Sunday, January 13, 2013

ಸುಮ್ಮನಿರದ ಸಾಲುಗಳು...

  ನಾನಳಿಯಲಿ

ನಿನಗೆಂಥ ಪ್ರೇಮದ ಹಸಿವು ದೊರೆ??
ನಿನ್ನ ಬಯಕೆಯ ಕಡಲ ಹೀರಿ
ಮುತ್ತಿನ ಮಧು ಮಳೆಯಸುರಿದೆ
ನೋಟದ ಮಿಂಚಿತ್ತು
ಪಿಸುಮಾತುಗಳ ಗುಡುಗಿತ್ತು
 ಆದರೆ...
ನಿನ್ನೆದೆಯ ಬರಡು ಮರುಭೂಮಿಯಲ್ಲಿ
ತಾಕಿ ಆವಿಯಾಯಿತು..
 ನನ್ನಲ್ಲಿ ಇನ್ನೂ ಬತ್ತದ ಜೀವಸೆಲೆಯಿದೆ
ಸುರಿವೆ ನಿನ್ನೊಡಲಿಗೆ
ತಕ್ಕೋ..ನಿನ್ನ ವಿರಹದ
ಬಡಬಾನಲಕ್ಕೆ ಸಿಕ್ಕಿ "ನಾನ"ಳಿಯಲಿ!!



ಸಂಕ್ರಾಂತಿ

 ಸಂಕ್ರಾಂತಿ ಬಂದಿದೆ
’ಸಮ್" ಕ್ರಾಂತಿ ಬರುವುದೇ??

ಅದೆಷ್ಟು ಸೀತೆಯರು..
ಅದೆಷ್ಟು ದ್ರೌಪದಿಯರು..
ಅದೆಷ್ಟು ಅಂಬೆಯರು,
ಅಂಬಾಲಿಕೆಯರು
ಕಣ್ಣ ನೀರ ಹರಿಸಿ 
ಒಡಲ ಅಸು ನೀಗಿಹರು
ನೀನು ದುಶ್ಯಾಸನರ 
ಅಳಿಸಿ ರಾಮರ ತರುವೆ
ಕ್ರಾಂತಿಯ ಕಿಡಿಯ ಹೆಣ್ಣ 
ಮನದಲ್ಲಿ ಹೊತ್ತಿಸಿ
ಒಂದಷ್ಟು ಶಾಂತಿಯ 
ತಂದಿಯೆಂದು ಆಸೆ 
ಹೊತ್ತಿದೆ ಎನ್ನ ಮನ!!
 ಹೇಳು ಬರೀ ಎಳ್ಳು ಬೆಲ್ಲ
ತರುವುದೇ ರಾಮರಾಜ್ಯ??
ಎಷ್ಟು ಕೊಟ್ಟರೇನು,ಎಷ್ಟು ಪಡೆದರೇನು?
ಸಂಕ್ರಾಂತಿ ಕ್ರಾಂತಿಯಾಗಬೇಕು
ಹೆಣ್ಣು ಕಾಳಿಯಾಗಬೇಕು
ರಣಚಂಡಿಯಾಗಬೇಕು!!







Sunday, January 6, 2013

ಸಂಶಯ


ನೀ ಕರೆದದ್ದು ನನಗೆ ಕೇಳಲಿಲ್ಲವೇ!!??
ಅದಕ್ಕೇ ನೋಡು,
ದಾಟಿ ಯುಗಾಂತರಗಳ ಪಾಡು
ಆಡಿ ನೂರಾರು ಪಾತ್ರಗಳ ಮಾತು
ಬೆಚ್ಚಗೆ,ಬೆಚ್ಚದಂತೆ ಹೊದ್ದು
ಮಲಗಿದ್ದ ಮಾಯೆಗಳ ಮುಕ್ಕಿ
ಬಂದೇ ಬಿಟ್ಟೆ

ಅದೋ ಅಲ್ಲಿ! ಇಲ್ಲಿ!
ಎನ್ನುತ ಹಿಡಿಯ ಬರುವ
ಸಾವಿರಾರು ಆಮಿಷಗಳ ದಾಟಿ
ಮನದ ವೇಗದೆಲ್ಲೆಯ ಮೀರಿ
ನಿನ್ನೆಡೆಗೆ ಹೀಗೆ ಬಂದೇ ಬಿಟ್ಟೆ

ನಿನ್ನ ಕೂಗಿಗೆ ಅಲ್ಪಗಳ ಮೆಟ್ಟಿ
ಭೂಮದ ಕಲ್ಪನೆಯ ಕಟ್ಟಿ
ಮಕಾಡೆ ಮಲಗಿದ್ದ ಅಹಿಂಸೆಯ ಅಶ್ವವ ತಟ್ಟಿ
ಕಾಲಾಂತರಗಳ ಅಳಿಸಿ
ಓ ಇದೋ ಬಂದೇ ಬಿಟ್ಟೆ ಬುದ್ಧ!!
ನಿಜವಾಗಲೂ ಹೇಳು...
ನೀನೆ ಕರೆದದ್ದಾ??



Monday, December 31, 2012

ಹೆಜ್ಜೆಗಳು..



ಸಂಪ್ರದಾಯದ ಪಾಚಿಯಲ್ಲಿ
ಜಾರುತ್ತಿವೆ ನನ್ನ 
ಹೆಜ್ಜೆಗಳು

ಗುರಿ ತಿಳಿಯೆ
ದಾರಿ ಅರಿಯೆ
ಎತ್ತ ಹೊರಟಿದೆ
ಈ ಬಾಳ ಕಾಲು ದಾರಿ??

