೇಕು!!
ಋತುಕಾಲಗಳೆಲ್ಲ  ನಿಂತಿವೆ ..
ಸಪ್ತಋಷಿ ಮಂಡಲವೋ ಹಾಲ ಕಣಿವೆಯೋ 
ಇವನ ಕಣ್ಣ ಬೆಳಕಲ್ಲೇ ಹುಟ್ಟಿದವೇ??
ಸುತ್ತೆಲ್ಲ ಹರಿವ ನಾದಗಂಗೆ 
ಬೆಳಕೋ ಬೆಳಕು 
ಕೇಳು ನನ್ನ ಅವಕಾಶಗಳಲ್ಲಿ ತುಂಬಿಕೊಂಡ 
ನಿನ್ನ ಉಸಿರಿಗೆ ಪಕ್ಕಾಗಿ 
ನಾನೀಗ ಅಲೌಕಿಕೆ !!

ನನಗಿನ್ನು  ಸಾವಿಲ್ಲ!!





Thursday, January 2, 2014

ಒಲವ ಭಾಷೆ

1 -ಒಲವು 

ಥೂ  ಇವತ್ತೂ ಲೇಟ್  ಆಯ್ತು . ಅಮ್ಮ ಬೈಯ್ಯೋದು  ಗ್ಯಾರಂಟಿ . ....   
ಹೇಳ್ತಾನೆ ಇದ್ದೀನಿ  "ಪಮ್ಮಿ ಲೇಟ್ ಆಗುತ್ತೆ" ಕೇಳೋದೇ ಇಲ್ಲ ನನ್ನ ಮಾತು, ಮಹತಿಯ ಮನದಲ್ಲಿ ಆತಂಕದ ಅಲೆ.. 
ಕಣ್ಣೆದುರು ಕನ್ನಡಕದ ಅಪ್ಪ,ಕೆಂಪು ಕಣ್ಣಿನ ಅಮ್ಮನ  ನೆನಪು ಬಂದು ತಲೆ ಸುತ್ತಿದ ಹಾಗಾಯ್ತು ... 
"ಏನೇ,ಮನೆ ಬರೋ ಮುಂಚೆನೇ ತಲೆ ಮೇಲೆ ಬಂಡೆ ಹೊತ್ತೋಳ ತರ ಆಡ್ತಾ ಇದ್ದೀಯ, ನಿನ್ನ ಅಪ್ಪ ಅಮ್ಮ ಏನು  ಹುಲಿ,ಸಿಂಹನಾ" ಪಮ್ಮಿಯ ಮಾತು ಚುಚ್ಚಿತು. ಹೌದು ಮತ್ತೆ ಹುಲಿ,ಸಿಂಹಾನೇ ,ಅದೇ ತನ್ನ ಫ್ರೆಂಡ್  ನಂದಿನಿ, ಥೆಕ್ ಹೋಗಿ ಬಂದರೂ ಏನ್ ಹೇಳಲ್ಲ , ತನಗೆ ಕಂಬೈನ್ ಸ್ಟಡಿಗು ಹೋಗೋಕ್ಕೆ ಬಿಡಲ್ಲ .. ಸಿಟ್ಟು  ಅಸಹಾಯಕತೆ ಒಟ್ಟೊಟ್ಟಿಗೆ  ಬಂತು,ಅಪ್ಪ ಅಮ್ಮನ ಮೇಲೆ ತಿರಸ್ಕಾರ  ಹುಟ್ಟಿತು.. 
"ಮನೆ ಬಂತು ಇಳ್ಕೋ,ಮೂತಿ ಹಾಗೆ ಇಟ್ಕೊಂಡಿರು,ನಿಂಗೆ ನಾನೇನೋ ಮಾಡಿದ್ದೀನಿ  ಅಂತ ನಿಮ್ಮಪ್ಪ,ಅಮ್ಮ ತಿಳ್ಕೊಳ್ಳಲಿ .."ಎಂದ ಪಮ್ಮಿಯ ಮುಖ ನೋಡಿದಳು ... " ಬೈ ..ನಾಳೆ ಸಿಗ್ತೀನಿ " ಅಂದು ಅವನು  ಬೇರೇನೋ ಹೇಳೋದಿಕ್ಕೆ ಮುಂಚೆ ಗೇಟ್ ತೆಗೆದು ಒಳಗೆ ಓಡಿದಳು.. ಬೆಲ್ ಬಾರಿಸಿದಳು... ಯಾರೂ  ತೆರೆಯಲಿಲ್ಲ..ಒಮ್ಮೆ ಬಾಗಿಲನ್ನು ಮೆಲ್ಲನೆ ತಳ್ಳಿದಳು .. ಬಾಗಿಲು ತೆರೆದಿತ್ತು..ಆತಂಕದ ಜೊತೆ ಸಂತಸವು ಆಯಿತು ..
ಅಪ್ಪ ಅಮ್ಮನ ಸುಳಿವಿಲ್ಲ.. "ಅಮ್ಮಾ,ಅಪ್ಪಾ " ಕೂಗಿ ನೋಡಿದಳು ..ಸದ್ದಿಲ್ಲ .. ಸ್ವತಂತ್ರವಾದ ಭಾವ   .. ಟಿ.ವಿ ಹಾಕಿದಳು..ಮುಖ ತೊಳೆದು ಬಂದು ಸೋಫಾ ಮೇಲೆ  ಕುಳಿತಳು..ಸಮಯ ಹೋದದ್ದೇ ಗೊತ್ತಾಗಲಿಲ್ಲ ..  ಗಂಟೆ ಹತ್ತೂವರೆ ಆಯ್ತು.. ಯಾಕೋ  ಒಂತರದ ನಡುಕ  ಶುರುವಾಯ್ತು .. 
ಅಪ್ಪನ ಫೋನಿಗೆ ಟ್ರೈ ಮಾಡಿದಳು ..ಸ್ವಿಚ್  ಆಫ್  ಬಂತು ..ಸಣ್ಣದಾಗಿ ಗಾಬರಿ ಶುರುವಾಯ್ತು.. ಅಮ್ಮನ ಮೊಬೈಲಿಗೆ    ಟ್ರೈ ಮಾಡಿದಳು. ..ವ್ಯಾಪ್ತಿ ಪ್ರದೇಶದಿಂದ ಹೊರಗೆ ಎಂದು ಬಂತು ... ಸಣ್ಣದಾಗಿ  ಭಯ ಕಾಡಲಾರಂಭಿಸಿತು.. 
ಈ ದೊಡ್ಡ ಮನೆಯಲ್ಲಿ  ಭೂತದ ತರ ಒಬ್ಬಳೇ ಯಾವತ್ತೂ ಇದ್ದವಳಲ್ಲ ತಾನು,ಒಮ್ಮೆ 5 ನೇ ತರಗತಿಯಲ್ಲಿದ್ದಾಗ ಅಮ್ಮ ಮನೆಯಲ್ಲಿ ಬಿಟ್ಟು ತರಕಾರಿ ತರಲು ಹೋಗಿದ್ದಾಗ ತಾನೆಷ್ಟು ಅತ್ತಿದ್ದೆ .. ಒಮ್ಮೆ ಅಪ್ಪ ಅಮ್ಮನ ರೂಮಿಗೆ ಹೋಗಿ ನೋಡಲೇ ?? 
