Wednesday, October 9, 2019

ಈ ದಿನ

1

ಹದಾ ತೊಳೆದ ಅಕ್ಕಿ ಒಣಗಿಸಿ
ಮಿಲ್ಲಿನ ಹಲ್ಲಿಗಿತ್ತು ಬೆಳ್ಳನೆಯ ಹಿಟ್ಟು
ಬೆರೆಸಿ ಅಳತೆ ತಪ್ಪದಂತೆ ನೀರು ಕುದಿಸಿ
ಮತ್ತೊಂದಿಷ್ಟು ಹಿಟ್ಟುದುರಿಸಿ
ಕಾಯಬೇಕು
ಒಳಗೆಲ್ಲ ಬಿಸಿ ತಗುಲಿ
ನೀರೊಳಗೆ ಬೆಂದು ನುಣ್ಣಗೆ ಕಲಸಿ
ತುಸುವು ಒಡೆಯದಂತೆ
ಉಂಡೆಕಟ್ಟಿ ನಾದಿ ನಾದಿ...
ಕೊನೆಗೊಮ್ಮೆ ರಾತ್ರಿಯ ಚಂದ್ರನ್ನ
ಹಾಡು ಹಗಲಲ್ಲೇ ಲಟ್ಟಿಸಿ
ಬಿಸಿ ಬೇಯಿಸಿ
ಸೀದಾ ಬಾಣಲೆಯಿಂದ ಬೆಂಕಿಗೆ...
ಉಬ್ಬಿದ ರೊಟ್ಟಿಯೊಳಗೆ ಉಸಿರ ತಿದಿ
ಬಡಿಸಿದವರೆಲ್ಲ ಹೊಟ್ಟೆತುಂಬ ತಿಂದು
ಎದ್ದು ಹೋದ ನಂತರ
ಹರಡಿದ ಹಿಟ್ಟು
ಅಂಟಾದ ತಳಹಿಡಿದ
ಪಾತ್ರೆಗಳು
ಆ ಸನ್ನಾಟ
....
...
ಇದಷ್ಟೇ ಜೀವನ
ಇದೇ ಜೀವನ!

2

ಉದ್ದುದ್ದ ಹರಡಿಕೊಂಡ ರಸ್ತೆಗಳ
ನಡುವೆ ಅಡ್ಡಾಡುತ್ತೇನೆ
ಎಲ್ಲಾದರೂ ಕೊನೆಗೊಮ್ಮೆ
ಡೆಡ್ ಎಂಡ್ ಬಂದು ನಿನ್ನ ಮುಖವಾದರು
ನೋಡ ಸಿಕ್ಕೀತು ಎಂದು

ಕೊನೆ ಇಲ್ಲದಿದ್ದರೆ ಸರಿ
ಕಡೆಗೊಂದು ತಿರುವು
ಅಲ್ಲಾದರೂ ನೀ ಹೋದ ಪರಿಮಳ
ಹೊತ್ತ ಗಾಳಿ ಸುದ್ದಿ ಹೇಳೀತು ಎಂದು

ಆಗಷ್ಟೇ ಬೆಳಕಿಗೆ
ಒಡ್ಡಿದ ಮೊಳಕೆಯ ಮುಖದಲ್ಲಿ
ಹೂ ಮಂದಹಾಸ
ಅಲ್ಲಾದರೂ ಸಿಕ್ಕಿಯೇ ಬಿಡಬಹುದಿತ್ತು
ನೀನು ನನ್ನ ಕದಪಿಗೆ ಚಿಗುರೆಲೆಯ ಕೆಂಪೇರಿಸಿ

ಗುರುತಿಡದೆ ನಡೆದು ಹೋದವನೆ
ನಾನಾಗಲಾರೆ ನಿನ್ನಂತೆ
ಬಯಲು ಬಚ್ಚಿಟ್ಟ ರಹಸ್ಯ
ನಡೆಯಲಾಗದು  ತಿರುವುಗಳೇ
ತುಂಬಿದ ಹಾದಿ
ಕೊನೆಗೊಮ್ಮೆ ಬಾನಿಗೆ ಕೈಚಾಚಿ
ನಿನ್ನೊಮ್ಮೆ ಬಿಗಿಯಾಗಿ ತಡೆದು
ತಬ್ಬಿ ಮಳೆಯಾಗಿ
ಸುರಿದೇನು

ಹೇಳು ಎಷ್ಟಂತ ಕಟ್ಟಲಿ ಬೇಲಿ
ಅಣೆಕಟ್ಟುಗಳ
ಪ್ರೇಮ ಪ್ರವಾಹಕ್ಕೆ!

Monday, October 7, 2019

ಇವತ್ತು

ನಿಜವಾದ ಪ್ರೇಮ
ಸಂಶಯದ ಗೋರಿಯ
ಮೇಲರಳಿದ ಒಂಟಿ
ಸುವಾಸಿತ ಹೂ

2

ಹೂವುಗಳೆಲ್ಲ ಕೇಳಿ ಅರಳುವುದಿಲ್ಲ
ಗಾಳಿಯ ಚಾಡಿ
ಸ್ನೇಹಕ್ಕೆ ನಂಬಿಕೆ ಬುನಾದಿ ಪ್ರೇಮಕ್ಕೆ
ತೆರೆದಿಡು ಮನದ ಕಿಟಕಿ
ನುಗ್ಗಲಿ ಎಲ್ಲ ಬೆಳಕು ದಾಟಿ ಚಾವಡಿ!

3
ನೀನು ಪ್ರೇಮಕ್ಕೆ ಗಡಿ ರೇಖೆಗಳ ಅಂಟಿಸಿದ್ದೀಯ
ಗಾಳಿಪಟದಾ ಸೂತ್ರ ನಿನ್ನ ಕೈಲೇ ಇದೆ ಅನ್ನುವುದ ಮರೆತಿದ್ದೀಯ
ನೀನು ಪರಿಪೂರ್ಣ ಎಂಬುವುದ ನಿನಗೆ ನೀನು ನಂಬಿಸಿ
ಅಪರಿಪೂರ್ಣತೆಯೇ ಜಗದ ಸೌಂದರ್ಯ ಮರೆತಿದ್ದೀಯ
4

ಕತ್ತಲ ಬಗ್ಗೆ ಮೊದಲು ತಿಳಿ
ಬೆಳಕು ತನ್ನಿಂತಾನೇ ಅರ್ಥವಾಗುತ್ತದೆ!
5

ಅದೇನು ಅಂಥ ಗುಟ್ಟು ಅವ
ಕಿವಿಯೊಳಗೆ ಉಸುರಿ
ಅವಳ ಕೆನ್ನೆ ಕೆಂಪೇರಿಸಿದ್ದು?
ಅವರನ್ನ ನೋಡಿ
ನೀನು ನನ್ನತ್ತ
ಕಣ್ಣು ಮಿಟುಕಿಸಿದ್ದು??

6

ಗಟ್ಟಿಯಾಗಿ ಹಿಡಿದು
ಬರಸೆಳೆದು ಹೆಗಲ ಸುತ್ತ ಕೈ ಹಾಕಿ
ನೀನು ನನ್ನೇ ನೋಡುತ್ತಾ ರಸ್ತೆ ಕ್ರಾಸ್
ಮಾಡುವೆ
ಅದಕ್ಕೆ ನಾನು ನೀನಿದ್ದಾಗಲೆಲ್ಲ
ಭಯದ ನೆಪ ಹೂಡುವೆ...

Friday, September 27, 2019

ಇಂದು ೨೭/೯

ಪ್ರೇಮದ ಆಳ
ತುಟಿಗೆ ಬೆರಳುಗಳಿಗೆ
ನಿಲುಕುವುದಿಲ್ಲ,
ಬರೀ ವಿರಹದ
ನಿಟ್ಟುಸಿರಿಗಷ್ಟೆ
ಅದು ಗೊತ್ತು!

ನೋವೆಂದರೆ ಏನೆಂದು
ನಾನು ಹೇಗೆ ಹೇಳಬಹುದಿತ್ತು
ಹೇಗೆ ತೋರಬಹುದಿತ್ತು
ಅದೃಶ್ಯ ಗಾಯಗಳ
ಕಣ್ಣ ಮುಚ್ಚಿ ನಿಟ್ಟುಸಿರು
ಇಟ್ಟು ಸಂತೈಸಿದ ಘಳಿಗೆಗಳ
ಹೇಳು, ಎದೆಯ ಕೋಡಿ
ಒಡೆದು ಕೊಚ್ಚಿ ಹೋದ
ಪ್ರವಾಹದ ಗುರುತು
ಕಂಡೀತೇನು?
ಎಲ್ಲ  ಮುಗಿದ ಹೋದ ನಂತರ 
ಇಳೆಯ ತುಂಬಾ ಉಳಿದ
ನೆನಪುಗಳ ಒದ್ದೆ ಒದ್ದೆ
ಕೆನ್ನೆಗಳಲ್ಲೂ ಇಳಿದದ್ದು
ಅದೇ


ಕೆಂಪು ಸೇಬು, ಒಳಗೆ ಬಿಳಿ
ಈಡನ್ನಲ್ಲಿ ಬದಲಾದ ಬಣ್ಣ
ತೊಗಲೊಂದು ವ್ಯಕ್ತ ಭಾವ
ಜಾರಿಯಲ್ಲಿದೆ  ಬಣ್ಣವಿಲ್ಲದಎಡೆಗೆ ದಾರಿ!!


ಹೆಮ್ಮೆಯ ಮಿಂಚು ಕಣ್ಣಿಗೆ
ಅಹಂಕಾರದ ಬಟ್ಟೆ
ತಲೆಯಲ್ಲಿ ಅವಸಾನ ಹೊಂದಿದ ಶ್ರದ್ಧೆ
ಕರುಣೆಯೊಂದು ಮಾತ್ರ ಸದಾ ಖಾಲಿ ಚಿತ್ತ!!

ಅರೆ ಎಷ್ಟೊಂದು ಗೊಂದಲ, ದ್ವಂದ್ವ
ಕೋಶದೊಳಗೆ ಕವಲೊಡೆವ ರೆಕ್ಕೆ
ಕೈ ಕಾಲು  ಪರಿಪೂರ್ಣತೆಯ ತವಕ ಚಿಟ್ಟೆ
ಜಿಜ್ಞಾಸು ನಿಜದಿ ವಿಜ್ಞಾನಿ!!

ಎಲ್ಲ ದಾರಿಗಳ ತುಂಬಾ ಕೆಂಪು ಗುರುತುಗಳು
ಹಡೆದ ಹಿಂಸೆಯ ತಂದೆ, ಭಿತ್ತಿಯೊಳಗೆ ಮಸುಕು ಭವಿಷ್ಯ
ಧರ್ಮ ತಾಯಾದರೆ
ಕ್ಷಮೆಯೊಂದೇ ನಿರ್ವಾಣ!!