ನಮ್ಮದೇ ರಕ್ತದಲ್ಲಿ
ಕಟ್ಟಿದ ಆಶಾ ಸೌಧಗಳ
ಕೆಡವಿ ಕೆಡವಿ
ಗೋರಿಗಳ ಕಟ್ಟುತ್ತಾ
ಗೋರಿಗಳ ಮೇಲೆ 
ಉದ್ಯಾನವನ ಕಟ್ಟುತ್ತಾ

ಬೆಳೆದ ಹಸಿರು ಹೂಗಳ ಮೇಲೆ
ನಡೆದಾಡುವ
ಹೆಜ್ಜೆಗಳು
ಇವು ಯಾರ ಹೆಜ್ಜೆಗಳು??

ಈ ರಾಕ್ಷಸ ಹೆಜ್ಜೆ 
ಗುರುತುಗಳ ನಡುವೆ
ನನ್ನದೇ 
ಹೆಜ್ಜೆಗಳು ನನಗೆ
ಅಪರಿಚಿತವಾಗಿವೆ
ಜಾರು ದಾರಿಯಲ್ಲಿವೆ...

Tuesday, December 25, 2012

ಆತ್ಮ ಸಂಗಾತಿ


ಪ್ರೇಮ ಎಂದರೆ ಏನು?? ನಿಮಗೆ ನನ್ನ ಪ್ರಶ್ನೆ ಕೇಳಿ ನೂರು ಉತ್ತರಗಳು ಹೊಳೆದಿರಬಹುದು.ಪ್ರೇಮ ಅಂದರೆ ಹಾಗೆ..ಬಯಕೆ..ಆಸೆ..ಹೀಗೆ..ಮುಂತಾಗಿ..ಆದರೆ ನನ್ನ ಅಭಿಪ್ರಾಯದಲ್ಲಿ ಪ್ರೇಮ ಎಂದರೆ ಆತ್ಮಗಳ ಮಿಲನ..ವ್ಯಕ್ತಿಯ ಬಣ್ಣ,ರೂಪು,ಕೆಲಸ,ಜಾತಿಗಳ ಮೀರಿದ ಕಲ್ಪನೆ..ಅಂತಹ ಪ್ರೇಮ ಸುಲಭ ಸಾಧ್ಯವಲ್ಲ..ಆದರೆ ಒಮ್ಮೆ ದಕ್ಕಿದರೆ ಅದು ಜನ್ಮ ಜನ್ಮಾಂತರದ ಬಂಧ!! (ಕೆಳಗಿನ ಕವಿತೆ ಈಗ ೧೦ ತಿಂಗಳ ಹಿಂದೆ ಬರೆದದ್ದು)

ಹುಣ್ಣಿಮೆಯ ಬೆಳಕಲ್ಲಿ ಹೊರಟ
ಚಕೋರಗಳ ದಿಬ್ಬಣ
ಕಡಲ ಅಲೆಗಳಿಗೀಗ ಚಂದ್ರನೊಂದು
ಹಿತವಾದ ತಲ್ಲಣ

ಅಲೆಗಳ ಚುಂಬಿಸುವ
ಕಿರಣಗಳ ತವಕ
ಹಾಗೇ ಎರಡು ಜೀವಗಳ ಬಂಧಿಸುವುದು
ಪ್ರೇಮ ಎಂಬ ಪಾವಕ

ನಾನು ನೀನು! ನಿನ್ನ ನನ್ನ
ತೋಳತೆಕ್ಕೆ ಬಂಧನ
ಉಸಿರ ಬಿಸಿಯು ತಾಕುತಿರಲು
ಭಾವಗಳಿಗೆ ಕಂಪನ

ಕಪ್ಪೂ ಒಪ್ಪು,ಬೆಳ್ಳಿ ಚಂದ
ಒಂದನೊಂದು ಬೆರೆತವು
ತುಟಿಯ ಜೊನ್ನ ದೊನ್ನೆಯಲ್ಲಿ
ಕನಸುಗಳು ಕಲೆತವು

ಬಯಕೆ ಎಂಬ ಅಗ್ನಿಕುಂಡ
ಕಾಮವುರಿದು ಹೋಗಲಿ
ನನ್ನ ನಿನ್ನ ಮಿಲನದಲ್ಲಿ
ಆತ್ಮಗಳು ಬೆರೆಯಲಿ

ಆತ್ಮಗಳ ಮಿಲನದಲ್ಲಿ
ದೈವವೆಮಗೆ ಒಲಿವುದು
ಅವನ ಒಲುಮೆ ಬಾಳಿನಲ್ಲಿ
ಸುಖದ ಧಾರೆ ಸುರಿವುದು!!

Saturday, December 15, 2012

ಶಿಶಿರ ಹೇಮಂತ ಗಾನ(ಚಳಿಗಾಲದ ಪಲಕುಗಳು)

 ಪಲಕು ೧


ಹೊದಿಕೆಯ ಅಡಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ ನನ್ನ ಕರೆದದ್ದು ಸೂರ್ಯನಾ?ಈ ಮೈ ನಡುಕಕ್ಕೆ ನಿನ್ನ ನೆನಪು ಮತ್ತಷ್ಟು ಚಳಿ ಏರಿಸುತ್ತದಲ್ಲೋ ಪಾಪಿ!!ನಾನ್ಯಾವ ಪಾಪದ ಕರ್ಮ ಮಾದಿದ್ದೇನೋ,ಇಂತಹ ರಣ ಚಳಿಗಾಲದಲ್ಲಿ ನನ್ನ ವಿರಹದ ಉರಿಗೆ ತಳ್ಳಿ ನಿನ್ನ ತೊಗಲುಭರಿತ ಹೃದಯವ ಚಳಿ ಕಾಸೋಕೆ ಬಿಟ್ಟಿದ್ದೀಯಲ್ಲ ಹೇಳು ಇದು ಯಾವ ನ್ಯಾಯ? ಕಷ್ಟ ಪಟ್ಟು ಹೇಗೋ ಎದ್ದಿದ್ದಾಯ್ತು..ಅಕ್ಕಪಕ್ಕದ ಮನೆಯ ಹೆಂಗಸರ ಸುಳಿವಿಲ್ಲ ಈ ಚಳಿಗಾಲ ಬಂದ ಮೇಲೆ,ಎದ್ದಾರಾದರು ಹೇಗೆ, ಗಂಡ ಮಕ್ಕಳ ನಡುವೆ ಬೆಚ್ಚಗೆ ಹೊದ್ದು ಮಲಗಿದ ಅವರ ಸವಿ ನಿದ್ದೆಗೆ ಮತ್ತಷ್ಟು ಮಸುಕು ಸುರಿದು ನಿದಿರೆಯ ಮಾಯಾ ಲೋಕಕ್ಕೆ ತಳ್ಳುವನಲ್ಲಾ ಈ ಶಿಶಿರ..ನನ್ನ ಪಾಲಿಗೆ ಮಾತ್ರ ವೈರಿ!!