ನಿಧಾನವಾಗಿ ರೂಮಿನ ಬಾಗಿಲು ತೆರೆದಳು.ಅಪ್ಪನ ಆಫೀಸಿನ ಬ್ಯಾಗು.ಅಮ್ಮನ  ಸೀರೆ  ಮಂಚದ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು..  ಯಾವತ್ತು ಅಪ್ಪನ ವಾರ್ಡ್ ರೋಬಿಗೆ  ಕೈ ಹಾಕಿದವಳಲ್ಲ..ಈ ದಿನ ಕೆಟ್ಟ ಕುತೂಹಲ.... ತೆರೆಯುತ್ತಿದ್ದ ಹಾಗೆ ಕಂಡದ್ದು ಫೈಲುಗಳ ರಾಶಿ.. ಹಾಗೇ ಒಂದು ಪುಟ್ಟ ಕೆಂಪು ಬಾಕ್ಸ್ ..... ಆಹ್ !! ಎಷ್ಟು ಸುಂದರವಾಗಿದೆ...ತೆರೆಯಲು ಪ್ರಯತ್ನಿಸಿದಳು..  ಲಾಕ್  ತೆರೆಯಲಾಗಲಿಲ್ಲ ..ಯೋಚಿಸುತ್ತಾ  ಕುಳಿತಳು.. 
"ಮಹತಿ .. ಏನ್ ಮಾಡ್ತಾ ಇದ್ದೀಯ??"
ಅಮ್ಮನ ದ್ವನಿ ಎಚ್ಚರಿಸಿತು.. ಭಯ ಬಿದ್ದವಳಂತೆ ನೋಡಿದಳು.ಮೊಗದ ತುಂಬಾ ಪ್ರೀತಿ  ಹೊತ್ತ ಅಮ್ಮ ಅಪ್ಪ.. ಆದರೆ ಆ ಕೆಂಪು ಬಾಕ್ಸ್ ನಲ್ಲಿ  ಏನಿದೆ?.. 
"ನಮ್ಮ ರೂಮ್ನಲ್ಲಿ ಅದೂ ಅಪ್ಪನ ವಾರ್ಡ ರೋಬ್  ತೆಗೆದು  ಏನ್ ಮಾಡ್ತಾ ಇದ್ದೀಯ?? ಯಾವ್ಯಾವುದೋ  ಮುಖ್ಯ ಫೈಲುಗಳಿರುತ್ವೆ .."
ಕೇಳಿಸದವಳಂತೆ  ಅಮ್ಮನನ್ನೇ ದಿಟ್ಟಿಸಿದಳು ... ಮುಖದಲ್ಲಿ ಕುತೂಹಲ  ಮಾತಾಗಿತ್ತು.. 
"ಅಮ್ಮಾ, ಆ ಕೆಂಪು ಬಾಕ್ಸ್ ನಲ್ಲಿ  ಏನಿದೆ??"
"ಓ  ಅದಾ.. ಬಿಡು ..ನಿಮ್ಮಪ್ಪ ಅಮ್ಮನ ಆಸ್ತಿ... ನಿಂಗೇನು ಅದು ಮುಖ್ಯವಲ್ಲ ಆಲ್ವಾ??"
ಅಮ್ಮನ ಸಣ್ಣ ಚುಚ್ಚುವಿಕೆ ತಾಗಿದವಳಂತೆ ಮುಖ ಬಾಡಿತು.. 
"ಅಮ್ಮಾ..ಪ್ಲೀಸ್ ಹಾಗೆಲ್ಲ ಮಾತಾಡಬೇಡ ಅಮ್ಮಾ, ಏನಿದೆ ಅಮ್ಮಾ..ಪ್ಲೀಸ್ ತೋರಿಸು "
"ತಗೋ..ನೋಡು " ಅಮ್ಮ ಕೊಟ್ಟ ಸಣ್ಣ ಕೀಲಿಯನ್ನ ನೋಡಿ ಕುಶಿಯಾಯ್ತು.. 
ತೆರೆದಾಗ ಕಂಡದ್ದೇನು ??
ಪುಟ್ಟದಾದ ಫ್ರಾಕು ,ಒಂದು ಪುಟ್ಟ ಬಿಳೀ ಕೋಟು..  ಕಾಗೆ ಗುಬ್ಬಿ ಅಕ್ಷರದಲ್ಲಿ  ಗೀಚಿದ್ದ "ಅಮ್ಮ. ಅಪ್ಪ ಲವ್ ಯು " ಅನ್ನೋ ಅಕ್ಷರಗಳು..  ಅರ್ಥವಾಗಲಿಲ್ಲ..
ಅಪ್ಪನಿಗೆ ಇವಳ ಮುಖ ನೋಡಿಯೇ ಗೊತ್ತಾಯಿತು...
ಪಕ್ಕದಲ್ಲಿ ಬಂದು ಕೂತರು...
ಕೈ ಹಿಡಿದು "ಪುಟ್ಟಾ ,ಇದೆಲ್ಲ ನಿನ್ನ ಪುಟ್ಟ ಕನಸುಗಳು..ನಮ್ಮ ಆಸ್ತಿ.. ನನಗೆ ಗೊತ್ತು..ನಿನ್ನೆಲ್ಲಾ ಆಸೆಗಳನ್ನ ಪೂರೈಸಲು ಸಾಧ್ಯವಾಗುತ್ತಿಲ್ಲ..ನಿನ್ನ ವಯಸ್ಸಿಗೆ ತಕ್ಕಂತೆ ಬಯಕೆಗಳಿಗೆ ಸ್ವಾತಂತ್ರದ ರೆಕ್ಕೆ ತೊಡಿಸಲಾಗುತ್ತಿಲ್ಲ ಎಂದು.. ಆದರೆ ಪುಟ್ಟಾ..
ನಿನ್ನ ಬದುಕು ದೊಡ್ಡದಿದೆ..ನಿನ್ನ ಪುಟ್ಟ ಆಸೆಗಳನ್ನ ಯಾವತ್ತೂ ಪೂರ್ತಿ ಮಾಡಿದ್ದೀವಿ..ನೀನು ನಂಗೆ ಇರೋ ಒಂದೇ ಆಸ್ತಿ..ನಿನ್ನ ದೇಹ ಮನಸ್ಸು ಎರಡು ಸ್ವಸ್ಥ ಮತ್ತು ಬಲಿಷ್ಟವಾಗಿ ಬೆಳೆಯಬೇಕು..ಎಲ್ಲಾ ವಯೋಸಹಜ ಆಸೆಗಳನ್ನ ಮೀರಿ ನಿನ್ನ ಗುರಿಯತ್ತ ಗಮನ ಹರಿಸು..
ನೀನು ಚಿಕ್ಕೊಳಿದಾಗ ಈ ಪುಟ್ಟ ಕೋಟನ್ನ ಅದೆಷ್ಟು ಪ್ರೀತಿಸಿದ್ದೀಯಾ..ನಾನು ದಾಖ್ತೊರ್ರು ಆಗ್ತೀನಿ ಅಂತಿದ್ದೆ.. ಅವೇ ನಮ್ಮ ಅಸ್ತಿ ಪುಟ್ಟಾ"
ಮಹತಿಯ ಬಟ್ಟಲು ಕಂಗಳಲ್ಲಿ ಅಪ್ಪ ಅಮ್ಮನ ನಿರೀಕ್ಷೆಗಳು ಮಿನುಗಿತು ...ಅಪ್ಪ ಅಮ್ಮನನ್ನ ಶತ್ರುವಿನಂತೆ ಯೋಚಿಸುತ್ತಿದ್ದ ನೆನೆದು  ಕಂಗಳಲ್ಲಿ ಹಟ,ಪಶ್ಚಾತ್ತಾಪ ಕಣ್ಣೀರಾಗಿ ಹರಿಯಿತು... ಮನಸ್ಸು  ದೃಢವಾಯ್ತು..


