Saturday, June 1, 2013

ಧಿಯೋಯೋನ: ಪ್ರಚೋದಯಾತ್....

 ೧

ಕಾಫಿಗಿಟ್ಟ ಹಾಲು ಉಕ್ಕಿದೆ...ನೊರೆ ನೊರೆಯಾಗಿ..ಗಂಡನ ಬೈಗುಳಕ್ಕೆ ತಡೆಯೆ ಇಲ್ಲ..ಆದರೆ ಇವಳಿಗೋ ತಲೆಯ ತುಂಬಾ ಅದೆ ಗುಂಗು...ಆಕೆಯ ನೋಟದ ತಾತ್ಸಾರ..ಕೊಂಕು ಮಾತುಗಳು...ನಂಬಬಹುದೇ?,"ನಿನ್ನೆ ಮಧ್ಯಾಹ್ನ ಅದ್ಯಾರೋ ಹೆಂಗಸು ನಿಮ್ಮನೆಗೆ ಬಂದಿದ್ರು..ನಿಮ್ಮ ತಂಗೀನಾ?"ಶಾಂತ ನದಿಯಂತಿದ್ದ ಬಾಳಿಗ್ಯಾವ ಕೊಳಕು ತೊರೆ ಸೇರಿತು?ಆಕೆ ಹೇಳಿದ್ದೆಲ್ಲ ನಿಜವೇ?ತನ್ನವ ಎಂದೂ ಆ ಸ್ವಭಾವದವನಲ್ಲ..ತಾನ್ಯಾಕೆ ನಂಬಲಿ? ಮನಸ್ಸು ಸಂತೈಸಿತು...ಬಾಯ್ತುಂಬಾ ಬೈದು ಸುಸ್ತಾಗಿದ್ದ ಗಂಡ ಈಗ ಈಕೆಯ ಬಳಿ ಬಂದ..
"ಕಾಫೀ ಕೊಡಲ್ವಾ?"
 "ತಗೊಳ್ಳಿ"
"ಯಾಕೇ?,ಬೈದಿದ್ದಕ್ಕೆ ಬೇಜಾರಾಯ್ತಾ?ಮತ್ತೆ ಯಾವಗ್ಲು ಹಾಲು ಕಾಯೋಕೆ ಇಟ್ಟು ನಿನ್ ಪ್ರಪಂಚದಲ್ಲಿ ಮುಳುಗಿ ಹೋಗಿರ್ತಿ,ನಾನ್ ಬೈದ್ರು ಪ್ರಯೋಜನ ಇಲ್ಲ"
ಇವನೋ ಎಂದಿನಂತೆ ಮಾತಾಡುತ್ತಲೇ ಇದ್ದಾನೆ..
"ನಿಂಗೊಂದು ವಿಶ್ಯ ಕೇಳ್ಬೇಕಿತ್ತು"
ಕಿವಿ ಚುರುಕಾಯ್ತು..ಏನಿರಬಹುದು? ಹೊರಗೆ ಹೋಗುವ ಹಂಬಲವೇ?ತನ್ನ ಜೊತೆಗಂತು ಇರಲಿಕ್ಕಿಲ್ಲ..
"ಆ ಪಕ್ಕದ್ಮನೆ ಹೆಂಗಸು ಇದ್ದಾಳಲ್ಲಾ,"
"ಹೂ ಇದ್ದಾಳೆ..ಇಲ್ಲದೇ ಏನು? "
’ಅದೇ ಕಣೆ,ಅವಳು ಇವತ್ತು ಹಾಲು ತರೋಕೆ ಅಂತ ಬೆಳಗ್ಗೆ ಹೋಗ್ತಾ ಇದ್ನಲ್ಲ,ಆಗ"
"ಹೂ ಹೇಳಿ ಏನಾಯ್ತು? ಅದಕ್ಕೆ ಇಷ್ಟುದ್ದ ಪೀಠಿಕೆ ಬೇಕಾ?"
"ಏನಿಲ್ಲ..ನಿನ್ನೆ ನೀನು ಮಧ್ಯಾಹ್ನ ಆಫೀಸಿನಿಂದ ಅದ್ಯಾರೋ ಜೊತೆ ಡ್ರಾಪ್ ತಗೊಂಡೆ ಅಂತೆ..ಆ ಮನುಷ್ಯ ಮನೆಗೂ ಬಂದಿದ್ದ ಅಂತೆ..ನನ್ನ ಹತ್ತಿರ ಅವರ್ಯಾರು ನಿನ್ನೆ ಬಂದಿದ್ದು ನಿಮ್ಮ ಸಂಬಂಧಿಕರಾ? ಅಂತ ಕೇಳಿದ್ಲುಕಣೇ"
"ನೀವು ನನ್ನ ಸಂಭಂಧಿಕ ಅಂತ ಹೇಳ್ಬೇಕಾಗಿತ್ತು"
"ಅಂದ್ರೆ,ಆಕೆ ಹೇಳಿದ್ದು ನಿಜಾ ಅಂತಾಯ್ತು"
"ಮತ್ತಿನೇನ್ರಿ, ನಿನ್ನೆ ನಾನು ಬಂದಿದ್ದೇ ೬ ಗಂಟೆಗೆ,ನಿಮ್ಗೆ ಯಾರೊ ಹೇಳಿದ್ದು ನಿಜಾ ಅನಿಸುತ್ತೆ..ನನ್ನ ಮೇಲೆ ಮಾತ್ರ ನಂಬ್ಕೆ ಇಲ್ಲ ನೋಡಿ"
ಇವಳಿಗೆ ಆಶ್ಚರ್ಯ..
ಮರುದಿನ...ಅವಳು ಇವಳು ಎದುರಾದರು...ಇವಳ ಮುಖದಲ್ಲಿ ಮುಗುಳ್ನಗೆ..
"ಎನ್ರೀ ಭಾಳ ಖುಷೀಲಿದ್ದೀರಿ??ಮತ್ತೆ ನಿನ್ನೆ ಅವರ್ಯಾರು ಅಂತ ಕೇಳಿದ್ರಾ?"
"ಕೇಳಿದೆ.. ಅದು ನೀವೇ ಅಂತೆ"
"ಹಾ!! ಏನಂದ್ರಿ?/"
ಅಷ್ಟರಲ್ಲಿ ಆಕೆಯ ಗಂಡ ಕೂಗುತ್ತ ಹೊರಬಂದ
"ಹಾಲು ಉಕ್ಕಿ ಹೋಯ್ತು..ಅದೇನು ಮಾಡ್ತಾ ಇದ್ದೀಯೇ??"

ಸುಂದರಿ ಚಿಟ್ಟೆ ತನ್ನ ಎಲೆ ಕೋಣೆಯ ಕಿಟಕಿ ಇಂದ ತಲೆ ಹೊರಗೆ ಹಾಕ್ತು..
ಅಹಾ..ನೀಲಿ ನೀಲಿ ಆಕಾಶ..ಇವತ್ತು ಮಳೆ ಬರೋದಿಲ್ಲ..
ಮನಸಲ್ಲೇ ಲೆಕ್ಕ ಹಾಕಿ ಪುರ್ರ್ ಅಂತ ಹೊರಗೆ ಹಾರಿತು..
ಹೂ ಹುಡುಗಿ ಮನೆಯ ದಾರೀಲಿ ಘಮ ಘಮ..
ಒಹೋ ಮಲ್ಲಿಗೆ ಅರಳಿದ್ದಾಳೆ..ಹಬ್ಬದೂಟ!!
ಹೊಟ್ಟೆಯಲ್ಲೇನೊ ಒದ್ದಂತಾಯ್ತು..
ಪುಳಕ್ಕನೆ ಕಂಡ ಎಲೆಯಡಿ ಸೇರಿತು ಸುಂದರಿ ಚಿಟ್ಟೆ..
ಬಸವನ ಹುಳ ಹರಿದಾಡ್ತಿತ್ತು..ಚಿಟ್ಟೆಗೆ ಹೇಳ್ತು"ನಾನು ಬರೋ ದಾರಿಲಿ ಮೊಟ್ಟೆ ಇಡ್ಬೆಡ್ವೆ"
ಗೆಳೆಯನನ್ನ ಕಂಡಂತಾಯ್ತು..ನಾಚಿಕೆ ಉಕ್ಕಿತು..ಮೊಟ್ಟೆ ಇತ್ತು ಮರೆಯಾಯ್ತು ಸುಂದರಿ..
ವಾರ ಕಳೆದಿತ್ತು..ಎರಡು ಸಲ ಮಳೆಯಾಗಿತ್ತೋ? ಗೊತ್ತಿಲ್ಲ..
ಸುಂದರಿಗೆ ತಾನಿಟ್ಟ ಮೊಟ್ಟೆಗಳ ನೋಡುವಾಸೆಯಾಯ್ತು..
ಎಲೆಯಡಿಯಲ್ಲಿ ಇಣುಕಿತು..ಕಾಣಿಸುತ್ತಲೇ ಇಲ್ಲ..ಭಯವಾಯ್ತು...
ಯಾವ ಹಸಿದ ಕೀಟಕ್ಕೆ ಅಹಾರವಾಯಿತೋ ನಮ್ಮ ಪ್ರೇಮ ಸಂಕೇತ?
ಕುಣಿದು ಕುಣಿದು ನೋಡಿತು..ಬೇಸರಾಗಿ ಹಾರಿತು..
ಅಲ್ಲೇ ಮರೆಯಲ್ಲಿ ವನವಾಸಕ್ಕೆ ತೆರಳಿದ್ದ ಲಾರ್ವಾ..ಅಮ್ಮನ ಕುಣಿತ ಕಂಡು ನಕ್ಕಿತು!!
"ನಾನು ಬರುವೆ..ನಾವಿಬ್ಬರೂ ಮತ್ತೆ ಸ್ವಚ್ಚಂದ ಬಾನು..ರಿಂಗಣದಾಟಕ್ಕೆ ನನ್ನ ಮುದ್ದು ಅಮ್ಮನ ಜೊತೆ ನಾನು!!
ಬೆಚ್ಚಗೆ ಕನಸುತ್ತಾ ಬರಲಿರುವ ಸುಂದರ ರೆಕ್ಕೆಗಳಿಗೆ ಬಣ್ಣ ಹಾಕತೊಡಗಿತ್ತು!!


