Friday, September 27, 2019

ಇಂದು ೨೭/೯

ಪ್ರೇಮದ ಆಳ
ತುಟಿಗೆ ಬೆರಳುಗಳಿಗೆ
ನಿಲುಕುವುದಿಲ್ಲ,
ಬರೀ ವಿರಹದ
ನಿಟ್ಟುಸಿರಿಗಷ್ಟೆ
ಅದು ಗೊತ್ತು!

ನೋವೆಂದರೆ ಏನೆಂದು
ನಾನು ಹೇಗೆ ಹೇಳಬಹುದಿತ್ತು
ಹೇಗೆ ತೋರಬಹುದಿತ್ತು
ಅದೃಶ್ಯ ಗಾಯಗಳ
ಕಣ್ಣ ಮುಚ್ಚಿ ನಿಟ್ಟುಸಿರು
ಇಟ್ಟು ಸಂತೈಸಿದ ಘಳಿಗೆಗಳ
ಹೇಳು, ಎದೆಯ ಕೋಡಿ
ಒಡೆದು ಕೊಚ್ಚಿ ಹೋದ
ಪ್ರವಾಹದ ಗುರುತು
ಕಂಡೀತೇನು?
ಎಲ್ಲ  ಮುಗಿದ ಹೋದ ನಂತರ 
ಇಳೆಯ ತುಂಬಾ ಉಳಿದ
ನೆನಪುಗಳ ಒದ್ದೆ ಒದ್ದೆ
ಕೆನ್ನೆಗಳಲ್ಲೂ ಇಳಿದದ್ದು
ಅದೇ


ಕೆಂಪು ಸೇಬು, ಒಳಗೆ ಬಿಳಿ
ಈಡನ್ನಲ್ಲಿ ಬದಲಾದ ಬಣ್ಣ
ತೊಗಲೊಂದು ವ್ಯಕ್ತ ಭಾವ
ಜಾರಿಯಲ್ಲಿದೆ  ಬಣ್ಣವಿಲ್ಲದಎಡೆಗೆ ದಾರಿ!!


ಹೆಮ್ಮೆಯ ಮಿಂಚು ಕಣ್ಣಿಗೆ
ಅಹಂಕಾರದ ಬಟ್ಟೆ
ತಲೆಯಲ್ಲಿ ಅವಸಾನ ಹೊಂದಿದ ಶ್ರದ್ಧೆ
ಕರುಣೆಯೊಂದು ಮಾತ್ರ ಸದಾ ಖಾಲಿ ಚಿತ್ತ!!

ಅರೆ ಎಷ್ಟೊಂದು ಗೊಂದಲ, ದ್ವಂದ್ವ
ಕೋಶದೊಳಗೆ ಕವಲೊಡೆವ ರೆಕ್ಕೆ
ಕೈ ಕಾಲು  ಪರಿಪೂರ್ಣತೆಯ ತವಕ ಚಿಟ್ಟೆ
ಜಿಜ್ಞಾಸು ನಿಜದಿ ವಿಜ್ಞಾನಿ!!

ಎಲ್ಲ ದಾರಿಗಳ ತುಂಬಾ ಕೆಂಪು ಗುರುತುಗಳು
ಹಡೆದ ಹಿಂಸೆಯ ತಂದೆ, ಭಿತ್ತಿಯೊಳಗೆ ಮಸುಕು ಭವಿಷ್ಯ
ಧರ್ಮ ತಾಯಾದರೆ
ಕ್ಷಮೆಯೊಂದೇ ನಿರ್ವಾಣ!!


ಕಣ್ವನ ಉಪವನದ ಶಕುಂತಲೆ,ಬಿಟ್ಟೆದ್ದು
ಹೋದವನ ನೆನೆದು ಅಳುವ ದಮಯಂತಿ
ಉರಿವ ಚಿತೆಗೆ ಬಿದ್ದ ಮಾಸತಿಯರು
ಗೆದ್ದು ಸೋತ ನೂರು ಹೆಣ್ಣುಗಳು,ಹೆಸರೊಂದು ನೆಪಮಾತ್ರ
ಇನ್ನೂ ಕಲ್ಲರಳಿ ಹೂವಾಗೋ ಕಾಲ ದೂರವಿದೆ!!
(ಮುಂದುವರೆಯಲಿದೆ...)

Thursday, September 26, 2019

ಇಂದು 26/9

ಚಂದ್ರ ಚುಕ್ಕಿ
ಕಡಲು ಅಲೆ
ಎಲ್ಲ  ಉಪಮೆಗಳು ಹಳತಾದವು
ಹಳತಾದವು ಕಣ್ಣ ಮಿಂಚು
ಶುದ್ಧ ಪರಿಶುದ್ಧ ಸ್ಪಟಿಕ ಪ್ರೇಮ
ಪುರಾಣಗಳು
ಲೈಲಾ ಮಜನು
ಹಿರ್ ರಾಂಜಾ
ಹಳತಾದವು
ಸ್ನೇಹದ ಅಪರಿಮಿತ
ಉಪಯೋಗದ ವ್ಯಾಖ್ಯಾನಗಳು
ಉಪಕಥೆಗಳು
ಹಳತಾದವು ಬೊಡ್ಡು ಹಿಡಿದ ಬೆನ್ನಲಿರಿದ
ಚೂರಿ ಬಾಕುಗಳು
ಇವತ್ತಿಗೆ ಸಧ್ಯ ಹೊಸದಾಗಿದೆ
ಗೆದ್ದೆತ್ತಿನ ಬಾಲ ಹಿಡಿದು ತೂಗುವವರ
ವಿಮರ್ಶಿಸುವವರ ಅಲೆ
ಇಲ್ಲಿಯೂ ಅಲ್ಲಿಯೂ ಸಮನಾಗಿ ಸುದ್ದಿಗಳ ಹಂಚಿಕೊಳ್ಳುತ್ತಾ
ಲಾಭ ಪಡೆದು ಮೆಟ್ಟಿಲೇರಿ ತಳ್ಳುವವರ ಪಡೆ
ಇಲ್ಲೆಲ್ಲೂ ನಾವಿಲ್ಲವೋ
ತಗೋ...ಕಸಕ್ಕಿಂತ ಕಡೆ!