2-ಒಲವು

ಒಂದು ವಾರ ಇರಲಿಲ್ಲ ...ಇನ್ ಬಾಕ್ಸ್ ತುಂಬಾ ಸಂದೇಶಗಳ ರಾಶಿ ರಾಶಿ .... ಒಂದೊದಕ್ಕೆ  ಉತ್ತರಿಸುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ ಅವಳಿಗೆ ... ಮಧ್ಯಾಹ್ನದ ಊಟದ  ನಂತರ ಮುಖಪುಸ್ತಕವನ್ನು ಓದುವುದು ರೂಢಿ .. ನಿಧಾನಕ್ಕೆ ಒಂದು ಸ್ಟೇಟಸ್ ಹಾಕಿ ಬಂದ  ಸಂದೇಶಗಳನ್ನೆಲ್ಲಾ ಓದ ತೊಡಗಿದ್ದಳಷ್ಟೇ ... ಇದ್ದಕ್ಕಿದ್ದಂತೆ  ಐ ಲವ್ ಯೂ  ಅಂತ ಯಾರದ್ದೋ ಸಂದೇಶ ಕಾಣಿಸಿತು.. ಕುತೂಹಲ ಜೊತೆಗೆ ಇದನ್ನ ಹಾಕಿದವನ ಮನಸ್ಥಿತಿ ಎಂತದ್ದಿರಬಹುದೆನ್ನೋ ಯೋಚನೆ ಕೂಡ ಕಾಡಿತ್ತು .. ಆತನ ಪ್ರೊಫೈಲನ್ನ ತೆಗೆದು ನೋಡಿದಳು..ಒಂದಿಪ್ಪತ್ತೋ ಇಪ್ಪತ್ತೊಂದೋ ವಯಸ್ಸಿರಬಹುದು .. ತುಂಬಾ ಮುದ್ದಾದ ಹುಡುಗ... ಮನಸ್ಸು ಚಂಚಲವಾಯ್ತು... ಅವನ ಸಂದೇಶಕ್ಕೆ ಉತ್ತರಿಸಿದಳು.. ಸಂಜೆಯ ತನಕ ಕೆಲಸಗಳ ನಡುವೆಯೇ ಅವನ ಜೊತೆ ಸಂದೇಶಗಳೊಂದಿಗೆ ಮಾತಾಡುತ್ತಲೇ ಇದ್ದಳು .. ಮೊಬೈಲಿನ ನಂಬರು ಕೂಡ ಅದಲು ಬದಲಾಯಿತು..
ಮರುದಿನ ಏಳುವದಕ್ಕಿಲ್ಲ ಕರೆ ಬಂದಿತ್ತು . ಮಾತಾಡುತ್ತಲೇ ಕೆಲಸ ಮುಗಿಸಿ ತಯಾರಾಗಿ ಹೊರಟು ನಿಂತಳು ..ಇವರ ಸಂಭಾಷಣೆಯನ್ನ  ಕೇಳುತ್ತಿದ್ದ ಗಂಡನಿಗೆ ಏನೋ ಸಂಶಯ ..ಆಕೆ ಅವನ ಮುಖದ ಮೇಲಿದ್ದ ಪ್ರಶ್ನೆಗಳನ್ನೆಲ್ಲಾ ನಿವಾಳಿಸಿ ಒಗೆದವಳಂತೆ ಮೊಬೈಲನ್ನ ಕಿವಿಗೊತ್ತಿ ನಡೆದೆ ಬಿಟ್ಟಳು..
ಆ ದಿನದ ಕೊನೆಯಲ್ಲಿ ಅವರು ಮುಂದಿನ ಭಾನುವಾರ ಊಟಕ್ಕೆ ಸಿಗುವದೆಂತಲೂ  ಅವಳು ಗುಲಾಬಿ ಸೀರೆ ಉಟ್ಟು ಬರಬೇಕು ಅಂತಲೂ  ನಿರ್ಧಾರವಾಯಿತು...
ಇವತ್ತು ಭಾನುವಾರ..ಆಕೆ ತುಂಬಾ ಸಡಗರದಿಂದಲೇ ತಯಾರಾದಳು ಅವಳ ಗಂಡನಿಗೋ ಕುತೂಹಲ ಮುದ್ದಾಗಿ ಕಾಣುತ್ತಿದ್ದಳು ಬೇರೆ ..ಮುಖದಲ್ಲಿ ಮೊದಲನೆಯ ದಿನ ತಾನು ಕಂಡಾಗಿನ ಕುಶಿ ..ಯಾಕೊ ಇತ್ತೀಚಿನ ಅವಳ ನಡವಳಿಕೆಗಳು ವಿಚಿತ್ರವಾಗಿ ಕಾಣುತ್ತಿದ್ದವು.. ಸಂಶಯದ ನೆರಳಿತ್ತು... ಪರಿಹಾರಕ್ಕೆ ಅಂತ ಅವಳ ಜೊತೆ ನಾನು ಬರುತ್ತೇನೆ ಅಂದ "ಬೇಡ ..ನಿಮ್ಮನ್ಯಾರು ಅಲ್ಲಿ ಕರೆದಿಲ್ಲ " ಒರಟಾಗಿ ಅಂದು ಬಿಟ್ಟಳಲ್ಲ!!ಅವಳು ಹೋದ ಐದೇ ನಿಮಿಷಕ್ಕೆ ಬೈಕನ್ನು ತೆಗೆದುಕೊಂಡು ಗಂಡನು ಪತ್ತೇದಾರಿಕೆ ಮಾಡಲು ದೌಡಾಯಿಸಿದ ..

ತುಂಬಾ ಒಳ್ಳೆಯ ಹೋಟೆಲ್ .ಅವರಿಬ್ಬರೂ ಎದುರು ಬದರು ಕುಳಿತಿದ್ದಾರೆ. ಅವಳಿಗೆ ಅವನ ಕಸಿವಿಸಿ ನೋಡಿ ಒಳಗೊಳಗೇ ನಗು... ಕೇಳಿದಳು...
"ನಾನು ಬಂದೆ ಬರ್ತೀನಿ ಅಂತ ಗೊತ್ತಿತ್ತಾ?"