ಕೆಳಗೆ ಬಿದ್ದಿದ್ದೇನೆ ನೋಡಬಾರದೆ? ಈ ಮಾನವರಷ್ಟು ಸ್ವಾರ್ಥಿಗಳನ್ನ ನಾ ನೋಡಲಿಲ್ಲ!!
ಆಕೆಯ ತಲೆ ಏರಿದ್ದೇ ಸ್ವರ್ಗದಷ್ಟು ಕುಶಿಯಾಗಿತ್ತು..ಸರಿಯಾಗಿ ಬಂಧಿಸಲಿಲ್ಲ,..
ಇಲ್ಲಿ ಎಲ್ಲೋ ಅವಳಿಂದ ದೂರಾದೆನಲ್ಲ..!!
ಗುಲಾಬಿಗೆ ಆಕೆಯ ಮುದ್ದು ಮೊಗದ್ದೇ ಧ್ಯಾನ..
ನಾ ಸುಂದರಿಯೋ ಆಕೆಯೋ ಎಂದು ಕನ್ನಡಿಯಲ್ಲಿ ಆಕೆಯ ಹೆರಳಿಂದ ಇಣುಕಿಣುಕಿ ನೋಡಿದ್ದೆ ಬಂತು
ಈಗ ಅವಳ ಪಾದದ ಗುರುತಿರದೆ ಈ ಮಾನವ ಕಾನನದಲ್ಲಿ ಕಳೆದು ಹೋದೆನೇ?
ಅಬ್ಬಾ??ಅದೇನು ಸದ್ದು..ತಲೆ ಎತ್ತಲು ಪ್ರಯತ್ನಿಸಿತು...ಯವೊದೋ ಆನೆಯಂತ ಪಾದ..ಇನ್ನು ತನ್ನ ಸಾವು ಖಚಿತ..
ಉಸಿರು ಬಿಗಿ ಹಿಡಿಯಿತು..ಹತ್ತಿರ ಬರುತ್ತಿರುವ ಹೆಜ್ಜೆಗಳ ಸದ್ದಿಗೆ ದಳಗಳು ಮುದುಡಿತು..ಓಓ ಇನ್ನೇನು..ಸತ್ತೇ ಬಿಟ್ಟೆ..ಪಾಪಿಗಳಾ ಯಾರಿಗೂ ನನ್ನ ಸೌಂದರ್ಯ ಬೇಡಾಯಿತೇ?? ಎದೆಯಲ್ಲಿಟ್ಟಿದ್ದ ಮುಂಜಾವಿನ ಇಬ್ಬನಿ ಕಣ್ಣೀರಾಗಿ ಸುರಿಯಿತು...
ಕಣ್ಣು ಬಿಟ್ಟಾಗ"ಅರೆ..ತನಗೇನಾಗಿಲ್ಲ"
ದನಿಯೊಂದು ಕೇಳಿತು.."ಶಮ್ಮಿ,ಅದ್ಯಾಕೇ ಬಿದ್ದ ಹೂವು ಎತ್ತಿ ಮುಡಿದೆ" ಹೆಣ್ಣು ಕಂಠ ನುಡಿಯಿತು.."ಅದು ಹೂವು..ಅದರಲ್ಲೂ ಗುಲಾಬಿ..ನೋಡು ಹೇಗೆ ಅಳ್ತಿದೆ ಅಂತ...ಅದಕ್ಕೇ!!..
ಹೆಮ್ಮೆ ಇಂದ ಗುಲಾಬಿ ತಲೆ ಎತ್ತಿತು..ಮತ್ತೆ ಕನ್ನಡಿಯಲ್ಲಿ ತನ್ನ ಕಂಡು ಹರುಶದಲ್ಲಿ  ನಾಚಿತು!!



Monday, May 13, 2013

ಒಂದೆರಡೆರಡೇ ಹನಿ...ಮುಂದಾಗುವುದು ಧಾರೆ...

ಹನಿ-೧
ತನ್ನದೇ ಬಿಂಬವ ಕಂಡು
ಕಿಟಕಿಯ ಗಾಜಿನಲ್ಲಿ
ಕುಕ್ಕುವ ಪುಟ್ಟ ಹಕ್ಕಿಯೇ
ನಿನ್ನ ಅಳಲ ಕೇಳುವ ಸಖರಿಲ್ಲ
(ತಟ್ಟೆಯಲ್ಲಿ ನೀರಿದೆ ನಾನಿತ್ತ ಕಾಳಿದೆ)
ಮಾನವರ ದುರಾಸೆಯ ಮೊತ್ತವೆಲ್ಲ
ನಿನ್ನ ಪಿಳುಗುಡುವ ಕಣ್ಣಲ್ಲಿ
ಭಯವಾಗಿ ಕಾಡುವಾಗ
ನನ್ನ ಅಸ್ತಿತ್ವ ನನಗೆ
ಬೇಕಾಗಿ ಕಾಣುವದಿಲ್ಲ!!

ಹನಿ-೨

ಬರೆದರು ಪ್ರೀತಿ ಪ್ರೇಮದ
ಮೇಲೆ ನೂರು ಸಾವಿರ ಸಾಲು
ಬರೆದರೂ ಕಥನ..ಕಥೆ..ಕವಿತೆ
ಸಾಲದಾಯಿತು ಬಾಳು
ಅರಿವುದ ಮರೆತರು,
ಪ್ರೇಮವೆಂಬುದು ಅವಿನಾಶಿ
ಸೂರ್ಯ ಚಂದ್ರರಿರುವ ತನಕ
ಅದರ ಬೆಳಕಿನಲಿ ಬದುಕುವುದು
ಜೀವರಾಶಿ..
(ಅದೂ ಪ್ರೇಮ ಅಲ್ಲವೇ?)

ಹನಿ-೩
ನಿನ್ನ ಮಾಸದ ನಗುವಿಗೆ
ಕಾರಣವೇನು ?
ಕೇಳುತ್ತಲೆ ಇದ್ದಾನೆ ಅವನು
ನಾ ಹೇಳಲಿಲ್ಲ
ನನ್ನೆದೆಯ
ದು:ಖದ ಸಾಗರದಿ
ತೇಲಿಬಿಟ್ಟಿದ್ದೇನೆ
ನಗೆಯ ಹಾಯಿದೋಣಿ
ಮನದ ತೀರದಲ್ಲಿ
ನನಗಾಗಿ
ಕಾಯುತ್ತಿರುವುದು
ಇರುಳು
ನಾ ನಗುತ್ತಲಿರುವೆ
ತೋರಿ ಚಂದ್ರನೆಡೆಗೆ ನನ್ನ ಬೆರಳು!!
(ಅಡಿಗರು ನೆನಪಾದರು!!)

ಧಾರೆ-೧

ಹೀಗೇ ಸುಮ್ಮನೆ  ನಿನ್ನ ನೆನಪಲ್ಲಿ
ಬಿಳಿಗೋಡೆಯ ಮೇಲೆ
ಬರೆಯದ ಚಿತ್ರಗಳ ಕಾಣುತಿರುವೆ

ಅಲ್ಲಿ ದೂರದಲ್ಲೆಲ್ಲೋ ಇರುವ ನಿನ್ನ
ಮನಸಿನ ಅಲೋಚನೆಗಳ
ನನ್ನ ಪದಗಳಲ್ಲಿ ಬಂಧಿಸಿಡುವುದು
ವ್ಯರ್ಥ ಪ್ರಯತ್ನ

ಬರುವೆಯೋ ಬಾರೆಯೋ?
ನಾ ನಿನಗೆ ಇಷ್ಟವಾದೇನೆ?
ನೂರುಪ್ರಶ್ನೆಗಳ ಹೊತ್ತ
ಮನಸಿನ ದ್ವಂದ್ವ ಗಾಯನ

ಉಕ್ಕಿಬರುವ ಭಾವಗಳ
ನದಿಗೆ ಕಟ್ಟಿರುವೆ
ಸಂಯಮದ ತಡೆಗೋಡೆ
ಎಂದು ಬೀಳುವುದೋ
ಎಂಬ ಆತಂಕದೆಡೆಯಲ್ಲೇ
ಸಂಭ್ರಮವೊಂದು ನುಗ್ಗಿಬರಲು
ಹವಣಿಸಿದೆ!!

ನಿನ್ನೆಡೆಗೆ ತುಡಿವ ನನ್ನ ಆಸೆಗಳ
ಬಾನಲ್ಲಿ ಬೆಳಗಿನ ರವಿಯಾಗಿ
ಕಾರ್ಗತ್ತಲ ಶಶಿಯಾಗಿ
ಒಂದಷ್ಟು ಹರುಷ ಚೆಲ್ಲು
ನೀ ಹೊತ್ತ ನಿನ್ನ
ಹೆಸರು ಸಾರ್ಥಕವಾದೀತು
(ನೀ ಭುವನ-ಚಂದ್ರನಲ್ಲವೇ?)


 ಧಾರೆ-೨

ಜೀವನ ಎಂದರಿದೇ!!
ಎಂದೆನೆ??

ಬರದ ನಾಳೆಗಳ ಬಾಗಿಲಿಗೆ
ನಿರೀಕ್ಷೆಗಳ ತೋರಣವ ಪೋಣಿಸಿ
ಇರುವ ವರ್ತಮಾನವ ಬೂದಿಗೆ
ಎಳಸುವ ಮನಸು

ಕಹಿ ಬೀಜಗಳು ಚೆಲ್ಲಿದ ನೆನಪುಗಳ
ಅಂಗಳಕ್ಕೆ ಸುರಿದ ಮರೆತ
ಮುಖಗಳ ಹೊಸಾ ಪರಿಚಯದ
ಮುಸಲಧಾರೆ

ಮೊಳಕೆಯೊಡೆವ ಸಂದಿನಲ್ಲಿ
ಕೀಟನಾಶಕಗಳ ಸುರಿದು
ಬೆಳಸುತ್ತಲೇ ಕೊಲ್ಲಲೆಳಸುವ
ವಿಕೃತಮಾನವೀಯರು

ಆದರು ಅಲ್ಲಲ್ಲಿ ಇದ್ದವರು..
ವರುಣರು!!ಅಮೃತವಾಹಿನಿಯ
ತುಂತುರಲಿ ಹರಿಸಿ ಸಂತೈಪರು
ಅಹಮಿಕೆಯ ಭೂಮಿಕೆಯಲ್ಲಿ
ವೈಶಾಲ್ಯತೆಯ ಹಸಿರ
ಸಾವಯವ ಕೃಷಿಯ ಬೆಳೆವರು!!

ಅದಕೆಂದೆ ಎಂದೆ..
ಜೀವನವ ಅರಿತೆ ಎಂದೆನೆ??
ಅರಿಯದಾದೆ ಎಂದರೂ ತಪ್ಪು..
ಅರಿತೆ ಎಂದರು ತಪ್ಪು
ಕಲಿವಿಕೆಯ ಈ ವಿದ್ಯಾಲಯದಿ
ನಾ ನಿತ್ಯ ನೂತನ ವಿದ್ಯಾರ್ಥಿ
ಅದೇ ಸರಿ,ಅದೆ ಒಪ್ಪು!!










Wednesday, April 24, 2013

ಏನೆಂದು ಹೆಸರಿಡಲಿ?

ಮನಸು ಮಾಯಾಮೃಗ...ಹಿಡಿತಕ್ಕೆ ಸಿಕ್ಕಿತೋ ಆಗಲೇ ಮತ್ತಾವುದೋ ಆಮಿಷದ ಹಿಂದೆ ಓಟ..ಮಾನಸ ಲೋಕಕ್ಕೆ ಏಕಾಗ್ರತೆ ತರುವುದು ಪ್ರೇಮ..ಅದು ಎಂಥ ಪ್ರೇಮವೂ ಆಗಿರಬಹುದು..ಒಂದೇ ವಸ್ತುವನ್ನೇ ಧೇನಿಸುವ ಸ್ಥಿತಿಗೆ ನಾನು ಪ್ರೇಮ ಅಂದದ್ದು..ಒಬ್ಬೊಬ್ಬರಿಗೆ ಒಂದೊಂದು ವಸ್ತು ವಿಷಯದ ಮೇಲೆ ಪ್ರೇಮ.. ಆದರೆ ಜಗತ್ತಿನ ಆದಿ-ಅಂತ್ಯಕ್ಕೆ ಕಾರಣ ಒಂದೇ ಪ್ರೇಮ..ಹುಟ್ಟು ಸಾವುಗಳಿಗೆ ಕಾರಣ ಒಂದೇ ಪ್ರೇಮ -ಅದು ಪ್ರಕೃತಿ -ಪುರುಷರ ಆದಿ ಅಂತ್ಯವಿಲ್ಲದ ಪ್ರೇಮ...
ಕಣ್ಣಲ್ಲಿ ಬಯಕೆಗಳ ಹೊತ್ತ ಹೆಸರಿಡದ ಹೆಣ್ಣೊಂದು ತನ್ನ ಹೆಸರಿಡದ ನಲ್ಲನಿಗೆ ಹೆಸರ ಯೋಚಿಸುವ ಪರಿ ಈ ಕವನದಲ್ಲಿ ಮೂಡಿದೆ....ಇಷ್ಟವಾದೀತೆ?(ವರ್ಷದ ಹಿಂದೆ ಬರೆದದ್ದು)

ಗಾಢಾಂಧಕಾರದಲಿ  ಕಣ್ಮುಚ್ಚಿ ಮಲಗಿದ್ದೆ
ಸುಮ್ಮನೇ ಅಲವರಿದೆ,ಕನಸುಗಳ ಗರ್ಭದಲಿ
ಹುದುಗಿದ್ದ ನಿನಗೊಂದು ರೂಪಿತ್ತು
ಜೊತೆ ಮಾಡಿಕೊಂಡೆ ,ನನ್ನಾತ್ಮಕ್ಕೆ
ಜೊತೆಯಾದವನೆ,ಹೆಸರ ಯೋಚಿಸುತಿರುವೆ
ಏನಿಡಲಿ ನಿನಗೊಂದು ಹೆಸರು?