ಕಣ್ವನ ಉಪವನದ ಶಕುಂತಲೆ,ಬಿಟ್ಟೆದ್ದು
ಹೋದವನ ನೆನೆದು ಅಳುವ ದಮಯಂತಿ
ಉರಿವ ಚಿತೆಗೆ ಬಿದ್ದ ಮಾಸತಿಯರು
ಗೆದ್ದು ಸೋತ ನೂರು ಹೆಣ್ಣುಗಳು,ಹೆಸರೊಂದು ನೆಪಮಾತ್ರ
ಇನ್ನೂ ಕಲ್ಲರಳಿ ಹೂವಾಗೋ ಕಾಲ ದೂರವಿದೆ!!
(ಮುಂದುವರೆಯಲಿದೆ...)

Thursday, September 26, 2019

ಇಂದು 26/9

ಚಂದ್ರ ಚುಕ್ಕಿ
ಕಡಲು ಅಲೆ
ಎಲ್ಲ  ಉಪಮೆಗಳು ಹಳತಾದವು
ಹಳತಾದವು ಕಣ್ಣ ಮಿಂಚು
ಶುದ್ಧ ಪರಿಶುದ್ಧ ಸ್ಪಟಿಕ ಪ್ರೇಮ
ಪುರಾಣಗಳು
ಲೈಲಾ ಮಜನು
ಹಿರ್ ರಾಂಜಾ
ಹಳತಾದವು
ಸ್ನೇಹದ ಅಪರಿಮಿತ
ಉಪಯೋಗದ ವ್ಯಾಖ್ಯಾನಗಳು
ಉಪಕಥೆಗಳು
ಹಳತಾದವು ಬೊಡ್ಡು ಹಿಡಿದ ಬೆನ್ನಲಿರಿದ
ಚೂರಿ ಬಾಕುಗಳು
ಇವತ್ತಿಗೆ ಸಧ್ಯ ಹೊಸದಾಗಿದೆ
ಗೆದ್ದೆತ್ತಿನ ಬಾಲ ಹಿಡಿದು ತೂಗುವವರ
ವಿಮರ್ಶಿಸುವವರ ಅಲೆ
ಇಲ್ಲಿಯೂ ಅಲ್ಲಿಯೂ ಸಮನಾಗಿ ಸುದ್ದಿಗಳ ಹಂಚಿಕೊಳ್ಳುತ್ತಾ
ಲಾಭ ಪಡೆದು ಮೆಟ್ಟಿಲೇರಿ ತಳ್ಳುವವರ ಪಡೆ
ಇಲ್ಲೆಲ್ಲೂ ನಾವಿಲ್ಲವೋ
ತಗೋ...ಕಸಕ್ಕಿಂತ ಕಡೆ!

2

ಸರಿ ಹುಡುಗಾ,ಒಪ್ಪಿದೆ..
ನಾವೆಲ್ಲರೂ ಒಂಟಿ ಪಯಣಿಗರು
ಆದರೂ, ಇಲ್ಲೇನೋ ತುಸು ತಪ್ಪಿದೆ!
ಹೇಳು ಮತ್ತೆ
ಆ ಮರವ ಬಳ್ಳಿಯೇಕೆ ತಬ್ಬಿದೆ?

3

ನಿತ್ಯ ದೇವರನ್ನ ಭಜಿಸಿ ಧ್ಯಾನಿಸಿ ಪುಣ್ಯದ ಮೂಟೆ
ಮುಂದಿನ ಜನುಮಕ್ಕು ತಯಾರು ಮಾಡುವವರ ನಡುವೆ
ತೀರಾ ಮನುಷ್ಯನಂತ ದೇವರಿರುವುದಿಲ್ಲ

ನಿಮ್ಮ ಆಜಾನು ಪ್ರಾರ್ಥನೆಗಳಲ್ಲು ಅವನು ಕಾಣದ
ಕಾರಣ ನಾನು ಆ ಸ್ಥಳಗಳಿಗೆ ಕಾಲಿಡುವುದಿಲ್ಲ

ನಾನಂತೂ ನನ್ನ ದೇವರನ್ನು ಪ್ರೇಮಿಯಲ್ಲಿ ಹುಡುಕುತ್ತೇನೆ....

ಅವನ ನಗು, ಮಾತು ಮತ್ತು ಅನಂತ ವಿರಹದ
ನಡುವಿನ ಜಾಗದಲ್ಲೆಲ್ಲೊ
ನಿಮ್ಮ ದೇವರಿದ್ದಾನೆ ಅಂತನಿಸುತ್ತದೆ!

4


ಶೂನ್ಯ ತೊಟ್ಟಿಲು, ಭವದ ಚಂದಿರ
ತೂಗು ಕೈಗಳಿಗೆ ಹಗ್ಗ
ಮತ್ತೆ ಕಾಲ ಬುಡದಲ್ಲೇ ಅರಳಿದಮೊಳಕೆ ಕೊಳೆತಿದ್ದು ತಪ್ಪೇನಿಲ್ಲ!!


ಕಾಡು ಹೂಗಳು, ಕೆಸರಿನ ಕಮಲ
ಕಪ್ಪು ಮುಗಿಲಲ್ಲೂ ಇಣುಕುವ ಚಂದಿರ
ಕಣ್ಣೀರ ಹನಿಯಲ್ಲೂ ಸುಮ್ಮಾನ ಬುದ್ಧ!!

ವಿರಹದ ಸಲಾಕೆ, ಪಾಚಿ ಕಟ್ಟಿದ ನಂಬಿಕೆ
ತೊಳೆಯಲು ಬಂದಾಕೆ  ಬದುವಿನ ನೆನಪಿನ
ಬಳ್ಳಿಯನ್ನೂ ಕತ್ತರಿಸಿದ್ದು ಉನ್ಮಾದಕ್ಕೆ ಗಮನವಿಲ್ಲ!!


ಹಿಂಡಿದರೂ ಇಂಗದ ಕಣ್ಣೀರ ತೇವ
ಹೀರಿ ಹೀರಿದರೂ ಸಮಾಧಾನಿ ದಿಂಬು
ಮಧ್ಯೆ ಕಳೆದು ಹೋಗಿದ್ದಾರೆ ಮಕಾಡೆ ಮಲಗಿದ್ದಾರೆ ಭಾರತದ ದೇವತೆಯರು!!


ಧರ್ಮ ಗ್ರಂಥಗಳು, ಕಟ್ಟು ಕಥೆಗಳು
ನದಿಗಳು ಉಕ್ಕಿವೆ,ಅಣೆಕಟ್ಟುಗಳು ತುಂಬಿವೆ
ಆದರೂ ಇತಿಹಾಸ ಕೊಳಚೆಯಲ್ಲೇ ಕೊಳೆಯುತ್ತಿದೆ
ಯಾರಿಗೆ ಬೇಕು? ಪ್ರಾರ್ಥನೆಯ ಮದಿರೆ ಕುಡಿಯೋಣ ಬನ್ನಿ!!
(ಮುಂದುವರೆಯಲಿದೆ...)

Thursday, September 19, 2019

ಸಾವಿ ನೊಂದಿಗೆ ಮುಖಾಮುಖಿ

ಸಾವಿನ ಮನೆಯಲ್ಲಿ ಸೂತಕ, ನನಗೆ ಈ ಲೋಕವನ್ನ ಬಿಟ್ಟು ಹೋದವರ ಬಗ್ಗೆ ದುಃಖವಾಗುವುದಿಲ್ಲ, ಅವರು ಪ್ರಯಾಣ ಮುಂದುವರೆಸುವರು ಅನ್ನುವ ದಿವ್ಯ ನಂಬಿಕೆ ಇರುತ್ತದೆ, ಆದರೆ ಇಲ್ಲಿ ಅವರ ಅನುಪಸ್ಥಿತಿಯಲ್ಲಿ ನಿತ್ಯವೂ ಹಲವಾರು ಬಾರಿ ಸಾವನ್ನಪ್ಪುವ ಜೀವಗಳಿಗೆ ನನ್ನ ದುಃಖ ಸಾಂತ್ವನ ಸಲ್ಲುತ್ತದೆ...ಅವರ ಕಣ್ಣೀರಿಗೆ ನನ್ನ ಕಣ್ಣ ಹನಿ ಸೇರುತ್ತದೆ..ಆದರೂ ಬದುಕೇ...ನೀನು ನಾಳೆ ಮತ್ತು ಇವತ್ತುಗಳ ನಡುವೆ ಮರೆವಿನ ಕೊಂಡಿಯೊಂದನ್ನು ಇಟ್ಟು ಕಳಚುವ ಜಾಣ ಕಾಲನ ವಶವರ್ತಿ....ಮತ್ತೆ ವಸಂತ ಬಂದೆ ಬರುವ...ಯಾವ ರೂಪದಲ್ಲಾದರೂ...ಸಮಸ್ಥಿತಿಯನ್ನು ಕಾಯ್ದುಕೊಳ್ಳುವ ತಾಳ್ಮೆಯೊಂದಿರಬೇಕು ಅಷ್ಟೇ

ಕೊಂಡಿ ಎರಡು

ಜೀವನದಲ್ಲಿ ಒಮ್ಮೆಯಾದರೂ ಶವಸಂಸ್ಕಾರ ನೋಡಬೇಕು,ನಾವು ಅಷ್ಟೆಲ್ಲ ಪ್ರೀತಿಸಿದ ಜೀವವೊಂದು ಹಿಡಿ ಬೂದಿಯಾಗಿ ಹೋಗುವಾಗ
ನಮ್ಮ ದೇವರು ದೆವ್ವ ಇತ್ಯಾದಿ ನಂಬಿಕೆಗಳೆಲ್ಲ ಹುಡಿ ಹುಡಿಯಾಗಿ ಬೆಂಕಿಯ ಕಿಡಿಯಲ್ಲಿ ಕರಗಿ ಸುಟ್ಟು ಹೋಗುತ್ತದೆ. ತಪ್ಪು ಸರಿಗಳಿಗೆಲ್ಲ ಅರ್ಥವೇ ಇಲ್ಲದೆ ಜೀವನ ಬರಿದೆ ಖಾಲಿ ಪಾತ್ರೆಯಂತೆ ತೋಚುತ್ತದೆ. ನಮ್ಮ ಅಹಂಕಾರ ಅಭಿಮಾನಗಳೆಲ್ಲ, ಗಾಳಿಯಲ್ಲಿ ಬೆರೆತು, ಈ ದೇಹ ಕಡ ತಂದದ್ದು ಎನ್ನುವ ಅರಿವಿನ ಕಿಚ್ಚು ನಮ್ಮೊಳಗೆ ಜ್ವಲಿಸುತ್ತದೆ. ಇದೆಲ್ಲಾ ನಿಮಗಾಗಲಿಲ್ಲ ಅಂದರೆ ನೀವು ಸ್ಮಶಾನಕ್ಕೂ ಸಂಭ್ರಮಕ್ಕೂ ಅನರ್ಹರು.