ಪಲಕು ೨

ತಣ್ಣನೆಯ ನೀರಿನಲ್ಲಿ ಮುಖ ತೊಳೆದು,ಬೆಳಗಿನ ಸೌಂದರ್ಯ ಸವಿಯಲು ಮನೆ ಬಾಗಿಲು ತೆರೆದೆ,ರಪ್ಪೆಂದು ರಾಚಿದ ಗಾಳಿಗೆ ಎದೆಯಲ್ಲಿ ನಡುಕ, ಮುಂದೆ ಯಾರಾದರೂ ಇದ್ದಾರೋ?..ಕಾಣಲಾಗದಷ್ಟು ಮಂಜಿನ ತೆರೆ, ನನ್ನ ನಿನ್ನ ನಡುವೆಯೂ ಇಷ್ಟೇ ಅಂತರ..ಹೆಜ್ಜೆ ಇಟ್ಟರೆ ಅಳುವ ಗತಿಸಿದ ನಿನ್ನ ಸವಿ ಸ್ನೇಹದ ನೆನಪುಗಳು..ನನ್ನ ಬೆಳಗಿನ ಕಿನ್ನರಿ ಅಂತಿದ್ದೆ..ಈಗ ಕಿನ್ನರಿಯ ಮಾಯಶಕ್ತಿ ಸೊರಗಿದೆ..ನೀ ಹಾಸಿದ ಮಂಜಿನ ತೆರೆಯ ನೀನೇ ಸರಿಸಿ ಬರಬಾರದೇ? ಮನಸಿಗೂ ಒಮ್ಮೊಮ್ಮೆ ಎಂತಹ ಹುಚ್ಚು ನೋಡು..ನಾ ನಡೆದ ಉಹುಮ್ ನಾವು ನಡೆದ ಈ ಹಾದಿಯಲ್ಲಿ ಮತ್ತೆ ಹೂ(ಅದೂ ಕಣಗಿಲೆ) ಅರಳಿದೆ..ಅದರ ಮೇಲೆ ಬಿದ್ದ ಹಿಮದ ಬಿಂದುವಿನಲ್ಲಿ ನಿನ್ನ ಸ್ಪರ್ಶದ ಅನುಭವವಾಗಿ ಒಮ್ಮೆ ಬೆಚ್ಚಿದೆ!!


ಪಲಕು ೩

ಎಂದೂ ಕಾಣುತ್ತಿದ್ದ ನಿತ್ಯದ ಮುಖಗಳಿಗೀಗ ಸ್ಪಷ್ಟತೆ ಇಲ್ಲ..ಯಾಕೆಂದರೆ ಮಂಜು ಸುರಿದಿದೆ ನೋಡು..ಸೂರ್ಯನು ನಿನ್ನ ಸ್ನೇಹಿತ ತಾನೆ..(ನೀ ಚಂದಿರನಾದರೆ ಅವ ನಿನ್ನ ಸ್ನೇಹಿತನೊ ವೈರಿಯೊ?)ಅವನಿಗೆ ನನ್ನ ಮೇಲ್ಯಾವ ದ್ವೇಷವಿದೆ  ಮಾರಾಯ ಎಲ್ಲಾ ಮುಖಗಳ ಮೇಲಿನ ನಗುವ ಅಳಿಸಿ ಹಾಕಿದ್ದಂತೆ ಕಾಣುವುದು!! ಕೈ ಕೈ ಹಿಡಿದು ನಾವಿಬ್ಬರೂ ಅದೆಷ್ಟು ಬಾರಿ ಈ ಜಾಗದಲ್ಲಿ ಸೂರ್ಯನಿಗೆ "ಗುಡ್ ಮಾರ್ನಿಂಗ್" ಹೇಳಿಲ್ಲ??ಈಗಲ್ಲಿ ನೀ ಬಿಟ್ಟು ಹೋದ ಅಸಹನೀಯ ಏಕಾಂತವಿದೆ..ಆ ದಾರಿಯಲ್ಲಿರುವ ಮಂಜಿನ ತೆರೆ ಈಗ ಮತ್ತಷ್ಟು ಗಾಢವಾಗಿದೆ.ಆದರೂ ನನಗೆ ಚಳಿಗಾಲ ಎಂದರೆ ಇಷ್ಟ..ನಿನ್ನ ನೆನಪು ಮತ್ತಷ್ಟು ನಿಚ್ಚಳ ನನ್ನ ಪ್ರೀತಿ ಮತ್ತಷ್ಟು ಆಳವಾಗುತ್ತದೆ ನೋಡು..ಅದಕ್ಕೇ!!

