Thursday, September 19, 2019

ಈ ದಿನ ೧೯/೯/೧೯


"ಪುಟ್ಟ ಎಳೆ ಮಕ್ಕಳು ಮುದ್ದು ಮಾಡ್ತಾವಲ್ಲ, ಅವಾಗ ಕಣ್ಣು ತನ್ನಿಂತಾನೆ ಮುಚ್ಕೊಳುತ್ತೆ, ಹೊರಜಗತ್ತಿನ ಎಲ್ಲ ಸ್ಪರ್ಶಗಳು ಕಳಚಿಕೊಳ್ಳುತ್ತೆ, ಆ ಎಳೇ ಬೆರಳುಗಳು ಮುಖ ಸವರಿ ತೋಳುಗಳು ಕತ್ತಿನ ಸುತ್ತ ಬಿಗಿದ ಕ್ಷಣ, ಅದು ಬಂಧನವಲ್ಲ ಬಿಡುಗಡೆ ಅನ್ನಿಸ್ತಿರುತ್ತೆ, ಮುತ್ತಿಟ್ಟರಂತು ಆ ಎಳೇ ತುಟಿಗಳಿಂದ ಮಾಧುರ್ಯವೊಂದು ಹರಿದು ದೇಹವಿಡಿ ಹರಿದಾಡಿ, ಕ್ಷಣಕ್ಕಾದರು ಸರಿ ನಾವು ಲೋಕಾತೀತರು ಅನ್ನಸಿಬಿಡುತ್ತೆ, ದೇವರಿದ್ದಾನೆ ಅಂತ ನಂಬದಿದ್ದರು ಪರವಾಗಿಲ್ಲ, ಮಕ್ಕಳ ಸ್ಪರ್ಶ ಮಾತ್ರ ಸಪ್ತಲೋಕಗಳ ಮೀರಿಸೋದು ಸತ್ಯ,"
ಅಂತ ಮಾತಾಡ್ತಿದ್ದರೆ ಮಡಿಲ ಮಗುವಾಗಿ ಅವನು ತಾರೆಗಳತ್ತ ಬೆರಳು ತೋರುತ್ತಾ ಅಣಕಿಸಿದ, "ಸರೀ, ಇವತ್ತು ರಾತ್ರಿ ಅಲ್ಲಿಂದ ಅದನ್ನ ಕಿತ್ತು ನಿನ್ನ ಹೊಕ್ಕಳ ಹೂವಾಗಿಸುತ್ತೇನೆ"
ಸಣ್ಣಗೆ ಮುಗುಳ್ನಕ್ಕ ಸಂಜೆ ಸೆರಗನಡಿಯಲ್ಲಿ ಮರೆಯಾಯ್ತು!

ಸೀರಿಯಸ್ಸಾಗಿ ಚಂದರ ತಾರೆ ಚುಕ್ಕಿ ಅವನು ಅಂತೆಲ್ಲ ಬರಕೊಂಡು, ನನ್ನದೇ ಭಾವಲೋಕದಲ್ಲಿ ತೇಲಿಕೊಂಡು ಅವನನ್ನ ಮನಸ್ಸಿನ ತುಂಬಾ ತುಂಬಿಕೊಂಡು ಹುಚ್ಚಿ ತರಹ ಇರೋ ನನಗೆ, "ನಾರ್ಮಾಲಾಗಿರೋದು ಯಾವಾಗ?" ಅಂತ ಅವನು ಅಣಕಿಸ್ತಾ ಇರ್ತಾನೆ, ಹೌದಲ್ಲಾ? ನಾನು ಅಷ್ಟೊಂದು ಖಾಲಿ ಜೀವನ ಯಾವತ್ತು ಜೀವಿಸಿದ್ದೆ, ನನಗೆ ಮರೆತೇ ಹೋಗಿದೆ, ಸಾಲು ಸಾಲು ಆಘಾತಗಳು, ನೋವುಗಳು ಉದ್ವೇಗಗಳು ವಿಪರೀತ ಚಟುವಟಿಕೆ ಇದೆಲ್ಲಾ ಇವತ್ತಿಗೂ ನನ್ನ ಬದುಕು,
ಬಹುಶಃ ಅದನ್ನ ಮೀರಿದ ಏನೋ ಆತ್ಮಸಂತೋಷವೊಂದು ಇವುಗಳ ನಡುವೆಯೇ ನನ್ನ ಸಮತೋಲನದಲ್ಲಿಟ್ಟಿದೆ,ಅದನ್ನ ವಿವರಿಸಲಾರೆ. ಆದರೂ ಅವ ಅತಿಯಾದ ನೈಜತೆಯನ್ನು ಬದುಕುವವ. ಅವನಿಗೆ ಹೌದು ಎಂದರೆ ಹೌದು ಅಂತ ಹೇಳಲಿಕ್ಕೆ ಗೊತ್ತಷ್ಟೆ, ಬಣ್ಣ ಹಚ್ಚಲು ಬರುವುದಿಲ್ಲ, ಪ್ರೀತಿಸಲು ಅಷ್ಟೇ ಬಹುಶಃ ಪಾಮಾಣಿಕವಾಗಿ ಪ್ರೀತಿಸಬಹುದು, ಸುಳ್ಳು ಹೇಳಲು ಬರುವುದಿಲ್ಲ. ಮತ್ತು ಅವನು ನನ್ನ ನಾನಾಗಲಾರದ ಕನ್ನಡಿಯೊಂದನ್ನು ನನಗೆ ತೋರುತ್ತಾನೆ, ಹಾಗಾಗಿಯೇ ಎಲ್ಲ ಸಣ್ಣ ಪುಟ್ಟ ಮುನಿಸು ಜಗಳಗಳ ನಡುವೆ ಅವನು ನನ್ನಲ್ಲಿ ಜೀವಂತವಿದ್ದಾನೆ ನನ್ನ ಪ್ರತಿಬಿಂಬವಾಗಿ...ದೂರವಿದ್ದಷ್ಟೂ ಹತ್ತಿರವಾಗಿ