"ಬರದೇ!! ನಾನು ಅಷ್ಟ ಪ್ರೀತಿ ಇಂದ ಕರೆದಿದ್ದೀನಿ .. ಮೊದ ಮೊದಲು ನೀವು ಒಪ್ಪುತ್ತಿರೋ ಇಲ್ಲವೋ ಅಂತ ಭಯವಾಗಿತ್ತು"

"ನನಗಿಂತ ಚಂದದ ಹೆಣ್ಣುಗಳೂ ಕೂಡ ಅಲ್ಲಿದ್ದರು..ಆದರೂ ನನ್ನೇ ಯಾಕೆ ಕರೆದದ್ದು? ಅದಿರಲಿ..ನಿನ್ನ ತಂದೆ ತಾಯಿ??"

"ಅಪ್ಪ ಮನೆಯಲ್ಲಿ ಇಲ್ಲ ಸೌದಿಗೆ ಹೋಗಿ ಹತ್ತು ವರುಶಗಳಾಯ್ತು... ಅಮ್ಮ ಕೂಡ ಕೆಲಸಕ್ಕೆ ಹೋಗ್ತಾರೆ.. ನಂಗೆ  ಅಮ್ಮನ್ನ ಕಂಡರೆ ತುಂಬಾ ಇಷ್ಟ"

"ನಾನು ನಿನಗಿಂತ ತುಂಬಾ ದೊಡ್ದವಳು. ಮತ್ತೆ ನಿನ್ನ ಈ ವಯಸ್ಸಿನ ಎಲ್ಲ ತಳಮಳಗಳನ್ನ ದಾಟಿ ಬಂದವಳೂ ಕೂಡ ..ನಿನ್ನ ಕರೆಗೆ ಒಪ್ಪಿದ್ದು ಒಂದೆ ಕಾರಣಕ್ಕೆ "

ಅವನ ಮುದ್ದು ಮುಖದಲ್ಲಿ  ಪ್ರಶ್ನಾರ್ಥಕ ಚಿಹ್ನೆ " ಏನದು"

"ನೀ ನನ್ನ ಪ್ರೀತಿಸ್ತೀಯ ಆಲ್ವಾ?"

"ಹೌದು"

" ಹಾಗಾದರೆ  ನನ್ನ ಗಂಡ ಅಲ್ಲಿ ಹಿಂದೇ ಕೂತಿದ್ದಾರೆ ಅವರನ್ನ ಒಂದು ಮಾತು ಕೇಳಲಾ??"

ಅವನ ಮುಖದಲ್ಲಿ ಭಯ ಟಿಸಿಲೊಡೆಯಿತು"ನೀವು ಇಷ್ಟ ಇಲ್ಲ ಅಂದಿದ್ರೆ ಸಾಕಿತ್ತು..ಇದೆಲ್ಲಾ ಈ ತರ  ಮಾಡಿದ್ದು ಯಾಕೆ?"

"ಕೂತುಕೋ ..ನಾ ನಿಂಗೆ ಹೇಳ ಬಂದದ್ದು  ಬೇರೆ. ಮೊದಲು ಕೇಳು . ಆಮೇಲೆ ತೀರ್ಮಾನಿಸು "

"ಹೇಳಿ"

" ನಿನಗೀಗ ಇಪ್ಪತ್ತೊಂದು ನಿನ್ನ  ಎಂ ಬಿ ಎ  ಮೊದಲ ವರ್ಷ ಆಲ್ವಾ??
"ಹುಂ"
"ನಾ ಮದ್ವೆಯಾದದ್ದು ಹತ್ತೊಂಬತ್ತು ವರ್ಶಕ್ಕೆ..ನಮ್ಗೇನಾದ್ರು  ಮಗ ಇದ್ದಿದ್ರೆ ಆವಾ ನಿನಗಿಂತ ಎರಡು ವರ್ಷ  ಚಿಕ್ಕವನಿರ್ತಿದ್ದನೋ ಏನೋ ..ಆದರೆ ಅವನಿಗೆ ಐದು ತುಂಬುವ ಮೊದಲೇ ವಿಪರಿತ ಕಾಯಿಲೆ ಇಂದ ಕಳ್ಕೊಂಡು ಬಿಟ್ವಿ.. ..ನನಗೆ ಆಪರೇಷನ್  ಆಗಿತ್ತು ಹಾಗಾಗಿ ಮತ್ತೆ ಮಗು ಆಗೋದು ಕನಸಾಗೇ ಉಳೀತು... ನಿನ್ನ ಪರಿಚಯ ನಂಗೆ ಮಗನ ಮತ್ತೆ ನೋಡಿದಂತೆ  ಭಾಸ ಆಯಿತು .ಜೊತೆಗೆ ನಿನ್ನಂತಹ ಪುಟ್ಟ ಯುವಕರು ಸೋಶಿಯಲ್  ನೆಟ್ ಅನ್ನ  ಈ ತರ ಬಳಸ್ತಿರೋದು ನೋಡಿ ಖೇದವೂ ಆಯ್ತು ..ಇಲ್ಲಿ ಕೇಳು .ನಾ ನಿನಗೆ ಅಮ್ಮನೂ ಆಗಬಹುದಲ್ಲವಾ. ಹೆಣ್ಣು ಅಂದಾಕ್ಷಣ ಬರಿ ಕಾಮವೇ ಯಾಕೆ ಮನಸ್ಸಿಗೆ ಬರಬೇಕು ..ಇಷ್ಟ  ಅಂದಾಕ್ಷಣ ಅದು ದೇಹದಲ್ಲೇ ಯಾಕೆ ಕೊನೆಗೊಳ್ಳಬೇಕು ?/ ಪ್ರೀತಿ ಅಂದರೆ ಕೇವಲ ದೈಹಿಕ ಮಾತ್ರವೇ?? ನಿನ್ನ ಮುಖ ನೋಡ್ತಾ  ನನಗೆ ಮಮತೆ ಉಕ್ಕುತ್ತೆ..ನನ್ನ ಸತ್ತು ಹೋದ ತಾಯ್ತನ ಮತ್ತೆ ಚಿಗುರಾಗುತ್ತೆ...ನಾನ್ಯಾಕೆ ನಿಂಗೆ ಅಮ್ಮನ ತರಾ ಅನ್ನಿಸಲಿಲ್ಲ??"
ಅವಳು ಹೇಳುತ್ತಲೇ ಹೋದಳು ... ಅವಳ ಮನದ ಮಾತುಗಳನ್ನ ಕೇಳಿ ಅವನ ಕಣ್ಣಿನ ಪೊರೆ ಸರಿಯಿತು.. ಅವಳ ಕಣ್ಣಿನಲ್ಲಿ ಬಂದ ಹನಿಗಳು ಅವನ ಕಣ್ಣಲ್ಲೂ ಸುರಿಯ ತೊಡಗಿದವು...

