Friday, September 27, 2019

ಇಂದು ೨೭/೯

ಪ್ರೇಮದ ಆಳ
ತುಟಿಗೆ ಬೆರಳುಗಳಿಗೆ
ನಿಲುಕುವುದಿಲ್ಲ,
ಬರೀ ವಿರಹದ
ನಿಟ್ಟುಸಿರಿಗಷ್ಟೆ
ಅದು ಗೊತ್ತು!

ನೋವೆಂದರೆ ಏನೆಂದು
ನಾನು ಹೇಗೆ ಹೇಳಬಹುದಿತ್ತು
ಹೇಗೆ ತೋರಬಹುದಿತ್ತು
ಅದೃಶ್ಯ ಗಾಯಗಳ
ಕಣ್ಣ ಮುಚ್ಚಿ ನಿಟ್ಟುಸಿರು
ಇಟ್ಟು ಸಂತೈಸಿದ ಘಳಿಗೆಗಳ
ಹೇಳು, ಎದೆಯ ಕೋಡಿ
ಒಡೆದು ಕೊಚ್ಚಿ ಹೋದ
ಪ್ರವಾಹದ ಗುರುತು
ಕಂಡೀತೇನು?
ಎಲ್ಲ  ಮುಗಿದ ಹೋದ ನಂತರ 
ಇಳೆಯ ತುಂಬಾ ಉಳಿದ
ನೆನಪುಗಳ ಒದ್ದೆ ಒದ್ದೆ
ಕೆನ್ನೆಗಳಲ್ಲೂ ಇಳಿದದ್ದು
ಅದೇ


ಕೆಂಪು ಸೇಬು, ಒಳಗೆ ಬಿಳಿ
ಈಡನ್ನಲ್ಲಿ ಬದಲಾದ ಬಣ್ಣ
ತೊಗಲೊಂದು ವ್ಯಕ್ತ ಭಾವ
ಜಾರಿಯಲ್ಲಿದೆ  ಬಣ್ಣವಿಲ್ಲದಎಡೆಗೆ ದಾರಿ!!


ಹೆಮ್ಮೆಯ ಮಿಂಚು ಕಣ್ಣಿಗೆ
ಅಹಂಕಾರದ ಬಟ್ಟೆ
ತಲೆಯಲ್ಲಿ ಅವಸಾನ ಹೊಂದಿದ ಶ್ರದ್ಧೆ
ಕರುಣೆಯೊಂದು ಮಾತ್ರ ಸದಾ ಖಾಲಿ ಚಿತ್ತ!!

ಅರೆ ಎಷ್ಟೊಂದು ಗೊಂದಲ, ದ್ವಂದ್ವ
ಕೋಶದೊಳಗೆ ಕವಲೊಡೆವ ರೆಕ್ಕೆ
ಕೈ ಕಾಲು  ಪರಿಪೂರ್ಣತೆಯ ತವಕ ಚಿಟ್ಟೆ
ಜಿಜ್ಞಾಸು ನಿಜದಿ ವಿಜ್ಞಾನಿ!!

ಎಲ್ಲ ದಾರಿಗಳ ತುಂಬಾ ಕೆಂಪು ಗುರುತುಗಳು
ಹಡೆದ ಹಿಂಸೆಯ ತಂದೆ, ಭಿತ್ತಿಯೊಳಗೆ ಮಸುಕು ಭವಿಷ್ಯ
ಧರ್ಮ ತಾಯಾದರೆ
ಕ್ಷಮೆಯೊಂದೇ ನಿರ್ವಾಣ!!


ಕಣ್ವನ ಉಪವನದ ಶಕುಂತಲೆ,ಬಿಟ್ಟೆದ್ದು
ಹೋದವನ ನೆನೆದು ಅಳುವ ದಮಯಂತಿ
ಉರಿವ ಚಿತೆಗೆ ಬಿದ್ದ ಮಾಸತಿಯರು
ಗೆದ್ದು ಸೋತ ನೂರು ಹೆಣ್ಣುಗಳು,ಹೆಸರೊಂದು ನೆಪಮಾತ್ರ
ಇನ್ನೂ ಕಲ್ಲರಳಿ ಹೂವಾಗೋ ಕಾಲ ದೂರವಿದೆ!!
(ಮುಂದುವರೆಯಲಿದೆ...)

No comments:

Post a Comment