ಪಲಕು ೪
ಏನೆ ಹೇಳು,ಈ ಚಳಿಗಾಲಕ್ಕೊಂದು ಅನೂಹ್ಯ ಸೌಂದರ್ಯವಿದೆ , ಒಂದು ಬಣ್ಣಿಸಲಾಗದ ಅಂದವಿದೆ, ಮುಪ್ಪಿನ ಸುಕ್ಕುಗಳಲ್ಲಿರುವ ಅನುಭವದ ರೇಖೆಗಳಂತೆ ಜೀವನದ ನಶ್ವರತೆಯ ಸಾರುವ ಗುಣವಿದೆ..ನೋಡು..ಎಲ್ಲ ಮರಗಳಿಂದ ಉದುರುವ ಬಣ್ಣ ಬಣ್ಣ ಮಾಸಿದ ಎಲೆಗಳು ಯಾವ ಅವಸರವಿಲ್ಲದೇ ಭೂಮಿಯನ್ನ ನಿಧಾನವಾಗಿ ಚುಂಬಿಸುತ್ತಿದೆ..ಕಲರವದಿಂದ ಜರ್ಝರಿತವಾಗಿದ್ದ ಈ ವನದಲ್ಲಿ ಮೌನದ ಹಿತವಾದ ಕೂಜನ!! ಹಿಮಮಣಿಗಳ ಅಂದವೆನ ಹೇಳಲಿ ಗೆಳೆಯಾ,ಸೂರ್ಯನಿಗೇ ಗೊತ್ತಿಲ್ಲದ ಅನೇಕ ಬಣ್ಣಗಳಲ್ಲಿ, ಅವನ ಪ್ರಖರ ಕಿರಣಕ್ಕೆ ಕರಗುವಾಗಲೂ ಅದೆಂಥ ತನ್ಮಯತೆ??ನಿನ್ನಲ್ಲಿ ಕರಗುವ ನನ್ನಂತೆ!!ಈ ಮೌನದಲ್ಲಿ ಒಂದು ವಿರಹವಿದೆ..ಈ ಬಿದ್ದ ಎಲೆಗಳ ಮೇಲೆ ನಡೆವಾಗ ನಿನ್ನ ನೆನಪುಗಳ ಸರಸರ್ ಸದ್ದಿಗೆ ನನ್ನ ಕಾಲಗೆಜ್ಜೆ ಮೌನವಾಗಿದೆ.. ಆ ಎಲೆ ಇಲ್ಲದ ಮರಗಳು ನಶ್ವರತೆ,ದು:ಖದ ತೀವ್ರತೆಯನ್ನ ಸೂಚಿಸುವಂತೆ ನಿಂತಿವೆ, ಬೀಸಿ ಬರುವ ಗಾಳಿಗೀಗ ಎಲ್ಲಿಲ್ಲದ ತೀವ್ರತೆ..ನಲ್ಲನನ್ನ ಕಳಕೊಂಡ ನಲ್ಲೆಯ ನಿಟ್ಟುಸಿರ ಓಲೆ ಅದರಲ್ಲಿರಬಹುದೇ?? ನಾನಂಥ ಓಲೆಯೊಂದ ಬರೆದರೆ ನೀ ದೂರದಲ್ಲೆಲ್ಲೋ ಓದಬಹುದೇ??

ಪಲಕು೫

ಇದು ಆಸೆಗಳ ಹಣ್ಣಾಗುವ ಕಾಲ..ಹಳೇ ಗಾಯಗಳು,ನೋವುಗಳು ಕೆಣಕುವ ಕಾಲ..ಆಸೆಗಳ ಹಣ್ಣುಗಳು ಬಯಕೆಗಳ  ಎಲೆಗಳು ಉದುರುವ ಕಾಲ..ಸುಖ-ದು:ಖದ ಸಮ್ಮಿಲನದ ಅರೆಮಾಗಿದ ಮಾಗಿ ಕಾಲ..ಯಾವ ಅವಸರವಿಲ್ಲದ ಸಾವಕಾಶದ ಕಾಲ..ವಿರಹಿಗಳ ಸುಡುವ ಚಳಿಗಾಲ..ಮನಸ್ಸು ಯೋಚಿಸುತ್ತದೆ..ದು:ಖವಿಲ್ಲದೇ ಸುಖವೇ?? ಕಪ್ಪೆಂಬ ಬಣ್ಣವೇ ಕಾಣದಿದ್ದರೆ ಬಿಳುಪು ಕಂಡೀತು ಹೇಗೆ?? ಕತ್ತಲಿಲ್ಲದ ಬೆಳಕೇ??ಪ್ರೀತಿ ಇಲ್ಲದ ಪ್ರಕೃತಿಯೇ?? ಶಿಶಿರ ಹೇಮಂತರಿಲ್ಲದ ವಸಂತನೇ??ನಿನ್ನ ಇರುವಿರದ ನಾನೇ?? ನೀ ಉತ್ತರಿಸು!! ನನ್ನೊಂದಿಗೆ ಶಿಶಿರನೂ ಹೇಮಂತನೂ ಕಾಯುತ್ತಿರುವರು ನಿನ್ನ ಉತ್ತರಕ್ಕೆ..ವಸಂತನೊಬ್ಬ ಬರುವ ಮೊದಲೇ ನಿನ್ನ ಸಂದೇಶ ತಲುಪಲಿ..ನನ್ನ ಬರದಾದ ಬಯಕೆಗಳ ನದಿ ತುಂಬಿ ಹರಿಯಲಿ..



 

Friday, December 7, 2012

ಆ ಹುಡುಗಿ...