ಓಡಿ ಬಂದು ಎಲ್ಲರೆದುರು ಅವಳ ಕಾಲಿಗೆ ಬಿದ್ದ.."ನನ್ನ ಮಗ ಅಂತ ಸ್ವೀಕರಿಸಿ ಪ್ಲೀಸ್ ... ನಿಮ್ಮ ಈ ಪ್ರೀತಿನ ಕಳ್ಕೊಳ್ಳೋಕೆ ನಾ ತಯಾರಿಲ್ಲ..ನನಗೆ ಇವತ್ತಿಂದ ಎರಡು ಅಮ್ಮಂದಿರು ..ನನ್ನ ತಪ್ಪೆಲ್ಲ ಕ್ಷಮಿಸಿ" ಅವನನ್ನೆತ್ತಿ ಮಮತೆ ಇಂದ ಅಪ್ಪಿದಳು ಅವಳು..

ಸಂಶಯ ಹೊತ್ತು ಬಂದಿದ್ದ ಗಂಡ  ತಲೆ ಕೆಳಗೆ ಹಾಕಿ ಕುಳಿತ!!













Thursday, December 19, 2013

ಬದುಕೇ ನಿನಗೊಂದು ಸಲಾಮು

ತಳ್ಳು ಗಾಡಿಯಲ್ಲಿ ಕಸ ಹೊತ್ತು ಬರುತ್ತಿದ್ದ ಆಕೆ, ಹಿಂದೆ ಸರ್ಕಾರಿಶಾಲೆಯ ಯೂನಿಫಾರ್ಮ್ ಹಾಕಿಕೊಂಡು ಓಡಿ ಬರುತ್ತಿತ್ತು ಆಕೆಯ ೬ ವರ್ಷದ ಮಗು..ಕಂಡರೂ ಕಾಣದಿದ್ದವಳಂತೆ ರಸ್ತೆ ಗುಡಿಸುತ್ತಿದ್ದಳು ಅವಳು..."ಅವ್ವಾ, ನಾ ಇಸ್ಕೋಲಿಗೆ ಹೋಗಾನಿಲ್ಲ ನಾಳೆ,ನಿನ್ ಕುಟ್ಟೆ ಬತ್ತೀನಿ" "ಆಯ್, ನಿಂಗೆನ್ ತಲೆ ಗಿಲೆ ಕೆಟ್ಟದಾ,ಸಿಗೋ ಮೂರ್ ಕಾಸಿನ ಸಂಬ್ಳ,ನಿಮ್ಮಪ್ಪ ಅನಿಸ್ಕೊಂಡ್ ಮೂದೇವಿ ನಶೆಗೆ ಸಾಕಾಗಕಿಲ್ಲ,ಅಂತಾಮಿಕಿ ಕಷ್ಟ ಇದ್ರುನುವೇ ನೀ ಏನಾರ ನಾಕ್ ಅಕ್ಸರ ಕಲ್ತು ನಿನ್ ಉದ್ಧಾರ ನೀ ಮಾಡೀಯೆ ಅಂತ ಇಸ್ಕೂಲಿಗೆ ಹಾಕಿರದು,ಈ ಇಚಾರ ಎಲ್ಲ ದೂರ ಮಡ್ಗಿ ತೇಪ್ಗೆ ಇಸ್ಕೋಲ್ಗೆ ಹೋದೆ ಬಾಳೀಯಾ,ಇಲ್ಲಾ ಅಂದ್ರೆ ಹುಟ್ಲಿಲ್ಲಾ ಅನ್ನಿಸ್ ಬುಟ್ಟೇನು!!" ಅದರ ಕಣ್ಣ ತುಂಬಾ ನೀರು...ಅವ್ವನ ಕೈ ಹಿಡಿದು "ಅವ್ವಾ,ಕಾಸ್ ಕೊಡ್ಲಿಲ್ಲಾ ಅಂತ ತಾನೇ ನಿನಗೆ ದಿನಾ ಅಪ್ಪಯ್ಯ ಈ ತರ ಹೊಡೆಯೊದು..ನಾನು ನಾಳೆ ಇಂದ ಕೆಲ್ಸಕ್ಕೆ ಬಂದ್ರೆ ಸಲ್ಪ ಕಾಸ್ ಬರ್ತೈತೆ.ಆಗ ಅಪ್ಪ ನಿನ್ ಸುದ್ದಿಗೆ ಬರಂಗಿಲ್ಲ ಅಲ್ಲನೇ ಅವ್ವಾ ಅದ್ಕೆಯ ಯೋಳಿದ್ದು" ಕಸಾ ಗುಡಿಸ್ತಿದ್ದ ಪೊರಕೆಯನ್ನ ಪಕ್ಕಕ್ಕೆಸೆದು ಮಗುನಾ ಅಪ್ಪಿ ಮುದ್ದಿಸಿ ಅಳತೊಡಗಿದ್ದಳು ಅವಳು"ಒಂದ್ ದಿನಾ ಅದ್ ಬೇಕು ಇದ್ ಬೇಕು ಅಂತ ಕ್ಯೋಣ್ನಿಲ್ಲ ನನ್ನ್ ಮಗಾ ನೀನು,ಇಂತಾ ಬಂಗಾರದಂತಾ ಮಗಾ ಇರೋ ಒತ್ಗೆ ನಾನ್ಯಾವ ಕಷ್ಟಕ್ಕೆ ಹೆದ್ರೇನು..ಚಲೋ ಓದ್ಬೇಕು ಮಗಾ ನೀನು,ನಿಮ್ಮವ್ವನ ಆಸೆ ಆಟೆಯಾ" ದೂರ ನಿಂತು ನೋಡ್ತಿದ್ದ ನನ್ನ ಕಣ್ಣು ಒದ್ದೆಯಾಯ್ತು...
ದಿನ ನಿತ್ಯ ಬದುಕನ್ನ ಶವ ಯಾತ್ರೆಯಂತೆ ಕಳೆಯುವ ಅನಿವಾರ್ಯತೆ ಅದೆಷ್ಟೋ ಜೀವಗಳಿಗಿದೆ...ಅದು ಇದ್ದರೆ  ಇದಿಲ್ಲ ಇದಿದ್ದರೆ ಅದಿಲ್ಲ..ಮಾಮೂಲೇ..ದೊಡ್ಡ ದೊಡ್ಡ ಸಂತಸಗಳಿಗೆ ಹುಡುಕುತ್ತಾ ಸಣ್ಣ ಪುಟ್ಟದ್ದರ ಬೆಲೆಯನ್ನೇ ಕಳೆಯುತ್ತಿದ್ದೇವೆ ನಾವು...ನನಗೆ ಮನೆಯಲ್ಲಿ ಒಂದು ತುತ್ತು ಅನ್ನ ಚೆಲ್ಲುವಾಗ ,ವಿನಾಕಾರಣ ಅಗತ್ಯವಿಲ್ಲದೆ ದೂರುವಾಗ, ಆಡಿಕೊಳ್ಳುವಾಗ ಕೋಪ ಬರುತ್ತದೆ, ಅವರವರ ಜೀವನ ಅದರ ಅಗತ್ಯತೆ ಅವರವರಿಗೆ..ಅವರ ಜೀವನದ ಹಾದಿ ಅವರು ಹುಡುಕಿಕೊಳ್ಳಬೇಕು..ಅವರ ಕಷ್ಟಗಳಿಗೆ ಪರಿಹಾರ ಅವರೇ ಕಂಡುಕೊಳ್ಳಬೇಕು..ದಿನವಿಡೀ ಮನೆಯಲ್ಲಿ ಕಳೆಯುವದು ಕೇವಲ ಎರಡೋ ಮೂರೋ ಗಂಟೆಗಳಷ್ಟೆ..ಅವುಗಳಲ್ಲೂ ನಾವು ಮುಖ ಕೊಟ್ಟು ಮಾತನಾಡಲಾಗದ ಮಟ್ಟಕ್ಕೆ ತಲುಪುತ್ತಿದ್ದೇವೆ..ಕೂತು ಮಾತಾಡಿದರೆ ಎಲ್ಲ ಸರಿಯಾದೀತು..ಆದರೆ ಅಹಂಕಾರ ಬಿಡಬೇಕಲ್ಲ, ..ಇರುವ ೧೮೦ ನಿಮಿಶಗಳಲ್ಲಿ ಅದೆಷ್ಟು ವ್ಯಂಗ್ಯ,ಅದೆಷ್ಟು ಚುಚ್ಚುವಿಕೆ ಇಂದ ನಿಂದಿಸಿಕೊಳ್ಳುತ್ತೇವೆ..ಒಂದು ನಿಮಿಷ ನಿಲ್ಲಿ..ನಿಮಗೆಲ್ಲಾ ಒಂದು ಪ್ರಶ್ನೆ ಕೇಳಬೇಕು..ನೀವು "ಬದುಕು"ತ್ತಿದ್ದೀರಾ??ಇತರರನ್ನು" ಬದುಕ" ಬಿಡುತ್ತಿದ್ದೀರಾ??
ನಗುವಿನ ಮುಖವಾಡ ಹಾಕಿ ಬದುಕುವ ಕಲೆ ನಿಮಗೆಲ್ಲ ಗೊತ್ತು..ಮನಬಿಚ್ಚಿ ಅತ್ತು ನೋಡಿ ಒಮ್ಮೆ...ಕುಶಿಯಾದಾಗ ಒಂದೆರಡು ಹೆಜ್ಜೆ..ಗೆದ್ದಾಗ ನಿಮ್ಮ ಜೊತೆಯವರೊಂದಿಗೆ ಒಂದು "ಹುರ್ರೇ"...ಸಾಧ್ಯವೇ??