ಈ ಹಸಿವಿಗೆ ಮಾಪಕಗಳಿಲ್ಲ, ಹಸಿವೆ ಆಗುತ್ತಿಲ್ಲ ಎಂದರು ತಪ್ಪಾದೀತು
ಇದು ಹರಿವ ನದಿಯ ಅಲೆಗಳಲ್ಲಿ ಕುಣಿವ ಧ್ಯಾನದ ಸ್ಥಿತಿ
ಅದೇ ಅಕ್ಕ ಕದಳಿಯಲ್ಲಿ ಬಯಲಾಗುವ ಮುನ್ನ ಕಂಡಿರಾ ಕಂಡಿರಾ
ಎಂದು ಗೋಗರೆದು ಹುಡುಕಿದ ಸ್ಥಿತಿ
ನಾನೆನ್ನುವ ಮೈ ಅರಿವು ತಪ್ಪಿ ಹೋಗಿ ಎಲ್ಲೆಲ್ಲೂ ಅವನ ಬಿಂಬವೊಂದೇ ಕಾಣುವ ಸ್ಥಿತಿ
ಎಲ್ಲದರಲ್ಲೂ ಅವನು ನಾನಾಗಿ ನಾನು ಅವನಾಗಿ ಈ ಹಸಿವು ಜಾಸ್ತಿಯಾಯಿತೆ ಹೊರತು ಇಂಗಲಿಲ್ಲ
ಅಣುರೇಣು ತೃಣ ಕಾಷ್ಟಗಳಲ್ಲಿ ಅವನನ್ನೇ ಕಾಣುವಾಗ ಭುಂಜಿಸಲಿ ಏನನ್ನು?
ಅವನ ರೂಪ ನನ್ನದೇ ಆಗಿರುವಾಗ ಈ ಹಸಿವು ತಣಿಯಲು ಉಣ್ಣುವುದೇನನ್ನು?

ಅಮಾವಾಸ್ಯೆ ದಿನ ನನ್ನ ಜತೆ ಅವನು ಮಾತಾಡ್ಬಾರ್ದು ಅಂತ ಏನಾದ್ರೂ ನಿಯಮ ಇದ್ಯಾ? ನಮಗೆ ಕಾಲ ತಿಥಿಗಳ ಹಂಗಿಲ್ಲ...ಅವನ ಕಂದು ಕಣ್ಣುಗಳಲ್ಲಿ ಕಣ್ಣಿಟ್ಟ ಕ್ಷಣ  ತಿಂಗಳು ಎದೆಗಿಳಿಯುತ್ತದೆ, ಮಾಯದ ವೇಗದಲ್ಲಿ ಸಮಯ ನಮ್ಮಿಬ್ಬರನ್ನು ಈ ನಿಮ್ಮ ನಿಮ್ಮ ಅಂಗಡಿಮುಗ್ಗಟ್ಟುಗಳ  ಸವಾರಿ ಮಾಡಿಸುತ್ತದೆ. ನಾವು ಕೊಳ್ಳುಗರಲ್ಲ, ಈ ಸಂತೆಯಲ್ಲೂ ಕೈಹಿಡಿದು ನಗುವಿನೊಂದಿಗೆ ಹೃದಯ ವಿನಿಮಯ ಮಾಡಿಕೊಂಡವರು...ಅವನ ಹಿಂದೆ ಕೂತು ಬೆಚ್ಚಗೆ ಅಪ್ಪಿಕೊಂಡರೆ ಸವಾರಿ ಸೀದಾ ನಿಮ್ಮ ನಿಮ್ಮ ಕಲ್ಪನೆಯ ಸ್ವರ್ಗಕ್ಕೆ..ಅವ ಅರ್ಧ ಕುಡಿದ ಕಾಫಿಗೆ ನಾನು ತುಟಿಯಿಡುತ್ತೇನೆ ತಣ್ಣಗೆ ಅವ ಅಮೃತವನ್ನೆಲ್ಲ ತನ್ನ ಕಣ್ಣಲ್ಲೇ ಹೀರುತ್ತಾನೆ..ಮತ್ತು ಇದನ್ನೆಲ್ಲ ನೋಡುವ ಕೇಳುವ.ಹೊಟ್ಟೆ ಉರ್ಕೊಳ್ಳುವವರಿಗೆ ನಾವು ಜವಾಬ್ದಾರರಲ್ಲ

No comments:

Post a Comment