ಪುಟ್ಟ ದೇವರು ಮತ್ತು ನಾನು

ಮಗ್ಗುಲಲ್ಲಿ ಮಲಗಿದ ಮುದ್ದಾದ ಹೂ, ಅಮ್ಮನ ಕೈ ಬೆರಳನ್ನ ಗಟ್ಟಿಯಾಗಿ ಹಿಡಿದು ಅವುಚಿಕೊಂಡಿದೆ ತನ್ನೆದೆಗೆ
ಹೊರಮನೆಯಲ್ಲಿ ಕ್ರಿಕೆಟ್ಟು ಹಾಕಿದ ಅಪ್ಪ  ಉದ್ವೇಗದಲ್ಲಿ ಗೊತ್ತಿಲ್ಲದೆ ಟಿವಿ ಶಬ್ದ ಜಾಸ್ತಿ ಮಾಡಿದ್ದಾನೆ, ಅಮ್ಮನಿಗೆ ಅಡಿಗೆ ಮನೆಯ ಸಿಂಕಿನಲ್ಲಿ ಬಿದ್ದ ಪಾತ್ರೆ, ಸ್ಟವ್ ಮೇಲೆ ಹರಡಿಕೊಂಡ ಕಸ, ಜೋಡಿಸಲು ಬಿದ್ದಿರುವ ಬಟ್ಟೆಗಳ ಧ್ಯಾನ
ನಿಧಾನಕ್ಕೆ ಉಪಾಯದಲ್ಲಿ ಕೈ ಬಿಡಿಸಿ ಹೊದಿಕೆ ಹೊಚ್ಚಿ ಮುದ್ದು ಮುಖ ನೋಡಿ ಅದರೊಡನೆ ಅವುಚಿಕೊಂಡು ಮಲಗುವ ಸುಖ ಅಲ್ಪಕಾಲಕ್ಕಾದರು ತಪ್ಪಿ ಹೋದ ಸಂಕಟಕ್ಕೆ ಮರುಗುತ್ತಾ ಎದ್ದು ಬಂದು ಸಿಂಕಿನಲ್ಲಿ ಬಿದ್ದ ಪಾತ್ರೆಗೆ ಕೈ ಹಾಕುತ್ತಾಳೆ
ಒಂದೈದು ನಿಮಿಷವಾಗಲಿಕ್ಕಿಲ್ಲ ಹಿಂದಿನಿಂದ ಪುಟ್ಟ ತೋಳು ಅಮ್ಮನ ಸೊಂಟದ ಸುತ್ತಲೂ ಬಾಚಿ ತಬ್ಬುತ್ತದೆ. "ಅಮ್ಮಾ, ನೀನ್ಯಾಕಮ್ಮಾ ಎದ್ದು ಹೋಗ್ತೀಯಾ, ಒಂದು ದಿನ ಪಾತ್ರೆ ಅಪ್ಪ ತೊಳಿಲಿ, ನಂಜೊತೆ ಮಲಗು ಪ್ಲೀಸ್" ಅಂತ ಗೋಗರೆವ ನಿದ್ದೆಗಣ್ಣುಗಳ ಮೋಡಿಗೆ ಒಳಗಾಗಿ ಆ ಮಾಯಕ್ಕಾರನ ಹಿಂದೆ ಕೀಲಿ ಕೊಟ್ಟ ಗೊಂಬೆಯ ತೆರದಿ ಅಮ್ಮ ಇದ್ದ ಬದ್ದ ಕೆಲಸವೆಲ್ಲ ಬಿಟ್ಟು ಹೋಗಿ ಮಲಗುತ್ತಾಳೆ...
ಸುಖವೊಂದು ಮುದ್ದು ನಗುವಿನ ರೂಪದಲ್ಲೀಗ ಮಂಚದ ಮೇಲೆ  ಬೆಳದಿಂಗಳ ಹಾಗೆ ಹೊದ್ದಿದೆ....
ಕೆಲಸ ಬೊಗಸೆ ಹಾಳುಬಿದ್ದುಹೋಗಲಿ... ಇದರ ಮುಂದೆ ಬೇರೇನಿಲ್ಲ
#ಅಮ್ಮತನವೆಂಬಖಾಸಗಿಸುಖ

ಈ ದಿನ ೧೯/೯/೧೯


"ಪುಟ್ಟ ಎಳೆ ಮಕ್ಕಳು ಮುದ್ದು ಮಾಡ್ತಾವಲ್ಲ, ಅವಾಗ ಕಣ್ಣು ತನ್ನಿಂತಾನೆ ಮುಚ್ಕೊಳುತ್ತೆ, ಹೊರಜಗತ್ತಿನ ಎಲ್ಲ ಸ್ಪರ್ಶಗಳು ಕಳಚಿಕೊಳ್ಳುತ್ತೆ, ಆ ಎಳೇ ಬೆರಳುಗಳು ಮುಖ ಸವರಿ ತೋಳುಗಳು ಕತ್ತಿನ ಸುತ್ತ ಬಿಗಿದ ಕ್ಷಣ, ಅದು ಬಂಧನವಲ್ಲ ಬಿಡುಗಡೆ ಅನ್ನಿಸ್ತಿರುತ್ತೆ, ಮುತ್ತಿಟ್ಟರಂತು ಆ ಎಳೇ ತುಟಿಗಳಿಂದ ಮಾಧುರ್ಯವೊಂದು ಹರಿದು ದೇಹವಿಡಿ ಹರಿದಾಡಿ, ಕ್ಷಣಕ್ಕಾದರು ಸರಿ ನಾವು ಲೋಕಾತೀತರು ಅನ್ನಸಿಬಿಡುತ್ತೆ, ದೇವರಿದ್ದಾನೆ ಅಂತ ನಂಬದಿದ್ದರು ಪರವಾಗಿಲ್ಲ, ಮಕ್ಕಳ ಸ್ಪರ್ಶ ಮಾತ್ರ ಸಪ್ತಲೋಕಗಳ ಮೀರಿಸೋದು ಸತ್ಯ,"
ಅಂತ ಮಾತಾಡ್ತಿದ್ದರೆ ಮಡಿಲ ಮಗುವಾಗಿ ಅವನು ತಾರೆಗಳತ್ತ ಬೆರಳು ತೋರುತ್ತಾ ಅಣಕಿಸಿದ, "ಸರೀ, ಇವತ್ತು ರಾತ್ರಿ ಅಲ್ಲಿಂದ ಅದನ್ನ ಕಿತ್ತು ನಿನ್ನ ಹೊಕ್ಕಳ ಹೂವಾಗಿಸುತ್ತೇನೆ"
ಸಣ್ಣಗೆ ಮುಗುಳ್ನಕ್ಕ ಸಂಜೆ ಸೆರಗನಡಿಯಲ್ಲಿ ಮರೆಯಾಯ್ತು!

ಸೀರಿಯಸ್ಸಾಗಿ ಚಂದರ ತಾರೆ ಚುಕ್ಕಿ ಅವನು ಅಂತೆಲ್ಲ ಬರಕೊಂಡು, ನನ್ನದೇ ಭಾವಲೋಕದಲ್ಲಿ ತೇಲಿಕೊಂಡು ಅವನನ್ನ ಮನಸ್ಸಿನ ತುಂಬಾ ತುಂಬಿಕೊಂಡು ಹುಚ್ಚಿ ತರಹ ಇರೋ ನನಗೆ, "ನಾರ್ಮಾಲಾಗಿರೋದು ಯಾವಾಗ?" ಅಂತ ಅವನು ಅಣಕಿಸ್ತಾ ಇರ್ತಾನೆ, ಹೌದಲ್ಲಾ? ನಾನು ಅಷ್ಟೊಂದು ಖಾಲಿ ಜೀವನ ಯಾವತ್ತು ಜೀವಿಸಿದ್ದೆ, ನನಗೆ ಮರೆತೇ ಹೋಗಿದೆ, ಸಾಲು ಸಾಲು ಆಘಾತಗಳು, ನೋವುಗಳು ಉದ್ವೇಗಗಳು ವಿಪರೀತ ಚಟುವಟಿಕೆ ಇದೆಲ್ಲಾ ಇವತ್ತಿಗೂ ನನ್ನ ಬದುಕು,
ಬಹುಶಃ ಅದನ್ನ ಮೀರಿದ ಏನೋ ಆತ್ಮಸಂತೋಷವೊಂದು ಇವುಗಳ ನಡುವೆಯೇ ನನ್ನ ಸಮತೋಲನದಲ್ಲಿಟ್ಟಿದೆ,ಅದನ್ನ ವಿವರಿಸಲಾರೆ. ಆದರೂ ಅವ ಅತಿಯಾದ ನೈಜತೆಯನ್ನು ಬದುಕುವವ. ಅವನಿಗೆ ಹೌದು ಎಂದರೆ ಹೌದು ಅಂತ ಹೇಳಲಿಕ್ಕೆ ಗೊತ್ತಷ್ಟೆ, ಬಣ್ಣ ಹಚ್ಚಲು ಬರುವುದಿಲ್ಲ, ಪ್ರೀತಿಸಲು ಅಷ್ಟೇ ಬಹುಶಃ ಪಾಮಾಣಿಕವಾಗಿ ಪ್ರೀತಿಸಬಹುದು, ಸುಳ್ಳು ಹೇಳಲು ಬರುವುದಿಲ್ಲ. ಮತ್ತು ಅವನು ನನ್ನ ನಾನಾಗಲಾರದ ಕನ್ನಡಿಯೊಂದನ್ನು ನನಗೆ ತೋರುತ್ತಾನೆ, ಹಾಗಾಗಿಯೇ ಎಲ್ಲ ಸಣ್ಣ ಪುಟ್ಟ ಮುನಿಸು ಜಗಳಗಳ ನಡುವೆ ಅವನು ನನ್ನಲ್ಲಿ ಜೀವಂತವಿದ್ದಾನೆ ನನ್ನ ಪ್ರತಿಬಿಂಬವಾಗಿ...ದೂರವಿದ್ದಷ್ಟೂ ಹತ್ತಿರವಾಗಿ


ಈ ಹಸಿವಿಗೆ ಮಾಪಕಗಳಿಲ್ಲ, ಹಸಿವೆ ಆಗುತ್ತಿಲ್ಲ ಎಂದರು ತಪ್ಪಾದೀತು
ಇದು ಹರಿವ ನದಿಯ ಅಲೆಗಳಲ್ಲಿ ಕುಣಿವ ಧ್ಯಾನದ ಸ್ಥಿತಿ
ಅದೇ ಅಕ್ಕ ಕದಳಿಯಲ್ಲಿ ಬಯಲಾಗುವ ಮುನ್ನ ಕಂಡಿರಾ ಕಂಡಿರಾ
ಎಂದು ಗೋಗರೆದು ಹುಡುಕಿದ ಸ್ಥಿತಿ
ನಾನೆನ್ನುವ ಮೈ ಅರಿವು ತಪ್ಪಿ ಹೋಗಿ ಎಲ್ಲೆಲ್ಲೂ ಅವನ ಬಿಂಬವೊಂದೇ ಕಾಣುವ ಸ್ಥಿತಿ
ಎಲ್ಲದರಲ್ಲೂ ಅವನು ನಾನಾಗಿ ನಾನು ಅವನಾಗಿ ಈ ಹಸಿವು ಜಾಸ್ತಿಯಾಯಿತೆ ಹೊರತು ಇಂಗಲಿಲ್ಲ
ಅಣುರೇಣು ತೃಣ ಕಾಷ್ಟಗಳಲ್ಲಿ ಅವನನ್ನೇ ಕಾಣುವಾಗ ಭುಂಜಿಸಲಿ ಏನನ್ನು?
ಅವನ ರೂಪ ನನ್ನದೇ ಆಗಿರುವಾಗ ಈ ಹಸಿವು ತಣಿಯಲು ಉಣ್ಣುವುದೇನನ್ನು?