2

ಸರಿ ಹುಡುಗಾ,ಒಪ್ಪಿದೆ..
ನಾವೆಲ್ಲರೂ ಒಂಟಿ ಪಯಣಿಗರು
ಆದರೂ, ಇಲ್ಲೇನೋ ತುಸು ತಪ್ಪಿದೆ!
ಹೇಳು ಮತ್ತೆ
ಆ ಮರವ ಬಳ್ಳಿಯೇಕೆ ತಬ್ಬಿದೆ?

3

ನಿತ್ಯ ದೇವರನ್ನ ಭಜಿಸಿ ಧ್ಯಾನಿಸಿ ಪುಣ್ಯದ ಮೂಟೆ
ಮುಂದಿನ ಜನುಮಕ್ಕು ತಯಾರು ಮಾಡುವವರ ನಡುವೆ
ತೀರಾ ಮನುಷ್ಯನಂತ ದೇವರಿರುವುದಿಲ್ಲ

ನಿಮ್ಮ ಆಜಾನು ಪ್ರಾರ್ಥನೆಗಳಲ್ಲು ಅವನು ಕಾಣದ
ಕಾರಣ ನಾನು ಆ ಸ್ಥಳಗಳಿಗೆ ಕಾಲಿಡುವುದಿಲ್ಲ

ನಾನಂತೂ ನನ್ನ ದೇವರನ್ನು ಪ್ರೇಮಿಯಲ್ಲಿ ಹುಡುಕುತ್ತೇನೆ....

ಅವನ ನಗು, ಮಾತು ಮತ್ತು ಅನಂತ ವಿರಹದ
ನಡುವಿನ ಜಾಗದಲ್ಲೆಲ್ಲೊ
ನಿಮ್ಮ ದೇವರಿದ್ದಾನೆ ಅಂತನಿಸುತ್ತದೆ!

4


ಶೂನ್ಯ ತೊಟ್ಟಿಲು, ಭವದ ಚಂದಿರ
ತೂಗು ಕೈಗಳಿಗೆ ಹಗ್ಗ
ಮತ್ತೆ ಕಾಲ ಬುಡದಲ್ಲೇ ಅರಳಿದಮೊಳಕೆ ಕೊಳೆತಿದ್ದು ತಪ್ಪೇನಿಲ್ಲ!!


ಕಾಡು ಹೂಗಳು, ಕೆಸರಿನ ಕಮಲ
ಕಪ್ಪು ಮುಗಿಲಲ್ಲೂ ಇಣುಕುವ ಚಂದಿರ
ಕಣ್ಣೀರ ಹನಿಯಲ್ಲೂ ಸುಮ್ಮಾನ ಬುದ್ಧ!!

ವಿರಹದ ಸಲಾಕೆ, ಪಾಚಿ ಕಟ್ಟಿದ ನಂಬಿಕೆ
ತೊಳೆಯಲು ಬಂದಾಕೆ  ಬದುವಿನ ನೆನಪಿನ
ಬಳ್ಳಿಯನ್ನೂ ಕತ್ತರಿಸಿದ್ದು ಉನ್ಮಾದಕ್ಕೆ ಗಮನವಿಲ್ಲ!!


ಹಿಂಡಿದರೂ ಇಂಗದ ಕಣ್ಣೀರ ತೇವ
ಹೀರಿ ಹೀರಿದರೂ ಸಮಾಧಾನಿ ದಿಂಬು
ಮಧ್ಯೆ ಕಳೆದು ಹೋಗಿದ್ದಾರೆ ಮಕಾಡೆ ಮಲಗಿದ್ದಾರೆ ಭಾರತದ ದೇವತೆಯರು!!


ಧರ್ಮ ಗ್ರಂಥಗಳು, ಕಟ್ಟು ಕಥೆಗಳು
ನದಿಗಳು ಉಕ್ಕಿವೆ,ಅಣೆಕಟ್ಟುಗಳು ತುಂಬಿವೆ
ಆದರೂ ಇತಿಹಾಸ ಕೊಳಚೆಯಲ್ಲೇ ಕೊಳೆಯುತ್ತಿದೆ
ಯಾರಿಗೆ ಬೇಕು? ಪ್ರಾರ್ಥನೆಯ ಮದಿರೆ ಕುಡಿಯೋಣ ಬನ್ನಿ!!
(ಮುಂದುವರೆಯಲಿದೆ...)