ಮೊನ್ನೆ ನನ್ನ ಮಗ ಗೊತ್ತಿಲ್ಲದಂತೆ ನನ್ನ ಜಾಗಿಂಗ್ ಶೂ ತೂತು ಮಾಡಿಬಿಟ್ಟ..ನಾನು ಹೊಡೆಯಲಿಲ್ಲ..ವಿನಾಕಾರಣ ಹೊಸದಾಗಿದ್ದ ವಸ್ತುವಿಗೆ ಹಣ ಹಾಕಬೇಕಲ್ಲಾ ಅನ್ನಿಸಿತು..ಅದನ್ನೇ ಹಾಕಿ ಜಾಗಿಂಗಿಗೆ ಹೊರಟೆ..ಮರಳಿ ಬರುವ ಹೊತ್ತಿಗೆ ಮುದ್ದು ಮುಖದಲ್ಲೊಂದು ಬೇಸರ ಹೊತ್ತು ಕಾಯುತ್ತಿದ್ದ ಅವನು ನನ್ನ ಕೈ ಹಿಡಿದು"ಅಮ್ಮ ಬಾ" ಅಂದ ಮರು ಮಾತಿಲ್ಲದೆ ಹಿಂಬಾಲಿಸಿದೆ..ತನ್ನ ಪುಟ್ಟ ಪಿಗ್ಗಿ ತೋರಿಸಿ "ತೋರಿಸಿ "ಇದ್ರಲ್ಲಿ ಇರೋ ದುಡ್ಡಲ್ಲಿ ಶೂ ತಗೋ..ನಾನು ದೋಡ್ಡೊನಾದ್ಮೇಲೆ ನಿನಗೆ ಕಾರಲ್ಲಿ ಕರ್ಕೊಂಡು ಹೋಗಿ ತುಂಬಾ ದೊಡ್ಡ ಶೂ ಕೊಡಿಸ್ತೀನಿ..ಆಯ್ತಾ!!"ನನಗೆ ದೊಡ್ಡ ಶೂ ಹಾಕ್ಕೊಳು ಆಸೆ ಇಲ್ಲದಿದ್ದರೂ...ಅವನ ಮಾತು ಕೇಳಿ ಕಣ್ಣಲ್ಲಿ ದೊಡ್ಡ ಬಿಂದು ಒಂದು ಉರುಳಿದ್ದು ಸತ್ಯ..ಅದಕ್ಕೆ ನಾನು ಈಗಲೂ ದಿನಾ ಅದೇ ಶೂ ಹಾಕ್ಕೊಂಡೆ ವಾಕಿಂಗಿಗ್ ಹೋಗ್ತೀನಿ..ನನಗೆ ಅದ್ರಲ್ಲಿ ಕುಶಿ ಇದೆ..ಮರಳಿ ಮನೆಗೆ ಬರುವ ತನಕವೂ ಮುದ್ದು ಮುಖವನ್ನೇ ನೆನೆಸ್ತಿರ್ತೀನಿ..
ಏನೇ ಹೇಳಿ ಪ್ರೀತ್ಸೋದ್ರಲ್ಲಿ..ಪ್ರೀತಿಸಿಕೊಳ್ಳೋದ್ರಲ್ಲಿ..ದುಖವನ್ನ ಹಂಚಿಕೊಳ್ಳೋದ್ರಲ್ಲಿ ಸುಖಾನಾ ಪಾಲು ಮಾಡ್ಕೊಳೋದ್ರಲ್ಲಿ ಏನೋ ಒಂಥರಾ ನೆಮ್ಮದಿ ಇದೆ... ಅಲ್ವೇ??

Sunday, November 24, 2013

ಹೊಸಿಲು ದಾಟದ/ ದಾಟಿದ ಹೆಣ್ಣಿಗೆ!!

ಹೆಣ್ಣಾಗಿ ಹುಟ್ಟಿದವಳೆಂಬ ಒಂದೇ ಕಾರಣಕ್ಕೆ ಇಷ್ಟವಿಲ್ಲದವನ ಕಟ್ಟಿಕೊಂಡು ಬದುಕು ತೇಯುವ ಅದೆಷ್ಟೋ ಹೆಣ್ಣುಗಳು ಆಸುಪಾಸಲ್ಲಿ ಕಾಣಿಸುತ್ತಾರೆ...ಇಷ್ಟ ಪಟ್ಟವನ ಕಟ್ಟಿಕೊಂಡು ಬದುಕೇ ನೀರಸಎಂಬಂತ ಮುಖ ಹೊತ್ತ ಅದೆಷ್ಟೋ ಜೀವಗಳು ಕಾಣಸಿಗುತ್ತವೆ...ನಿಮ್ಮಂತವರಿಗಾಗಿ ನನ್ನಂಥವರಿಗಾಗಿ ಬರಕೊಂಡ ಪದ್ಯಗಳಿವು...