ಅವಳ ಕಣ್ಣುಗಳಲ್ಲಿ ನೀರಿನ ಪಸೆಯಿತ್ತು,ಆರದ ನೋವಿನ ಊಟೆ ಹೊತ್ತು ನಡೆಯಲಾಗದವಳಂತೆ ಬಗ್ಗಿ ನಡೆಯುತ್ತಿದ್ದಳು,ಆದರೂ ಆ ನಡಿಗೆಯಲ್ಲೊಂದು ಪ್ರಶಾಂತತೆಯಿತ್ತು,ಅವಸರದ ಸುಳಿವಿಲ್ಲದ ಬೇಸಿಗೆಯ ಗಾಳಿ ಆಕೆಗೇನೋ ಎಂಬಂತೆ ತೀರ ತಂಪಲ್ಲದೆ ಬೀಸುತ್ತಿತ್ತು,ಸುತ್ತ ಬೆಂಕಿ ಪೊಟ್ಟಣಗಳಂತೆ ಕಾಣುತ್ತಿರುವ ಸಾವಿರಾರು ಮನೆಗಳಿಂದ ಕೇಳುವ ಶಬ್ದ ಆಕೆಗೆ ಕೇಳಿಸುತ್ತಿಲ್ಲ, ಸುತ್ತ ನಿಂತು ಒಮ್ಮೆ ಸುಮ್ಮನೆ ಧೇನಿಸಿದಳು, ಆ ಮನೆಯ ಕಾಂಪೌಂಡಿನ ಸುತ್ತ ಇರುವ ವಸ್ತುಗಳ ಕಂಡು ಆಕೆಯ ಕಣ್ಣರಳಿತು,ಒಂದೊಂದಾಗಿ ಆರಿಸಿ ತನ್ನ ಪುಟ್ಟ ಕೈ ಚೀಲಕ್ಕೆ ತುಂಬಿದಳು, ಮುಂದೆ ಹೊರಟಾಕೆ ಮತ್ತೇನೋ ಹುಡುಕುವಂತೆ ಎರಡು ಹೆಜ್ಜೆ ಹಿಂದೆ ಬಂದಳು,ಆ ಮನೆಯ ಸೌಂದರ್ಯ ಆಕೆಯ ಮನ ಸೆಳೆಯಿತು,ಬಾಗಿಲಿನ ಹೊಸಾ ಚಿತ್ತಾರ ಕರೆಯಿತು, ಒಳಗೆ ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಮುದ್ದಾದ ಮಗು ಅವಳತ್ತಲೇ ನಡೆದು ಬಂತು. ಅದರ ಮುದ್ದು ಮೊಗ ಆಕೆ ಜಾಹೀರಾತಿನ ಪೋಸ್ಟರಿನಲ್ಲಿದ್ದ ಮುಖವನ್ನೇ ನೆನಪಿಗೆ ತಂತು.
ಹತ್ತಿರ ನಿಂತು ಕೈ ಚಾಚಿದಳು,

ಆ ಮಗು ಬಂತು,ಅಗೋ ಬಂದೇ ಬಿಟ್ಟಿತಲ್ಲ,

ಅರೆರೆ!! ಜೊತೆಗೆ ಅವರಮ್ಮನೂ, ಕೈಯಲ್ಲಿ ಮಲ್ಲಿಗೆಯ ಮಾಲೆ ಹಿಡಿದು!!

"ಮಗು ಯಾರಮ್ಮ ನೀನು?? ಇಲ್ಲೇನು ಮಾಡ್ತಾ ಇದ್ದೀಯಾ?"

ತಾನು ಯಾರು?,ನೆನಪಿಸಿಕೊಳ್ಳಲೆತ್ನಿಸಿದಳು, ಆಗಲಿಲ್ಲ, ಸುಮ್ಮನೆ ಕಾಲ್ಬೆರಳು ನೆಲ ಗೀರತೊಡಗಿತು,

"ಮಗೂ,ಊಟವಾಯ್ತೇ ನಿನ್ನದು??"

ಊಟ ,ಹಾಗೆಂದರೇನು?? ಹಾ!! ನೆನಪಾಯ್ತು,ಅಮ್ಮ ಹೇಳುತ್ತಿದ್ದಳಲ್ಲ,

"ಅಲ್ಲೆಲ್ಲೋ ಸುಂದರ ಜಗತ್ತೊಂದಿದೆಯಂತೆ,ಅಲ್ಲಿ ಗಂಜಿ ಬದಲು ಸುವಾಸನೆಯುಳ್ಳ ಅಕ್ಕಿಯೆಂಬ ವಸ್ತು ತಿನ್ನಲು ಸಿಗುತ್ತದಂತೆ!!ಇದು ಅದೇ",
ಪಸೆಯಿದ್ದ ಕಂಗಳಲ್ಲಿ ದೀಪವೊಂದು ಬೆಳಗಿತು,

"ಬಾ,ಮಗೂ,ನಮ್ಮ ಪುಟ್ಟನ ಹುಟ್ಟಿದ ದಿನ ಇವತ್ತು"

ಇವಳು ಅರ್ಥವಾಗದೆ ಸುಮ್ಮನೆ ನಿಂತೇ ಇದ್ದಳು,ಆದರೆ ಎಲ್ಲಿಂದಲೋ ಎರಡು ಕೈಗಳು ಬಂದು ಒಳಗೆಳೆದುಕೊಂಡವು, ಮತ್ಯಾವುದೋ ಎರಡು ಕೈಗಳು ಆಕೆಗೆ ಬಡಿಸಿದವು,ಹೆಸರೇ ಗೊತ್ತಿಲ್ಲದ ಅನೇಕ ವಸ್ತುಗಳು ಎಲೆಯ ಮೇಲೆ ಬಂದು ಬೀಳುತ್ತಿದ್ದರೆ ಆಕೆ ಕುಳಿತೇ ಇದ್ದಳು ನಿಶ್ಚಲವಾಗಿ,

"ಕ್ಲಿಕ್" ದೊಡ್ಡದಾದ ಬೆಳಕೊಂದು ಬಂದಂತಾಯಿತು, ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದ ಆಕೆ ವಾಸ್ತವಕ್ಕಿಳಿದಳು,

ಆದಷ್ಟು ಜಾಸ್ತಿ ತಿನ್ನಲೆತ್ನಿದಳು,ಆಗದೇ ಎಲೆಯ ಬಿಟ್ಟು ಏಳುವಾಗ ಕಂಗಳು ತುಂಬಿ ಬಂದವು, ಮತ್ತದೇ ಸ್ವರ ಕೇಳಿತು,

"ಮಗೂ ನಿನ್ನಮ್ಮ ಅಪ್ಪ ಎಲ್ಲಿ?"