ಅಮಾವಾಸ್ಯೆ ದಿನ ನನ್ನ ಜತೆ ಅವನು ಮಾತಾಡ್ಬಾರ್ದು ಅಂತ ಏನಾದ್ರೂ ನಿಯಮ ಇದ್ಯಾ? ನಮಗೆ ಕಾಲ ತಿಥಿಗಳ ಹಂಗಿಲ್ಲ...ಅವನ ಕಂದು ಕಣ್ಣುಗಳಲ್ಲಿ ಕಣ್ಣಿಟ್ಟ ಕ್ಷಣ  ತಿಂಗಳು ಎದೆಗಿಳಿಯುತ್ತದೆ, ಮಾಯದ ವೇಗದಲ್ಲಿ ಸಮಯ ನಮ್ಮಿಬ್ಬರನ್ನು ಈ ನಿಮ್ಮ ನಿಮ್ಮ ಅಂಗಡಿಮುಗ್ಗಟ್ಟುಗಳ  ಸವಾರಿ ಮಾಡಿಸುತ್ತದೆ. ನಾವು ಕೊಳ್ಳುಗರಲ್ಲ, ಈ ಸಂತೆಯಲ್ಲೂ ಕೈಹಿಡಿದು ನಗುವಿನೊಂದಿಗೆ ಹೃದಯ ವಿನಿಮಯ ಮಾಡಿಕೊಂಡವರು...ಅವನ ಹಿಂದೆ ಕೂತು ಬೆಚ್ಚಗೆ ಅಪ್ಪಿಕೊಂಡರೆ ಸವಾರಿ ಸೀದಾ ನಿಮ್ಮ ನಿಮ್ಮ ಕಲ್ಪನೆಯ ಸ್ವರ್ಗಕ್ಕೆ..ಅವ ಅರ್ಧ ಕುಡಿದ ಕಾಫಿಗೆ ನಾನು ತುಟಿಯಿಡುತ್ತೇನೆ ತಣ್ಣಗೆ ಅವ ಅಮೃತವನ್ನೆಲ್ಲ ತನ್ನ ಕಣ್ಣಲ್ಲೇ ಹೀರುತ್ತಾನೆ..ಮತ್ತು ಇದನ್ನೆಲ್ಲ ನೋಡುವ ಕೇಳುವ.ಹೊಟ್ಟೆ ಉರ್ಕೊಳ್ಳುವವರಿಗೆ ನಾವು ಜವಾಬ್ದಾರರಲ್ಲ

Tuesday, September 17, 2019

ಈ ದಿನ 17/9

1
ಪ್ರೇಮದಲ್ಲಿ
ಕೊಟ್ಟೆ ಅನ್ನುವುದು ಘಾತಕ
ನಿರೀಕ್ಷೆ ಮಹಾ ಪಾತಕ

ಬಾನಿಗೆ ಕೈ ಚಾಚಿ
ಚಂದಿರನ್ನ ಕರೆದು
ಬೆಳದಿಂಗಳ ಕಿರಣ ಹಿಡಿದು
ನಗುವ
ಮಗು
ಪ್ರೇಮ

ಶೂನ್ಯಕ್ಕೆ ಕೈ ಹಾಕಿ
ಬಾಚಿ ಬಾಚಿಕೊಂಡಮೇಲು
ಶೂನ್ಯವೆ ಆಗಿ ಉಳಿವುದು ಪ್ರೇಮ

ಎಲ್ಲ ಇದ್ದರೂ ಇಲ್ಲದಂತಿರುವುದು
ತುಂಬಿದ್ದರು ಖಾಲಿ ಇರುವುದು
ಭ್ರಮೆಗಳಾಚೆಗೊಂದು ನೋಟ ತೋರುವುದು
ಪ್ರೇಮ

ನಡೆದೇ ತೀರುವೆ ಅನ್ನುವ ಪಯಣಿಗನ
ಕಾಲಕೆಳ ಭೂಮಿಯಲ್ಲಿ
ಮುಳ್ಳಿನ ಮೇಲರಳುವ
ನಂಬಿಕೆಯ ಹೂ ಪ್ರೇಮ

ಮಗು

ಪ್ರೇಮ!😊

2

ಕರೆದು ತಾ...
ಕರಗಿ ಹೋದ ಈ ಕೆನ್ನೆಕೆಂಪು
ಆ ದಿನಗಳ ತಂಗಾಳಿ
ಹೆಜ್ಜೆ ಇಟ್ಟಲ್ಲೆಲ್ಲ ಅರಳುತ್ತಿದ್ದ ಮರುಳ ಹೂ

ಕರೆದು ತಾ
ಕನ್ನಡಿಯಲ್ಲಿ ಇಣುಕುತ್ತಿದ್ದ ನಾಚಿಕೆ
ಏನನ್ನೋ ಹುಡುಕುತ್ತಿದ್ದ ಹಂಬಲ
ಆ ಮೊದಲ ನೋಟದ ಕೆಣಕುವಿಕೆ
ಇಲ್ಲೆಲ್ಲೋ ಕಳಕೊಂಡ ಹಾಗಿದೆ
ಕಾಲನ ಕೈಯಲ್ಲಿ ಸಿಕ್ಕು ಈಗ ತೀರದ ನೋವಿದೆ

ಕರೆದು ತಾ
ಮತ್ತೆ ಆ ವಸಂತ, ವರುಷಗಳ  ನಡುವೆಯೆಲ್ಲೋ
ಕಳಚಿಕೊಂಡು ದೂರ ಸರಿದ
ಆಕರ್ಷಣೆ
ನಡುಗಾಲದ ತುಟಿಗಳಲ್ಲಿ ಬತ್ತಿದ ಮಕರಂದ
ಏನಿಲ್ಲದಿದ್ದರು ಎಲ್ಲವೂ ಇದ್ದಂತೆ ಭ್ರಮಿಸುತ್ತಿದ್ದ
ಹರೆಯಕ್ಕಷ್ಟೇ ಮೀಸಲಾದ ಆ ಅಂದ ಚಂದ

ಮರಳಿ ತಾ
ಇವನೇ...
ನಿನ್ನ ಬೆರಳುಗಳಲ್ಲಿ ಇರುವ ಕೊಳಲಿನಂದದಿ
ಮಧುರವಾಗಿ ನುಡಿದ ರಾಗ
ಆ ಮೊರೆವ ಪಿಸುನುಡಿಗಳ ಭೋರ್ಗರೆತ
ಮರೆತೇ ಹೋದಂತನಿಸಿದ ಶ್ರಾವಣದ ಕನಲಿಕೆ
ಈಗೇಕೋ ನಡುಕ ,ಸುಸ್ತು,  ದೂರ ತೀರದ ಬಳಲಿಕೆ
3
ಇಷ್ಟೇ ಪ್ರೀತಿ
ಅಂತ ಪಾಲು ಮಾಡಿ ಪ್ರೀತಿಸಬಹುದಾ?
ಕೇಳು ನದಿಯ ಪಾತ್ರಗಳ
ಕಡಲ ತೀರಗಳ
ಪದೇ ಪದೇ ಕಳಚಿಕೊಳ್ಳುವ ನೋವಿದ್ದರು
ಎದೆಗುಂದದೆ ಸುರಿವ ಮೋಡಗಳ
ತಲ್ಲಣಗಳ ರೆಪ್ಪೆಯಡಿಯಲ್ಲಿ ಬಚ್ಚಿಟ್ಟು
ಕ್ಷಣದಲ್ಲಿ ನಿನಗಾಗಿ ತುಂಟಿಯಾಗಿ ಬಿಡುವ ನಾನು
ಬತ್ತಿ ಹೋದರೂ ಸರಿಯೆ
ಹುಚ್ಚಾಗಿ ಹರಿದೇನು
ಆಗಸದ ಉಪಮೆಗಳ ಮೀರುವ ತನಕ!

4

ನೋಡೂ,
ಅವರು ನಡೆದ ದಾರಿ ಬೇರೆ
ತಿರುವುಗಳು ಬೇರೆ
ಮತ್ತು ಬೆಸೆದ ಬಂಧಗಳು ಬೇರೆ
ನೀನು ದಾರಿಬಿಟ್ಟವಳು
ಕರುಣೆಯಷ್ಟೆ ಕನ್ನಡಿಯನ್ನಾಗಿಸಿ
ಮುಖವಾಡಗಳ ಕಳಚಿಟ್ಟವಳು
ನಿನ್ನ ಒಳಗಿನ ಬೆಳಕಿಗೆ ನೀನೆ ಮರುಳಾಗುತ್ತಾ
ಕಂಬನಿಯ ಚಿಟ್ಟೆಗಳ ಸಿಂಗರಿಸಿ ಹೊಕ್ಕಳ ಘಮ ಸವರಿ
ಬಾನತ್ತ ತೂ......ರಿ ಬಿಟ್ಟವಳು
ಒಡೆದ ಮಡಿಕೆಯ ಮನಸೊಳಗೆ
ಅಮೃತದ ಬಿಂದು
ಹಾದು ಹೋದ ಹಾದಿಹೋಕರಿಗೆಲ್ಲ
ಅರಿವೇ ಆಗದಂತೆ ಆನಂದದ ಅನುಭೂತಿ ಇತ್ತವಳು,
ಹೆಣ್ಣೆ, ಹೀಗೇ ಇರು,
ಎತ್ತಣದ ಗಾಳಿಯು ನಿನ್ನ ಗತಿ ಬದಲಿಸದಿರಲಿ
ಚಿಟ್ಟೆಗೆ ದಾರಿಯ ಹಂಗಿಲ್ಲ ಕಣೇ!

5

ಈ ಜಗತ್ತಿನ ಸದ್ದು ಗದ್ದಲದ ನಡುವೆ
ದೊಡ್ಡದಾಗಿ ದನಿಯೆತ್ತಿ ದಣಿಯಬೇಡ
ನಿನ್ನ ಎದೆಯ ಬಡಿತದಷ್ಟೇ ಹಗುರವಾಗಿ
ನನ್ನ ಕೂಗು...

ಹಕ್ಕಿ ರೆಕ್ಕೆಯ ಪುಕ್ಕ ಕಳಚಿಕೊಂಡು
ಬಾನೆತ್ತರ ಈ ಧೂಮಹೋಮದ
ಗಡಿ ದಾಟಿ ಗಾಳಿಯಲ್ಲಿ ಮೆಲ್ಲಗೆ
ಮೇಲೇರುವಂತೆ
ನನ್ನ ಕೂಗು....

ಕವುಚಿಕೊಂಡ ಮೋಡ
ಬೆಟ್ಟದೊಡಲಿಗೆ ಸುರಿದು ತನ್ನೆಲ್ಲ ದುಃಖ
ಸದ್ದಿಲ್ಲದಂತೆ ಸರಿದು ಹೋಗುವ ತೆರದಿ
ನನ್ನ ಕೂಗು....