ಕೆನ್ನೆಗಳ ಇಳಿಜಾರಲ್ಲಿ ಹಾರುವ
ಕೂದಲ ನನ್ನ ಅಂಕೆಯ ಮೀರಿ
ಚುಂಬಿಸಿದ,ತುಂಟಾಟವಾಡುವ
ಹೆಸರಿಲ್ಲದೆ ಸಲಿಗೆ ತೋರುವ
ಮೈ ತೀಡುವ ನಿನ್ನ ಅಲಪಿಗೆ
ತಂಬೆಲರಂಥವನೆ, ಏನಿಡಲಿ ಹೆಸರು??

ತೆರೆದ ನನ್ನ ನಸುಗೆಂಪು ಅಧರಗಳ
ನಡುವೆ ನೀ ಸುರಿದೆ ನಿನ್ನ ಅಧರಗಳ
ತಣ್ಬನಿ,ತನಿ ತನಿಯಾಗಿ ನಾ
ಹೀರುವಾಗ ನಿನ್ನ ಕಂಗಳಲ್ಲಿ ಕಂಡ
ತುಸು ತುಂಟ ನಗುವಿಗೆ  ಏನಿಡಲಿ ಹೆಸರು??


ಸುಮಗಳು ಸುರಿದ ತಂಪು ತಂಪು
ಹಾದಿಯಲ್ಲಿ ಕೈ ಹಿಡಿದು ನಡೆವ,
ಮತ್ತೊಮ್ಮೆ ಏಕಾಂತದಲಿ ಹರಡಿದ
ನನ್ನ ಹೆರಳ ನಡುವಿಂದ ಮೃದು
ಕೆನ್ನೆಯ ಮೇಲೆ ಗೀರುವ ಸ್ವಚ್ಚಂದ
ಬೆರಳೇ,ಏನಿಡಲಿ ನಿನಗೆ ಹೆಸರು??

ತಡೆದ ಕಣ್ಗಪ್ಪಿನ ಕಂಬನಿಯಲಿ
ನಿನ್ನೆದೆಯ ಕೂದಲುಗಳ ತೊಳೆದೆ,
ಕಣ್ಣು ಒರೆಸುತ್ತಾ ಎದೆಗೊತ್ತಿಕೊಂಡು
ನನ್ನ ನೀ ಮಗುವಂತೆ ನಲಿದವನೆ
ನಿನ್ನ ಪ್ರೇಮದ ಪರಿಗೆ ಏನಿಡಲಿ ಹೆಸರು??


ನೋವು ಬಿರಿದ ಬಿಸಿಲ ಎದೆಗೆ ಹಿಮದ
ಮಳೆಯಾದವನೆ,ಹೆಸರಿಲ್ಲದೇ ಕನಸುಗಳ
ನಡುವಿಂದ ಬಂದು ಬಾಳ ಹಸನಾಗಿಸಿದ
ನಿನ್ನ ಜೊತೆಗಿನಾಟ-ಬೇಟಕ್ಕೆ
ಹೆಸರೊಂದು ಬೇಕೆ??
ನೀನೇ ಎಂದಂತೆ ಬದುಕ
ಹಾದಿಯಲ್ಲಿ ನಾವುಗಳು
ಹೆಸರೇ ಇಲ್ಲದ ಹೂವುಗಳು
ಹೆಸರ ಹಂಗೊಂದು ಏಕೆ??




Tuesday, April 16, 2013

ಮಳೆ ಎಂಬ ಪುಳಕ

ಮಳೆ ಬರುವ ಮುನ್ನ..


ಭಾವಗಳ ಮೋಡದ ಜೋಲಿಯಲ್ಲಿ
ಇಣುಕುವ ನೀನು ನನ್ನ ಭಾನು
ಹಸಿಯಾದ ಎದೆ ನೆಲದಿ ಮೊಳಕೆ ಒಡೆಯಿತೇ
ಬಯಕೆಗಗಳ ಭವಿಷ್ಯದ ಕಾನು?

ಹೊಳೆಯುತಿಹ ಕಂಗಳಲ್ಲಿ
ಮಳೆಯ ಮುನ್ನಿನ ಮಿಂಚು
ವರುಣನಂತೆನ್ನ ಇಳೆಯಾಗಿಸಿ
ಬಳಸಿ ತಬ್ಬುವ ಹೊಂಚು

ನಿಲ್ಲು ನಲ್ಲ..
ನಿನ್ನ ಒಲವ ಸುಧೆಗೆ ಮೈ
ಒಡ್ಡುವ ನನ್ನ
ಒಮ್ಮೆ ಕಾಯಿಸಿ ನೋಡು
ಮಳೆ ಬರುವ ಮುನ್ನ!!

ಮಳೆ ಬಂತು

ಬಿರು ಬಿಸಿಲಿಗೆ ಕಾದ
ಭುವಿಗೆ ಬಿದ್ದ ಮೊದಲ
ಮಳೆಯ ಹನಿ
ಕಡಲ ಒಡಲ ಚಿಪ್ಪೊಂದರಲ್ಲಿ
ಸದ್ದಿಲ್ಲದೆ ಕಾಯುತಿದೆ
ರೂಪಾಂತರಿಸಲು
ಒಂದು ಸುಂದರ ಮುತ್ತು!

ಕಾಗೆ ಗುಬ್ಬಿಗಳಿಗೀಗ
ಒಂದೇ ಮರದ ಆಶ್ರಯ
ಬರುವ ಮುಸಲಧಾರೆಯಂತ 
ಮಳೆಗೆ ಗೂಡು ಕಟ್ಟಿ 
ಬೆಚ್ಚಗಾಗುವ ತವಕ

ಬಂದೇ ಬಂತು ಮಳೆ
ನನ್ನೆದೆಯ ಇಳೆಗೆ
ನೀ ಬಂದ ಗಳಿಗೆ!!

ಮಳೆಯ ನಂತರ


ತಂತಿಗಳಲ್ಲಿ ಜೋತು ಬಿದ್ದ
ಹನಿಗಳಿಗ್ಯಾವ ಅವಸರವಿಲ್ಲ
ಉಕ್ಕುವ ನದಿಗಳಿಗೆ 
ಹರೆಯದ ಪುಳಕ
ಕೆರೆಗಳೋ ನಮ್ಮ ಕಿರುತನದ 
ಬಿಂಬ ತೋರುತಿವೆ

ನನ್ನ ನಲ್ಲ...

ವರುಣನಾಗಿ ನನ್ನೆದೆಗೆ 
ನೀ ಪ್ರೇಮ ಸುರಿಸಿ
ಹನಿಗಳ ಧಾರೆಯಲ್ಲಿ 
ನನ್ನ ವರಿಸಿ
ಹೆಣ್ಣಾಗಿಸಿದೆ!!

ಹಸಿರ ಚಲ್ಲಿದ ಹಾದಿಯಲ್ಲಿ
ಉದುರಿದ ನಿರೀಕ್ಷೆಯ
ಎಲೆಗಳು
ನಮ್ಮ ಸ್ವಾಗತಿಸಿದೆ 
ಶಾಲ್ಮಲಿಯ ದಳಗಳು

ನಾನೀಗ ಇಳೆ
ನಿನ್ನಾತ್ಮದಷ್ಟು 
ಪರಿಶುದ್ಧ
ನಿನ್ನ ಒಲವ ಮಳೆ
ತೊಳೆಯಿತು
ನನ್ನೆಲ್ಲ ಕೊಳೆ!!


 
 (Image curtecy:Internet)






Wednesday, April 10, 2013

ಬೆಳಕು-ಅವಳು ಮತ್ತೆರಡು ಕಥೆಗಳು

ಯುಗಾದಿ ಬಂದಿದೆ..ನಾವೆಲ್ಲಾ ಕಾಲನ ಚಕ್ರಕ್ಕೆ ತಲೆಕೊಟ್ಟು ನಿಂತಿದ್ದೇವೆ ಮತ್ತೆ  ಭೂತ-ವರ್ತಮಾನ-ಭವಿಷ್ಯಗಳ ಅದೇ ಗೊಂದಲದ ನಡುವೆ,ಬದುಕು ಕೆಲವರಿಗೆ ಭಾರೀ ಬದಲಾದರೆ,ಕೆಲವರಿಗೆ ಪರವಾಗಿಲ್ಲ ಎನ್ನಿಸಿತೋ?, ಇನ್ನೂ ನನ್ನಂತವರಿಗೆ ಕಾಡಿಗೆಯ ಕಂಗಳ ನಡುವೆ ಕಣ್ಣೀರ ಮುಚ್ಚಿಟ್ಟು..ಸಿಹಿ ಮಾತುಗಳ ನುಡಿಸಿ..ಕಹಿಯಾಗಿ ನಗುವುದ ಕಲಿಸಿದೆ!!ಕಾಲನೇ ನಿನ್ನ ವಿಶ್ವರೂಪಕ್ಕೊಂದು ನಮನ....ಮತ್ತಷ್ಟು ಸ್ರವಿಸುವ ಋತುಗಳು..ಇನ್ನಷ್ಟು ಉದ್ದದ ಬದುಕು..ನಿರಂತರ ಅಭಾವ ವೈರಾಗ್ಯ..ನಿನ್ನ ಕಾಲವೋ ನನ್ನ ಕಾಲವೋ ಮುಗಿಯುವಷ್ಟು ಬದುಕು..ಸಾರ್ಥಕವಾಗಿದ್ದರೆ ಸಾಕು..ಶುಭಾಶಯಗಳು ನನ್ನೆಲ್ಲ ಬಂಧುಗಳಿಗೆ..ಎಲ್ಲಕ್ಕಿಂತ ಸವಿ ಸ್ನೇಹದ್ದು..ಅದು ಬೆಲ್ಲವನ್ನು..ವಾಸ್ತವದ ಬೇವಿನ ಕಹಿಯನ್ನೂ ಮರೆಸಿ ಬಿಡುತ್ತದೆ..

ಬೆಳಕಿಗೂ ಹುಡುಕಾಟಕ್ಕೂ ಆಧ್ಯಾತ್ಮಕ್ಕೂ ಮುಗಿಯದ ನಂಟು..ಕೆಳಗಿನೆರಡು ಭಾವಬಿಂದುಗಳು (ಕಥೆ ಎನ್ನಲಾರೆ..ಅದನ್ನು ನೀವೇನು ಕರೆಯಬಹುದು) ನಿಮಗಾಗಿ..ಓದಿ..ಅನಿಸಿಕೆ ತಿಳಿಸಿ...