1
ಸೆರಗ ಒತ್ತಿ ಹಿಡಿ...ಕಣ್ಣ ಹನಿಯೊಂದು ಹೊರ ಜಾರೀತು ಜೋಕೆ!!
ಹೊಸಿಲ ದಾಟದ ಹೆಣ್ಣೆ, ಪತಿಯೇ ಪರದೈವ,
ಅಡಿಗೆ ಮಾಡುವ ಪಾತ್ರೆಗಳಂತೆ ದಿನವೂ
ಮನಸ ತೊಳೆಯಬೇಕು
ದಾರಂದ್ರದ ಮಧ್ಯದಿಂದ ಇಣುಕುವ
ಬಿಸಿಲಿಗೆ ಅಪರೂಪಕ್ಕೊಮ್ಮೆಯಾದರೂ
ಕೈ ಒಡ್ಡು ಅಳಿಸಿಹೋದ ಅದೃಷ್ಟದ
ರೇಖೆಗಳು ಕಾಣುತ್ತಿವೆಯೇ??
ವಯಸಿಗೆ ಮುಂಚೆ ಬಂದ
ಮೊಗದಮೇಲಿನ ಸುಕ್ಕು
ನಿನ್ನ ತಪ್ಪಲ್ಲ,
ಒಗೆಯುವ ಬಟ್ಟೆಗಳ ಮಧ್ಯದಲ್ಲಿ
ಇಣುಕುವ ಲಿಪ್‌ಸ್ಟಿಕ್ಕಿನ ಗುರುತು ನಿನ್ನ
ಕಾಡದಿರಲಿ
ಕತ್ತಲಲ್ಲಿ ಮುಗಿಯುವ ಮೃಗೀಯ ಪ್ರಸ್ತಕ್ಕೆ
ದಿನವೂ ಸಾಕ್ಷಿಯಾಗುವ ನಿನ್ನ
ಹೆಣ್ತನಕ್ಕೆ ನನ್ನದೊಂದು ಸಲಾಮು
ಅತ್ತೆ ಮಾವರ ಗೊಣಗಾಟ,ಗಂಡನ
ಕಿಸರುಗಣ್ಣು ಎಲ್ಲ ಕೆಲಸಾಟಗಳ ಮಧ್ಯೆ
ಇಗೋ ನಿನ್ನ ಸೆರಗೆಳೆಯುವ ಮಗುವನೊಮ್ಮೆ ನೋಡಿ
ನಕ್ಕು ಬಿಡು..ಉಕ್ಕುಕ್ಕಿ ಬರುವ ಕಣ್ಣ ಹನಿಗಳು ಸತ್ತು ಹೋಗಲಿ
ದು:ಖ ಸುಖಗಳ ನಡುವಿನ ದ್ವಂದ್ವ ನಾಳೆ
ತರಕಾರಿಯ ಖರ್ಚಿಗಾಯ್ತು!!


 ಕಿರ್ರ್  ಎಂದು ಕಿರುಚುವ ಗಡಿಯಾರದ
ತಲೆ ಮೇಲೊಂದು ಪೆಟ್ಟು
ಏಳದ ಸೂರ್ಯನಿಗೊಂದು  ಶಾಪ
ಮಲಗಿರುವ ಗಂಡ ಮಕ್ಕಳೆಡೆಗೊಂದು
ಅಸೂಯೆಯ ನಿಟ್ಟುಸಿರು
ಪಾತ್ರೆ ತೊಳೆಯುವಾಗಲೂ ತಲೆಯಲ್ಲಿ
ಮುಗಿಯದ ನಿನ್ನೆಯ ವಿಂಡೋಸು ಎಕ್ಸೆಲ್ಲು
ಹಾಲಿಟ್ಟು  ಕುಕ್ಕರಿನ ವಿಶಿಲಾಗುವಾಗ ನೆನಪಾಯ್ತು
ನಿನ್ನೆ ಮ್ಯಾನೇಜರಿಗೊಂದು ಮುಖ್ಯವಾದ  ಕರೆ ಇತ್ತು!!
ಮುಗಿದ ತಂಗಳು ಪೆಟ್ಟಿಗೆಯ ತರಕಾರಿ ,ಹಸಿಮೆಣಸು ಕೊತ್ತಂಬರಿಗಳ
ಮರೆತು ಏನೋ ಒಗ್ಗರಿಸುವಾಗ ತಟ್ಟಂತ ಹೊಳೆದದ್ದು
ಮುಗಿದು ಹೋದ ಮೊಬೈಲಿನ ಕರೆನ್ಸಿ !!
ವಾರದ ಈ ದಿನವೇ ಕರೆ ಮಾಡುವ ಅಮ್ಮ
ಕೇಳೋದು "ಆರಾಮಿದ್ದೀಯಾ"
ನನಗೋ ಹೇಳೋದಿಕ್ಕೂ ಪುರುಸೊತ್ತಿಲ್ಲ, ಬಿದ್ದ
ಬಟ್ಟೆಗಳ ರಾಶಿಯಲ್ಲಿ ಮಗನ ಚಡ್ಡಿ ಹುಡುಕುತ್ತಾ
ಕತ್ತೆತ್ತಿ ನನ್ನವನ ನೋಡುತ್ತೇನೆ ಅಲ್ಲೇನಿದೆ?
ಕಟ್ಟದ  ವಿದ್ಯುತ್ ಬಿಲ್ಲು,ಮಗನ ಸ್ಕೂಲು ಫೀಸು
ಧಾರೆಯಾಗಿ ಹರಿಯುವ ನೀರಿಗೆ ತಲೆಯೊಡ್ಡಿದಾಗ
ಅವನು ನೆನಪಾಗುತ್ತಾನೆ
ತಟ್ಟಂಥ
ಬಿಸಿ ನೀರ ಧಾರೆಯಲ್ಲೂ
ತಣ್ಣನೆಯದೊಂದು ನಡುಕ
ಇನ್ನೂ ಸುಕ್ಕುಗಟ್ಟದ ನನ್ನ ರೇಶಿಮೆಯ
ಮೈಗೆ ಎಳೆಸೂರ್ಯನ ಕಿರಣದಂತೆ
ತಾಕಿದವನ ಗುರುತು ಹುಡುಕುತ್ತಾ
ಹೊರಬರುತ್ತೇನೆ!!
ದಿನವಹಿಯ ಸುಸ್ತು ಅವಾಹಿಸಿಕೊಂಡು
ಆಫೀಸಿಂದ  ಬಂದು
ಕಾಣದ ದೇವರಿಗೊಮ್ಮೆ ಕೈಮುಗಿಯುತ್ತೇನೆ..
ಸದ್ಯ!!ಒಂದು ದಿನ ಕಳೆಯಿತಲ್ಲ!!