ಕೇಳಿಸದೇನೋ ಎನಬೇಡ
ನನ್ನೆದೆಯಲ್ಲಿ ನಿ ನೆಟ್ಟ ಪ್ರಣಯಬೀಜ
ಹೊಕ್ಕಳಲ್ಲಿ ಚಿಗುರಿ ನಿಡಿದಾಗಿ
ಮೈಮುರಿದು ಮೈತುಂಬ ಪುಲಕದ
ಹೂ ಅರಳುವಂತೆ
ನನ್ನ ಕೂಗು.....
-ಶಮ್ಮಿ

Tuesday, February 20, 2018

ಅಲಾರಾಂ ಹೊಡೆದುಕೊಳ್ಳುತ್ತಿತ್ತು, ಟಪಾಕ್  ಅಂತ ಅದರ ತಲೆಯಮೇಲೊಂದು ಕುಕ್ಕಿದೆ, ಸುಮ್ಮನೆ ಬಾಯಿ ಮುಚ್ಚಿಕೊಂಡಿತು, ಮತ್ತೆ ಹಾಸಿಗೆಯ ಮೇಲೆ ಬಿದ್ದು ಹೊರಳಾಡಿದೆ , ಪಕ್ಕದಲ್ಲಿಯೇ ರಾತ್ರಿ ಓದಿ ಮುಗಿಸಿದ ಡಿಕನ್ಸನ್ನನ ಪುಸ್ತಕ "ಯಾವಾಗ ಮತ್ತೆ ನೀನು ನನ್ನ ಮುಟ್ಟೋದು " ಅಂತ ಅಂಗಾತ ಮಲಗಿತ್ತು. ಅದರ ಪೇಜುಗಳ ಮೇಲೆ ಮೃದುವಾಗಿ ಬೆರಳಾಡಿಸಿದೆ, ನನಗೆ ಹೊಸ ಮತ್ತು ಹಳೆಯ ಪುಸ್ತಕಗಳ ನಾಜೂಕು ಬಹಳ ಇಷ್ಟವಾಗುತ್ತದೆ, ಅದೊಂಥರಾ ಹೆಣ್ಣಿನಂತೆ ಅಂತನ್ನಿಸುವುದು , ವಯಸ್ಸಾದಂತೆಲ್ಲ ಮಾಗುತ್ತಾ ಒಂದು ಔನ್ಯತ್ಯ  ಒಂದು ಹಿತವಾದ ಪಳಗಿಸಲ್ಪಟ್ಟ ನಾಜೂಕು ಹೆಣ್ಣಿನ ದೇಹ ಮತ್ತೆ ವರ್ತನೆಗಳಿಗೆ ಒದಗುತ್ತದೆ ಹಾಗೆಯೇ ಆಗಷ್ಟೇ ಕುಸುಮಿಸುವ ಹದಿಹರೆಯಕ್ಕು ಸಹ ಅಲ್ಲಿ ನಾಜೂಕು ಕಾಣುವುದು , ಅವೆರಡರ ನಡುವಿನದ್ದು ಕ್ಲಿಷ್ಟ ಮತ್ತು ಕ್ಲಿಷೆ ಅನ್ನಿಸಿ ನಗು ಬಂತು, ಓ ಆಗಲೇ ಆರಾಯಿತು ಪಮ್ಮಿ ಬಂದುಬಿಡುತ್ತಾನೆ ಬಾಗಿಲಿಗೆ , ವಾಕಿಂಗಿಗೆ ಹೋಗುವುದು ತಪ್ಪಿಸಲಾಗದು, ನಡೆಯುವುದಕ್ಕಿಂತಲೂ ತಮಗೆಂದೇ ಮೀಸಲಾದ ಬೆಂಚಿನಲ್ಲಿ ಕುಳಿತು ವಿದ್ಯಮಾನಗಳನ್ನೆಲ್ಲ ಚರ್ಚಿಸುವುದು ತಮಗೆ ಇಷ್ಟದ ಕೆಲಸ ಅಲ್ವೇ, ಪಮ್ಮಿಯಂತೂ ಅವನ ಬದುಕಿನಲ್ಲಿ ಬಂದು ಹೋದ ಹೆಣ್ಣುಗಳ ಬಗ್ಗೆ ಈಗಲೂ ಶಾಯರಿ ಕಟ್ಟುತ್ತಾನೆ , ನಾನು ಮೌನವಾಗಿ ಎಲ್ಲ ಕೇಳಿಸಿಕೊಂಡು ನಡೆಯುತ್ತೇನೆ
ಬಾಗಿಲಿನ ಬಳಿ ಶಬ್ದವಾಯಿತು ಪಮ್ಮಿ ನಿಂತಿದ್ದಾನೆ . ನಾನಿನ್ನು ಸಾಕ್ಸ್ ಹಾಕಿಲ್ಲ , ಕಷ್ಟ ಪಟ್ಟು ಕಾಲಿಗೆ ಬಗ್ಗಲು  ಹೋದರೆ  ಸಂಧಿವಾತ ಹಿಡಿದುಕೊಂಡ ಕಾಲು ಜಪ್ಪಯ್ಯ ಅಂದರು ಹನಿ ಹಂದಲಿಲ್ಲ , ಪಮ್ಮಿ ತನ್ನ ಕೋಲನ್ನು ಒರಗಿಸಿ ಅಚ್ಯುತಾ ಅಂತ ನನ್ನ ಮಗನನ್ನು ಕರೆದ , ಅಚ್ಯುತ ಆಗಲೇ ಎದ್ದು ಜಿಮ್ಮಿಗೆ ತಯಾರಾಗುತ್ತಿದ್ದಾನೆ ಥೇಟು ನನ್ನದೇ ರೂಪ ವರ್ಷದಲ್ಲಿ ಎರಡು ತಿಂಗಳು ಇಲ್ಲಿ, ಇನ್ನುಳಿದಂತೆಲ್ಲ ಅಮೇರಿಕಾದಲ್ಲಿ , ಊರಿಗೆ ಬಂದಾಗಲೂ ಜಿಮ್ಮು ತಪ್ಪಿಸುವವನಲ್ಲ ಆವಾ, ಎಷ್ಟಂದರೂ ನನ್ನ ಮಗನಲ್ಲವೇ, ನೆನೆದು ಹೆಮ್ಮೆಯಾಯ್ತು, ಅಚ್ಯುತ ಹೊರಗೆ ಬಂದವನೇ ನೆಲದ ಮೇಲೆ ಕೂತು ಸಾಕ್ಸ್ ಹಾಕಿದ "ಅಪ್ಪಾ ಇವತ್ತು ವಾಕಿಂಗ್ ಬೇಡ ಇತ್ತು , ತುಂಬಾ ಚಳಿ ಇದೆ , ಆರು ತಿಂಗಳಾಯ್ತು ಬೈಪಾಸ್ ಮಾಡಿಸಿ ನಿಂಗಿ ವಯಸ್ಸಿಗೆ ಇದೆಲ್ಲ ಬೇಕಾ" ಅಂದ. ಅವನಿಗೆ ಉತ್ತರ ಕೊಡದೆ ಬರಿ ನಕ್ಕುಬಿಟ್ಟೆ , " ಅಪ್ಪ, ಎಷ್ಟು ಚಂದ ನಿನ್ನ ಸ್ಮೈಲ್ ಯಾವಾಗ್ಲೂ ಹೀಗೆ ಇರು, ನಿಂಗಿಷ್ಟ ಬಂದಿದ್ದೆ ಮಾಡು " ಅಂದವನೇ ತಾನು ತಯಾರಾಗತೊಡಗಿದ , ನಾನು ನಿಧಾನಕ್ಕೆ ಎದ್ದು ಪಮ್ಮಿಯೊಡನೆ ರಸ್ತೆಗಿಳಿದೆ
ಈ ರಸ್ತೆಯ ಪ್ರತಿ ಅಂಗುಲಂಗುಲವು ಗೊತ್ತು ನನಗೆ , ಎಲ್ಲಿ ಗುಂಡಿ ಇದೆ, ಯಾರ ಮನೆಯಲ್ಲಿ ನಾಯಿ ಇದೆ, ಯಾರು ಯಾರ ಮನೆಯ ಹೂ ಕೀಳುತ್ತಾರೆ ಎಲ್ಲ ಗೊತ್ತು, ವಾಕಿಂಗಿನಲ್ಲಿ ನನ್ನದೇ ಎಪ್ಪತ್ತೈದು ಎಂಭತ್ತರ ಗುಂಪಿದೆ, ನಾವೆಲ್ಲಾ ಇದೆ ರಸ್ತೆಯಲ್ಲೇ ಆದಿ ಓದಿ ಕೀಟಲೆ ಮಾಡಿಕೊಂಡು ಬೆಳೆದವರು, ಎಲ್ಲೆಲ್ಲೋ ಕೆಲಸ ಮಾಡಿಯೂ ಕೊನೆಯ ಸಂಧ್ಯೆಗೆ ಎಲ್ಲ ಅವರವರ ಮನೆಗಳಲ್ಲಿ ನೆಲೆಸಿದವರು. ನಮಗೆ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಬಹಳ ವಿಷಯಗಳು ಗೊತ್ತು, ಮುಚ್ಚಿಡುವಂಥ ವಿಷಯಗಳೇ ಇರಲಿಲ್ಲ, ನಿಧಾನವಾಗಿ ಪಾರ್ಕ್ ಪ್ರವೇಶಿದೆವು, ನಮಗಾಗೇ ಅಂತ ಕಾದಿರಿಸಿದ್ದ ಆ ಬೆಂಚಿನಲ್ಲಿ ಇವತ್ತು ಅವಳೊಬ್ಬಳೆ ಕುಳಿತಿದ್ದಳು ಬೇರೆ ಎಲ್ಲ ವಾಕಿಂಗ್ ಮಾಡುತ್ತಿರಬೇಕು , ನಾನು ಹೋಗಿ ಕುಳಿತೆ, ಪಮ್ಮಿಯೂ ಗುಡ್ ಮಾರ್ನಿಂಗ್ ಅಂದ , ಅವಳು ಅಚ್ಚ ಕನ್ನಡದಲ್ಲಿ ಶುಭೋದಯ ಅಂದು ಮುಗುಳ್ನಕ್ಕಳು, ಒಂದು ಮುವ್ವತ್ತು ಮುವ್ವತ್ತೈದರ ಹೆಣ್ಣು, ಸದಾ ನಮ್ಮಂಥ ಚಿರಯುವಕರ ಸಂಗದಲ್ಲಿ ಸತ್ಸಂಗ ಮಾಡುತ್ತಾ ಕಾಲ ಕಳೆವಳು, ತೀರಾ ಮಾಡರ್ನ್ ಕಾಣುವ ಆದರೆ ಅದಕ್ಕೆ ತದ್ವಿರುದ್ಧವಾಗಿ ಅಧ್ಯಾತ್ಮ ಸಾಹಿತ್ಯದಲ್ಲಿ ನಿರರ್ಗಳ ಮಾತಾಡುವ, ಅತಿಯಾಗಿ ಎಲ್ಲರನ್ನು ಪ್ರೀತಿಸುವ, ಒಬ್ಬರು ಬರದಿದ್ದರೂ ವಿಚಾರಿಸುವ, ಈಕೆ ಪರಿಚಯ ಆದದ್ದು ನಮ್ಮಲ್ಲೆಲ್ಲ ಖುಷಿ ತಂದಿದೆ. ಬೇರೆಯವರೆಲ್ಲ ಆಕೆಯನ್ನು ಏನೋ ತಪ್ಪು ಮಾಡಿದವಳೆಂಬಂತೆ ನಮ್ಮೊಡನೆ ಇರುವಾಗ ನೋಡುತ್ತಿದ್ದರೆ, ಈಕೆ ಮಾತ್ರ ಎಲ್ಲರೊಡನೆ ಕೈ ಹಿಡಿದು  ಪರಿಯಿಂದ ಒಂದಪ್ಪುಗೆ ಕೊಟ್ಟು ನಂತರ ಮಾತಿಗಿಳಿಯುತ್ತಿದ್ದಳು, ಅವ್ಳಿದ್ದುದರಿಂದಲೇ ನನ್ನ ವಾಕಿಂಗು ಸಾಂಗ ಅಂತ ಅನ್ನಿಸೋಕೆ ಶುರುವಾದದ್ದು.