ಬೆಳಕು -೧


ಕತ್ತಲಿತ್ತು..ನಸು ಕತ್ತಲಿಗೂ ಮೂಡಣದ ಉಷೆಗೂ ನಿಲ್ಲದ ವಾದ-ಪ್ರತಿವಾದದ ಸಮಯ..
ಇಲ್ಲಿ ಆಕೆ ಕಾದದ್ದು ಇವರಿಬ್ಬರಿಗೂ ಅಲ್ಲ..ಗೊತ್ತು ಗುರಿ ಇರದ ಪಯಣದಲಿ ಸಿಕ್ಕು ಮರೆಯಾದ ಅವನಿಗಾಗಿ...
ಹುಡುಕುವ ಭ್ರಮರ..ಎಲ್ಲ ಬಂಧಗಳ ಬಿಟ್ಟು ಅವನ ಆಸೆ ಹೂ ಗಂಧದ ಬೆನ್ನು ಹತ್ತಿದ ತಿತಲಿ..
ತನ್ನ ಗುರುತ್ವಾಕರ್ಷಣೆಯ ಮೀರಿದ ಅದ್ಯಾವದೋ ಅಯಸ್ಕಾಂತೀಯ ಸೆಳೆತಕ್ಕೆ ಅರಿವಿಲ್ಲದೆ ಸಿಕ್ಕಿದ ಕಬ್ಬಿಣದ ತುಂಡು..
ತಾನು ಮೀರಾಳೋ ರಾಧೆಯೋ ಇನ್ನೇನೊ ಇರಬಹುದಾದ ಕಲ್ಪನೆ ಆಕೆಗೆ ಇದ್ದಂತಿಲ್ಲ..
ಬೇಟಕ್ಕೆ ಕಾದ ಹೆಣ್ಣು ಹುಲಿಯೇ? ಅನಿಸುತ್ತಿಲ್ಲ..ಮುಖದಲ್ಲಿ ಮುಗ್ಧತೆ..ಕೆನ್ನೆಯಲ್ಲಿ  ಮೂಡಣದ್ದೆ ಕೆಂಪು,
ಕಣ್ಣಲ್ಲಿ ಯಾರನ್ನೋ ಹುಡುಕುತ್ತಿರುವ ಸೂಚನೆ..
ಯಾರದ್ದೋ ನೆರಳಾಡಿತು..ಅವನೇ ಇರಬೇಕು..ಕಣ್ಣರಳಿತು..
ಮತ್ತೆ ಸಣ್ಣಗಾದ ಪಾಪೆಯಲ್ಲಿ ಕಂಡದ್ದು ಅವನದಲ್ಲ..ಇವನ ಬಿಂಬ..
ಯಾಕೆ ಬಂದೆ? ಎನ್ನಲಿಲ್ಲ..
ಅವನು ಸುಡುವ ಬೆಂಕಿಯ ಕಣ್ಣಲ್ಲಿ ಹೊತ್ತಿದ್ದ ಕಾಮಣ್ಣ..
ಆಸೆಗಳ ಬಳ್ಳಿಯಲ್ಲಿ ಅರಳಿದ್ದ ಹೂವು ಕಮರಿಬಿಡಬೇಕು ಅವನ ಕಾಮಾಗ್ನಿಯಲ್ಲಿ..
ಕೈ ಹಡಿದ..ಹತ್ತಿರಕ್ಕೆಳೆದ..
ದೇಹದ ಕಣಕಣವೂ ಮಿದುವಾಗುವ ಸಮಯ..ಅವನ ಬಲಿಷ್ಟ ಹಿಡಿತದಲ್ಲಿ..
ಅವಳ ಹೆಣ್ತನ ಎಂದಿನಂತೆ ಕರಗಲೇ ಬೇಕು..
ಆದರೆ?..
ಅವನ ಸುರತದ ಕರೆಗೆ ಆವಳ ದೇಹ ಕೆರಳಲಿಲ್ಲ..
ಅವನ ಸ್ಪರ್ಶದ ಮೋಡಿಗೆ ದೇಹ ವೀಣೆ ಮಿಡಿಯಲಿಲ್ಲ..
ಅವ ಅವಳ ಇಡಿ ಇಡಿಯಾಗಿ ಜಾಲಾಡಿ ಸೋತ..
ಅಹಂ ಬೆವರಾಗಿ ಹರಿದಿತ್ತು..ಆಕೆ ಇದ್ದಳು ಕೊರಡಿನಂತೆ..
ಅವಳ ಅವನೆಂದು ಇವನಾಗಲು ಸಾಧ್ಯವಿಲ್ಲ......
ಮತ್ತೆ ಹೋಗುವ ಮುನ್ನ..
ಅವನ ತುಟಿಗಳಲ್ಲಿದ್ದದ್ದು ಪ್ರಶ್ನೆ.. ಯಾಕೆ ಹೀಗಾಯ್ತು?..
ಅವಳ ಮನಸು ಉತ್ತರಿಸಿತ್ತು.."ಅಂದು ನೀ ಅವನಾಗಿದ್ದೆ ಪ್ರೇಮ ಮೂರ್ತಿ..ಇಂದು ಕೇವಲ ನೀನು ಸ್ವಾರ್ಥಿ!!  ನೀನವನಲ್ಲ!!" ಕಾಮದ ಕತ್ತಲು ಓಡಿತ್ತು..ಬೆಳಕು ಗೆದ್ದಿತ್ತು..

ಬೆಳಕು ೨


"ನಾ ಬರಲೇ?" ಧ್ವನಿಯೊಂದು ಕೇಳಿತು..
"ನಾತಿಚರಾಮಿ" ಎಂದು ಕೈ ಹಿಡಿದ ಜೀವವ್ಯಾವುದೋ "ನಾನೊಲ್ಲೆ" ಎಂದು ದೂರ ಸರಿಯಿತು..
ನಾನಂದೆ"ಇದು ಬಲು ದೂರದ ಪಯಣ..ನಿಲ್ಲಲಾಗದು..ಅಂತ್ಯವಿಲ್ಲ..ಬರುವೆಯಾದರೆ ಬಾ ಜೊತೆಗೆ"
ಉಹುಂ...ಧ್ವನಿ ಮತ್ತೆ ಮರೆಯಾಯಿತು..
ನಾ ನಡೆಯುತ್ತಲೇ ಇದ್ದೇನೆ..ಬೆಳಕಿರದ ದಾರಿಯಲ್ಲಿ..
ನಡು ನಡುವೆ ಬೆಳಕ ತೋರುವುದು ಪುಟ್ಟ ದೀಪದ ಕುಡಿಯೊಂದು..
ಸಣ್ಣ ಹಣತೆಯೊಂದು..ಕೇಳುವುದು"ಅಮ್ಮಾ..ಇಷ್ಟು ಬೆಳಕು ಸಾಕೇ"
ನಿಂತಿಲ್ಲ ನನ್ನ ಪಯಣ..ದೂರದಿ ರಿಂಗಣಿಸುವ ನೆನಪುಗಳ ಜಾತ್ರೆಯ ಸದ್ದು..
ನಡುನಡುವೆ ಕಿವಿಗಡಚಿಕ್ಕುವ ವಾಸ್ತವದ ಸಿಡಿಮದ್ದು..
ಎಲ್ಲಾ ಬರೀ ಶಬ್ದಗಳು..ನೋಟಕ್ಕೆ ನಿಲುಕದ ಅಸ್ಪಷ್ಟ ಚಿತ್ರಗಳು..
ಈ ಕತ್ತಲ ಕೂಪದಲ್ಲಿ ಹೃದಯದ ಕದವ ಹುಡುಕುವದೆಂತು??ತೆರೆಯುವದೆಂತು??
ಓ ಬೆಳಕೇ..ನಿನ್ನೆಡೆಗೆ ನಡೆಯುತ್ತಲೆ ಇದ್ದೇನೆ..ಆದರು ಈ ಬದುಕ ಯಾತ್ರೆ ಮುಗಿಯದಲ್ಲ..
ಇನ್ನೆಷ್ಟು ದಿನ ಈ ಒಂಟಿ ಪಯಣ ..

ಆಯಾಸಕ್ಕೆ ಒಮ್ಮೆ ನಿಂತು ನೋಡಿದರೆ ಅದು ಚಂದ್ರನಿರದ ನಭ..
ತಾರೆಗಳ ಕಿತ್ತು ತಿನ್ನುವಾಸೆಯಾಯ್ತು..ಕೈ ಚಾಚಿದೆ..ಕಣ್ಣು ಒದ್ದೆಯಾಯ್ತು..
ಅವನೆಲ್ಲಿಯ ಚಂದ್ರಮ??ಬದುಕಿಗೆ ಬೆಳಕು ತರುವನೆಂದ..
ಬಲು ದೊಡ್ಡ ಸ್ವಾರ್ಥಿ..ತನಗೆ ಬೇಕೆಂದಾಗ ಓಲೈಸುವ..ಬೇಡವೆಂದಾಗ ನನ್ನಿರವ
ಕಿತ್ತೆಸೆದು ಅಮವಾಸ್ಯೆಯಾಗುವನು..
ಜೀವವೇ ಮಿಡುಕದಿರು..ಆರಂಭವಿದೆ..ಅಂದರೆ ಅಂತ್ಯವಿರಲೇ ಬೇಕು..
ಅವರವರ ಬಾಳ ಪಯಣ ಅವರು ನಡೆಯಲೇ ಬೇಕು..
ಇಂದಲ್ಲ ನಾಳೆ ಬೆಳಕಿನ ಲೋಕಕ್ಕೆ ನಿನ್ನ ಕತ್ತಲ ಲೋಕ ತೆರೆಯಲೇ ಬೇಕು...
ಎಂದು ಮನಸಿಗೆ ಬುದ್ಧಿ ಹೇಳಿದ್ದೇನೆ..ನಾನೂ ನಡೆದಿದ್ದೇನೆ..
ನನ್ನಂತೆ ನೀವೂ...ನಿಮಗೆ ನೀವಿದ್ದ ಹಾದಿ ನಸು ಬೆಳಕಿರಬಹುದು..
ನಡುನಡುವೆ ಈ ಜಾತ್ರೆಯ ಸವಿಯಬಹುದು..ಅದು ನಿಮ್ಮ ವೈಭೋಗ..
ನನಗೆ ದಕ್ಕಿದುದು ಇಷ್ಟೇ..ಯಾಕೆಂದರೆ ನನ್ನ ಗುರಿ ಬೇರೆ ಇದೆ..
ಅದಕ್ಕೆ ನಡೆಯುತ್ತಲೇ ಇದ್ದೇನೆ..
ಒಂಟಿಯಾಗಿ..
ಅವನ ಬೆಳಕ ಲೋಕಕ್ಕೆ...
ಯಾವ ಬಂಧಗಳಿಲ್ಲದ ನಿರ್ಭೀತ ಸ್ವತಂತ್ರ ಜಗತ್ತಿಗೆ...ಅವನ ಸೇರಲು...




Sunday, March 31, 2013

ಬೇರು ಮತ್ತು ಬುಡ--ಸಂತ

ನೂರುಗಾವುದ ಹಬ್ಬಿದೆ
ಈ  ಮರ
ವಿಶಾಲ ಬಿಳಲುಗಳ ನಡುವೆ ತೂರುವದಿಲ್ಲ
ಸೂರ್ಯ ನಿನ್ನ ಬಿರುಬಿಸಿಲ ರಶ್ಮಿ
ನೂರುಕಥೆಗಳು..ನಾಲ್ಕು ಬುಡಗಳು
ಸುಯ್ಯೆಂದು ಬೀಸುವ ವಾಯುವಿಗೆ
 ಇಲ್ಲಿ ನಿತ್ಯ ಸಾಮಗಾನ
ಬುಡಗಳಲಿ ಮೂಲಾಧಾರ
ಕಾಮಕ್ರೋಧ ಆಸೆ-ನಿರಾಸೆಗಳ
ಸಾರ ನಿಸ್ಸಾರ ಸಂಸಾರ

ಆಧ್ಯಾತ್ಮವೆಂದೆ
ನೆರಳಲ್ಲಿ ವಿರಮಿಸಿದ ಸಾಧುಗಳ್ಯಾರು
ನನ್ನ ಕಂಡಿಲ್ಲ
ಕಟ್ಟಿದ ಹಕ್ಕಿ ಗೂಡುಗಲ ಬೆನ್ನೆಲುಬು ನಾ
ಚಕ್ರಾಧಾರ
ಬದುಕ ಅನುಭವ ಹೀರಿ ಕಂಡದ್ದು
ನಾ ಬೇರೆ ನೀಬೇರೆ
ಸೇರುವದಿದೆ ಒಂದೇ ಕಡಲು
ವಿಶಾಲ ನೀಲ ಶರಧಿ
ಮೇಲೊಂದು ಒಂಟಿ ಮುಗಿಲು