Monday, October 14, 2013

ನಿನಗೆ!!

ಗೆಳೆಯಾ....

ನಿನ್ನ ಜಗತ್ತಿನಲ್ಲಿ ನನಗಿರದ ಸ್ಥಾನಗಳ 
ನೆನೆದು ಮರುಕ ಪಡಲಿಲ್ಲ
ಬಿಡು..ಸುತ್ತ ನೂರು ತಾರೆಯರ ನಡುವೆ
ಮೆರೆವ ಚಂದ್ರಮನ ಎದೆಯಲ್ಲಿ
ಉರಿವುದು ಕೇವಲ ರೋಹಿಣಿಯ
ಕಣ್ಣದೀಪ ಮಾತ್ರ!!

ಹಾಗಂದ ಮಾತ್ರಕ್ಕೆ ನೀ ಅಪರಿಚಿತನಲ್ಲ
ನನ್ನ ಸಂದೇಶಗಳಿಗೆ ನಿರುತ್ತರ ಮಾತ್ರ,
ಆದರೂ,ಅಲ್ಲೆ ಎಲ್ಲೊ ನಿನ್ನ ಉಸಿರಿನ ಗಂಧ
ನನ್ನ ಮಾತ್ರ ಬಯಸಿದಂತನಿಸಿದ್ದು ಭ್ರಮೆಯಲ್ಲ!!

ಬಣ್ಣಗಳ ಬೆಳಕಿನಲ್ಲಿ, ಎಲ್ಲರ ಕಣ್ಣ ಸೆಳೆಯುವ ನೀನು
ಅದೆಷ್ಟು ಕನಸುಗಳಿಗೆ ರಾಜಕುಮಾರ??

ನೋಡಿಲ್ಲಿ, ನನ್ನ ಕನಸಿನ ಕೋಣೆಯಲ್ಲಿ
ಒಂದು ಕಿಟಕಿ ತೆಗೆದಿರುವೆ..ಬಂದುಬಿಡು
ಅವಕಾಶ ನಿನಗೇ ಮಾತ್ರ!!
ಸುಳ್ಳಾದರೂ ಸರಿಯೇಪ್ರೀತಿಸು ಒಮ್ಮೆ
ನಿನ್ನ ಬದುಕಿನಲ್ಲಿರಲಿ ನನಗೊಂದು ಚಿಕ್ಕದಾದರೂ
ಚೊಕ್ಕದಾದ  ಪಾತ್ರ!!



ನೀ....
ಚುಕ್ಕಿಚಂದ್ರಮರಾಚೆ ಉಳಿದ
ಬರೀ ಖಾಲಿ ಅವಕಾಶ

ನೀ...
ಕಲ್ಪನೆ ಕನಸುಗಳಾಚೆ ಸಪ್ತಸಾಗರದ
ಮೇಲೊಂದು ತೇಲುವ ಸಾಮ್ರಾಜ್ಯ
ಕಟ್ಟಿದ ಮಾಟಗಾರ...

ನೀ....
ನಿನ್ನ ಮಾಂತ್ರಿಕ ಕಣ್ಣ  
ನೋಟದ ಛಡಿಯೇಟಿಗೆ
ಸುತ್ತೇಳು ಲೋಕಗಳ ಕನ್ಯೆಯರ ಗೆದ್ದವ(ಹಾಗಂತ ಕೇಳಿದ ನೆನಪು!!)

ನೀ..
ಬಯಕೆಗಳ ಬೇಲಿಯ ಹಾರಿ ನನ್ನ
ಮಲ್ಲಿಗೆಯ ಹಿತ್ತಲಿಗೆ ಧಾಳಿ ಇಟ್ಟವ
ದೂರದೂರಿಂದ ಬಂದ ದುಂಬಿಗಳ ಬೆದರಿಸಿ
ನನ್ನ ಹೆಣ್ತನವ ಗೆದ್ದವ!!

ನೀ...
ಏನೇನೊ ಬರೆದರೂ ಬರೆಸಿಕೊಳ್ಳದೆ
ಖಾಲಿ ಉಳಿದ ಬಿಳೀ ಕಾಗದ
ಮತ್ತಿನ್ಯಾರೋ ಗೀಚಿ ಹೋಗುವ
ಪದಗಳಿಗೆ ಆಸ್ಥೆ ಇಂದ ಕಾದವ!!
(ಇನ್ನೂ ನೀ ಬರೆಸಿಕೊಳ್ಳುವ ಕ್ಷಣಗಳಿಗಾಗಿ ನಾ ಕಾದಿದ್ದೇನೆ!!)




Saturday, October 5, 2013

ಬಿಡುಗಡೆ...

ಬಯಸಿತ್ತೋ ಬಿಡುಗಡೆ ಚಂದ್ರಮನಿಂದ ಚಂದ್ರಿಕೆ??
ಸಂಶಯವೇ ಮುಳ್ಳಾಯ್ತು ಚಂದ್ರಮನ ಬಾಳಿಗೆ

ನೀ ನುಡಿಯದ ಮಾತುಗಳ ನಿನ್ನ ಕಣ್ಣು ಆಡಿದ್ದು ಅಂದು ಅರ್ಥವಾಗುತ್ತಿತ್ತು
ಈಗ ಅಲ್ಲಿ ಬರೀ ಕಲಸಿಟ್ಟ ಬಿಂಬಗಳು..

ಇಷ್ಟು ದೂರ ಬಂದ ಮೇಲೂ ಕೇಳುವೆ
ನಮ್ಮ ಪಯಣ ಎಲ್ಲಿಗೆ?
ಗುರಿಯ ನಾ ಅರಿಯೆ..ನಿನ್ನ ಜೊತೆ ನಡೆವನಕ
ಹಾದಿ ಸೊಬಗು ಮಾಸದಿರಲಿ..ಅದೇ ಒಂದು ಕೋರಿಕೆ!!

ಬಿಟ್ಟು ಹೋಗುವಾಸೆ ನಿನಗೆ..ಯಾಕೆ ಹೀಗೆ ಕೆಟ್ಟೆ
ಸಂಶಯದ ಮುಳ್ಳ ಮೇಲೆ ಒಗೆದೆ ಏಕೆ ಬಾಳ ಬಟ್ಟೆ??

ಬಾ ಒಂದು ಕ್ಷಣ, ನಿನ್ನೊಡನೆ ಗತವ ಕೆದಕುವಾಸೆ ನನಗೆ
ನನ್ನ ನೀನು ನಿನ್ನ ನಾನು ನೋಡುತಾ ಮತ್ತಿನಲ್ಲಿ ಮರೆತ ಗಳಿಗೆ
ಮತ್ತೆ ಬರಲಾರದೇ?? ಮನಸು ಮಾಡು ನೀನು!!

ಕಣ್ಣ ನೀರು ಬತ್ತಿದೆ..ಅತ್ಮ ಇನ್ನೂ ಪ್ರಕಾಶಿತ
ನಿನ್ನ ಉಳಿದು ಬೇರೆ ಸಂಗ ಮಾಡಲಿಲ್ಲ ಖಂಡಿತಾ!!