ಇವತ್ತು ಮಾತಿನೊಡನೆ ಗರುಡ ಪುರಾಣ ಬಂತು ಆಕೆ ಅದೆಲ್ಲ ಕಲ್ಪನೆಗಳು ಇತಿಹಾಸದಲ್ಲಿ ಸೃಷ್ಟಿಯಾದ ಸ್ವಾರಸ್ಯ ವಿವರಿಸುತ್ತಾ, ಯಾವುದೋ ಹಂತದಲ್ಲಿ ಕೈ ಹಿಡಿದಳು, ಆ ಆತ್ಮೀಯತೆ ಅದು ನನಗೋಸ್ಕರ ಮಾತ್ರ ಎನ್ನುವ ಅವಳ ವರ್ತನೆ ನನಗೆ ಬಹುಶಃ ಖುಷಿ ಕೊಡುತ್ತಿತ್ತು, ಗಂಟೆಗಳು ಸರಿದದ್ದೇ ಗೊತ್ತಾಗಲಿಲ್ಲ, ವಾಪಸ್ಸು ಮನೆಗೆ ಬಂಡ ಮೇಲು ದಿನಾಲು ಆಕೆ ಕಾಡುತ್ತಿದ್ದಳು, ಚಿಕ್ಕ ಮಗಳ  ವಯಸ್ಸಿನ ಹುಡುಗಿ, ಬಹುಶಃ ನನಗೆ ಹುಟ್ಟಿರುವುದು ಅಕ್ಕರಾಸ್ಥೆಯ ಅನ್ನುವುದರ ಬಗ್ಗೆ ನಾನು ತುಂಬಾ ಸಾರಿ ಯೋಚಿಸಿದ್ದಿದೆ ಅದಲ್ಲ, ಯಾವುದೋ ನೆಮ್ಮದಿ ಅವಳ ಮಾತು ಕತೆಗಳಲ್ಲಿ , ಅವಳ ಹಾವ ಭಾವ ಎಲ್ಲ ನನಗಾಗೇ ಅನ್ನಿಸಲು ಶುರುವಾಗಿತ್ತು, ಬಹುಶಃ ಎಂಬತ್ತರ ಆಸುಪಾಸಿಗೆ ಈ ಮೋಹ ಹುಟ್ಟುವುದಿಲ್ಲ, ಅಷ್ಟಕ್ಕೂ ಅದು ಮೋಹವಾ ಅನ್ನುವ ಪ್ರಶ್ನೆಗೆ ಅಲ್ಲ ಅನ್ನುವುದೇ ಉತ್ತರವಾಗಿತ್ತು. ಇತ್ತೀಚಿಗೆ ಆಕೆಯ ಯೋಚನೆ ಇಂದಲೇ ಶುರುವಾಗಿ ಅವಳಿಂದಲೇ ಮುಗಿಯುತ್ತಿತ್ತು, ಒಂದು ದಿನ ಆಕೆ ಬರದಿದ್ದರೆ ಸಾಕು ನಾನು ನರಳುತ್ತಿದ್ದೆ.
ನಿತ್ಯದಂತೆ ಇವತ್ತು ತರಕಾರಿ ತಂದೆ, ಸಂಜೆಗೊಂದು  ಸೊಗಸಾದ ಹುಳಿ ಮಾಡಿ ವಿಶ್ರಮಿಸಿದೆ , ನಾಳೆ ಆಕೆಯೊಂದಿಗೆ ಮಾತಾಡಬೇಕು ಅನ್ನಿಸಿತು. ಹೆಂಡತಿಯ ಚಿತ್ರ ವನ್ನೊಮ್ಮೆ ನೋಡಿದೆ ಪ್ರಶಾಂತವಾಗಿ ದೀಪದಂತೆ ನಗುತ್ತಿದ್ದಳು ಅವಳು
ಏನೋ ಒಂಥರಾ ಸಮಾಧಾನ ಅವಳ ಹತ್ತಿರ ಎಲ್ಲ ಹೇಳಿದರೆ, ದೀಪದ ಬೆಳಕಲ್ಲೇ ಹೂ ಅಂದಂತಾಯಿತು. ಒಂದೇಆರದು ಪೇಜು ಓಡುವಷ್ಟರಲ್ಲಿ ಗಾಢವಾದ ನಿದ್ದೆ.
ಮತ್ತೆ ಎಚ್ಚರಾದಾಗ ಯಾವತ್ತಿನಂತೆ ಅಲಾರಾಂ ಸಡ್ಡು ಕೇಳಿಸಲಿಲ್ಲ, ನಾನು ಬಹುಶಃ ಸರಿಯಾದ ಸಮಯಕ್ಕಿಂತ ಮುಂಚೆ ಎದ್ದಿದ್ದೇನೆ ಅನ್ನಿಸಿತು, ಸುತ್ತ ನೋಡಿದೆ ಮಗನ ಕೊಣೆ ಯಲ್ಲಿ ಸಣ್ಣ ದೀಪವಿತ್ತು, ಸದ್ದು  ಮಾಡದಂತೆ ಎದ್ದು ಹಾಲು ಕಾಯಿಸಿದೆ,ಹಲ್ಲು ತಿಕ್ಕಿ ಪೈಜಾಮ ಬದಲಿಸಿ ಸಾಕ್ಸ್ ಹಾಕಲಾರಂಭಿಸಿದೆ...ಆಶ್ಚರ್ಯ , ಸಲೀಸಾಗಿ ಒಂದೇ ನಿಮಿಷದಲ್ಲಿ ಹಾಕಿಬಿಟ್ಟೆ, ಎದ್ದುನಿಂತೆ ಇದ್ದಕ್ಕಿದ್ದಂತೆ ಯೌವನ ಉಕ್ಕಿಬಂದ  ಹಗುರ ಭಾವ , ಬೆನ್ನಿನ ಕೊಲೆಲ್ಲ ಲ್ಲ ನೆಟ್ಟಗಾದಂತೆನ್ನಿಸಿತು
ಮೆಟ್ಟಿಲಿಳಿವುದು ಕಷ್ಟವಾಗಲಿಲ್ಲ, ಇವತ್ತು ಅವಳ ಹತ್ತಿರ ಮಾತಾಡಬೇಕಾದ ವಿಷಯ ನೆನೆದು ಖುಷಿಯಾಗಿದ್ದೆ, ಇವತ್ತು ಪಮ್ಮಿ ಬದಲಿಗೆ ಬೇರೆ ಯಾರೋ ಗೇಟಿನ ಬಳಿ ಇರುವಂತೆನಿಸಿತು. ಅರೆ! ಶ್ರೀಕಂಠ ಅಲ್ವೇ, ಆಶ್ಚರ್ಯವಾದರೂ ಮಾತಾಡಿಸಿದೆ ಏನೋ ಅಂತೂ ಇವತ್ತಿಂದ ನೀನು ನಂಜೊತೆ ವಾಕಿಂಗ್ ಮಾಡೋ ಹಾಗಾಯ್ತು ಅಂತ ನಕ್ಕ, ನನ್ನ ಚಡ್ಡಿ ದೋಸ್ತ ಅವ , ಒಟ್ಟಿಗೆ ನಡೆದೆವು ಅವನಿಗೆ ಇವಳ ವಿಷಯವೆಲ್ಲ ಹೇಳಿದೆ, ಅದಕ್ಕವ ವಿಚಿತ್ರವಾಗಿ ನಕ್ಕು ನನ್ನ ಕಡೆ ನೋಡಿದ, " ನೀನೊಂದು, ಅವಳಿಗೆ ಇನ್ನು  ಮೋಹ, ಸುಮ್ಮನೆ ಬಾ, ಕೂರೋಣ , ಅಂತ ನನ್ನ ಕರೆದುಕೊಂಡು ಹೋದ, ನನಗೆ ಏನೋ ತಾಳ ತಪ್ಪಿದಂತೆನಿಸಿತು, ಅವಳು  ಅಲ್ಲೇ ಕೂತಿದ್ದಳು  ಆ ಕಣ್ಣಿನಲ್ಲಿ ನಿರೀಕ್ಷೆ ಇತ್ತು , ಅದು ನನ್ನದೇ ಆದರೂ ಅವಳು ಎದುರು ಕೂಟ ನನ್ನ ನೋಡುತ್ತಿಲ್ಲ ಅಂತ ಗೊತ್ತಾಯಿತು , ಸಾಜು ಮೋಹನ ಇವರೆಲ್ಲರೂ ಕಂಡರೂ, ಅದೇ ಪಾರ್ಕಿನಲ್ಲಿ ಸಲೀಸಾಗಿ ಆನಂದವಾಗಿ ವಾಕ್ ಮಾಡುತ್ತಿದ್ದರು, ಅವರೆಲ್ಲರ ಮೈಯಲ್ಲೂ ನನ್ನಂಥದ್ದೇ ಕಸುವಿತ್ತು, ಹೊಸಾ ಉತ್ಸಾಹವಿತ್ತು. ಇದ್ದಕ್ಕಿದ್ದಂತೆ ನೆನಪಾಗಿದ್ದು, ಹೌದು, ಇವರೆಲ್ಲರ ದೇಹಕ್ಕೆ ಬೆಂಕಿ ಇಟ್ಟದ್ದನ್ನ ನಾನೇ ನೋಡಿದ್ದೇ..ಹಾಗಾದರೆ ನಾನು ನಾನು ಬದುಕಿಲ್ಲವಾ ..ಅಂತನ್ನಿಸಿತು! ಅಸಾವಿನ ಯಾವ ಕುರುಹು ಕಾಣ ಲಿಲ್ಲ ನನಗೆ...ನಾನು ಯಾವತ್ತಿನಂತೆಯೇ ಇದ್ದೇನೆ , ಮತ್ಯಾಕೆ ಈ ಗೊಂದಲ ಅನ್ನಿಸಿತು.ಅವಳ ಕಡೆ ನೋಡಿದೆ  ಆ ಕಣ್ಣುಗಳಲ್ಲಿ ಶೂನ್ಯವೊಂದು ಕಾಣುತ್ತಿತ್ತು ...