ತೆರೆ ಸರಿದ ಮೇಲೆ ಮೇಲೆರಿದ ಅನಿಕೇತನ
ಬುದ್ಧಿ ವಿಕಸಿತ ಹೃದಯ ಆಕಾಶ
ಇದೋ ನೀನಾದೆ ನನ್ನ ಸಹಸ್ರಾರ
ನೂರು ವಿಕಸಿತ ಸುಮಗಳು
ಒಂದೊಂದು ಒಂದೊಂದು ಬಣ್ಣ
ತೆರೆದಂತೆ ಕಾಣದ ಲೋಕವನ್ನ

ಬನ್ನಿ ಮಕ್ಕಳೇ ನಾ ತೋರುವೆ
ಉದುರಿದ ಒಣ ಎಲೆಗಳು
ಗೊಬ್ಬರವಾಗಿ ನನ್ನ ಒಡಲಿಗೆ ಸಾರವಾಗುವದನ್ನ,
ಆ ದಾರಿ ಈ ದಾರಿ ಎಲ್ಲ ದಾರಿಗಳು
ಬಂದೆನ್ನ ಸೇರುವದನ್ನ

ನಾ ಯಾರ ದೂರಲಿಲ್ಲ
ಕಟ್ಟಿದಿರಿ ನೀವು ಗೂಡು
ಒಂದೊಂದು ಕೊಂಬೆಗೊಂದೊಂದು
ಹೆಸರಿಟ್ಟಿರಿ,ಕಚ್ಚಾಡಿದಿರಿ
ಇನ್ನೂ ನನ್ನ ಬೇರ ಅರಿಯಲಿಲ್ಲ
ದೇವರೆಂದಿರಿ
ಅತಿಆಳಕ್ಕಿಳಿದ ನನ್ನ ಬೇರುಗಳಲ್ಲಿ
ಅತಿವಾದಿ ಅವಕಾಶಗಳಿಲ್ಲ
ಅಲ್ಲಿರುವನು ಧ್ಯಾನಸ್ಥ
ಅವಿಚಾರಿ ಸನಾತನಿ ಸಂತ
ನಾ ಚಾರ್ವಾಕ
ನಾಸ್ತಿಕನು ಎನ್ನದಿರಿ
ನಾನದೇ  ನೂರು ಗಾವುದ
ಹಬ್ಬಿದ ವಿಶಾಲ ಮರ !!













Sunday, March 24, 2013

ಬರೆದಷ್ಟೂ ಇದೆ ನಿನ್ನ ಕಥೆ...

ಕಥೆ-೧
ಆಗಷ್ಟೇ ಎಚ್ಚರವಾಗಿತ್ತು  ಚಿಂಕುವಿಗೆ, ಎಚ್ಚರವಾಗುತ್ತಿದ್ದ ಹಾಗೆ "ಅಮ್ಮಾ" ಎಂದು ಕರೆದಾಗ ಓಡಿ ಬರುತ್ತಿದ್ದ ಅವನ ಮುದ್ದು ಅಮ್ಮ ಅವನ ಮೇಲೆ ಮುತ್ತಿನ ಮಳೆ ಸುರಿಸಿ ಮುದ್ದಾಡಿ ,ಹಾಸಿಗೆ ಇಂದ ಎತ್ತಿಕೊಂಡು ಬಂದು ಸೋಫಾದ ಮೇಲೆ ಮಲಗಿಸುವುದು ನಿತ್ಯದ ವಾಡಿಕೆ..ಚಿಂಕು "ಅಮ್ಮ" ಕರೆದ,ಮುಸುಕು ಹೊದ್ದವನಂತೆ ನಾಟಕ ಮಾಡಿ ಮಲಗಿದ..ಅಮ್ಮ ಯಾಕೋ ಬರಲಿಲ್ಲ ಎಂದು ಮುಸುಕೆಳೆದು ನೋಡಿದ..ಮತ್ತೆ ಬೇಜಾರಾಯಿತು ,ನಿಧಾನಕ್ಕೆ ಎದ್ದ..ಕೈಯಲ್ಲಿ ಅಮ್ಮ ಜಾತ್ರೆಗೆ ತೆಗಿಸಿದ್ದ ಆಟದ ಪಿಸ್ತೂಲು ಹಿಡಿದು ಅಮ್ಮ ಎಲ್ಲಿ ಎಂದು ಹುಡುಕಿದ..ಮನೆ ತುಂಬಾ ಇದ್ದ ಜನಗಳ ಮಧ್ಯೆ ಅಮ್ಮ ಕಾಣಿಸಲಿಲ್ಲ..
ಸೀದಾ ಅಜ್ಜಿ ,ಅಪ್ಪ ಇಬ್ಬರೂ ಕೂತಿದ್ದ ಕೋಣೆಗೆ ಬಂದ,ಅಪ್ಪನ ಕಣ್ಣು ಕೆಂಪಾಗಿತ್ತು..
"ಅಪ್ಪಾ,ನಿನ್ನೆ ನಿದ್ದೆ ಮಾಡಿಸ್ತಾ ಅಮ್ಮ  ಇವತ್ತು ಬೆಳಗ್ಗೆ ಬರ್ತಾರೆ ಅಂದಿದ್ದೆ,ಯಾಕಪ್ಪ ಬರ್ಲಿಲ್ಲ"
ಚಿಂಕು ಕಣ್ಣಲ್ಲಿ ನೀರಿತ್ತು..ಅಪ್ಪ ಕಣ್ಣು ಮತ್ತೆ ಕೆಂಪಾಯ್ತು..ಕಣ್ಣಲ್ಲಿ ನಿನ್ನೆ ಹಾಗೆ ನೀರಿರಲಿಲ್ಲ ಅಷ್ಟೆ..
"ಪುಟ್ಟಾ,ನಿನ್ನ ನೋಡ್ಕೊಳ್ಳೋಕೆ ಹೊಸಾ ಅಮ್ಮ ಬರ್ತಾರೆ"
"ಇಲ್ಲಾ ನಂಗೆ ನನ್ನ ಅಮ್ಮ ಬೇಕು"
"ಏ ಹಾಳು ಶನಿ ಮುಂಡೇದು,ಇದರ ಬಾಯಲ್ಲಿ ಕೆಂಡಾ ಸುರಿಯಾ,ಎರಡು ಏಟು ಬಿಗೀತೀನಿ ನೋಡು,ಒಂದು ಪೈಸಾ ಅಪ್ಪನ ಮನೆ ಇಂದ ತರಲಿಲ್ಲ ನಿನ್ನ ಅಮ್ಮ,ಹೇಳಿದ್ವಿ ಅಂತ ಬೆಂಕಿ ಹಚಿಕೊಂಡು ನೆಗೆದು ಬಿದ್ಲು,ಈಗ ನನ್ನ ಕಡೆ ಸಂಬಂಧ ಆಗೋದ್ರಲ್ಲಿದೆ,ಕೆಟ್ಟ ಮಾತು ಆಡ್ಬೆಡ್ವೋ ಮುಂಡೇದೇ, ಯೆಯ್ ದಿವಾಕರ,ಈ ಮಗಿನ ಎತ್ಕೊಂಡು ಹೊರಗೆ ಹೋಗು"
"ಅಜ್ಜೀ ,ಅಜ್ಜೀ ನೀನು ಒಳ್ಳೆ ಅಜ್ಜಿ ಅಲ್ಲ,ಬರೀ ಕೆಟ್ಟ ಮಾತಾಡ್ತೀಯ,ನೀನೇ ಹಚ್ಚಿದ್ದು ಅಮ್ಮಂಗೆ ಬೆಂಕಿ..ನನ್ನ ಅವತ್ತು ಕೋಣೇಲಿ ಕೂಡಿದ್ದು ನೀನೇ..ಉಂ..ಊಂ..ಅಪ್ಪಾ ಅಪ್ಪ ಬಾ ಅಪ್ಪಾ,ನಾವು ಅಮ್ಮನ ಹತ್ತಿರ ಹೋಗೋಣ, ಅಜ್ಜಿ ಆ ಹೊಸಾ ಅಮ್ಮ ಬೇಕಾದ್ರೆ ಇಲ್ಲೇ ಇರ್ಲಿ"
ಚಿಂಕು ಅಪ್ಪನ ಹತ್ತಿರ ಓಡಿದ..ಅಪ್ಪ ಅಮ್ಮನ ಫೋಟೊ ಮುಂದೆ ಹೊಸ ಅಮ್ಮನ ಕೈ ಹಿಡಿದು ನಿಂತಿದ್ದು ನೋಡುತ್ತಿದ್ದ ಹಾಗೆ
ಚಿಂಕುಗೆ ಅಳು ಬಂತು,ಕೋಪವೂ ಬಂತು..ಕೈಯಲ್ಲಿದ್ದ ಆಟದ ಪಿಸ್ತೂಲನ್ನ ಅಪ್ಪ, ಹೊಸಾ ಅಮ್ಮ ಇಬ್ಬರಿಗು ತೋರಿಸಿ"ಢಂ" ಅನ್ನಿಸಿದ!!