"ಅಮ್ಮ ಮೇಲೆ ಇದಾರೆ,ಮತ್ತೆ ಅಪ್ಪ ಗೊತ್ತಿಲ್ಲ"

"ಈ ಪುಟ್ಟನ ಜೊತೆ ಇರ್ತೀಯಾ?"

ಆಕೆ ಹೇಳಲೋ ಬೇಡವೋ ಎಂಬಂತೆ ಸಣ್ಣಗೆ "ಹುಂ" ಎಂದದ್ದೇ ಮುಂದೆ ನಡೆದದ್ದೆಲ್ಲಾ ಕನಸು!! ಅಮ್ಮ ಹೇಳುತ್ತಿದ್ದ "ಸ್ವರ್ಗ"ವೆಂದರೆ ಇದು,ಆ ಹೆಂಗಸೇ "ಕಿನ್ನರಿ" ಅಂದುಕೊಂಡ ಆ ಎಳಸು ಕಂಗಳಿಗೆ ದಣಿವಾಗುತ್ತಲೇ ನಿದ್ರೆ ಆವರಿಸಿತ್ತು.

"ಯೋಯ್, ಯಾರಮ್ಮಾ ಅದು,ಎಲ್ಲಿಂದ ಬಂದು ಸಾಯ್ತಾವೋ ನಮ್ ತಲೇ ತಿನ್ನಕ್ಕೆ, ಒಯ್ ರಂಗಾ ಯಾವುದೋ ಚಿಂದಿ ಹುಡುಗಿ ಇಲ್ಲೇ ಬಿದ್ಬಿಟ್ಟಿದೆ,ಗಾಡಿ ತೆಗೆಯಕ್ಕೆ ಆಗ್ತಾ ಇಲ್ಲ,ನೀನೆಲ್ಲೊ ಹೋಗಿದ್ದೆ ಸಾಯಕ್ಕೆ?" ಗಡಸು ದ್ವನಿ ಕಿರುಚಿತು,

"ಸಾರ್, ಬಂದೇ, ಇವತ್ತು ಬೆಳಗಿನ ಜಾವ ಬಂದಿರ್ಬೇಕೇನೋ, ಅರೆರೆ!!ಅಯ್ಯೋ ಸಾರ್ ಜೀವ ಹೋಗ್ಬಿಟ್ಟಿದೆ!!ಯೇನ್ ಮಾಡೋದು ??"

"ನಗರ ಪಾಲಿಕೆ ವ್ಯಾನ್ಗೆ ಫೋನ್ ಮಾಡು ಭೇವ್ಕೂಫ!! ಅದನ್ನ ಎಳದು ಆ ಕಡೆ ಹಾಕು,ಇಲ್ಲೇ ಬಿದ್ದಿದ್ರೆ ಮೀಡಿಯಾದೋರು ದೊಡ್ಡ ಹಗರಣ ಮಾಡ್ತಾರೆ"

"ಸರಿ ಸಾರ್,"

ಮರುದಿನದ ಪತ್ರಿಕೆಯಲ್ಲಿ ಸಣ್ಣದಾಗಿ ಕ್ರೈಮ್ ವಿಭಾಗದಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು

"ಎಂಟು ವರ್ಷದ ಚಿಂದಿ ಆಯುವ ಬಾಲಕಿಯ ಶವ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳ ಮನೆಯ ಎದುರು ರೋಡಿನಲ್ಲಿ ಪತ್ತೆಯಾಗಿದ್ದು, ಮಾನ್ಯ ಮಂತ್ರಿಗಳು ಆಕೆಯ ತಂದೆ ತಾಯಿಗಳಿಗೆ ಐವತ್ತು ಸಾವಿರದ ಪರಿಹಾರ ಪ್ರಕಟಿಸಿದ್ದಾರೆ".

ಮಲ್ಲಿಗೆಯೊಂದು ಅರಳುವ ಮೊದಲೇ ಹಸಿವಿಂದ ಬಾಡಿ ಹೋದದ್ದು ಯಾರಗಮನಕ್ಕೂ ಬರಲೇ ಇಲ್ಲ!!

Friday, November 30, 2012

ನಾ ಯಶೋದೆ...

 ತಾಯ್ತನ ಅನ್ನೋದು ಸುಂದರ ವರ...ನನ್ನ ಪುಟ್ಟ ಭಾವತರಣ(ನನ್ನ ಮಗ) ನನ್ನ ಬದುಕನ್ನು ನಿಜಕ್ಕು ಗುರುವಾಗಿ ತಿದ್ದಿದ್ದಾನೆ,ನಾನು ಅವನಲ್ಲಿ ನನ್ನ ಜಗತ್ತು ಕಂಡಿದ್ದೀನಿ..ಅವನು ಬರೆಸಿದ ಕವನ ಇದು..

ನಿನ್ನ ಪುಟ್ಟ ಕೈಗಳಲ್ಲಿ
ನನ್ನ ಕೊರಳ ಬಳಸಿದಾಗ
ನೋಡು ನಾನೀಗ ಯಶೋದೆ!!

ನಿನ್ನ ಮುದ್ದು ಮುಖದಲ್ಲಿ ಸುಂದರ
ನಗುವು ಹೊಮ್ಮಿದಾಗ
ಕತ್ತಲ ತೆರೆ ಸರಿದು
ಹೃದಯದ ಕೋಣೆಯಲ್ಲಿ
ಬೆಳಗಿನ ಬೆಳಕು

ತುಟಿಗಳ ಅಂಚಿನಲ್ಲಿ
ಸುರಿವ ಸಿಹಿಮಾತುಗಳ
ಮುತ್ತಿನ ಧಾರೆಗೆ
ವಸುಂಧರೆ ಹೊಟ್ಟೆಕಿಚ್ಚಿಗೆ
ಮತ್ತೊಮ್ಮೆ ಬಿಮ್ಮನಸಿಯಾದಾಳು!!