Friday, November 10, 2017

ನಾನು ನನ್ನಂತೆ

ಯಾರೋ ಹೇಳಿದ್ರು,
ನೋಡೂ ನಿನ್ನ ಕಣ್ಣು ಚಂದ ಇಲ್ಲ
ಇನ್ಯಾರೋ ಕೂಗಿದ್ರು
ಓ, ಅದೇ ಆ ಬಣ್ಣ ನಿನಗೆ ಚಂದ ಕಾಣೋದಿಲ್ಲ
ಕೂದಲು ಹಾರಿಬಿಡಬೇಡ
ಇನ್ನೊಂದು ದನಿ ನನಗೆ ನಿನ್ನ  ಯಾವ ವಿಷಯ ಕೂಡ ಇಷ್ಟವಾಗೋದಿಲ್ಲ
ನಿನ್ನ ಕೂದಲು ಯಾಕೆ ಹೀಗೆ ಗುಂಗುರು
ನಿನ್ನ ತುಟಿ ಯಾಕೆ ಸಣ್ಣ
ನೀನೇಕೆ ತೆಳ್ಳಗಿಲ್ಲ
ನನ್ನ ದೇಹದ ಮೇಲೆ
ಮನಸಿನ ಮೇಲೆ ನಡೆಸಿಧ
ಅದೆಷ್ಟೋ ಧಾಳಿಗಳ ನಡುವೆ
ನಾನು ನಾನಾಗಿ ನಿಂತಿದ್ದೇನೆ
ಅವತ್ತು ನೀನು ದಬ್ಬಿ ಹೊರಹಾಕಿದ
ರಸ್ತೆಗಳಲ್ಲಿ ಅಕ್ಷರಶಃ ಪ್ರತಿ ಕ್ಷಣ ನಾನು
ಜೀವಿಸಿದ್ದೇನೆ
ವೈಯುಕ್ತಿಕ ಧಾಳಿಗಳು  ಹೇಡಿತನದ ಲಕ್ಷಣ
ಹಾಗೆಂದೇ  ಧೈರ್ಯವಾಗಿ
ವಿರೋಚಿತವಾಗಿ ಎಲ್ಲ ಎದುರಿಸಿ  ಮುಂದೆ ಸಾಗಿದ್ದೇನೆ
ನಾನು ನನ್ನಂತೆಯೇ ಇದ್ದು!😊
ಶಮ್ಮಿ

Thursday, September 14, 2017

ಬದುಕೊಂದು ಮುಗಿಯದ ಉತ್ಸವ

ಪಕ್ಕದ ಮನೆಯವಳ ನೋಂಪಿ, ಅವರಲ್ಲಿ ಅದನ್ನ ಪರಬು ಅಂತ ಕರೀತಾರಂತೆ,ಮಕ್ಕಳ ಆರೋಗ್ಯದ ಸಲುವಾಗೊಮ್ಮೆ,ಮತ್ತೆ ಅವಳ ತಾಳಿ ಭಾಗ್ಯದ ಸಲುವಾಗೊಮ್ಮೆ, ಅವಳಿಗೆ ಅದು ಅನಿವಾರ್ಯ ಕರ್ಮ(ಬಿಹಾರಿಗಳಲ್ಲಿ ವ್ರತ ಮಾಡದಿರುವುದು ಬಹಿಷ್ಕಾರಕ್ಕೆ ಅರ್ಹ ಅಪರಾಧ ಹೆಣ್ಣು ಮಕ್ಕಳಿಗೆ ಮಾತ್ರ!)ಅವಳ ಗಂಡ ಯಥಾ ಪ್ರಕಾರ ಬೆಳಗ್ಗೆ ೧೨ ಗಂಟೆಗೆ ಎದ್ದು ಜೋರಾಗಿ ಗೋವಿಂದ ಗೋವಿಂದ ಎಂದು ಪೂಜೆ ಮಾಡಿ ಹೋದರೆ ಬರುವುದು ಮಧ್ಯ ರಾತ್ರಿ ಮೂರುಗಂಟೆಗೆ ಫುಲ್ಲಿ ಟೈಟಗಿ....ಇಂತಿಪ್ಪ ಗಂಡನ ಹೆಂಡತಿ ಇಡೀ ದಿನ ತೊಟ್ಟು ನೀರು ಕುಡಿಯದೆ ಇರುವ ಎರಡು ಸೈತಾನನಂತ ಮಕ್ಕಳನ್ನು ಸಂಭಾಳಿಸಿ ಸುಸ್ತು ಬಿದ್ದು ಹೋದಳು..ತಾಳಲಾರದೆ ನಾನು ಮಕ್ಕಳಿಗಾದರೂ ಉಣ್ಣಲು ಮಾಡಿಕೊಡಲೇ ಅಂತ ಕೇಳಿದೆ..ಅಷ್ಟು ಕೇಳಿದ್ದೆ ತಡ ಅವಳ ಮಕ್ಕಳು ಗಂಡ ಅತ್ತೆ ಮಾವ ಎಲ್ಲರ ಮೇಲಿನ ಸಿಟ್ಟು ಅವಳಿಗೆ ಉಕ್ಕಿ ಬಂತು,ಮಕ್ಕಳನ್ನು ಒಳಗೆ ಕರೆದು ಮತ್ತೊಮ್ಮೆ ಚನ್ನಾಗಿ ಚಚ್ಚಿದಳು, ನನಗೆ ಈ ಭಾಗ್ಯಕ್ಕೆ ವ್ರತಗಳನ್ನ ಮಾಡಬೇಕಾದರೂ ಯಾಕೆ ಅನ್ನಿಸಿತು...

ಜಗತ್ತು ವೇಗವಾಗಿ  ಮುಂದುವರೆದಿದೆ...ಅಷ್ಟೇ  ವೇಗದ ತಂತ್ರಜ್ಞಾನಗಳು...ಆದರೆ ಮನುಷ್ಯ? ತನ್ನ ಒಳಗಣ ವ್ಯಕ್ತಿಯಲ್ಲಿದ್ದ ಮಾನವತೆಯನ್ನ ಸಾಯಲು ಬಿಟ್ಟು ಹಣದ ಹೆಣದ ಮೇಲೆ ನಡೆದಾಡುತ್ತಿದ್ದಾನೆ...ಅವನಿಗೆ ಗೊತ್ತಿಲ್ಲದಂಥ ಉಸಿರಾಟಕ್ಕೂ ಕಷ್ಟವಾದ ಹೊಟ್ಟೆಕಿಚ್ಚಿನ ಲೋಕದಲ್ಲಿ ಬದುಕುತ್ತಿದ್ದಾನೆ, 

ಏನೇನೋ ನಡೆದಿಹುದು ವಿಜ್ಞಾನ ಸಂಧಾನ

ಮಾನುಷ್ಯ ಭಾಂಡವ್ಯವೊಂದು ಮುರಿದಿಹುದು

ತಾನೊಡರ್ಚಿದಹೊನ್ನ ರಸವೇ ನರನ ಕೊರಳ್ಗೆ

ನೇಣಾಗಿಹುದು ನೋಡು ಮರುಳ ಮುನಿಯ!!

ಹಣವೊಂದೇ ಬದುಕಲ್ಲ ಹಾಗಂತ ಅದು ಅನಿವಾರ್ಯ... ಕಾಂಚನಮೂಲ ಜಗತ್ತು ಅಂತ ಅವತ್ತು ಚಾಣಕ್ಯ ಹೇಳಿದ ನೀತಿ ಇವತ್ತಿಗೂ ಸರ್ಮಸಮ್ಮತವೇ..ಹಾಗಾದರೆ ನೆಮ್ಮದಿ ಎಲ್ಲಿದೆ? ಸಲ್ಪ ಇದ್ದವನಿಗೆ ತನಗಿಂತ ಜಾಸ್ತಿ ಇದ್ದವನ ಮೇಲೆ ಕರುಬು, ಜಾಸ್ತಿ ಇದ್ದವನಿಗೆ ಇನ್ನೂ ಜಾಸ್ತಿ ಇದ್ದವನ ಮೇಲೆ ಉರಿ, ಅವನಂತೆ ಇವನಾಗಲು ಇವನಂತೆ ಅವನಾಗಲು ಹಾರಾಟ ನಿಲ್ಲದ ಹೋರಾಟ, ಇದು ಹಣಕ್ಕಷ್ಟೆ ಅಲ್ಲ, ಓದಿಕೊಂಡ ಸಜ್ಜನರಲ್ಲೂ ಬುದ್ದಿಮತ್ತೆ ಪ್ರದರ್ಶನ ನಿಲ್ಲದ ಕಾಲೆಳೆಯುವ ಆಟ,

ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು

ಇವನ ಕಣ್ಗಿವನಿರವು ನೋಟಗಳು ಬೆಪ್ಪು

ಅವನವನಿಗವನವನ ಹುಚ್ಚಾಟದಲಿ ನಚ್ಚು

ಶಿವನಿಗಿದೆಲ್ಲವು ಮೆಚ್ಚು ಮರುಳ ಮುನಿಯ!!

ನಾವು ಇನ್ನೊಬ್ಬರಿಗೆ ಸಲಹೆ ನೀಡೋದರಲ್ಲಿ ಅವರನ್ನ ಇದಮಿತ್ಥಂ ಅಂತ ಅಳೆಯೋದರಲ್ಲಿ ಬಹಳ ನಿಪುಣರು, ಇದು ಅನಾದಿಕಾಲದಿಂದ ನಡಕೊಂಡು ಬಂದದ್ದು, ಅನವಶ್ಯಕ ಇನ್ನೊಬ್ಬರ ವಿಷ್ಯದಲ್ಲಿ ಮೂಗು ತೂರಿಸೋದು ಬೇಕಾದವರನ್ನ ಹೊಗಳಿ ಬೇಡದ ಜನಗಳನ್ನ ದಬಾರ್ ಅಂತ ಕೆಳಗೆ ಬೀಳಿಸೋದು ಎಲ್ಲಾ ಮೈಂಡ್ ಗೇಮ್...ಕಾರ್ಪೋರೇಟ್ ಜಗತ್ತು ಇMತಹ ಆಟಗಳನ್ನ ಆಡುತ್ತಲೇ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ,  ಅದು ನಮ್ಮ ಸರ್ವ ಮದಗಳಿಗೂ ಪ್ರೋತ್ಸಾಹ ನೀಡಿ ನಮ್ಮನ್ನ ಪಗಡೆಯಾಗಿ ನಡೆಸಿ ಮಾನವತೆಯನ್ನ ಮರೆಸುತ್ತದೆ...ದೊಡ್ಡದಾಗಿ ನಡೆಸುವ ಚಾರಿಟಿ ಶೋಗಳು ಚಂದಾ ಸಂಗ್ರಹಿಸುವ ಅಭಿಯಾನಗಳು ಒಂಚೂರಾದರೂ ಅಸಮಾನತೆ ಹೊಡೆದೋಡಿಸುತ್ತವೆಯಾ?? ತಿಳಿಯದು....