ಕಥೆ-೨
ಅವಳು ಎದ್ದದ್ದು ಈಗಷ್ಟೇ..ಯಾಕೊ ಕೆಲಸಕ್ಕೆ ಹೋಗುವ ಮನಸಿಲ್ಲ ಆಕೆಗೆ..ಮುಖ ತೊಳೆದು ಬಂದು ಕನ್ನಡಿ ನೋಡಿದಳು..
ತನ್ನ ಮುಖವೆ ಅಲ್ಲ ಅನ್ನುವಷ್ಟು ವಿಚಿತ್ರವಾಗಿ ಕಾಣಿಸಿತು ಅವಳಿಗೆ..ಮೊಬೈಲ್ ರಿಂಗಣಿಸಿತು..ನೋಡಿದಳು..ಆ ಕಡೆ ಆಶಾ"ಯಾಕೇ ಇನ್ನು ರೆಡಿ ಆಗಿಲ್ವಾ?ಕ್ಯಾಬ್ ನಮ್ಮನೆ ಇಂದ ಹೊರಟಾಯ್ತು" ಫೋನ್ ಕಟ್..ಬೇಗ ಬೇಗ ಒಂದು ಸೀರೆ ಸುತ್ತಿ ವ್ಯಾನಿಟಿ ಬ್ಯಾಗು ಸಿಕ್ಕಿಸಿ,ಫೋನ್ ಹಿಡಿದು ತಯಾರಾದಳು.."ಸಂಜೆ ಬಂದು ನಾಕು ಚೆಂಬು ಸ್ನಾನ ಮಾಡಿದ್ರಾಯ್ತು" ಅಂದು ಚಪ್ಪಲಿ ಮೆಟ್ಟಿ ಬಾಗಿಲು ಬೀಗ ತೊಡಿಸಿ ರಸ್ತೆಯ ಕೊನೆಗೆ ಬಂದು ನಿಂತಳು..
ಕ್ಯಾಬ್ ಬಂದು ಪಕ್ಕದಲ್ಲಿ ನಿಂತಿತು.."ಅಬ್ಬಾ ಆಗ್ಲೆ ರೆಡಿ ಆಗಿದ್ಯಾ?? ಬಾ ಕುತ್ಕೋ, ನಂದೀಶ ನಡೀರಿ" ಎಂದು ಆಶಾ ಎಂದಿನಂತೆ ವಟ ವಟ ಶುರು ಮಾಡಿದಾಗ ಮನಸಿಗೆ ಎಷ್ಟೋ ಹಾಯೆನ್ನಿಸಿತು..ಅವಳೊಬ್ಬಳೇ ತಾನೇ ತನ್ನ ಯಾವಾಗ್ಲೂ ಕುಶಿಯಾಗಿ ನಗಿಸ್ತಾ ಇರೋಳು..ಮಾತು ಸಲ್ಪ ಜಾಸ್ತಿ ಆದ್ರೆ ಅದರಿಂದ ತನಗೇನು ತೊಂದರೆ ಇಲ್ಲ..ಬದಲಾಗಿ ಎಲ್ಲ ವಿಶಯಗಳೂ ತನಗೆ ತಿಳಿಯುತ್ತವೆ..ಆಕೆ ಇಂದಲೇ ಅಲ್ಲವೇ ಇವತ್ತು ದೀಪಕ್ ಮ್ಯಾನೇಜರ್ ಆಗಿ ತಮ್ಮ ಟೀಮ್ ಜಾಯಿನ್ ಆಗ್ತಾ ಇರೋ ವಿಶಯ ತಿಳಿದದ್ದು..
ಯೋಚನೆಯಲ್ಲಿ ಆಫೀಸ್ ಬಂದದ್ದೇ ತಿಳಿಯಲಿಲ್ಲ,ಹೋಗಿ ಐಡಿ ಕಾರ್ಡ್ ಸ್ವೈಪ್ ಮಾಡಿ ತನ್ನ ಕ್ಯುಬಿಕ್ ಬಳಿ ಬಂದಾಗ ಕಂಪ್ಯೂಟರ್ ಎದುರು ಒಂದು ಹೂವು ಮತ್ತು ಪತ್ರ ಕಾಣಿಸಿತು.."ನಿನಗಾಗಿ ಈ ದಿನ..ನನ್ನ ಕ್ಯಾಬಿನ್ ಅಲ್ಲಿ ಕಾಯ್ತಾ ಇರ್ತೀನಿ,ನಿನ್ನವ ದೀಪಕ್"
ತುಟಿಗಳ ಮೇಲೊಂದು ವಿಷಾದದ ನಗು ಸುಳಿದು ಹೋಯಿತು,"ಕಾಯುವದಾಗಿದ್ದರೆ ಯಾವತ್ತೋ ಕಾಯುತ್ತಿದ್ದೆ" ಮನಸು ಗೊಣಗಿತು..ಆಕೆಯ ಬದುಕಲ್ಲಿ ಬಿರುಗಾಳಿ ಎಬ್ಬಿಸಿದವ..ಕನಸುಗಳನ್ನೆಲ್ಲ ಚೂರು ಮಾಡಿ ತನ್ನ ಸಾಮ್ರಾಜ್ಯ ಕಟ್ಟಿ ಕೊಂಡವ,ಅವಳ ಅನಿವಾರ್ಯತೆಯನ್ನ ದೌರ್ಬಲ್ಯವಾಗಿ ಪರಿವರ್ತಿಸಿ ಆಕೆಯ ಬದುಕನ್ನೆ ನಾಶ ಮಾಡಿದವ,ಅವತ್ತು ಆಶಾ ಇಲ್ಲದೆ ಹೋಗಿರುತ್ತಿದ್ದರೆ ತಾನು ಜೀವಂತ ಉಳಿಯುವ ಪ್ರಶ್ನೆಯೇ ಇರುತ್ತಿರಲಿಲ್ಲ..ಅದು ಗೊತ್ತಿದ್ದೂ ಅದೆಂತಹ ಮನುಷ್ಯ ಈತ!!ಮತ್ತೆ ತನ್ನ ಬದುಕು ಸೂತ್ರ ತಪ್ಪಿದ ಪಟದಂತಾಗುವುದೇ??ಆಕೆಗೆ ಭಯವಾಯಿತು..
ಆದರೆ ಆಕೆ ಅಂದುಕೊಂಡಂತೆ ಏನಾಗಲಿಲ್ಲ..ದಿನಗಳು ಉರಳಿದವು..ತನ್ನ ಕಣ್ಣೆದುರೇ ದಿನ ಕಳೆದಂತೆ ಎಲ್ಲಾ ತಿಳಿದ ಅಶಾ ಅವನ ಕೈಗೊಂಬೆ ಆಗುತ್ತಿದ್ದನ್ನ ನೋಡುತ್ತಾ ಆಶ್ಚರ್ಯ ಚಕಿತಳಾಗುತ್ತಿದ್ದಳು ಅವಳು,ಆಶಾಳೊಡನೆ ಈ ವಿಶಯ ಚರ್ಚಿಸುವ ಆಕೆಯ ಪ್ರಯತ್ನಗಳು ವಿಫಲವಾಯಿತು"ಇದು ನನ್ನ ವೈಯುಕ್ತಿಕ ವಿಶಯ,ವ್ಯಕ್ತಿಗಳು, ಸಂದರ್ಭಗಳು ಬದಲಾಗುತ್ತಲೇ ಇರುತ್ತವೆ.ಅವನು ಆ ದಿನ ಬೇರೆ, ಈ ದಿನ ಬೇರೆ" ಎಂದು ಬಾಯಿ ಮುಚ್ಚಿಸಿದ್ದಳು..ಹೌದೇ? ಆ ಕ್ರೌರ್ಯ,ಹೆಣ್ಣೆಂದರೆ ಕಾಲ ಕಸದ ಮನೋಭಾವ ಅದು ಬದಲಾಗಬಹುದೇ?ಉತ್ತರವಿಲ್ಲ ಅವಳ ಬಳಿ.

ಹೀಗೊಂದು ಅಂತದ್ದೇ ದಿನ..ನಗು ನಗುತಾ ಆಶಾ ದೀಪಕ್ ಕ್ಯಾಬಿನ್ನಿಗೆ ಹೋದದ್ದು ಕಂಡಳು ಅವಳು..ನಂತರ ನಡೆದದ್ದು ದೊಡ್ಡ ಅವಾಂತರ..ಆಶಾ ಅಳುತ್ತಾ  ಬಂದದ್ದು ,ಅವತ್ತೇ ದೊಡ್ಡ ಮೀಟಿಂಗೊಂದು ಜರುಗಿ ದೀಪಕ್  ರಾಜೀನಾಮೆ ಕೊಟ್ಟದ್ದು ನಡೆಯಿತು..ತಾನೊಂದು ಸಾಕ್ಷಿಯಾಗಿ ಇದಕ್ಕೆ ಆಗಬೇಕಾದದ್ದೇನಿದೆ..ಅಂದು ಕೊಂಡಳು ಅವಳು..

ಮರುದಿನ ಕ್ಯಾಬಿನಲ್ಲಿ ಬರುತಾ ಆಶಾ ಹೇಳಿದಳು" ನಿನ್ನ ತರ ಮೊದ್ದು ಆಗಿದ್ರೆ ಏನೂ ನಡೆಯಲ್ಲ..ನಿನ್ನ ಗೋಳಾಡಿಸಿದ ಅವನನ್ನ ನಾ ಹಾದಿಗೆ ತಂದೆ ಅಷ್ಟೆ..ನಿನ್ನ ಬದುಕು ಹಾಳು ಮಾಡಿ ಆತ ಗೆದ್ದೆ ಅಂದುಕೊಂಡ.ಅವನ ಬದುಕು ಹಾಳು ಮಾಡಿ ನಿನ್ನ ನಾ ಗೆಲ್ಲಿಸಿದೆ,ನೀ ನನ್ನ ಬೈದುಕೊಂಡಿದ್ದೀಯಾ ಅಂತ ಗೊತ್ತು..ಆದರೆ ಅವನ ಮಾನ ತೆಗೆಯೊ ತನಕ ನನಗೆ ನಿನ್ನ ಜೊತೆ ಈ ನಾಟಕ ಅವಶ್ಯಕ ಆಗಿತ್ತು..ಹೇಳು ಸಮಾಧಾನವೇ?" ಅವಳ ಮೊಗದ ಮೇಲೊಂದು ನಿರ್ಲಿಪ್ತ ಮುಗುಳ್ನಗು ಹಾದು ಹೋಯಿತು!



Wednesday, March 13, 2013

ಗಂಧರ್ವ ಮತ್ತು ಅತ್ತರು

ಬರೆದ ಕವನಗಳಲ್ಲಿ ಸೂಸುತ್ತಿರುವುದು
ಕೇವಲ ನಿನ್ನ ನೆನಪುಗಳ ಪರಿಮಳ
ನನ್ನ ಕವನದ ಸಾರವೆಲ್ಲ ನಿನ್ನ ನೆನಪುಗಳ
ಒಟ್ಟೂ ಸಂಕಲನ!!

ನಿನ್ನೆದೆಯ ಕಡಲ ತಡಿಯ
ಮರಳ ರಾಶಿಯಲ್ಲಿ
ನನ್ನ ಒದ್ದೆಯಾದ ಹೆಜ್ಜೆ
ಗುರುತುಗಳ
ಹುಡುಕುವಾಸೆ ಹುಡುಗಾ!!

ಇಂದೇಕೆ ಸುಪ್ತ ಸಾಗರಕೆ ಈ ಅಬ್ಬರ
ನೂರು ಬಯಕೆಗಳ ಉಬ್ಬರ,
ಹುಣ್ಣಿಮೆಯೂ ಇಲ್ಲ ಎಂದಾಗ
ಕಂಡದ್ದು ನಿನ್ನ ಮುದ್ದು ಮುಖ!!

ಅಲೆಗಳೆಲ್ಲ ಬಂದು
ನನ್ನ ತೋಯಿಸುವಾಗ
ಬೊಗಸೆಯಲ್ಲಿದ್ದ
ಕಪ್ಪೆ ಚಿಪ್ಪಲ್ಲಿತ್ತು
ನೀ ಕೊಟ್ಟ ಮುತ್ತು!!

ಹೂಗಳ ತುಟಿಯಂಚಿನಲ್ಲಿ
ತುಳುಕಿದ ಮಧುವೆಲ್ಲ
ನಿನ್ನ ತುಂಟತನವ ನುಡಿದಿರಲು
ಮೌನದ ಬಾಹುಗಳಲ್ಲಿ ನಾನು ಬಂಧಿ!!

ಹೀಗೆಲ್ಲಾ ಮೈಮರೆತ ಮನಸಿಗೆ
ನಿನ್ನ ಸಾಕ್ಷಾತ್ಕಾರ
ಆದದ್ದು ಗಂಧರ್ವ
ಗೀತೆಯಂತೆ ನಿನ್ನ ದನಿ
ಕೇಳಿದಾಗಲೇ

ಹೇಳು ದೇವರ ಸ್ವಂತ ನಾಡಿನವನೇ!!

ದೂರದೂರಿನ ಗಾಳಿಯಲ್ಲಿ ಹೊತ್ತ
ನಿನ್ನ ಗಂಧವ ಕುಡಿದ
ಮನಸಿಗೆ ಮಾಯದ ಮತ್ತೇರಿದೆ,
ಮನೋವೇಗದಲ್ಲಿ ನಿನ್ನೂರ ತಲುಪಿ
ನಿನ್ನ ಕಣ್ಣಲ್ಲಿ ಕಣ್ಣನಿಡುವ ಹೊತ್ತು
ಕೇಳುವಾಸೆ
ಹೇಳು,
ನನ್ನ ಊರಲ್ಲಿ ಪ್ರೇಮದ ಅತ್ತರು
ಸೂಸುವ
ನಿನ್ನಂಥ
ಗಂಧರ್ವರಿಹರೇ??


Sunday, March 10, 2013

ಲಹರಿ-ಸಾಗರಿಕಾಳಿಗೊಂದು ಉತ್ತರ(ಪತ್ರ)

ಪ್ರಿಯ ಗೆಳತಿ ಸಾಗರಿ,
ಎಷ್ಟು ವಿಚಿತ್ರ ನೋಡು,ನಿನ್ನ ಪತ್ರ ನಿನ್ನ ಗೊಂದಲಮಯ ಮನಸ್ಸಿನ ಪ್ರತೀಕ,ಗೆಳತೀ  ನನಗೂ ಗೊತ್ತಮ್ಮಾ ಗೆಳೆತನ ನಮ್ಮನ್ನು ಅಲ್ಪವಾದರೂ ಬದಲಾಯಿಸಬೇಕು ಎಂದು,ಅಷ್ಟಿದ್ದೂ ಗೆಳೆಯರು ಯಾಕೆ ಬೇಕು ಹೇಳು? ಒಳ್ಳೆಯ ಗೆಳೆತನ ನಮ್ಮ ವ್ಯಕ್ತಿತ್ವದ
ದೌರ್ಬಲ್ಯಗಳನ್ನ ತುಂಬಾ ಚೆನ್ನಾಗಿ ಮರೆ ಮಾಚುತ್ತದೆ,ಒಂದು ರೀತಿಯ ಫುಲ್ ಫಿಲ್ ಮೆಂಟ್ ಅದು ಅಲ್ವಾ? ನಾನು ನಿನ್ನಂತೆ ಭಾವ ಜೀವಿಯಲ್ಲ,ಆದರೆ ನಿನ್ನ ಪತ್ರಕ್ಕೆ ನಾನು ಉತ್ತರಿಸಲೇ ಬೇಕು ಎನ್ನಿಸಿತು...ಅದಕ್ಕೆ ಈ ಮಾರೋಲೆ!!