ನೀ ನನಗೆ ಶ್ಯಾಮ,
ನೀ ನನಗೆ ರಾಮ
ಜಗದ ಎಲ್ಲ
ಸೌಂದರ್ಯಗಳ ಮೊತ್ತ
ನೀ ನನ್ನ ಕಾಮ,
ನವಿಲುಗರಿಯ
ಕಣ್ಣಲ್ಲಿರುವ ಅಷ್ಟೂ ಬಣ್ಣ
ನೀ ನನಗೆ ನನ್ನ ಮುದ್ದು ಕಣ್ಣಾ!!

Saturday, November 24, 2012

Everything I Do

In this way of life You love some one deeply..Yes,everybody does...Its a promise which seems never break..you may lost that person,but you never stop yourself from loving them till your last breath...this poem dedicated to all lovers...

Everything i Do do it For You,

When I laugh, I Just remember
your beautiful smile,
which makes me run towrds you all the
way mile over mile

whole world may not be with you
all the time when you need
But I will be there whenever
You down,Till you get Succeed

belive my heart throb,I may not able
 to give you materialistic things
but I Promise,I give you Light of my Soul,
which may give you wings..

I Belive, I may give you everything
even my being is for you
I Can, I Know because
everything I Do Do It for you!!

Sunday, November 18, 2012

ಮನಸಿನ ನೂರೊಂದು ಯೋಚನೆಗಳು..ಕವನಗಳು

ಒಮ್ಮೊಮ್ಮೆ ಮನಸು ಯೋಚಿಸುವ ವಿಷಯಗಳು ಕವನಗಳಾಗಿ ಬಂದರೆ??ಕೆಳಗಿನ ಕವನಗಳು ಹಾಗೆಯೇ ಕೆಲವೊಂದು ಭಾವಗಳ ಅನಾವರಣ..ನಿಮಗೂ ಹೀಗನ್ನಿಸಿರಬಹುದೆ??

ಬೇಕೊಂದು ಕಿಟಕಿ

ಎಲ್ಲ ಬಂಧನಗಳ ಕಳಚಿ ದೂರ ದೇಶಕೆ 
ಹಾರುವುದೆ ಮನಸು?
ದೇಹದ ಅರಿವಿಲ್ಲದ ಯಾವುದೋ
ಅಮೂರ್ತ ಭಾವವೊಂದು
ಕಾಡುತಿದೆ
ನಾನು 
ಈ ಜಗತ್ತು
ಸಕಲ ಚರಾಚರಗಳು
ಭಾವನೆಗಳೇ ಇಲ್ಲದ ಬೆಂಗಾಡಿನಂತೆ
ಅನಿಸುತ್ತಿದೆ
ಈ ಚಕ್ರವ್ಯೂಹದ ಸುಳಿಗೆ ಸಿಕ್ಕು 
ಕಾಣೆಯಾಗುವ ಮುನ್ನ
ನನ್ನ ನಾನು ಹುಡುಕಬೇಕು
ಮತ್ತೆ ಹೊಸತನ ಪಡೆಯಬೇಕು
ಮರಳಿ ಬರದ ವಸಂತಗಳ ಎಣಿಸಿ
ಹಣದ ಮಾಯೆಯ ಹಿಂದೆ
ನನ್ನತನವ ಬೆತ್ತಲಾಗಿಸಿದ
ಈ ಜಗತ್ತಿನ ಅರಿವು ಏಕೆ ಬೇಕು??
ನನ್ನ ಒಳಮನದೊಳಗೊಂದು
ನೀನಿತ್ತ ಅರಿವಿನ ಕಿಟಕಿಯಿರಲಿ
ಅಷ್ಟೇ ಸಾಕು!!

ವಿರಹ...

ನನ್ನ ಮನದ ಶರಧಿಯಲ್ಲಿ 
ನಿನ್ನ ನೆನಪಿನಲೆಯ ವಿರಹ
ಕಾದು ಕಾದು ದಡಕೆ ಬಡಿದು
ಮೊರೆವ ತೆರದಿ  ಆಳ ಶರಧಿ ವಿರಹ

ನಿನ್ನ ಮಾತು ನಿನ್ನ ನೋಟ
ನಿನ್ನ ಜೊತೆಗಿನಾಟ ಬೇಟ
ಕೂಡಿ ಕಳೆದ ಪ್ರೇಮ ಕೂಟ
ತಣಿಯದಾದ ದಾಹ ವಿರಹ

ಎದೆಯ ಅಗ್ನಿಕುಂಡದಲ್ಲಿ
ಚಿಗಿದು ಚಿಮ್ಮುವ ಉರಿಯ ಜ್ವಾಲೆ
ಜಗದ ಎಲ್ಲ ನಿಯಮ ಮೀರಿ
ಸುಡುವ ಆಸೆ ನಿರಾಸೆ ವಿರಹ!!

ನಮ್ಮ ತುಟಿಯ ಅಂಚುಗಳಲಿ
ಸುರಿದ ಮುತ್ತು ಜೇನ ಸವಿಯ
ನಮ್ಮ ತೋಳ ಸೆರೆಯಲ್ಲಿ
ನಲುಗಿದಂಥ ಹೂಗಳ ಕಥೆಯ
ನೆನೆದು ಮನವು ಅಳುತಿದೆ


ಕಾಲವನ್ನು ಹಿಂದೆ ತಳ್ಳಿ
ನಿನ್ನ ಜೊತೆಗೆ ಕಳೆದ
ಕ್ಷಣಗಳ ಕದ್ದು ಶಾಶ್ವತ
ಹಿಡಿಯ ಬಯಸಿದೆ

ತೀರದ ದೂರದ ಮೋಹ ವಿರಹ!!