ಇಂಥ ಪರಿಸ್ಥಿತಿಯಲ್ಲಿ ಬಸವಣ್ಣನ ವಚನದ ಮನನ ಎಷ್ಟು ಪ್ರಸ್ತುತ...ನಿಮ್ಮ ನಿಮ್ಮ ಮಾನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಜಗದ ಡೊಂಕು ತಿದ್ದಲು ನಾವೇನು ಅಲ್ಲ,

ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।

ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।

ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- ।

ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ।।

ಹೌದು..ಮನಸ್ಸು ಶಾಂತವಾಗಿಟ್ಟುಕೊಳ್ಳಬೇಕು..ಅದಕ್ಕೆ ಯಾವುದೋ ಸಾವಿರಾರು ರೂಪಾಯಿಗಳ ಕೋರ್ಸಿಗೆ ಸೇರಬೇಕೆ..ವಿಷಾದವೆಂದರೆ ಪ್ರತಿ ಮನುಷ್ಯನಿಗೂ ಅವಶ್ಯಕವಾದ ಬದುಕುವ ಕ್ರಿಯೆಗಳನ್ನು ಮಾರಾಟದ ಸರಕು ಮಾಡಿ ಕೇವಲ ದುಡ್ಡಿದ್ದವರಾಷ್ಟೆ ಅನುಭವಿಸುವ ಸಂಪತ್ತಾಗಿ ಕುಡಿಟ್ಟಿರುವುದು, ಹಾಗಿದ್ದರೂ ಹಿಂದಿನ ಜೀವಗಳು ನಮಗಿಂತ ಚನ್ನಾಗಿ ಬದುಕಿರಲಿಲ್ಲವೇ, ಅಲ್ಲೂ ಕೆಟ್ಟದ್ದಿತ್ತು, ಒಳ್ಳೆಯದೂ...ಅದೇ...ಹಾಗೆ ಹೇಗೆ ಬದುಕಿದರವರು??ಹೇಳಿದಷ್ಟು ಸುಲಭಕ್ಕೆ ನಮ್ಮ ಆಸೆಗಳನ್ನ ನಿಯಂತ್ರಿಸಲಾದೀತೇ? ಇಲ್ಲ.. ಆದರೆ ಪ್ರಯತ್ನಿಸಬಹುದು....

ಅದು ತುಂಬಾ ಸುಲಭ..ಕಳಚಿಕೊಳ್ಳುವುದು ಅಸಾಧ್ಯವೇನಲ್ಲ..

ಹಿಂದಿನವರು ಈ ತರದ ವೈರುಧ್ಯಗಳಿಗೆ ಹೊರತಾಗಿರಲಿಲ್ಲ, ಕೆಲವು ಆತ್ಮಗಳ ಬೆಳಕು(ನಮ್ಬುವದಾದರೆ) ಜೋರಾಗಿ ಪ್ರಕಾಶಿಸಿತು, ಕೆಲವು ತಣ್ಣಗೆ ಹಣತೆಯಷ್ಟೆ ಬೆಳಕು ಚೆಲ್ಲಿ ಹತ್ತಿರ ಬಂದವರ ಬಾಳನ್ನುದ್ಧರಿಸಿ ನಂದಿ ಹೋಯಿತು...ಆ ಸ್ಥಿತಿ ಇಂದಿಗೂ ಇದೆ..ಕಾಲ ಬದಲಾಗಿದೆ ಎನ್ನುವ ಮಾತೆ ತಪ್ಪು, ಮತ್ತೆ ಮಾಡಿದುದನ್ನೇ ಮಾಡುತ್ತಾ ಆಡಿದುದನ್ನೇ ಆಡುತ್ತಾ ತೊಟ್ಟ ಬಟ್ಟೆಗಳೆಷ್ಟೋ, ಆದರೂ ಅಹಂಕಾರ ಅಳಿಯದು, ಅಂಟು ತೊಳೆಯದು.

ಅಂಟುವುದು ಮನಸ್ಸಿನ ಸಹಜ ಕ್ರಿಯೆ,ಅಂಟಿಕೊಂಡು ಕಳಚಲಾರದೆ ಒದ್ದಾಡಿ ನರಳುವುದು ಕೂಡ ಸಹಜ,ಆದರೆ ಇದು ಕೊಡುವ ನೋವು ತನ್ನನ್ನು ಸುತ್ತಲಿನವರನ್ನು ಭಾದಿಸಬಾರದಷ್ಟೆ,ಅಂಟು ಬಿಡಿಸುವುದು ಸುಲಭಲ್ಲ, ಅದು ಸಂಭಂಧದ ಅಂಟು,ಅಥವಾ ಆಸ್ತಿ ಹಣ ವೈಭವ ಪ್ರಸಿದ್ಧಿ ಯಾವುದಾಗಿರಬಹುದು...ಅದು ಅಂಟಿಕೊಳ್ಳುವ ಮುನ್ನವೇ ಶೋಧಕ್ಕೆ ಒಳಪಡಿಸಿಕೊಳ್ಳುವ ಕ್ರಿಯೆ, ಹಾಗನ್ದಾಕ್ಶಣಕ್ಕೆ, ನಮ್ಮ ಮನಸ್ಸಿನ ಸುತ್ತ ನಿಗ್ರಹದ ಕೋಟೆ ಕಟ್ಟಬೇಕೆ? ಬೇಡ..ಬಂದದ್ದನ್ನ ಅನುಭವಿಸೋದು,ಬಾರದ್ದನ್ನ ಅದರ ಪಾಡಿಗೆ ಬಿಡೋದು, ಬಯಸದೆ ಇರೋದು,ಇವತ್ತಿನದನ್ನ ಇವತ್ತೇ ಅಳಿಸಿ ಹಾಕೋದು,ಹತ್ತರಲ್ಲೊಬ್ಬರಂತೆ ಎಲೆಮರೆಯ ಕಾಯಾಗಿ ಕೈಲಾದಷ್ಟು ಸಹಾಯ ಮಾಡಿ ಹೊಟ್ಟೆ ತುಂಬಾ ಉಂಡು ಜೊತೆಯಲ್ಲಿದ್ದವರಿಗೂ ತಿನ್ನಿಸಿ,ನಕ್ಕು ಹರಟಿ,ಯಾರಿಗೂ ನೋಯಿಸದೆ ನಗುತ್ತಾ ಬದುಕೋದು...ಆಗಲ್ವೆ? ಖಂಡಿತಾ ಆಗುತ್ತೆ ಅದಕ್ಕೆ ಬೇಕಾದ್ದು ಗಾಳಿಯಷ್ಟು ತೇಲುವ ಹಗುರ ಹೃದಯ,ಅಲ್ಲಿ ಕ್ಷಮೆ ಪ್ರೀತಿ ಬಿಟ್ಟರೆ ಇನ್ನೇನು ಸಿಗಬಾರದು, ಮದ ಮಾತ್ಸರ್ಯಗಳ ಬದಲು ದೊಡ್ಡ ಸೊನ್ನೆ, ಖಾಲಿ ಖಾಲಿ ಜಾಗ, ಯಾರು ಬರಬಹುದು ಯಾರು ಹೋಗಬಹುದು,ಯಾವ ಜಂಜಡಗಳಿಲ್ಲ, ನಮ್ಮನ್ನ ನಾವು ಅರ್ಥ ಮಾಡಿಸುವುದು ಸಲ್ಲದು,ಅರ್ಥ ಮಾಡಿಕೊಳ್ಳದೆ ಹೊರ ಹೋದವರನ್ನ ಕಾಡಿಸುವುದು ಸಲ್ಲದು...

ಯೋಚಿಸಿ..ನಾವೊಂದು ದೊಡ್ಡ ಕಾಡು ಅಥವಾ ಬಯಲು ಅಥವಾ ಮರಳುಗಾಡು, ಅಲ್ಲಿರುವ ಯಾವ ಪಕ್ಷಿ ಪ್ರಾಣಿ ಚರ ಚಿರಗಳ ಮೇಲೆ ನಮ್ಮ ಹಕ್ಕಿದೆಯೇ? ಇಲ್ಲ, ನಾವು ನಿಮಿತ್ತಕ್ಕೆ ಇದ್ದು ಬಿಡಬೇಕು, ನೋವೋ ಸಾವೊ ಕಣ್ಣಿರೋ ಮಳೆಹನಿಯೋ ಎಲ್ಲಕ್ಕೂ ತೆರೆದುಕೊಂಡು...ಎಲ್ಲ ಋತುಗಳನ್ನ ಭಾವದ ವಿಷವೋ ಸಾಂತ್ವನದ ಸಿಹಿಯೋ ಯಾವುದು ಅಲ್ಲದಂತೆ...ಸಾಧ್ಯವೇ..ಯೋಚಿಸಿ...ಖಂಡಿತಾ ಸಾಧ್ಯವಿದೆ,...

ಹೀಗೊಂದು ಕ್ರಿಯೆ ನಿರಂತರ ನಡೆದಲ್ಲಿ ಬುದ್ಧಿಪೂರ್ವಕ, ಕೆಲದಿನಗಳ ನಂತರ ನಾವೇ ಹಗುರಾಗುತ್ತೇವೆ...ಅದೊಂದು ಮನಸ್ಸು ಭಾವಗಳು ಇಲ್ಲದಂತೆ ಬಾಸವಾಗುತ್ತೇವೆ,ಒಳಿತು ಕೆಡಕುಗಳು ಗೋಚರಿಸುತ್ತವೆ,ಹಾಗೆ ಮನಸ್ಸು ಹೊಸಾ ಸವಾಲಿಗು ಸದಾ ಎಚ್ಚರಿರುತ್ತದೆ,ಸಾಧನೆಗಿಂತ ಕೀರ್ತಿಗಿಂತ ಸವಿಯಾದ್ದು ಬೇರೇನೋ ಇದೆ ಅನ್ನೋದು ಪ್ರೀತಿಯಾಗಿ ಮಾರ್ಪಡುತ್ತೆ,ಆಗ ಅಂಟು ಕಷ್ಟ ಆಗುತ್ತದೆ...ಮತ್ತು ಹೊರಜಗತ್ತಿನ ತೋರ್ಪಡೆಗಾಗಿ  ಮಾಡೋ ಎಲ್ಲ ಕ್ರಿಯೆಗಳು ವ್ರತಗಳು ಪೂಜೆಗಳು ಅವಿವೇಕ ಅನ್ನಿಸುತ್ತದೆ...ಯಾರನ್ನೋ ದ್ವೇಷಿಸೋದು,ಅವಮಾನಿಸೋದು, ಅಥವಾ ಯಾರೋ ಗೊತ್ತಿಲ್ಲದವರು ಅವಮಾನಿಸಿದ್ದಕ್ಕೆ ಕೊರಗೋದು ಯಾವುದು ಇರಲಾರದು....ಬದುಕು ಉತ್ಸವವಾಗುತ್ತೆ....ಅಲ್ವೇ?