ಮೂರು ವರ್ಷಗಳ ಹಿಂದೆ ಇದೇ ನಿನ್ನ ಶರೂ ಒಬ್ಬ ಸುಂದರ ಮನಸ್ಸಿನ ಗೆಳತಿಯನ್ನ ಭೇಟಿಯಾಗಿದ್ದು, ಆಕೆ ಸಾಹಿತ್ಯಾಸಕ್ತಳು,ಜಾಣೆ ಎಂದು ಖುಶಿ ಪಟ್ಟದ್ದೂ ಎಲ್ಲಾ ಸುಳ್ಳಲ್ಲ ,ಆದರೆ ಮೊದಮೊದಲು ತುಂಬಾ ಸರಳವಾಗಿರುತ್ತಿದ್ದ ನಿನ್ನ ಮಾತುಕತೆ ಒಗಟಂತಾದದ್ದು ಯಾಕೆ? ನಿನಗೆ ಗೊತ್ತಲ್ಲ, ನಾನು ಗುಡ್ ಲಿಸನರ್, ಅಷ್ಟಕ್ಕೆ ಬರಡು ಮನದವನಾದೆನೆ ಗೆಳತಿ?,ಒಪ್ಪಿದೆ,ನನಗೆ ನಿನ್ನಷ್ಟು ಎತ್ತರದಲ್ಲಿ ಯೋಚಿಸಲು ಬರದು, ಆದರೂ ನನಗೂ ಒಂದು ನೆಲೆಯಲ್ಲಿ ಇದ್ದ ನಿನ್ನ ಮೇಲಿನ ಗೌರವ ಪ್ರೀತಿ ಆದರವನ್ನ ಈ ಮೂರು ವರ್ಷಗಳಲ್ಲಿ ನೀನು ಅರಿತುಕೊಳ್ಳಲಿಲ್ಲ ಎಂದರೆ ನಾನೇನನ್ನಲಿ?

ಇನ್ನು ಗೆಳತಿ ಸಾಗರಿ, ನಾನು ಪುಸ್ತಕ ಮೇಳಕ್ಕೆ,ನಾಟಕಕ್ಕೆ ಬರಲಿಲ್ಲ ಎಂಬ ಸಣ್ಣ ಘಟನೆಗಳು ನಿನ್ನ ಯೋಚನೆಯಲ್ಲಿ ದೊಡ್ಡ ತಪ್ಪಾದದ್ದು ಯಾವಾಗ?ನಾನು ಸಾಮಾನ್ಯರಲ್ಲಿ ಸಾಮಾನ್ಯ,ನಿಮ್ಮ ಬುದ್ಧಿಜೀವಿಗಳ ಮಾತು-ಕತೆ,ನಡತೆ,ಚರ್ಚೆ,ಎಲ್ಲಾ ನನಗೆ ಅರ್ಥವಾಗದ ವಿಚಾರಗಳು, ನಾನು ಒಳ್ಳೆಯ ಸಾಹಿತ್ಯ ಮತ್ತು ಸಂಗಿತದ ಓದುಗ ಮತ್ತು ಕೇಳುಗ ಅಷ್ಟೇ, ಅದಕ್ಕಿಂತ ಹೆಚ್ಚಿನ ರಸಾಸ್ವಾದ ಮಾಡಲು ನನಗೆ ಆಗದು,ಅದು ನನ್ನ ಮಿತಿ,ನೀನು ನನ್ನನ್ನು ನನ್ನಂತೆಯೇ ಒಪ್ಪಿಕೊಳ್ಳಲು ಎಡವಿದ್ದು ಎಲ್ಲಿ? ನನ್ನ ಆರಡಿ ಎತ್ತರದ ದೇಹಕ್ಕೆ ನಿನ್ನ ಕನಸಿನ ಗೆಳೆಯನನ್ನ ಆರೋಪಿಸಿದ್ದು ನಿನ್ನದೇ ತಪ್ಪು ಅಲ್ಲವೇ?

ಹೇಳು ಗೆಳತಿ,ನಿನಗೆ ನನ್ನ ಸ್ನೇಹ ನಿನ್ನ ವ್ಯಕ್ತಿತ್ವದ ಅಪೂರ್ಣತೆಯನ್ನ ತುಂಬುವ ಒಂದು ಮಿಥ್ಯೆಯಾಗಿ ಮಾತ್ರ ಬೇಕಿತ್ತೆ?ನನ್ನನ್ನೇ ಬಯಸಿ ಬಯಸಿ ಪಡಕೊಂಡವಳಿಗೆ ಯಾಕೆ ಈ ಸೋಲು ಗೆಲವಿನ ದ್ವಂದ್ವ? ಹುಚ್ಚಿ, ಪ್ರೀತಿ ಸ್ನೇಹಗಳು ನಿಮ್ಮ ಬುದ್ಧಿವಂತಿಕೆಯ ಮಾತಲ್ಲಿ, ಬೌದ್ಧಿಕ ಕಸರತ್ತಿನಲ್ಲಿ ಅಡಗಿಲ್ಲ, ಜೀವಗಳ ಜೀವಾಳ ಅದು..ಅರ್ಥ ಮಾಡಿಕೋ..ನಿನ್ನ ಪುಸ್ತಕಗಳು(ನನಗಾಗಿ ತೆಗೆದು ಕೊಂಡದ್ದಲ್ಲವೇ) ಎಲ್ಲೂ ಹೋಗೋದಿಲ್ಲ.ನಾವು ಹುಡುಗರು ಕಣೇ,ಮಾತಿನಲ್ಲಿ ನಂಬಿಕೆಗಿಂತ ಕೃತಿಯಲ್ಲಿ ಜಾಸ್ತಿ, ನಿನ್ನ ಕಠೋರ ಪತ್ರ ನನ್ನನ್ನು ಪೆನ್ ಹಿಡಿಯೊ ಹಾಗೆ ಮಾಡಿತು ,ಅಷ್ಟೆ.


ನಿನ್ನ ಸ್ನೇಹ ನನಗಿನ್ನೂ ಬೇಕು,ಸಂಬಂಧಗಳ ನಿರಂತರತೆ ಹೀಗೆ ಜಾರಿಯಲ್ಲಿರಲಿ, ನಿನ್ನ ಹುಡುಕಾಟಕ್ಕೆ ಯಶಸ್ಸನ್ನು ಹಾರೈಸುತ್ತೇನೆ, ನನಗೂ ನಿನ್ನಂತೆ ಯೋಚಿಸುವುದಾಗಿದ್ದರೆ?ಬಿಡು,ಬರಿ ಪ್ರಶ್ನೆಗಳನ್ನೆ ನಂಬಿದವನಲ್ಲ ನಾನು,ಸಾಮಾನ್ಯತೆಯನ್ನ ಒಪ್ಪಿಕೊಂಡವನು.ನಿನ್ನ ಯಶಸ್ಸಿಗೆ ಹಾರೈಕೆ ಇದ್ದೇ ಇದೆ.ಆದರೆ ಒಂದು ಮಾತು, ನೀನು ನನ್ನನ್ನಗಲಿ, ಈ ಸಂಬಂಧದ ಕೊಂಡಿ ಕಳಚಿ ನಿನ್ನ ಗಮ್ಯವನ್ನ ಸೇರಲಾರೆ(ಹೇಳು ಸಾಧ್ಯವೇ), ನನಗೆ ಒಂದಷ್ಟು ಬದಲಾವಣೆ ಬೇಕು, ಈ ಪತ್ರ ಓದಿ ಉತ್ತರಿಸು,ನಾ ಸ್ವಲ್ಪವಾದರು ಬದಲಾಗಿದ್ದೇನೆಯೇ?ಇಲ್ಲವೇ? ಎಂದು. ಹೋಗುವದಾದರೆ ಈ ಬದುಕಿನ ಪಯಣದಲ್ಲಿ ನಾ ನಿನ್ನ ಜೊತೆಗಿದ್ದೇನೆ.
ಒಂದು ಬಿನ್ನಹ, ನನ್ನ ನನ್ನಂತೆಯೇ ಒಪ್ಪಿಕೋ,ಇದೊಂದೆ ನನ್ನ ಮನವಿ,ಬರಲೇ? ನಿನ್ನೆಲ್ಲ ಪ್ರಶ್ನೆಗಳಿಗು ಉತ್ತರ ಸಿಕ್ಕಿರಬಹುದು ಅಂದು ಕೊಂಡಿದ್ದೇನೆ.

                                                                                                           ಎಂದಿಗು ನಿನ್ನವ
                                                                                                            ಶರಧಿ


Sunday, February 24, 2013

"ಅವನು" ಎಂಬ ಕಾಣದ ಮಾಯೆ....

ಸುಳಿಯದಿರು ಮುಂದೆಂದೂ ನನ್ನ ಕಣ್ಣ ಮುಂದೆ..
ಓಡುವುದು ಮನಸು ಮತ್ತೆ ಗತಕಾಲ ಹಿಂದೆ!!

ನಿನ್ನ  ನೋಡಬಾರದಿತ್ತು..ಅದೂ ಇಷ್ಟು ವರುಷಗಳ ನಂತರ...ನೋಡಿದರೂ ನೀ ನನ್ನ ಮಾತಾಡಿಸಬಾರದಿತ್ತು..
ನಿನ್ನ ನನ್ನೆದೆಯ ಸಾಗರದ ಒಳಸುಳಿಯಾಗಿ ಬಚ್ಚಿಟ್ಟಿರುವೆ...ಅದ ಕೆಣಕುವ ನಿನ್ನ ಸಾಹಸಕ್ಕೆ ನಾ ಏನ ಹೇಳಲಿ??
ನನಗೆ ಸಂತಸವಾಯ್ತು..ನಿನ್ನ ಸಂಸಾರ ಸಮೇತ ಸಂತಸವಾಗಿ ನೋಡಿ..
"ಆರು ವರ್ಷಗಳ ಕಾಲ ಆರದ ಪ್ರೇಮದ ದೀಪವ ಕಣ್ಣಕುಡಿಯಂತೆ ಸಲಹಿದ್ದೆವು..ಯಾಕೆ ನನ್ನ ದೂರ ಮಾಡಿದೆ?? "
ಹೇಳು ಈಗ್ಯಾಕೆ ಬೇಕಿತ್ತು ಈ ಪ್ರಶ್ನೆ??
ನಿನ್ನಂತೆ ನನ್ನೊಳಗು ಒಂದು ಆರದ ದೀಪವಿತ್ತು..ಕಾಪಿಡುವ ಬಯಕೆಯೂ ಇತ್ತು..

ನೀನೆ ಹೇಳುತ್ತಿದ್ದ ಮಾತು ನೆನಪಿದೆಯಾ?? ನಾನೊಂದು ಸ್ವತಂತ್ರ ಹಕ್ಕಿ ಅಂತ..

ಬಾನಿನಲ್ಲಿ ಚುಕ್ಕಿಯಾಗಿ
ಹಾರುವ ನಿನಗೇಕೆ
ಬಂತು ಮೌನ?
ಮೌನದ ಮಾತಿನೆಲ್ಲೆಯ ಮೀರಿ
ದೂರದ ತೀರದಲ್ಲಿ
ಬರೀ ಖಾಲಿ ದೊಡ್ಡ ಶೂನ್ಯ !!
ನೀ ಅಲ್ಲೆ ನಿನ್ನ ಬಯಕೆಗಳ
ಮೊಟ್ಟೆ ಇಡ್ತಿಯಂತಲ್ಲ
ಹೋಮಾ??*
ನೀನಿವತ್ತು ಇಟ್ಟದ್ದು ನಿನ್ನ ಮೊಟ್ಟೆಯೋ
ನನ್ನ ಬರಡು ಬಯಕೆಗಳೋ??