ಕ್ರಾಂತಿ-ಮಗು

ಹಸಿವನ್ನು ಸೂಸುವ
ನಿನ್ನ  ವಿಶಾಲ
ಶೂನ್ಯಕ್ಕೆ
ತೆರೆದ ಕಂಗಳಲ್ಲಿ
ನಾಳೆಯ 
ಭರವಸೆಯ ಕಾಣಲಾರೆ

ಮಗು, ಹೆದರಬೇಡ
ನಾನಿದ್ದೇನೆ
ನನ್ನೊಡಲಲ್ಲೂ
ಒಂದು ಉರಿವ
ತಣ್ಣನೆಯ
ಕ್ರಾಂತಿಯ 
ಜ್ವಾಲಾಮುಖಿಯಿದೆ

ನಿನ್ನ ಹಸಿವಿನ
ಕಿಚ್ಚು ನನ್ನ ಕ್ರಾಂತಿಯ
ಕಿಡಿಯ ಒಮ್ಮೆ 
ಸೋಕಲಿ
ಮೈ-ಮನಗಳಲ್ಲಿ
ಈ ದೇಶದ
ಎಲುಬುಳಲ್ಲಿರುವ
ಕೀಲುನೋವುಗಳ
ಹೊರತಳ್ಳಲಿ

ಮಗು...ಒಮ್ಮೆ
ನಿನ್ನ ಅರೆತೆರೆದ ಹಸಿದ 
ಕಣ್ಣುಗಳಿಂದ ನೋಡು
ಕ್ರಾಂತಿಯ ಕಿಡಿ
ಹೊತ್ತಬೇಕು!!


Sunday, October 21, 2012

ಮುರಿದ ಚಂದ್ರನ ತುಣುಕುಗಳು...

ತುಣುಕು-೧

ಚಂದಿರ,ನಿನ್ನದು ಕಾಲಕ್ಕೊಂದು ಬಣ್ಣ,
ವಸಂತನ ತೆಕ್ಕೆಯಲ್ಲಿ
ನಾನು ಅರಳಿದ ಹೂವು
ನಿನ್ನ ಬೆಳದಿಂಗಳ ಪ್ರೇಮದಲೆಗಳಲ್ಲಿ
ನಗ್ನಳಾಗಿ ನನ್ನ ಬಯಕೆಗಳ
ತೋಯಿಸಿಕೊಂಡೆ

ಶ್ರಾವಣದ ಕುಳಿರ್ಗಾಳಿ ನನ್ನ
ತಟ್ಟುವಾಗ ಮೋಡಗಳ ನಡುವೆ
ನನ್ನ ಭಾವಗಳ  ನಡುವೆ
ನಿನ್ನ ಕಣ್ಣಮುಚ್ಚಾಲೆ
ಒದ್ದೆಯಾಯ್ತು ನನ್ನೆದೆಯ
ರಂಗಸ್ಥಳ

ಇಂದು...ಶಿಶಿರನಾಗಮನ..
ನಿನ್ನ ಬಯಸುವ ಬರೀ ಬರಡು
ಭೂಮಿ ನಾನು
ಅಲ್ಲಿ ನೂರು ತಾರೆಯರ ನಡುವೆ
ನಿನ್ನ ರಾಸಲೀಲೆಯ ದರ್ಬಾರು
ವಿರಹದಲ್ಲಿ ನಡುಗುವ ಭಾವಗಳ ಬಚ್ಚಿಟ್ಟು
ನಾನು ಬದುಕಲೂ ಆರೆ, ಚಂದಿರ ನೀನೇಕೆ ಭಾವ ಶೂನ್ಯ??

ತುಣುಕು-೨


ನನ್ನ ಮನಸಿನ ಸಾಗರದಲ್ಲಿ
ಉಕ್ಕೇರುವ ಅಲೆಗಳ
ನಡುವೆ ನಿನ್ನ ಕುಣಿತ..ತಕಧಿಮಿತ!!

ನೂರೊಂದು ರತ್ನಗಳ ಬಚ್ಚಿಟ್ಟೂ
ನಿನ್ನ ಒಲವಿಂದ ತಿರಸ್ಕೃತೆ
ನಾನು ನಿಜದಿ ರತ್ನಗರ್ಭೆ
ಹುಚ್ಚೇಳುವ ಭಾವಗಳ ಅಲೆ
ಕೇವಲ ನಿನಗಾಗಿ
ಅರಿತಿದ್ದೂ
ಕಾಯಿಸುವ ನನ್ನ ನೋಯಿಸುವ
ನಿನ್ನ ಪ್ರೀತಿ
ನನ್ನ ಒಡಲಲ್ಲಿ ತುಂಬಿದೆ
ವಿಷಾದದ ಹಾಲಾಹಲ

ಪ್ರಳಯವಾಗಲಿದೆ ಚಂದಿರ
ನಾ ಇಲ್ಲವಾದರೆ
ನಿನ್ನ ಇರುವಿಕೆಯ ಗತಿ ಏನು??

ತುಣುಕು-೩


ಎಲ್ಲಿ ಚಂದಿರ ಎಲ್ಲಿಯ ಭೂಮಿ

ಎಂದಿಗಾದರೂ ಮಿಲನ ಸಾಧ್ಯವೇ??

ಸೆಳೆತ ನಿರಂತರ
ಕಾಯುವಿಕೆಯೂ ನಿರಂತರ

ಎಷ್ಟು ಯುಗಗಳು ಉರುಳಿದವೋ
ಎಷ್ಟು ಸಾವಿರ ಋತುಗಳು ಆದವೋ
ತನ್ನವನೇ ಆದರು
ತಾರೆಗಳ ತೋಟ ಬಿಟ್ಟು ಬರದ ಚಂದಿರ
ತನ್ನೊಲವ ಒಳಗಿಟ್ಟ
ಜ್ವಾಲಮುಖಿ ಭೂಮಿ

ಎಂದಿಗಾದರೂ ಮಿಲನ ಸಾಧ್ಯವೇ??

ಕನಸಿಗೂ ವಾಸ್ತವಕ್ಕೂ ಇಹುದು
ಬಲು ಅಂತರ
ಅಂತೆಯೇ ಭೂಮಿ ಇಂದ
ದೂರ ದೂರ ನಿಜದಿ ಚಂದಿರ!!