ನೀನು ಗರುಡದ ಗೂಡು ನೋಡಿದ್ದೀಯಾ?? ನೋಡಿಲ್ಲ ಅಲ್ವಾ??ಅದು ಕಾಣೋದು ಅಪರೂಪ ಅಂತೆ..

 ನಾ ಯಾವತ್ತು ನಿನ್ನ ಬದಲಿಸ ಯತ್ನಿಸಿರಲಿಲ್ಲ...ಕಾರಣ ಇಷ್ಟೇ..ನಂಗೆ ನನ್ನ ತರ ನಾನು, ಅವನ ತರ ಅವನೇ ಇರೋ ಅಂತವ ಬೇಕಿತ್ತು..
ಹಾಗಂತ ನಾ ನಿನ್ನ ಪ್ರೀತಿಸಲಿಲ್ಲ ಅಂದುಕೋ ಬೇಡ..
ಮೊದಲ ಪ್ರೇಮ ಒಂದು ಅದ್ಭುತ..ಅದೂ ನಮ್ಮ ಪತ್ರಗಳಲ್ಲಿ ಬರೆದ ಪ್ರೇಮ ಕಾವ್ಯ..ನಿಜಕ್ಕು ಒಬ್ಬ ಹುಡುಗ ಹುಡುಗಿ ಪತ್ರಗಳಲ್ಲೇ ಪ್ರೀತಿಸಿದ್ರಾ?? ಅಂತ ಈಗ ಅಷ್ಟು ಆಶ್ಚರ್ಯ ನಂಗೇ!!

ಪ್ರೇಮಪತ್ರಗಳಲ್ಲಿ ನಾ ನಿನ್ನ
ನೀ ನನ್ನ  ಹುಡುಕಿದೆವು
ಸಿಗದ ಅದೃಷ್ಟದ ಚಿಂತಾಮಣಿಗಾಗಿ
ಮಿಡುಕಿದೆವು..!!!

ನಿನ್ನ ಬಿಟ್ಟು ಈ ಊರಿಗೆ ಬರೋ ಸಾಹಸ ನಂಗೆ ಬೇಕಿರಲಿಲ್ಲ ಕಣೋ...ಶಿವಮೊಗ್ಗದಲ್ಲಿಯೆ ಹಾಯಾಗಿ ಏನೋ ಮಾಡ್ಕೊಂಡು ಇಬ್ರೂ ಇದ್ಬಿಡಬಹುದಿತ್ತು..ಆದ್ರೆ ನಾ ಓದಿದ ಓದು ನನ್ನ ಪುತ್ತೂರಿನ ಯಾವ್ದೋ ಮೂಲೆಗೆ ಸೇರಿಸ್ತು..ಮೊದಲೇ ಪತ್ರಗಳಲ್ಲಿ ಬೆಳೆದ ಪ್ರೇಮ..ಮೊದಲು ವಾರಕ್ಕೆಒಂದಿತ್ತು..ಅಮೇಲೆ ತಿಂಗಳಿಗೆ ಒಂದಾಯ್ತು..ಮನಸಿನ ಮಾತುಗಳು ಬಂದಾಯ್ತು..

ನಂಗೆ ಗೊತ್ತು..ನಿನ್ನ ಮನಸಲ್ಲಿ ನೀನು ಕಮ್ಮಿ ಓದಿದವ ಅನ್ನೋ ಭಾವನೆ ಯಾವತ್ತೂ ಇತ್ತು..ಬೆಂಗಳೂರಿಗೆ ಕಾಲಿಟ್ಟ ಮೇಲೂ ನಿನ್ನ ಅದೆಷ್ಟು ಬಾರಿ ಮಾತಡಿಸಲು ಯತ್ನಿಸಿದೆ..ಮನೆಯ ಮೊದಲ ಮಗನಾಗಿ ನಿನಗಿದ್ದ ಜವಾಬ್ದಾರಿಗಳು ನನ್ನ ಮೂಕಿ ಮಾಡಿದವು..ನಿನ್ನ ಹೆತ್ತ ತಾಯಿಯಿಂದ ನಿನ್ನ ದೂರ ಮಾಡಿ ಆಕೆ ಮಗನಿಗಾಗಿ ಕಟ್ಟಿದ್ದ ಕನಸುಗಳನ್ನ ಚೂರು ಮಾಡಿ ನಿನ್ನ ಓಡಿಸಿಕೊಂಡು ಬರುವ ಉಪಾಯ ನಂಗೆ ಇಷ್ಟ ಆಗಲಿಲ್ಲ..ಎಷ್ಟೋ ಸಾರಿ ಅನ್ನಿಸಿದ್ದುಂಟು..ನಾನೇ ಹುಡುಗ ನೀನೇ ಹುಡುಗಿ ಆಗಿರ್ಬೇಕಿತ್ತು ಅಂತ..
ನನ್ನ ಆಸೆಗಳ ಹಕ್ಕಿ ಜೀವನದ ಕಹಿಸತ್ಯಗಳ ಕತ್ತಲಲ್ಲಿ ರೆಕ್ಕೆ ಮುರ್ಕೊಂಡು ಬಿತ್ತು..ನಂಗೆ ಊರಲ್ಲೆಲ್ಲ ಕೆಟ್ಟ ಹೆಸರೂ ಬಂತು..ಆದರೆ ನಿಂಗೊತ್ತಾ..ನಾನೆಷ್ಟು ಮಾತ್ರೆ ನುಂಗಿದೆ ಎರಡು ವರುಷ ಅಂತಾ?? ಹೋಗಲಿ ಬಿಡು..ನಂಗೆ ಗುಂಡಿಗೆ ಗಟ್ಟಿ ಮಾಡಿದ್ದೇ ನೀನಿತ್ತ ವಿರಹ..ಅಥವಾ ನಾನೇ ತಂದು ಕೊಂಡ ವಿರಹ..
ಈಗ ಕಾವೇರಿ ತುಂಗೇಲಿ ಸಾಕಷ್ಟು ನೀರು ಹರಿದು ಹೋಗಿದೆ..ನಾನು ನೀನು ಜೊತೆಯಾಗಿ ಕಳೆದ ಮಳೆಗಾಲದಲ್ಲಿ ಚಿಗುರು ಒಡೆದ ಪುಟ್ಟ ಸಸಿಗಳು ಯೌವನಕ್ಕೆ ಕಾಲಿಟ್ಟಿವೆ..ನಾವಿಬ್ಬರೂ ಕೈ ಹಿಡಿದು ನಡೆದ ದಾರಿಗಳಲ್ಲಿ ಮರಗಳನ್ನ ಕಡಿದು ಅರಣ್ಯ ಇಲಾಖೆಯವರ ಅಕೇಶಿಯಾ ಗಿಡ ನೆಡಲಾಗಿದೆ..
ಆದರೂ..
ಈಗಲೂ ಬೇಜಾರದ್ರೆ ಮೊದಲು ನೆನಪಾಗೋದೆ ನೀನು..ಕಟ್ಟಿ ಕೊಂಡವ ಬಾಯಿಗೆ ಬಂದದ್ದೆಲ್ಲಾ ಬೈಯ್ತಾ ಇದ್ರೆ..ನಂಗೆ ಅನ್ನಿಸ್ತಿರುತ್ತೆ.."ಇದು ನಿನ್ನ ಶಾಪದ ಫಲವಾ" ಅಂತ..ನಂಗೆ ಈಗೊಂದು ಸತ್ಯದ ಮಹಾ ದರ್ಶನ ಆಗಿದೆ  ಮಾರಾಯ..ಜೀವನದಲ್ಲಿ ಸುಖ ಅನ್ನೋದು ಒಗ್ಗರಣೆ ತರ..ಬಾಕೀದೆಲ್ಲ ಸರಿಯಾಗಿದ್ರೂ ಅದು ಬೀಳದೆ ಇದ್ರೆ ಅಡಿಗೆ ರುಚಿಯಾಗಲ್ಲ..ಹಾಗಂತ ದಿನಾ ಒಗ್ಗರಣೆ ಹಾಕೋದು ಈ ತುಟ್ಟಿ ಕಾಲದಲ್ಲಿ ಬಲು ಕಷ್ಟ..

ನೀ ಹಾಡ್ತಾ ಇದ್ದ ಹಾಡು ನೆನಪಾಗ್ತಿದೆ ಕಣೋ..(ತುಂಬಾ ನೆನಪಾದಾಗಲೆಲ್ಲಾ ಇದೇ ಹಾಡೋದು ನಾನು)

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ....

 ನಿನಗಾಗಿ ಬರೆದ ಕವನವೊಂದು..ಒಪ್ಪಿಸಿಕೋ..ಕಣ್ಣ ಹನಿಗಳೊಂದಿಗೆ(ಸಧ್ಯಕ್ಕೆ ಅದೊಂದೇ ನಂದು ಅಂತ ಉಳಿದಿರೋದು!!)

ಕತ್ತಲ ಬದುಕಲ್ಲಿ ಬೆಳಕ ತರಬಲ್ಲ ಕಾಲ
ಭವಿಷ್ಯತ್ತಿನ ಎಲ್ಲ ಕನಸ
ಒಂದೇ ಕ್ಷಣದಲ್ಲಿ ಬೂದಿ ಮಾಡುವ
ವರ್ತಮಾನದ ಸಿಕ್ಕುಗಳ ನಡುವೆ
ನಿನ್ನನ್ನೆಲ್ಲೋ ಕಳಕೊಂಡಿದ್ದೇನೆ...

ಉಕ್ಕಿ ಬರುವ ಸಮುದ್ರದ ಅಲೆಗಳಿಗೀಗ
ಮೊದಲಿನ ಬಿರುಸಿಲ್ಲ...
ಹುಣ್ಣಿಮೆಯ ಬೆಳಕಲ್ಲಿ
ಈಗ ಕೇವಲ ವಿಷಾದ...
ನನ್ನ ಬದುಕಿನ ಪುಟಗಳಲ್ಲೀಗ
ಬರೇ ಹೇಮಂತ,

ಬಾಳು ಬೆಂಗಾಡಾಗಿ
ಮುರಿದ ಕಿಟಕಿ
ಗೆದ್ದಲು ತಿಂದ ಬಾಗಿಲು
ನಿಧಾನವಾಗಿ ಆಶಾಸೌಧಗಳ
ಅಂತ

ಕತ್ತಲಕೋಣೆಯಲಿ ಕಾಣುತಿರುವೆ
ಬೆಳಕಿನ ಕನಸು..
ಯಾವುದಾದರೂರಾಜಕುಮಾರ
ಬೆಳಕ ದೀವಿಗೆ ತಂದಾನು
ಎಂದು ಅನಂತದೆಡೆಗೆ
ನೆಟ್ಟ ಕಣ್ಣುಗಳಲ್ಲಿ
ಕೇವಲ ನಿನ್ನ ನಿರೀಕ್ಷೆ..

(ವಿ.ಸೂ:ಹೋಮಾ-ರೋಮನ್ನರ ಪುರಾಣಗಳಲ್ಲಿ ಬರುವ ಪಕ್ಷಿ..ಇದು ಗಗನದಲ್ಲೇ ಮೊಟ್ಟೆ ಇಡುತ್ತದಂತೆ..ಆ ಮೊಟ್ಟೆ ಭೂಮಿಗೆ ಬರುವ ಮೊದಲೇ ಒಡೆದು ಪಕ್ಷಿಯಾಗಿ..ತಾಯಿ ಪಕ್ಷಿಯೊಡನೆ ಹಾರಿ ಹೋಗ್ತದಂತೆ(ನನ್ನ ಚಾಟ್ ರೂಮ್ ರೋಮನ್ ಗೆಳೆಯ ಹೇಳಿದ್ದು!!)